ವಿವಾದಾತ್ಮಕ ಕೃಷಿ ಮಸೂದೆಗಳ ವಿರುದ್ಧ ಹೊರಾಟ ಮಾಡುತ್ತಿರುವ ರೈತ ಸಂಘಟನೆಗಳನ್ನು ಕೇಂದ್ರ ಸರ್ಕಾರವು ಎರಡನೇ ಬಾರಿ ಚರ್ಚೆಗೆ ಆಹ್ವಾನಿಸಿತ್ತು. ಆದರೆ ಇಂದು ನಡೆದ ಈ ಸಭೆಯಲ್ಲಿ ಕೃಷಿ ಸಚಿವರಾದ ನರೇಂದ್ರ ಸಿಂಗ್ ತೋಮರ್ ಹಾಜರಿರಲಿಲ್ಲ. ಹಾಗಾಗಿ ರೈತರು ಮಸೂದೆ ಪ್ರತಿಗಳನ್ನು ಹರಿದುಹಾಕಿ ಹೊರನಡೆದರು.
ಕೇಂದ್ರ ಕೃಷಿ ಸಚಿವರ ಅನುಪಸ್ಥಿತಿಯ ಬಗ್ಗೆ ಅಸಮಾಧಾನಗೊಂಡ ರೈತರು, ಸಚಿವಾಲಯದೊಳಗೆ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿ, ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ತಮ್ಮ ಆಂದೋಲನ ಮುಂದುವರಿಯುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೃಷಿ ಸಂಬಂಧ ಇತ್ತೀಚೆಗೆ ಅಂಗೀಕರಿಸಿರುವ ವಿವಾದಾತ್ಮಕ ಕೃಷಿ ಕಾನೂನುಗಳ ಕುರಿತು ಚರ್ಚೆಸಲು ರೈತ ಮುಖಂಡರು ಭಾಗವಹಿಸಬೇಕೆಂದು ಕೇಂದ್ರ ಸರ್ಕಾರ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳ ರೈತ ಸಂಘಟನೆಗಳಿಗೆ ಎರಡನೇ ಬಾರಿಗೆ ಪತ್ರ ಬರೆದು ಆಹ್ವಾನಿಸಿತ್ತು.
ಇದನ್ನೂ ಓದಿ: ಹಳೆ ಕಾಂಗ್ರೆಸ್ ಸಂಸ್ಕೃತಿ + ದುಡ್ಡು ಎಂಬ ಡಿಕೆಶಿ ಮಾದರಿ ವರ್ಕ್ಔಟ್ ಆಗುತ್ತಾ?
ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿ ಸೇರಿದಂತೆ, ಕೃಷಿ ಸಂಬಂಧಿ ಕಾಯ್ದೆಗಳ ತಿದ್ದುಪಡಿಗಳನ್ನು ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಧ್ವನಿ ಮತದ ಮೂಲಕ ಅಂಗೀಕರಿಸಿತ್ತು. ಇದಕ್ಕೆ ಪಂಜಾಬ್ ಮತ್ತು ಹರಿಯಾಣದಲ್ಲಿ ರೈತ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.
ರೈತರ ಪ್ರತಿಭಟನೆಗೆ ಮಣಿದಂತೆ ಕಂಡುಬಂದಿರುವ ಕೇಂದ್ರ ಸರ್ಕಾರ, 30 ರೈತ ಸಂಘಟನೆಗಳಲ್ಲಿ 29 ಸಂಘಟನೆಗಳ ಮುಖಂಡರಿಗೆ ಕೇಂದ್ರ ಸರ್ಕಾರದ ಕೃಷಿ ಸಹಕಾರ ಮತ್ತು ರೈತ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಸಂಜಯ್ ಅಗರ್ ವಾಲ್ ಪತ್ರ ಬರೆದು ಸಭೆಯಲ್ಲಿ ಭಾಗವಹಿಸಿ ಮಾತುಕತೆ ನಡೆಸಬೇಕು ಎಂದು ಚರ್ಚೆಗೆ ಮನವಿಯನ್ನು ಮಾಡಿತ್ತು.
ಇದನ್ನೂ ಓದಿ: ಕೇಂದ್ರ ಸರ್ಕಾರ ನಮ್ಮಿಂದ ಕಿತ್ತುಕೊಂಡದ್ದನ್ನು ಮರಳಿ ಪಡೆಯಬೇಕಾಗಿದೆ: ಮೆಹಬೂಬಾ ಮುಫ್ತಿ
ಮೊದಲು ಕೃಷಿ ಇಲಾಖೆ ಅಧಿಕಾರಿಗಳು ರೈತ ನಾಯಕರಿಗೆ ಪತ್ರ ಬರೆದಿದ್ದರು. ಅಧಿಕಾರಿಗಳ ಜೊತೆ ಮಾತುಕತೆ ನಡೆಸುವುದಿಲ್ಲ ಎಂದು ರೈತ ನಾಯಕರು ಈ ಆಹ್ವಾನವನ್ನು ತಿರಸ್ಕರಿಸಿದ್ದರು. ಕೃಷಿ ಸಚಿವರು ಮತ್ತು ಪ್ರಧಾನಿಯಿಂದ ಸೂಕ್ತ ಆಹ್ವಾನ ಬಂದರೆ ಮಾತ್ರ ಮಾತುಕತೆಗೆ ಸಿದ್ಧ ಎಂದು ರೈತ ನಾಯಕರು ಈ ಮೊದಲೇ ಹೇಳಿದ್ದರು. ಇದೀಗ ಕೃಷಿ ಸಚಿವಾಲಯದಿಂದ ಆಯೋಜಿಸಿದ್ದ ಎರಡನೇ ಸಭೆಯೂ ವಿಫಲಗೊಂಡಿದೆ.
ಸೆಪ್ಟೆಂಬರ್ ಮಧ್ಯಭಾಗದಿಂದಲೂ ಪಂಜಾಬ್ ಮತ್ತು ಹರಿಯಾಣದಲ್ಲಿ ರೈತ ಸಂಘಟನೆಗಳು ತೀವ್ರ ಸ್ವರೂಪದ ಪ್ರತಿಭಟನೆಯನ್ನು ನಡೆಸುತ್ತಿವೆ. ದೇಶಾದ್ಯಂತ ಕೇಂದ್ರ ಸರ್ಕಾರ ಅಂಗೀಕರಿಸಿರುವ ಕೃಷಿ ಸಂಬಂಧಿ ಕಾಯ್ದೆಗಳಿಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ರೈತ ಸಂಘಟನೆಗಳಿಂದ ಇನ್ನೂ ಪ್ರತಿಭಟನೆ ವ್ಯಕ್ತವಾಗುತ್ತಲೇ ಇದೆ.
ಇದನ್ನೂ ಓದಿ: ಆಯ್ಕೆಯಾಗಿ ವರ್ಷವಾದರೂ ನೇಮಕಾತಿ ಆದೇಶವಿಲ್ಲ: PUC ಉಪನ್ಯಾಸಕ ಅಭ್ಯರ್ಥಿಗಳ ಆಕ್ರೋಶ!