ಕೇವಲ ಮದುವೆ ಆಗುವ ಉದ್ದೇಶದಿಂದಲೇ ಆಗುವ ಧಾರ್ಮಿಕ ಮತಾಂತರ ನಿಷೇಧಿಸುವ ಕಾನೂನು ಶೀಘ್ರವೇ ರಾಜ್ಯದಲ್ಲಿ ಜಾರಿಗೆ ಬರಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. ಇತ್ತ ‘ಲವ್ ಜಿಹಾದ್’ ತಡೆಯುವ ಕಾನೂನು ಜಾರಿಗೆ ತರಲು ತಮ್ಮ ಸರ್ಕಾರ ಚಿಂತಿಸುತ್ತಿದೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕೂಡ ತಿಳಿಸಿದ್ದಾರೆ.
ಇತ್ತಿಚೆಗೆ ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಕರ್ನಾಟಕ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, “ಅಲಹಾಬಾದ್ ಹೈಕೋರ್ಟ್ ಆದೇಶದ ಪ್ರಕಾರ, ಕರ್ನಾಟಕವು ವಿವಾಹದ ಸಲುವಾಗಿ ಧಾರ್ಮಿಕ ಮತಾಂತರ ನಿಷೇಧಿಸುವ ಕಾನೂನನ್ನು ಜಾರಿಗೆ ತರುತ್ತದೆ” ಎಂದಿದ್ದಾರೆ.
On lines of Allahabad High Court's order, Karnataka will enact a law banning religious conversions for the sake of marriage.
We will not remain silent when Jihadis strip the dignity of Our Sisters.
Any one involved in the act of conversion shall face severe & swift punishment.
— C T Ravi ?? ಸಿ ಟಿ ರವಿ (@CTRavi_BJP) November 3, 2020
“ಜಿಹಾದಿಗಳು ನಮ್ಮ ಸಹೋದರಿಯರ ಘನತೆಯನ್ನು ಕಿತ್ತು ಹಾಕುತ್ತಿರುವಾಗ ನಾವು ಮೌನವಾಗಿರುವುದಿಲ್ಲ. ಯಾರೇ ಇರಲಿ ಇಂತಹ ಕೃತ್ಯದಲ್ಲಿ ಭಾಗಿಯಾದರೆ ಕಠಿಣ ಶಿಕ್ಷೆಗೆ ಗುರಿಯಗಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿ ಸಚಿವ ಸಿ.ಟಿ.ರವಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಲವ್ ಜಿಹಾದ್ ಪದ ಬಳಕೆ: ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ರಾಜೀನಾಮೆಗೆ ಒತ್ತಾಯ
ಇನ್ನು ಮಧ್ಯಪ್ರದೇಶದ ಮುಖ್ಯಮಂತ್ರಿ ಅಂತರ್ಧರ್ಮೀಯ ವಿವಾಹಗಳನ್ನು ತಡೆಯಲು ಸೂಕ್ತ ಕಾನೂನನ್ನು ಜಾರಿಗೆ ತರಲು ಮುಂದಾಗಿದ್ದಾರೆ. ಪ್ರೀತಿಯ ಹೆಸರಲ್ಲಿ ಯಾರೂ ಜಿಹಾದ್ ಮಾಡುವಂತಿಲ್ಲ. ಯಾರಾದರೂ ಇಂತಹ ಕೆಲಸ ಮಾಡುತ್ತಿದ್ದರೆ, ಯಾರಾದರೂ ಧೈರ್ಯ ಮಾಡಿದರೆ ಅಂತವರಿಗೆ ತಕ್ಕ ಪಾಠ ಕಲಿಸಲಾಗುತ್ತದೆ. ಈ ದೃಷ್ಟಿಯಿಂದ ಕಾನೂನು ಜಾರಿಗೆ ತರಲಿದ್ದೇವೆ ಎಂದು ಹೇಳಿದ್ದಾರೆ.
“ನನ್ನ ಸರ್ಕಾರ ಮತಾಂಧತೆಯನ್ನು ಅನುಮತಿಸುವುದಿಲ್ಲ. ಯಾರೇ ಹಾಗೆ ಮಾಡಿದರೂ ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ”ಎಂದು ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಎಚ್ಚರಿಸಿದ್ದಾರೆ.

ಕಳೆದ ಮೂರು ದಿನಗಳ ಹಿಂದೆ, ಬಿಜೆಪಿಯ ಭೋಪಾಲ್ ಸಂಸದೆ ಪ್ರಜ್ಞಾ ಠಾಕೂರ್ ಅವರು “ಹಿಂದೂ ಹುಡುಗಿಯರನ್ನು ಲವ್ ಜಿಹಾದ್ ನಿಂದ ರಕ್ಷಿಸಲು” ಕಾನೂನು ಬೇಕು ಎಂದು ಕೋರಿದ್ದರು. ಇದಕ್ಕಾಗಿ ಫರಿದಾಬಾದ್ನಲ್ಲಿ ಇತ್ತೀಚೆಗೆ ನಡೆದ 21 ವರ್ಷದ ಕಾಲೇಜು ಯುವತಿಯ ಹತ್ಯೆಯನ್ನು ಉಲ್ಲೇಖಿಸಿದ್ದರು.
ಹರಿಯಾಣ ಮತ್ತು ಉತ್ತರ ಪ್ರದೇಶ ಕೂಡ ಲವ್ ಜಿಹಾದ್ ವಿರುದ್ಧದ ಕಾನೂನನ್ನು ಪರಿಗಣಿಸುತ್ತಿವೆ. ನಾವು ಅದಕ್ಕೆ ಕಾನೂನು ರೂಪವನ್ನೂ ನೀಡುತ್ತೇವೆ ಎಂದು ಅವರು ಹೇಳಿದ್ದಾರೆ.
ಒಂದು ಮತಾಂತರವು ಧರ್ಮದ ಭಾವನೆಯಿಂದ ಪ್ರೇರಿತವಾಗದಿದ್ದರೆ ಮತ್ತು ತನ್ನದೇ ಆದ ಉದ್ದೇಶಕ್ಕೆ ಒಳಗಾಗಿದ್ದರೆ ಅದು ಮತಾಂತರವಲ್ಲ. ಕೇವಲ ವಿವಾಹದ ಉದ್ದೇಶದಿಂದ ಆದ ಮತಾಂತರ ಮಾನ್ಯವಾಗುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ನವೆಂಬರ್ 1 ರಂದು ತೀರ್ಪು ನೀಡಿತ್ತು. ಧಾರ್ಮಿಕ ಮತಾಂತರ ಆಗುವ ಸಂದರ್ಭದಲ್ಲಿ ಮೂಲ ಧರ್ಮದ ಸಿದ್ಧಾಂತಗಳ ಬದಲಾಗಿ ಹೊಸ ಧರ್ಮದ ಸಿದ್ಧಾಂತಗಳಲ್ಲಿ ಪ್ರಾಮಾಣಿಕ ನಂಬಿಕೆ ಇರಬೇಕು” ಎಂದು ನ್ಯಾಯಾಲಯ ಹೇಳಿತ್ತು.


