Homeಚಳವಳಿಸಕ್ರಿಯ ಸ್ತ್ರೀವಾದಿ ಪ್ರಜ್ಞೆ : ಪಿತೃಪ್ರಧಾನ ಮೌಲ್ಯ ವ್ಯವಸ್ಥೆಯ ಬದಲಾವಣೆಗೆ ಪಣ- ಸಿ.ಜಿ ಮಂಜುಳಾ

ಸಕ್ರಿಯ ಸ್ತ್ರೀವಾದಿ ಪ್ರಜ್ಞೆ : ಪಿತೃಪ್ರಧಾನ ಮೌಲ್ಯ ವ್ಯವಸ್ಥೆಯ ಬದಲಾವಣೆಗೆ ಪಣ- ಸಿ.ಜಿ ಮಂಜುಳಾ

’ವ್ಯಭಿಚಾರವು ಅಪರಾಧವಲ್ಲ ಎಂದು ಭಾರತೀಯ ದಂಡ ಸಂಹಿತೆಯ 497ನೇ ಸೆಕ್ಷನ್‌ಅನ್ನು ರದ್ದುಮಾಡಿದ ಸುಪ್ರೀಂ ಕೋರ್ಟ್ ತೀರ್ಪು, ಮಹಿಳಾ ಸಮಾನತೆ, ಘನತೆ, ಸ್ವಾಯತ್ತೆಯನ್ನು ಎತ್ತಿ ಹಿಡಿದಿತ್ತು.

- Advertisement -
- Advertisement -

ಕೋವಿಡ್ -19ರ ಸಂಕಷ್ಟದ ಈ ದಿನಗಳು ಜನಜೀವನವನ್ನು ಪಲ್ಲಟಗೊಳಿಸಿದೆ. ಅದರಲ್ಲೂ ಮಹಿಳೆ ಈಗಾಗಲೇ ಅನುಭವಿಸುತ್ತಿದ್ದ ಸಮಸ್ಯೆಗಳು ಮತ್ತಷ್ಟು ತೀವ್ರವಾಗಿವೆ ಎಂಬುದನ್ನು ವರದಿಗಳು ತಿಳಿಸುತ್ತಿವೆ. ಕೌಟುಂಬಿಕ ದೌರ್ಜನ್ಯ, ಲೈಂಗಿಕ ಕಿರುಕುಳ ಪ್ರಕರಣಗಳ ಹೆಚ್ಚಳದ ಜೊತೆಗೆ ಕೋವಿಡ್ -19ರ ನಿರ್ವಹಣೆಯಲ್ಲಿ ಲಿಂಗತ್ವ ಸಂವೇದನಾಶೀಲತೆ ಇಲ್ಲದ ಆಡಳಿತ ನೀತಿಗಳು, ಮಹಿಳೆ ಹೇಗೆ ಇನ್ನೂ ಈ ಸಮಾಜದಲ್ಲಿ ಎರಡನೇ ದರ್ಜೆ ಪ್ರಜೆ ಎಂಬುದನ್ನು ನೆನಪಿಸುತ್ತಿವೆ. ಉದ್ಯೋಗ ನಷ್ಟದ ಪೆಟ್ಟು ಪುರುಷರನ್ನಷ್ಟೇ ಅಲ್ಲ ಮಹಿಳೆಯರನ್ನೂ ಹೆಚ್ಚಿನ ಮಟ್ಟದಲ್ಲಿ ಕಾಡುತ್ತಿದೆ. ಭಾರತದಲ್ಲಿ ಈಗಾಗಲೇ ಔದ್ಯೋಗಿಕ ರಂಗದಲ್ಲಿ ಮಹಿಳೆಯರ ಸಂಖ್ಯೆ ಇಳಿಮುಖವಾಗುತ್ತಿರುವ ಬಗ್ಗೆ ವಿಶ್ಲೇಷಣೆಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಕೋವಿಡ್ 19ರ ಸಂಕಷ್ಟ ಈ ಸಮಸ್ಯೆಯನ್ನು ಮತ್ತಷ್ಟು ತೀವ್ರವಾಗಿಸಲಿರುವುದು ಆತಂಕಕಾರಿ. ಈ ಬೆಳವಣಿಗೆಗಳನ್ನು ಸೂಕ್ತವಾಗಿ ನಿರ್ವಹಿಸಲು ಸರ್ಕಾರದ ನೀತಿಗಳನ್ನು ರೂಪಿಸುವ ಪ್ರಕ್ರಿಯೆಯಲ್ಲಿ ಸಂವೇದನಾಶೀಲತೆ ಅಗತ್ಯ.

ಮುಖ್ಯವಾಹಿನಿ ರಾಜಕಾರಣದ ಆವುಟಗಳಲ್ಲಿ ಗಮನವನ್ನೇ ಸೆಳೆದುಕೊಳ್ಳದ ಮಹಿಳಾ ವಿಚಾರಗಳನ್ನು ಪ್ರಭುತ್ವದ ಗಮನಕ್ಕೆ ತರುವಲ್ಲಿ ಭಾರತದ ಮಹಿಳಾ ಚಳವಳಿ ಈ ಹಿಂದಿನಿಂದಲೂ ಮುಂಚೂಣಿಯಲ್ಲಿದೆ. ಈಗಲೂ ಈ ಸಂಕಷ್ಟ ಕಾಲದಲ್ಲಿ ಮಹಿಳೆ ಅಗತ್ಯಗಳ ಕುರಿತಾದ ಕೆಲವು ವಿಚಾರಗಳಾದರೂ ಚರ್ಚೆಗೆ ಬರುವಲ್ಲಿ ಮಹಿಳಾ ಚಳವಳಿಯ ಕೊಡುಗೆ ಇದೆ.

ವಸಾಹತುಶಾಹಿ ವಿರುದ್ಧದ ಸ್ವಾತಂತ್ರ್ಯ ಹೋರಾಟದಿಂದ ವರ್ತಮಾನದ ಸಾಮ್ರಾಜ್ಯಶಾಹಿ ಜಾಗತೀಕರಣದ ವಿರುದ್ಧದ ಹೋರಾಟದವರೆಗೆ ಸ್ತ್ರೀವಾದದ ಪ್ರಜ್ಞೆ ಸಾರ್ವಜನಿಕ ಆಂದೋಲನಗಳಲ್ಲಿ ಸಕ್ರಿಯವಾಗಿದೆ. ಸ್ತ್ರೀವಾದದ ಹಲವು ಛಾಯೆಗಳು, ಹಲವು ಸಿದ್ಧಾಂತಗಳಲ್ಲಿ ಇದು ವ್ಯಕ್ತ. ಜಾತಿ, ಧರ್ಮ, ವರ್ಗ, ಲಿಂಗತ್ವ ನೆಲೆಗಳಲ್ಲಿ ಮಹಿಳಾ ಶೋಷಣೆಗೆ ಹಲವು ಆಯಾಮಗಳಿದ್ದು ವಿವಿಧ ಮಹಿಳಾ ಗುಂಪುಗಳು ಸಕ್ರಿಯವಾಗಿ ಚಳವಳಿಯ ಚೈತನ್ಯವನ್ನು ಮುಂದಕ್ಕೊಯ್ಯುತ್ತಿವೆ.

ಈ ದಶಕದ ಆರಂಭದಲ್ಲೇ 2012ರ ಡಿಸೆಂಬರ್ 16ರಂದು ದೆಹಲಿಯಲ್ಲಿ ಚಲಿಸುವ ಬಸ್‌ನಲ್ಲಿ ವಿದ್ಯಾರ್ಥಿನಿ ನಿರ್ಭಯಾ ಮೇಲೆ ನಡೆದ ಪೈಶಾಚಿಕ ಸಾಮೂಹಿಕ ಅತ್ಯಾಚಾರ ಹಾಗೂ ನಂತರ ಆಕೆಯ ಸಾವು, ರಾಷ್ಟ್ರದಾದ್ಯಂತ ಪ್ರತಿಭಟನಾ ಹೋರಾಟಗಳಿಗೆ ಕಾರಣವಾಗಿ ಅಪರಾಧ ಕಾನೂನುಗಳ ತಿದ್ದುಪಡಿ ಕಾಯ್ದೆ ೨೦೧೩ನ್ನು ಸರ್ಕಾರ ಜಾರಿ ಮಾಡಿದ್ದು ಇತಿಹಾಸ. ಅತ್ಯಾಚಾರದ ವ್ಯಾಖ್ಯೆ ಬದಲಿಸಿದ ಈ ಕಾನೂನನ್ನು ನಿರ್ಭಯಾ ಕಾನೂನು ಎಂದೇ ಕರೆಯಲಾಯಿತು. ಹಾಗೆಯೇ ದುಡಿಯುವ ಸ್ಥಳದಲ್ಲಿ ಲೈಂಗಿಕ ಕಿರುಕುಳ (ತಡೆ, ನಿಷೇಧ ಹಾಗೂ ಪರಿಹಾರ) ಕಾಯ್ದೆ 2013 ಕೂಡ ಜಾರಿಯಾಗಿ ಮಹಿಳಾ ಸುರಕ್ಷತೆಗೆ ಕಾನೂನು ಬಲ ದೊರಕಿತು. 2005ರಷ್ಟು ಹಿಂದೆಯೇ ’ಕೌಟುಂಬಿಕ ಹಿಂಸೆ’ ಎಂಬ ಪರಿಕಲ್ಪನೆಯನ್ನು ಸರ್ಕಾರ ಗ್ರಹಿಸಿಕೊಳ್ಳುವಂತೆ ಮಾಡಿ ಅದರ ನಿಗ್ರಹಕ್ಕೆ ಕಾನೂನು ರೂಪಿಸಲು ಕಾರಣವಾಗಿದ್ದು ಸಂಘಟಿತವಾದ ಮಹಿಳಾ ಚಳವಳಿ ಎಂಬುದನ್ನು ನೆನಪಿಸಿಕೊಳ್ಳಬೇಕು. ಹಾಗೆಯೇ ಈಗ, ಲೈಂಗಿಕ ಹಿಂಸೆಗಳ ಆಯಾಮಗಳನ್ನು ಅಧ್ಯಯನ ಹಾಗೂ ವಿಶ್ಲೇಷಣೆಗಳಿಗೆ ಒಳಪಡಿಸಿ ಅವೆಲ್ಲವನ್ನೂ ಕಾನೂನು ಕಕ್ಷೆಗೆ ಸೇರಿಸಿ ಪಿತೃಪ್ರಧಾನ ಮನಸ್ಥಿತಿಗಳ ಬದಲಾವಣೆಗೆ ಪ್ರೇರಕವಾಗಲು ಮಹಿಳಾ ಆಂದೋಲನ ಯತ್ನಿಸಿದೆ.

ಹೆಚ್ಚುತ್ತಿರುವ ಲೈಂಗಿಕ ಹಿಂಸೆಗಳ ಮಧ್ಯೆಯೇ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳಾ ಸುರಕ್ಷತೆಯ ವಿಚಾರವು, ಇನ್ನೇನು ಕೆಲವೇ ತಿಂಗಳುಗಳಲ್ಲಿ ಮುಗಿಯಲಿರುವ ಈ ದಶಕದಲ್ಲಿ ಮುನ್ನೆಲೆಗೆ ಬಂದಿದೆ ಎನ್ನಬಹುದು. ಸಾರ್ವಜನಿಕ ಸ್ಥಳಗಳಾದ ಪಾರ್ಕ್‌ಗಳು ಹಾಗೂ ಬೀಚ್‌ಗಳಲ್ಲಿ ಒಂಟಿ ಮಹಿಳೆಯರು ಕಾಣಸಿಗುವುದು ಅಪರೂಪ. ಲೈಂಗಿಕ ಕಿರುಕುಳಗಳ ಭೀತಿ ಇದಕ್ಕೆ ಕಾರಣ. ಆದರೆ ಇಂತಹ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯ ಅಡ್ಡಾಡುವಿಕೆ ಅಥವಾ ಅಲೆದಾಟವನ್ನು ಮಾಮೂಲಾಗಿಸುವುದು ಅಥವಾ ಸಹಜವಾಗಿಸುವುದಕ್ಕಾಗಿ ಬೆಂಗಳೂರು ಸೇರಿದಂತೆ ರಾಷ್ಟ್ರದ ಹಲವು ನಗರಗಳಲ್ಲಿ ಮಧ್ಯರಾತ್ರಿಗಳಲ್ಲೂ ಅಲೆದಾಟಗಳ ಅಭಿಯಾನಗಳನ್ನು ಮಹಿಳಾ ಗುಂಪುಗಳು ನಡೆಸಿವೆ. ಈ ಅಭಿಯಾನದ #ವೈಲಾಯ್ಟರ್ (#whyloitre) ಹ್ಯಾಷ್‌ಟ್ಯಾಗ್ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗಿದ್ದೂ ಇದೆ. ಸಾರ್ವಜನಿಕ ಸ್ಥಳಗಳನ್ನೂ ಆಕ್ರಮಿಸಿಕೊಂಡ ಪುರುಷ ಸ್ವಾಮ್ಯವನ್ನು ಪ್ರತಿರೋಧಿಸುವ ಕಥನಗಳನ್ನು ಮಹಿಳೆಯರು ಈ ಅಭಿಯಾನದಲ್ಲಿ ಹಂಚಿಕೊಂಡಿದ್ದರು.

2018ರಲ್ಲಿ ಭಾರತದಲ್ಲಿ ಕಾವು ಪಡೆದ #ಮೀಟೂ ಆಂದೋಲನದಿಂದಾಗಿ ಕೇಂದ್ರ ಸಚಿವ ಎಂ.ಜೆ. ಅಕ್ಬರ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿನ ಅನೇಕ ಸಶಕ್ತ ವ್ಯಕ್ತಿಗಳು ಹುದ್ದೆಗಳನ್ನು ಕಳೆದುಕೊಂಡಿದ್ದು ಈ ದಶಕದ ಪ್ರಮುಖ ವಿದ್ಯಮಾನ. ಮೌನ ಸಂಸ್ಕೃತಿಯೊಳಗೆ ಹುದುಗಿದ್ದ ಲೈಂಗಿಕ ಕಿರುಕುಳಗಳ ಕಥನಗಳು ಬಟಾಬಯಲಾದ ರೀತಿಗೆ ಪಿತೃಪ್ರಧಾನ ಮೌಲ್ಯ ವ್ಯವಸ್ಥೆಯ ಸಮಾಜ ಕಸಿವಿಸಿಗೊಂಡಿದ್ದು ನಿಜ.

ರಾಷ್ಟ್ರದ 24ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ 200 ಜಿಲ್ಲೆಗಳಲ್ಲಿ 65 ದಿನಗಳ ಕಾಲ, ಲೈಂಗಿಕ ಹಿಂಸೆ ವಿರುದ್ಧ ಘನತೆಯ ಮೆರವಣಿಗೆಯನ್ನು ಮಹಿಳೆಯರು ನಡೆಸಿದ್ದು ಮತ್ತೊಂದು ವಿಶೇಷ. ಲೈಂಗಿಕ ದೌರ್ಜನ್ಯಗಳ ವಿರುದ್ಧ ಜಾಗೃತಿ ಮೂಡಿಸಲು 5000 ಸಾಮಾಜಿಕ ಕಾರ್ಯಕರ್ತರು ಹಾಗೂ ಲೈಂಗಿಕ ದೌರ್ಜನ್ಯಗಳ ಸಂತ್ರಸ್ತರು 10,000 ಕಿ.ಮೀ ದೂರ ಕ್ರಮಿಸಿದ್ದರು. ಲೈಂಗಿಕ ಹಿಂಸೆಗಳ ವಿರುದ್ಧದ ಜಾಗೃತಿ ಈ ದಶಕದಲ್ಲಿ ತೀವ್ರಗೊಂಡಿದೆ ಎಂಬುದಕ್ಕೆ ಇದು ದ್ಯೋತಕ. ಇದೇ ಸಂದರ್ಭದಲ್ಲಿ, ಲೈಂಗಿಕ ದೌರ್ಜನ್ಯದ ವಿರುದ್ಧ ಹೋರಾಡುತ್ತಿರುವ ಕಾಂಗೊದ ಸ್ತ್ರೀರೋಗ ತಜ್ಞ ಡೆನಿಸ್ ಮುವ್ಟೆಜ್ ಹಾಗೂ ಇರಾಕ್‌ನಲ್ಲಿ 2014ರಲ್ಲಿ ಐಎಸ್‌ಐಎಸ್ ಸಂಘಟನೆಯ ಉಗ್ರರಿಗೆ ಸೆರೆ ಸಿಕ್ಕಿ ದೌರ್ಜನ್ಯಕ್ಕೊಳಗಾಗಿದ್ದ ಮಾನವ ಹಕ್ಕು ಹೋರಾಟಗಾರ್ತಿ ಇರಾಕ್‌ನ ನಾಡಿಯಾ ಮುರಾದ್ ಅವರುಗಳಿಗೆ 2018ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಗಿದೆ ಎಂಬುದನ್ನೂ ಈ ಸಂದರ್ಭದಲ್ಲಿ ಸ್ಮರಿಸಬೇಕು. ಯುದ್ಧ ಹಾಗೂ ಸಶಸ್ತ್ರ ಸಂಘರ್ಷದ ಅಸ್ತ್ರವಾಗಿ ಲೈಂಗಿಕ ಹಿಂಸೆಯ ಬಳಕೆಯನ್ನು ಅಂತ್ಯಗೊಳಿಸುವ ಪ್ರಯತ್ನಗಳಿಗಾಗಿ ಈ ಪ್ರಶಸ್ತಿ ಸಂದಿದೆ.

ಮಹಿಳಾ ಹಕ್ಕುಗಳ ರಕ್ಷಣೆಗೆ ಭಾರತದ ಸುಪ್ರೀಂ ಕೋರ್ಟ್ ಹಲವು ಮಹತ್ವದ ತೀರ್ಪುಗಳನ್ನು ಈ ದಶಕದಲ್ಲಿ ನೀಡಿದ್ದು ಮಹಿಳೆಯರ ಹೋರಾಟಕ್ಕೆ ಸಂದ ಜಯ ಎನ್ನಬೇಕು. ಶಬರಿಮಲೆ ದೇವಾಲಯಕ್ಕೆ 0 ರಿಂದ 50 ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ ಇದ್ದ ನಿಷೇಧವನ್ನು 2018ರ ಸೆಪ್ಟೆಂಬರ್ 28ರಂದು ಸುಪ್ರೀಂ ಕೋರ್ಟ್ ತೀರ್ಪು ರದ್ದುಮಾಡಿದ್ದು ಐತಿಹಾಸಿಕ ನಡೆ. ಈ ತೀರ್ಪು ವಿವಾದ ಸೃಷ್ಟಿಸಿದರೂ ಲಿಂಗತ್ವ ಸಮಾನತೆಯತ್ತ ಇರಿಸಿದ ದೊಡ್ಡ ಹೆಜ್ಜೆಯಾಗಿತ್ತು. 2019ರ ಜನವರಿ 1ರಂದು ಸುಮಾರು 35 ಲಕ್ಷ ಮಹಿಳೆಯರು ಸುಪ್ರೀಂ ಕೋರ್ಟ್ ತೀರ್ಪಿಗೆ ಬೆಂಬಲ ಸೂಚಿಸಿ ಲಿಂಗತ್ವ ಸಮಾನತೆಯನ್ನು ಎತ್ತಿ ಹಿಡಿಯಲು ಕೇರಳದ ರಾಷ್ಟ್ರೀಯ ಹೆದ್ದಾರಿಗಳಲ್ಲಿ 620 ಕಿಮೀ ಉದ್ದ ಒಟ್ಟಾಗಿ ನಿಂತು ಮಾನವ ಗೋಡೆ’ಯನ್ನು ನಿರ್ಮಿಸಿದ್ದರು.

ಹಾಗೆಯೇ 2018ರ ಸೆಪ್ಟೆಂಬರ್ 27ರಂದು, ’ವ್ಯಭಿಚಾರವು ಅಪರಾಧವಲ್ಲ ಎಂದು ಭಾರತೀಯ ದಂಡ ಸಂಹಿತೆಯ 497ನೇ ಸೆಕ್ಷನ್‌ಅನ್ನು ರದ್ದುಮಾಡಿದ ಸುಪ್ರೀಂ ಕೋರ್ಟ್ ತೀರ್ಪು, ಮಹಿಳಾ ಸಮಾನತೆ, ಘನತೆ, ಸ್ವಾಯತ್ತೆಯನ್ನು ಎತ್ತಿ ಹಿಡಿದಿತ್ತು. ಬೇರೊಬ್ಬನ ಪತ್ನಿ ಜೊತೆ ಆತನ ಸಮ್ಮತಿಅಥವಾ ಪರೋಕ್ಷ ಒಪ್ಪಿಗೆ ಇಲ್ಲದೆ ಅತ್ಯಾಚಾರವೆಂದು ಪರಿಗಣಿಸಲಾದ ರೀತಿಯಲ್ಲಿ ವ್ಯಕ್ತಿಯೊಬ್ಬರು ನಡೆಸುವ ಲೈಂಗಿಕ ಸಂಪರ್ಕವನ್ನು ಈ ಸೆಕ್ಷನ್ ಪ್ರಕಾರ ವ್ಯಭಿಚಾರವೆಂದು ವ್ಯಾಖ್ಯಾನಿಸಲಾಗುತ್ತಿತ್ತು. ಆದರೆ ವಿವಾಹಿತ ವ್ಯಕ್ತಿಯು ಅವಿವಾಹಿತ ಮಹಿಳೆ ಅಥವಾ ವಿಧವೆಯ ಜತೆಗೆ ಲೈಂಗಿಕ ಸಂಪರ್ಕ ಹೊಂದುವುದೂ ವಿವಾಹದ ಪಾವಿತ್ರ್ಯಕ್ಕೆ ಧಕ್ಕೆ ತರುವಂತಹದ್ದಾಗಿದ್ದರೂ ಸೆಕ್ಷನ್ 497ರ ಅಡಿ ಇದರ ವಿರುದ್ಧ ದೂರು ಕೊಡಲು ಅವಕಾಶ ಇರಲಿಲ್ಲ. ಹಾಗೆಯೇ ವ್ಯಭಿಚಾರ ಎಸಗುವ ಗಂಡಸಿನ ಪತ್ನಿಯನ್ನೂ ಸಂತ್ರಸ್ತೆ ಎಂದು ಪರಿಗಣಿಸುತ್ತಿರಲಿಲ್ಲವಾದ್ದರಿಂದ ಆಕೆಯೂ ದೂರು ಕೊಡಲಾಗುತ್ತಿರಲಿಲ್ಲ. ಹೀಗಾಗಿ, ’ಮಹಿಳೆಯನ್ನು ತಾರತಮ್ಯದಿಂದ ನೋಡುವ ಯಾವುದೇ ಅಂಶ ಸಾಂವಿಧಾನಿಕವಲ್ಲ. ಗಂಡನು ಹೆಂಡತಿಯ ಮಾಲೀಕ ಅಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳುವ ಕಾಲ ಬಂದಿದೆ’ ಎಂದು ನ್ಯಾಯಮೂರ್ತಿ ಚಂದ್ರಚೂಡ್ ಅವರು ತಮ್ಮ ತೀರ್ಪಿನಲ್ಲಿ ಹೇಳಿದ ಮಾತು ಮಹತ್ವದ್ದು.

100 ವರ್ಷಕ್ಕೂ ಹೆಚ್ಚು ಕಾಲದಿಂದ ಮಹಿಳಾ ಚಳವಳಿ ಜಗತ್ತಿನಲ್ಲಿ ಸಕ್ರಿಯವಾಗಿದೆ. ಮತದಾನದ ಹಕ್ಕಿನ ಚಳವಳಿಯಿಂದ ’ಮೀ ಟೂ’ ಚಳವಳಿಯವರೆಗೆ ಮಹಿಳೆಯರು ಕೇಳುತ್ತಿರುವುದು ಸಮಾನ ಹಕ್ಕುಗಳಷ್ಟೇ; ವಿಶೇಷ ಪರಿಗಣನೆಗಳಲ್ಲ ಎಂಬುದನ್ನು ಮನಗಾಣಬೇಕು.

ಇದೇ ಸಂದರ್ಭದಲ್ಲಿ 2019ರ ಟ್ರಾನ್ಸ್  ಜೆಂಡರ್ ಕಾಯಿದೆ ಬಗ್ಗೆ ಟ್ರಾನ್ಸ್ ಜೆಂಡರ್ ಸಮುದಾಯ ಅಸಮಾಧಾನ ವ್ಯಕ್ತ ಪಡಿಸಿರುವುದೂ ಗಮನಾರ್ಹ. ಹಾಗೆಯೇ ಮುಸ್ಲಿಂ ಮಹಿಳೆಯರ (ವಿವಾಹದಲ್ಲಿ ಹಕ್ಕುಗಳ ರಕ್ಷಣೆ) ಕಾಯ್ದೆಯೂ ಟೀಕೆಗಳಿಗೆ ಕಾರಣವಾಗಿದೆ. ಈಗಾಗಲೇ 2018ರಲ್ಲಿ ತ್ರಿವಳಿ ತಲಾಖ್‌ಅನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿತ್ತು. ಹೀಗಾಗಿ, ಗಂಡ ತ್ರಿವಳಿ ತಲಾಖ್ ಹೇಳಿದರೂ ಅದಕ್ಕೆ ಕಾನೂನಿನ ಮಾನ್ಯತೆ ಇರುವುದಿಲ್ಲ. ಹೀಗಿದ್ದೂ ಈಗ ತರಲಾಗಿರುವ ಹೊಸ ಕಾಯ್ದೆಯ ಗುರಿ ಮುಸ್ಲಿಂ ಪುರುಷರಾಗಿದ್ದಾರೆಯೇ ಎಂಬಂಥ ಪ್ರಶ್ನೆಗಳನ್ನು ಹುಟ್ಟುಹಾಕಿರುವುದು ಸಹಜ.

ಇಂದು ಮಹಿಳಾ ಸಬಲೀಕರಣದ ವಿಚಾರ ಸರ್ಕಾರಗಳ ಅಭಿವೃದ್ಧಿ ಕಾರ್ಯಸೂಚಿಗಳಲ್ಲಿದೆ. ಇದಕ್ಕೆ ಮುಖ್ಯ ಕಾರಣ, ಹಲವು ದಶಕಗಳ ಕಾಲ ಸ್ತ್ರೀವಾದಿಗಳು ನಡೆಸಿದ ಅವಿರತ ಹೋರಾಟ. ಆದರೆ, ’ಬೇಟಿ ಬಚಾವೋ ಬೇಟಿ ಪಢಾವೋ’ ಅಥವಾ ’ಪ್ರಧಾನ ಮಂತ್ರಿ ಉಜ್ವಲಾ’ದಂತಹ ಸರ್ಕಾರದ ಯೋಜನೆಗಳು ಮಹಿಳೆಯ ಸಬಲೀಕರಣಕ್ಕಾಗಿ ಜಾರಿಗೊಳಿಸಲಾದ ಕ್ಷೇಮಾಭಿವೃದ್ಧಿ ಯೋಜನೆಗಳಷ್ಟೇ. ಹೀಗಾಗಿ, ಅಸಮಾನತೆ ಸೃಷ್ಟಿಗೆ ಮೂಲ ಕಾರಣವಾದ ಪಿತೃಪ್ರಧಾನ ಸ್ವರೂಪಗಳನ್ನು ನಿರ್ವಹಿಸಲು ಪ್ರಾಮಾಣಿಕ ಪ್ರಯತ್ನಗಳನ್ನೇ ಮಾಡದ ಪ್ರಭುತ್ವದ ನೀತಿಗಳು ಹಾಗೂ ವಿಭಿನ್ನ ವೇಷಗಳಲ್ಲಿ ಹುಟ್ಟಿಕೊಳ್ಳುತ್ತಿರುವ ಪಿತೃಪ್ರಧಾನ ಸಾಮಾಜಿಕ ಮೌಲ್ಯ ವ್ಯವಸ್ಥೆ ವಿರುದ್ಧ ಮಹಿಳಾ ಚಳವಳಿ ಮುಂದುವರಿಯುತ್ತಲೇ ಇದೆ.

  • ಸಿ.ಜಿ.ಮಂಜುಳಾ
    ಪೂರ್ಣಾವಧಿ ಪತ್ರಕರ್ತೆ ಮತ್ತು ಪೂರ್ಣಾವಧಿ ಮಹಿಳಾ ಚಿಂತನೆ ಎರಡನ್ನೂ ನಡೆಸಿದ ಮಂಜುಳಾರವರು ಈಗ ಪತ್ರಿಕೋದ್ಯಮದಿಂದ ನಿವೃತ್ತರಾಗಿದ್ದಾರೆ.

ಇದನ್ನೂ ಓದಿ: ಹೊಂಬಾಳೆ 3: ಸ್ತ್ರೀಕರಣಗೊಳ್ಳುತ್ತಿರುವ ಕೃಷಿಯಲ್ಲಿ ಮಹಿಳೆ ಉಳಿದರೆ, ಕೃಷಿಯೂ ಉಳಿದೀತು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...