ಕಳೆದ ವರ್ಷದ ಪುಲ್ವಾಮ ಘಟನೆ ನಡೆದ ಹೆದ್ದಾರಿಯ ಬಳಿ 52 ಕೆ.ಜಿ ಗಳಷ್ಟು ಸ್ಫೋಟಕಗಳನ್ನು ಪತ್ತೆಹಚ್ಚಿರುವ ಭಾರತೀಯ ಸೈನಿಕರು, ಮತ್ತೊಂದು ಪುಲ್ವಾಮಾ ದಾಳಿಯನ್ನು ತಪ್ಪಿಸಿದ್ದಾರೆ.
“ಹಣ್ಣಿನ ತೋಟದಲ್ಲಿ ಸಿಂಟೆಕ್ಸ್ ಟ್ಯಾಂಕ್ ಒಂದನ್ನು ಹೂಳಲಾಗಿತ್ತು. ಆ ನೀರಿನ ತೊಟ್ಟಿಯಲ್ಲಿ ಸುಮಾರು 52 ಕಿಲೋಗ್ರಾಂಗಳಷ್ಟು ಸ್ಫೋಟಕಗಳು ಸಿಕ್ಕಿದ್ದು, ಇವು, ಗುರುವಾರ ಬೆಳಿಗ್ಗೆ 8 ಗಂಟೆಗೆ ಗಡಿಕಲ್ನ ಕರೇವಾ ಪ್ರದೇಶದಲ್ಲಿ ನಡೆದ ಜಂಟಿ ಶೋಧ ಕಾರ್ಯಾಚರಣೆಯಲ್ಲಿ ಪತ್ತೆಯಾಗಿವೆ. ತಲಾ 125 ಗ್ರಾಂ ಹೊಂದಿರುವ ಒಟ್ಟು 416 ಪ್ಯಾಕೆಟ್ ಸ್ಫೋಟಕಗಳಿದ್ದವು” ಎಂದು ಸೇನೆಯು ಹೇಳಿಕೆ ನಿಡಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಸ್ಫೋಟಕಗಳನ್ನು “ಸೂಪರ್ 90” ಎಂದು ಅಧಿಕಾರಿಗಳು ಗುರುತಿಸಿದ್ದು, ಅವು ಪತ್ತೆಯಾದ ಸ್ಥಳವು ಹೆದ್ದಾರಿಗೆ ಬಹಳ ಹತ್ತಿರದಲ್ಲಿದೆ ಮತ್ತು 2019 ರ ಪುಲ್ವಾಮಾ ದಾಳಿ ಸ್ಥಳದಿಂದ 9 ಕಿ.ಮೀ. ದೂರದಲ್ಲಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪುಲ್ವಾಮಾ ಬಳಿ 2019ರ ಮಾದರಿಯ ಸ್ಪೋಟಕ ದಾಳಿಯನ್ನು ವಿಫಲಗೊಳಿಸಿದ ಭದ್ರತಾ ಪಡೆ
ಕಳೆದ ವರ್ಷ ಫೆಬ್ರವರಿ 14 ರಂದು, ಸ್ಫೋಟಕಗಳನ್ನು ಹೊತ್ತ ಕಾರೊಂದು ಸಿಆರ್ಪಿಎಫ್ ಸೈನಿಕರಿದ್ದ ವಾಹನಕ್ಕೆ ಡಿಕ್ಕಿಹೊಡೆದ ಪರಿಣಾಮ 40 ಕ್ಕೂ ಹೆಚ್ಚು ಸೈನಿಕರು ಸಾವನ್ನಪ್ಪಿದ್ದರು. ಜೆಲಾಟಿನ್ ಸ್ಟಿಕ್ಗಳ ಜೊತೆಗೆ ಸುಮಾರು 35 ಕೆಜಿ ಆರ್ಡಿಎಕ್ಸ್ ಪ್ಲಾಸ್ಟಿಕ್ ಸ್ಫೋಟಕಗಳನ್ನು ದಾಳಿಯಲ್ಲಿ ಬಳಸಲಾಗಿತ್ತು.
ಪುಲ್ವಾಮಾ ದಾಳಿಯ ಹಿಂದಿನ ಪ್ರಮುಖ ಸಂಚುಕೋರ ಮಸೂದ್ ಅಜರ್. ಈತ ಈ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದು, ಆತನ ಇಬ್ಬರು ಸಹೋದರರಾದ ರೌಫ್ ಅಜ್ಗರ್ ಮತ್ತು ಮೊಹಮ್ಮದ್ ಅಮ್ಮರ್ ಕೂಡ ಈ ಸಂಚಿನಲ್ಲಿ ಭಾಗವಹಿಸಿದ್ದರು ಎಂದು ಎಎನ್ಐ ಇತ್ತೀಚೆಗೆ ಚಾರ್ಜ್ಶೀಟ್ ಸಲ್ಲಿಸಿದೆ.
ಇದನ್ನೂ ಓದಿ: ಪುಲ್ವಾಮ ದಾಳಿ: ಬರೋಬ್ಬರಿ 18 ತಿಂಗಳ ನಂತರ ಚಾರ್ಜ್ಶೀಟ್ ಸಲ್ಲಿಸಿದ ಎನ್ಐಎ
ಮೊಹಮ್ಮದ್ ಉಮರ್ ಫಾರೂಕ್ ಈ ಪ್ರಕರಣದ ಪ್ರಮುಖ ಸಂಚುಕೋರ ಎಂದು ಅದು ತಿಳಿಸಿದೆ. ಈತನೆ ಆರ್ಡಿಎಕ್ಸ್ ಸ್ಫೋಟಕಗಳನ್ನ ಪಾಕಿಸ್ತಾನದ ಗಡಿಯಿಂದ ಕಾಶ್ಮೀರಕ್ಕೆ ತಂದಿದ್ದು, ದಾಳಿಗೆ ಬೇಕಾಗಿದ್ದ ಐಇಡಿ ಬಾಂಬ್ಗಳನ್ನು ಸ್ಥಳೀಯವಾಗಿ ತಯಾರಿಸಲು ಈತನ ಪಾತ್ರ ಇದೆ ಎನ್ನಲಾಗಿದೆ.
13,500 ಪುಟಗಳ ಚಾರ್ಜ್ಶೀಟ್ನಲ್ಲಿ ಜೈಶ್ ಭಯೋತ್ಪಾದಕರು ಮತ್ತೊಂದು ದಾಳಿ ನಡೆಸಲು ಯೋಜಿಸಿದ್ದಾರೆ ಮತ್ತು ಫಿಡಾಯೀನ್ ಅಥವಾ ಆತ್ಮಾಹುತಿ ಬಾಂಬರ್ಗಳನ್ನು ಸಹ ಸಿದ್ಧಪಡಿಸಿದ್ದಾರೆ ಎಂದು ತಿಳಿಸಿತ್ತು. ಆದರೆ ಬಾಲಕೋಟ್ನಲ್ಲಿ ಭಾರತದ ವಾಯುದಾಳಿಯಿಂದ ಅದಕ್ಕೆ ತಡೆಯೊಡ್ಡಿದರು.
ಅದಾಗ್ಯೂ, ಫೆ.14ರ ಪುಲ್ವಾಮಾ ದಾಳಿಯ ಕುರಿತು ಪೊಲೀಸರಿಗೆ, ಸೈನ್ಯಕ್ಕೆ ಸಾಕಷ್ಟು ಮುಂಚೆಯೇ ಮಾಹಿತಿ ಇತ್ತು ಎಂಬ ಸುದ್ದಿ ಈ ಮುಂಚೆಯೇ ಹರಿದಾಡಿತ್ತು. ಆದರೆ, ದಿ ಕ್ವಿಂಟ್ ವೆಬ್ ಪೋರ್ಟಲ್ ನಿರ್ದಿಷ್ಟವಾದ ದಾಖಲೆಗಳನ್ನು ಪಡೆದು ಅದು ನಿಜ ಎಂಬ ಆಘಾತಕಾರಿ ಸುದ್ದಿಯನ್ನು ಪ್ರಕಟಿಸಿತ್ತು. ‘ಹೊರಗಿನಿಂದ ಬಂದ ಭಯೋತ್ಪಾದಕರು’ ಪುಲ್ವಾಮಾ ಜಿಲ್ಲೆಯ ಆವಂತಿಪುರ ಪ್ರದೇಶಕ್ಕೆ ಬಂದಿದ್ದಾರೆ ಮತ್ತು ಅವರು ಸದ್ಯದಲ್ಲೇ ಭಾರೀ ದೊಡ್ಡ ಆತ್ಮಾಹುತಿ ದಾಳಿ ನಡೆಸುವ ಸಾಧ್ಯತೆ ಇದೆ ಎಂಬುದು ಜಮ್ಮು ಮತ್ತು ಕಾಶ್ಮೀರ ಪೊಲೀಸರಿಗೆ ಜನವರಿ 24ಕ್ಕೇ ಮಾಹಿತಿ ಇತ್ತು ಎಂದು ಕೆಲವು ಆರೋಪಗಳು ಕೇಳಿಬಂದಿದೆ.
ಇದನ್ನೂ ಓದಿ: ಪುಲ್ವಾಮಾ ದಾಳಿಗೆ 3 ವಾರಗಳ ಮುಂಚೆಯೇ ಮಾಹಿತಿ ಸಿಕ್ಕಿದ್ದರೂ ನಿರ್ಲಕ್ಷಿಸಿದ ಆಡಳಿತ
ಪುಲ್ವಾಮಾ ದಾಳಿಗೆ ವರ್ಷ ತುಂಬಿದ ಸಂದರ್ಭದಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸರ್ಕಾರಕ್ಕೆ 3 ಪ್ರಶ್ನೆಗಳನ್ನು ಕೇಳಿದ್ದರು.
ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ “ಇಂದು ನಾವು ಪುಲ್ವಾಮಾ ದಾಳಿಯಲ್ಲಿ ನಮ್ಮ 40 ಸಿಆರ್ಪಿಎಫ್ ಹುತಾತ್ಮರನ್ನು ನೆನಪಿಸಿಕೊಳ್ಳುತ್ತಾ, ಕೆಲವು ಪ್ರಶ್ನೆಗಳನ್ನು ಕೇಳೋಣ:
1. ದಾಳಿಯಿಂದ ಹೆಚ್ಚು ಲಾಭ ಪಡೆದವರು ಯಾರು?
2. ದಾಳಿಯ ವಿಚಾರಣೆಯ ಫಲಿತಾಂಶ ಏನು?
3. ಭದ್ರತಾ ಲೋಪ ಎಸಗುವ ಮೂಲಕ ದಾಳಿಗೆ ಅವಕಾಶ ನೀಡಿದ್ದಕ್ಕಾಗಿ ಬಿಜೆಪಿ ಸರ್ಕಾರದಲ್ಲಿ ಯಾರು ಹೊಣೆಗಾರರಾಗಿದ್ದಾರೆ?” ಎಂದು ಪ್ರಶ್ನೆ ಮಾಡಿದ್ದರು.
ಅಷ್ಟೇ ಅಲ್ಲದೆ, ಫೆಬ್ರುವರಿ 5ರಂದು ಲೋಕಸಭೆಯಲ್ಲಿ ಮತ್ತು ಫೆಬ್ರುವರಿ 7ರಂದು ರಾಜ್ಯಸಭೆಯಲ್ಲಿ ಗೃಹ ಸಚಿವಾಲ ನೀಡಿದ ಅಂಕಿಅಂಶಗಳ ಪ್ರಕಾರ, 2014-18ರ ಅವಧಿಯಲ್ಲಿ ಸೈನಿಕರ ಹತ್ಯೆ, ನಾಗರಿಕರ ಹತ್ಯೆ ಪ್ರಮಾಣ ಏರಿಕೆಯಾಗಿದೆ. 2014-18ರ ಅವಧಿಯಲ್ಲಿ ಜಮ್ಮು-ಕಾಶ್ಮೀರದಲ್ಲಿ ಒಟ್ಟು 1,708 ಭಯೋತ್ಪಾದನಾ ಕೃತ್ಯಗಳು ನಡೆದಿವೆ. ಹಾಗೆಯೇ ಉಗ್ರ ನುಸುಳುವಿಕೆ ಪ್ರಮಾಣವೂ ಹೆಚ್ಚಿದೆ ಎಂಬುದು ಗಮನಹರಿಸಬೇಕಾದ ಅಂಶವಾಗಿದೆ.
ಇದನ್ನೂ ಓದಿ: ಪುಲ್ವಾಮಾ ಹತ್ಯಾಕಾಂಡಕ್ಕೆ ಮೋದಿಯ ‘ಪಾಲಿಸಿ’ಯೇ ಕಾರಣ….


