ಹಿರಿಯ ಸ್ವಾತಂತ್ರ್ಯ ಸೇನಾನಿ, ಶತಾಯುಷಿ, ನಾಡಿನ ಸಾಕ್ಷಿಪ್ರಜ್ಞೆ ಎಚ್.ಎಸ್ ದೊರೆಸ್ವಾಮಿಯವರ ಜೀವನ ಮತ್ತು ಹೋರಾಟದ ಕುರಿತು ಸಾಕ್ಷ್ಯಚಿತ್ರ ‘ಮಹಾನ್ ತಾತ / The Great Grand Father’ ಇದೇ ಅಕ್ಟೋಬರ್ 2 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
ಪೆಡೆಸ್ಟ್ರಿಯನ್ ಪಿಕ್ಚರ್ಸ್ ಮಾಧ್ಯಮ ಸಂಸ್ಥೆ ತಯಾರಿಸಿರುವ ಈ ಸಾಕ್ಷ್ಯಚಿತ್ರವನ್ನು ಪ್ರತಿಭಾನ್ವಿತ ನಿರ್ದೇಶಕ ದೀಪುರವರು ನಿರ್ದೇಶಿಸಿದ್ದಾರೆ. ಗಾಂಧಿ ಜಯಂತಿಯ ಅಕ್ಟೋಬರ್ 2 ರ ಸಂಜೆ 4 ಗಂಟೆಗೆ ಬೆಂಗಳೂರಿನ ಅರಮನೆ ರಸ್ತೆಯ ಕರ್ನಾಟಕ ಸ್ಕೌಟ್ಸ್ ಅಂಡ್ ಗೈಡ್ಸ್ ಸಭಾಂಗಣದಲ್ಲಿ ಬಿಡುಗಡೆಯಾಗಲಿದ್ದು, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯು ರಾಜ್ಯದ ಹಲವು ಜಿಲ್ಲಾ ಕೇಂದ್ರಗಳಲ್ಲಿ ಅಂದೇ ಸಾಕ್ಷ್ಯಚಿತ್ರ ಪ್ರದರ್ಶನ ಮಾಡಲಿದೆ ಎಂದು ಹೇಳಿಕೆ ತಿಳಿಸಿದೆ.
ದೊರೆಸ್ವಾಮಿಯವರ ಬಗ್ಗೆ
ಹಲವರು ಹುಟ್ಟುತ್ತಲೇ ಮುದುಕರು ಆದರೆ ಕೆಲವರು ಸಾಯುವವರೆಗೂ ಚಿರಯುವಕರು ಎಂಬ ನಾಣ್ಣುಡಿಯಂತೆ’ ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ, ನಾಡಿನ ಸಾಕ್ಷಿಪ್ರಜ್ಞೆ ಎಚ್.ಎಸ್ ದೊರೆಸ್ವಾಮಿಯವರು ಇಂದಿಗೂ ಜನಪರರ ಪಾಲಿಗೆ ರಾಕ್ಸ್ಟಾರ್ ಆಗಿಯೇ ಲವಲವಿಕೆಯಿಂದ ದೃಢವಾಗಿದ್ದಾರೆ. ಬಡಜನರ ಪರ ಸದಾ ಹೋರಾಟನಿರತ ಸ್ವಾತಂತ್ರ್ಯ ಸೇನಾನಿಗೆ ಈಗ 103 ವರ್ಷ.
ಪೆಡೆಸ್ಟ್ರಿಯನ್ ಪಿಕ್ಚರ್ಸ್ ಮತ್ತು ದೀಪು
ದೀಪು ಎಂದೇ ಚಿರಪರಿಚಿತರಾದ ಕೆ.ಪಿ ಪ್ರದೀಪ್ರವರು ಪೆಡೆಸ್ಟ್ರಿಯನ್ ಪಿಕ್ಚರ್ಸ್ ಎಂಬ ಜನಪರ ಮಾಧ್ಯಮ ಸಂಸ್ಥೆಯ ಸ್ಥಾಪಕ ಸದಸ್ಯರಲ್ಲೊಬ್ಬರು. ಮೂಲತಃ ಕೇರಳದ ತಿರುವೂರು ಜಿಲ್ಲೆಯ ಮಲಪ್ಪುರಂರವರಾದ ಇವರು ಕಳೆದ 20 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಸಮಾಜದಲ್ಲಿ ಅಸ್ತಿತ್ವದಲ್ಲಿರುವ ಸಾಮಾಜಿಕ-ರಾಜಕೀಯ ವಾಸ್ತವಗಳ ಬಗ್ಗೆ ತಿಳುವಳಿಕೆಯನ್ನು ಮೂಡಿಸಲು ಸಿನಿಮಾ-ಸಾಕ್ಷ್ಯಚಿತ್ರವನ್ನು ಪರಿಣಾಮಕಾರಿಯಾಗಿ ಬಳಸಬೇಕೆನ್ನುವುದು ಅವರ ಅಭಿಲಾಷೆ.

2001 ರಲ್ಲಿ ಸಮಾನ ಮನಸ್ಕ ಗೆಳೆಯರೊಂದಿಗೆ ಪೆಡೆಸ್ಟ್ರಿಯನ್ ಪಿಕ್ಚರ್ಸ್ ಆರಂಭಿಸಿದ ಅವರು, ಕರ್ನಾಟಕದ ಬಾಬಾಬುಡನ್ ಗಿರಿ, ಬಿಎಂಐಸಿ ಹೋರಾಟ ಸೇರಿದಂತೆ ಹಲವು ಚಳವಳಿಗಳ ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದ್ದಾರೆ. ಅವರು ನಿರ್ದೇಶಿಸಿದ ‘Shit’ ಸಾಕ್ಷ್ಯಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಸಹ ಲಭಿಸಿದೆ. ಗೌರಿ ಲಂಕೇಶ್ರವರ ಕುರಿತ ‘Our Gauri’, ಹೋರಾಟಗಾರ ನಜೀಬ್ ನಾಪತ್ತೆಯ ನಂತರ ‘ಅಮ್ಮಿ’ ಎಂಬ ಸಾಕ್ಷ್ಯಚಿತ್ರಗಳನ್ನು ಇತ್ತೀಚೆಗೆ ನಿರ್ದೇಶಿಸಿದ್ದಾರೆ.
#ಮಹಾನ್_ತಾತಅನನ್ಯ ಸ್ವಾತಂತ್ರ್ಯ ಸೇನಾನಿಯ ಸಂಘರ್ಷಗಾಥೆದೊರೆಸ್ವಾಮಿಯವರ ಹೋರಾಟದ ಕುರಿತು ಸಿನಿಮಾ ಅಕ್ಟೋಬರ್ 2 ಕ್ಕೆ ಬಿಡುಗಡೆಸ್ಥಳ: ಕರ್ನಾಟಕ ಸ್ಕೌಟ್ಸ್ ಅಂಡ್ ಗೈಡ್ಸ್ ಅರಮನೆ ಮೈದಾನ ಬೆಂಗಳೂರು
Posted by Naanu Gauri on Wednesday, September 23, 2020
ದಣಿವರಿಯದ ಹೋರಾಟಗಾರ ದೊರೆಸ್ವಾಮಿಯವರ ಕುರಿತ ಸಾಕ್ಷ್ಯಚಿತ್ರವನ್ನು ನೋಡಲು ಬಯಸುವವರು 500 ರೂ ಪಾವತಿಸಿದರೆ ಅವರ ಮನೆಗೆ ತಲುಪಿಸಲಾಗುವುದು ಎಂದು ಯುವ ಹೋರಾಟಗಾರ ತ್ರಿಮೂರ್ತಿ ತಿಳಿಸಿದ್ದಾರೆ. ಆಸಕ್ತರು ಅವರನ್ನು 9964676400 ಸಂಪರ್ಕಿಸಬಹುದು.
ಇದನ್ನೂ ಓದಿ: ಊಟ, ಉದ್ಯೋಗ, ಸ್ವಾವಲಂಬನೆ ಎಲ್ಲರ ಹಕ್ಕಾಗಲಿ: 103ನೇ ಜನ್ಮದಿನದಂದು HS ದೊರೆಸ್ವಾಮಿಯವರ ಆಶಯ


