Homeಆರೋಗ್ಯಸಕ್ಕರೆಯೆಂಬ ಹೊಸ ತಂಬಾಕು: ದಿನಕ್ಕೆ 25 ಗ್ರಾಂ ಗಿಂತ ಹೆಚ್ಚು ಸಕ್ಕರೆ ಬಳಸಿದರೆ ಅನಾರೋಗ್ಯಕ್ಕೆ ಆಹ್ವಾನ...

ಸಕ್ಕರೆಯೆಂಬ ಹೊಸ ತಂಬಾಕು: ದಿನಕ್ಕೆ 25 ಗ್ರಾಂ ಗಿಂತ ಹೆಚ್ಚು ಸಕ್ಕರೆ ಬಳಸಿದರೆ ಅನಾರೋಗ್ಯಕ್ಕೆ ಆಹ್ವಾನ ಕೊಟ್ಟಂತೆ

ಸಕ್ಕರೆಗೂ ಮಾದಕ ದ್ರವ್ಯಗಳ ವ್ಯಸನಿಗಳಿಗೂ ಯಾವುದೇ ವ್ಯತ್ಯಾಸವಿಲ್ಲವೆಂದು ವಿಶ್ವ ಆರೋಗ್ಯ ಸಂಸ್ಥೆ ನಮ್ಮ ನಿತ್ಯ ಆಹಾರದಿಂದ ಶೇ.10 ಕ್ಕಿಂತ ಹೆಚ್ಚು ಶಕ್ತಿಯನ್ನು ಸಕ್ಕರೆಯಿಂದ ಬರದಂತೆ ನೋಡಿಕೊಳ್ಳಿ ಎಂದಿದೆ.

- Advertisement -
- Advertisement -

ಕೊಕಕೋಲಾದಲ್ಲಿರುವ ಪೌಷ್ಠಿಕಾಂಶಗಳಾವುವು ಎಂದು ಕೇಳಿದಾಗ ಆ ಕಂಪನಿಯವ ಇದರಲ್ಲಿ ಮಾರಾಟವೊಂದೇ ಪೌಷ್ಠಿಕಾಂಶ (marketing is the only nutrient) ಎಂದು ಉತ್ತರಿಸುತ್ತಾನೆ. ಒಂದು ಬಾಟಲಿ ಕೊಕಕೋಲಾ ಅಥವಾ ಪೆಪ್ಸಿಯಲ್ಲಿ ಸುಮಾರು 45 ಗ್ರಾಂ ಸಕ್ಕರೆ ಜೊತೆಗೆ ಇಂಗಾಲದ ಡೈ ಆಕ್ಸೈಡ್ ಮತ್ತು ಕೃತಕ ಬಣ್ಣವಷ್ಟೇ ಇರುವುದರಿಂದ ಮಾರಾಟ ತಂತ್ರವೇ ಇದರ ನಿಜವಾದ ಅಸ್ತ್ರ. ಇದಕ್ಕೆ ಮೊದಲು ಜನರನ್ನು ವ್ಯಸನಿಗಳನ್ನಾಗಿಸಲು ಸ್ವಲ್ಪ ಕೊಕೇನ್ ಕೂಡ ಬಳಸಲಾಗುತ್ತಿತ್ತು. ಇದನ್ನು ವ್ಯಾಪಾರ ಜಗತ್ತಿನಲ್ಲಿ ಬ್ರೈನ್ ವಾಷಿಂಗ್ ಬದಲು ಬ್ರ್ಯಾಂಡ್ ವಾಷಿಂಗ್ ಎನ್ನುತ್ತಾರೆ. ಸ್ನೇಹಿತರೊಬ್ಬರು ಮಕ್ಕಳ ಹಾಲಿನ ಪುಡಿ ಮಾಡುವ ಕಂಪೆನಿಯಲ್ಲಿ ವಿಜ್ಞಾನಿಯಾಗಿದ್ದರು. ಅವರಿಗೆ ಮಕ್ಕಳ ಹಾಲಿನ ಪುಡಿಯಲ್ಲಿ ಸಕ್ಕರೆಯನ್ನು (ಸುಕ್ರೋಸ್) ಏಕೆ ಬಳಸುವಿರಿ, ತಾಯಿಯ ಹಾಲಿನಲ್ಲಿ ಇದು ಇಲ್ಲವಲ್ಲ ಎಂದು ಕೇಳಿದಾಗ ಅವರು ಕೊಟ್ಟ ಉತ್ತರ ಇದು: ನಮ್ಮ ಹಾಲಿನ ಪುಡಿಯನ್ನು ಒಮ್ಮೆ ಹಸುಗೂಸುಗಳು ಕುಡಿದ ಮೇಲೆ ತಾಯಿಯ ಹಾಲನ್ನ ಬಯಸುವುದಿಲ್ಲ ಎಂದು.

ಸಕ್ಕರೆಯನ್ನು ಇಂದು ನೂತನ ತಂಬಾಕು ಎಂದೇ ಆರೋಗ್ಯ ವ್ಯವಸ್ಥೆಯಲ್ಲಿ ಪರಿಗಣಿಸಲಾಗುತ್ತಿದೆ. ರಾಬರ್ಟ್ ಲಸ್ಟಿಕ್ ಸುಮಾರು 10 ವರ್ಷಗಳ ಹಿಂದೆ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಸಕ್ಕರೆ ಎಂಬ ಕಹಿ ಸತ್ಯ (sugar, the bitter truth) ಎಂಬ ಭಾಷಣದಲ್ಲಿ ಸಕ್ಕರೆ ತಂದಿರುವ ಅನಾರೋಗ್ಯ ಅವಾಂತರವನ್ನು ವಿಶ್ಲೇಷಿಸಿದ್ದರು. ಇದನ್ನು ಸುಮಾರು 1 ಕೋಟಿಗೂ ಹೆಚ್ಚು ಜನ ಗಮನಿಸಿದ್ದಾರೆ. ಒಂದು ವೈಜ್ಞಾನಿಕ ಪರೀಕ್ಷೆಯಲ್ಲಿ 2 ಗುಂಪಿನ ಇಲಿಗಳನ್ನು ಬಳಸಿ ಒಂದು ಇಲಿಗಳ ಗುಂಪಿಗೆ ಹಣ್ಣು ತರಕಾರಿಗಳನ್ನ ಕೊಟ್ಟು, ಇನ್ನೊಂದು ಗುಂಪಿನ ಇಲಿಗಳಿಗೆ ಸಕ್ಕರೆ ಕೊಟ್ಟು ಪಳಗಿಸಿ, ಸ್ವಲ್ಪ ಕಾಲದ ನಂತರ ಈ ಎರಡೂ ಗುಂಪಿನ ಇಲಿಗಳ ಮೇಲೆ ಮೈ ಸುಡುವ ಲೇಸರ್ ಬೆಳಕನ್ನು ಹಾಯಿಸಿದಾಗ, ಹಣ್ಣು, ತರಕಾರಿ ತಿನ್ನುವ ಇಲಿಗಳು ಜೀವಭಯದಿಂದ, ಜೀವವಿದ್ರೆ ಮುಂದೆ ತಿನ್ನಬಹುದೆಂದು ಚಂಗನೆ ಹಾರಿ ಓಡಿಹೋದವು. ಆದರೆ ಸಕ್ಕರೆಗೆ ಪಳಗಿದ್ದ ಇಲಿಯ ಗುಂಪು ಮೈ ಸುಟ್ಟರೂ ಸಕ್ಕರೆಯನ್ನು ತಿನ್ನುತ್ತಲೇ ಇದ್ದವು. ಈ ಪ್ರಯೋಗದಿಂದ ತಿಳಿದುಬಂದದ್ದೇನೆಂದರೆ ಸಕ್ಕರೆಗೂ ಮಾದಕ ದ್ರವ್ಯಗಳ ವ್ಯಸನಿಗಳಿಗೂ ಯಾವುದೇ ವ್ಯತ್ಯಾಸವಿಲ್ಲವೆಂದು. ಇದನ್ನು ಗಮನಿಸಿದ ವಿಶ್ವ ಆರೋಗ್ಯ ಸಂಸ್ಥೆ ನಮ್ಮ ನಿತ್ಯ ಆಹಾರದಿಂದ ಶೇ.10 ಕ್ಕಿಂತ ಹೆಚ್ಚು ಶಕ್ತಿಯನ್ನು ಸಕ್ಕರೆಯಿಂದ ಬರದಂತೆ ನೋಡಿಕೊಳ್ಳಿ ಎಂದು ಹೇಳಿರುವುದಲ್ಲದೆ ಇನ್ನೂ ಉತ್ತಮವಾದ ಮತ್ತು ನಿಜವಾದ ಆರೋಗ್ಯಕ್ಕಾಗಿ ಅದನ್ನು ಶೇ.5ಕ್ಕಿಂತ ಕಮ್ಮಿ ಮಾಡಿಕೊಂಡರೆ ಒಳಿತೆಂದು ಸ್ಪಷ್ಟವಾಗಿ ಹೇಳಿದೆ. ಶೇ.5ರಷ್ಟು ಶಕ್ತಿಯನ್ನು ಸಕ್ಕರೆಯಿಂದಲೇ ಪಡೆಯಲೇಬೇಕೆಂದೇನಲ್ಲ, ಬಳಸಲೇಬೇಕಾದರೂ ಅಷ್ಟರೊಳಗೆ ನಿಯಂತ್ರಿಸಿ ಎನ್ನುವುದಾಗಿದೆ. ಇದರ ಅರ್ಥ ದಿನಕ್ಕೆ 25 ಗ್ರಾಂಗಿಂತ ಹೆಚ್ಚು ಸಕ್ಕರೆ ಬಳಸಿದರೆ ಅನಾರೋಗ್ಯಕ್ಕೆ ಆಹ್ವಾನ ಕೊಟ್ಟಂತೆ.

ಈ 25 ಗ್ರಾಂ ಸಕ್ಕರೆ ಒಂದು ದಿನಕ್ಕೆ ಎನ್ನುವ ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರವಾಗಿ ಭಾರತದ 138 ಕೋಟಿ ಜನರಿಗೆ 12 ಮಿಲಿಯನ್ ಟನ್ ಸಕ್ಕರೆ ಬೇಕಾಗುತ್ತದೆ. ಅಥವಾ ಶೇ.10 ರಷ್ಟು ಗರಿಷ್ಠ ಸಕ್ಕರೆಯನ್ನು ಲೆಕ್ಕ ಹಾಕಿದರೂ 24 ಮಿಲಿಯನ್ ಟನ್ ಸಾಕು. ಹನ್ನೆರಡಲ್ಲ 24 ಟನ್ನೂ ಅಲ್ಲ, ನಮ್ಮಲ್ಲಿ ಸುಮಾರು 35 ಮಿಲಿಯನ್ ಟನ್ ಸಕ್ಕರೆಯನ್ನು ಪ್ರತಿವರ್ಷ ಉತ್ಪಾದಿಸುತ್ತೇವೆ. ‘ಬೇಕಾಗಿರುವ’ ಹನ್ನೆರಡು ಮಿಲಿಯನ್ ಟನ್‍ಗಿಂತ ಮೂರು ಪಟ್ಟು ಸಕ್ಕರೆಯ ಉತ್ಪಾದನೆಯಾಗುತ್ತಿದೆ. ಜಗತ್ತಿನ ಮಧುಮೇಹ ರಾಜಧಾನಿಯೆಂದು ಭಾರತವನ್ನು ಕರೆಯುತ್ತಾರೆ. ವಯಸ್ಕರಿಗೆ ಸುಮಾರು ಶೇ.14 ರಷ್ಟು ಜನರಲ್ಲಿ ಮಧುಮೇಹ ರೋಗವಿದೆ. ಸುಮಾರು 40 ವರ್ಷಕ್ಕೆ ಮಧುಮೇಹ ಬಂದರೆ ಸುಮಾರು 10 ಲಕ್ಷ ರೂಪಾಯಿ ಆರೋಗ್ಯಕ್ಕೆ ಖರ್ಚು ಮಾಡಬೇಕಾಗುತ್ತದೆ. ಈ 35 ಮಿಲಿಯನ್ ಟನ್ ಸಕ್ಕರೆಗಾಗಿ 350 ಮಿಲಿಯನ್ ಟನ್ ಕಬ್ಬನ್ನು ಬೆಳೆಯಲು ಸುಮಾರು 5 ಮಿಲಿಯನ್ ಹೆಕ್ಟೇರ್ ಭೂಮಿಯನ್ನು ಬಳಸಲಾಗುತ್ತಿದೆ. ಮಹಾರಾಷ್ಟ್ರದಂತಹ ರಾಜ್ಯದಲ್ಲಿರುವ ಸುಮಾರು 1800 ಲಕ್ಷ ಕೋಟಿಯಷ್ಟು ಜನರ ತೆರಿಗೆ ಹಣದಿಂದ ಖರ್ಚು ಮಾಡಿ ಕಟ್ಟಿರುವ ಅಣೆಕಟ್ಟಿನಿಂದ ಶೇ.80ರಷ್ಟು ನೀರು ಕೇವಲ ಕಬ್ಬಿನ ಗದ್ದೆಗೆ ಹರಿಯುತ್ತದೆ. Sugar cane is a water guzzler, diabetes inducer. ಕಬ್ಬಿನಿಂದ ಬರುವ ಸಕ್ಕರೆಯಾಗಲಿ ಅಥವಾ ಸಾರಾಯಿಯಾಗಲಿ ಪರಿಸರಕ್ಕೆ ಮತ್ತು ಮನುಕುಲಕ್ಕೆ ಎಲ್ಲಾ ರೀತಿಯಿಂದಲೂ ಮಾರಕವೇ ಆಗಿದೆ.

ಮನುಷ್ಯನ ದೇಹದಲ್ಲಿ ಸುಮಾರು 5 ಲೀಟರ್ ರಕ್ತವಿದ್ದು, ಅದಕ್ಕೆ ಕೇವಲ 5 ಗ್ರಾಂ ಸಕ್ಕರೆಯನ್ನು ಮಾತ್ರ ಶೇಖರಿಸಲು ಸಾಮರ್ಥ್ಯವಿರುವುದು. ನಾವು ಸುಲಭವಾಗಿ ಬಳಸುವ ಸಕ್ಕರೆ ರಕ್ತಕ್ಕೆ ಶೀಘ್ರವಾಗಿ ಪ್ರವಾಹವಾಗಿ ದೇಹದ ಶೇಖರಣಾ ಸಾಮರ್ಥ್ಯವನ್ನು ಮೀರಿದಾಗ ಇನ್ಸುಲಿನ್ ಹಾರ್ಮೋನ್ ಹೆಚ್ಚು ಉತ್ಪತ್ತಿಯಾಗಿ ಈ ಸಕ್ಕರೆಯ ಪ್ರವಾಹವನ್ನು ಕೊಬ್ಬಾಗಿ ನಿರಂತರವಾಗಿ ಪರಿವರ್ತಿಸಬೇಕಾಗುತ್ತದೆ. ಹೀಗೆ ಸತತವಾಗಿ ದುಡಿದ ಇನ್ಸುಲಿನ್ ಉತ್ಪಾದಿಸುವ ಪ್ಯಾಂಕ್ರಿಯಾಸ್ ಅಥವಾ ಇನ್ಸುಲಿನ್ ಹೇಳಿದ ಮಾತಿನಂತೆ ಸಕ್ಕರೆಯನ್ನು ಬೇರೆಡೆಗೆ ಶೇಖರಿಸುವ ಜೀವಕೋಶಗಳು ಸೋತು ದೇಹದ ಸಂವಾಹಕಗಳು ಹಳಿ ತಪ್ಪಿದಾಗ ಉಂಟಾಗುವುದೇ ಮಧುಮೇಹ ರೋಗ. ಮನುಷ್ಯ ಅನುವಂಶಿಕವಾಗಿ ಸಕ್ಕರೆಯನ್ನು ರಕ್ತದಲ್ಲಿ ಹಿಡಿದಿಡಲು ಸಾಮರ್ಥ್ಯವಿಲ್ಲದಿರುವ ವಿದ್ಯಮಾನ, ಮಂಗನಿಂದ ಮಾನವನಾದ ವಿಕಾಸವಾದ ಅಡಗಿದೆ ಎನ್ನುತ್ತಾರೆ. ಹಣ್ಣು ಹಂಪಲನ್ನು ತಿನ್ನುವ ನಮ್ಮ “ಪೂರ್ವಾಶ್ರಮದಲ್ಲಿ” ಸಕ್ಕರೆಯನ್ನು ಹಿಡಿದಿಡುವ ಪ್ರಮೇಯವೇ ಒದಗಿರಲಿಲ್ಲ. ಅವಶ್ಯಕತೆ ಇಲ್ಲದ್ದು ವಿಕಾಸವಾಗುವ ಅವಕಾಶವಿರಲಿಲ್ಲ. ಹಾಗಾಗಿ ಇಂದಿಗೆ ನಾವು ಹೆಚ್ಚು ಸಕ್ಕರೆ ಬಳಸುವುದು ನಮ್ಮ ದೈಹಿಕ ಚಟುವಟಿಕೆಯ ಕಾರ್ಯವೈಖರಿಯ ಮತ್ತು ಬದುಕಿನ ಜೀವನಶೈಲಿಗೆ ವಿರುದ್ಧವಾದದ್ದು.

ಹಣ್ಣಿನಿಂದ ಸಕ್ಕರೆ ಬರುವಾಗ ಇಂತಹ ಸಮಸ್ಯೆ ಇರದಿರಲು ಕಾರಣ ಹಣ್ಣಿನಲ್ಲಿರುವ ಅಂಶ ಸುಮಾರು ಶೇ.10 ರಷ್ಟು ಸಕ್ಕರೆ ಜೊತೆ ಸುಮಾರು 85 ರಿಂದ 90 ರಷ್ಟು ನೀರೆ ಆಗಿರುತ್ತದೆ. ಹೀಗಾಗಿ ಹೊಟ್ಟೆ ತುಂಬಿ ಹೆಚ್ಚು ತಿನ್ನಲಾಗದು. ತಿನ್ನುವ ಆಹಾರವೇ ನಿಮ್ಮನ್ನು ನಿಯಂತ್ರಿಸುತ್ತದೆ. ಇದೇ ಕಬ್ಬಿನಿಂದ ಜಗಿದು ರಸದಲ್ಲಿರುವ ಸಕ್ಕರೆಯನ್ನು ತೆಗೆದುಕೊಳ್ಳಬೇಕಾದರೆ 10 ಗ್ರಾಂ ಸಕ್ಕರೆಗೆ 100 ಗ್ರಾಂ ಕಬ್ಬನ್ನು ಜಗಿದು ರಸ ಹೀರಲು ಕಾಲು ಗಂಟೆ ಬೇಕಾಗಬಹುದು – ಹಲ್ಲು ಗಟ್ಟಿ ಇದ್ದರೆ. ಅದೇ ನಾವು 2 ಚಮಚ ಸಕ್ಕರೆ ಹಾಕಿಕೊಳ್ಳಲು ಯಾವುದೇ ಆಲೋಚನೆ ಮಾಡುವುದಿಲ್ಲ. ಯಾವುದೇ ಆಹಾರ ಪದಾರ್ಥ ಶುದ್ಧವಾದಾಗ ಸತ್ವ ಹೀನವಾಗುತ್ತದೆ. Pure is junk. ಅದು ಆಹಾರಕ್ಕೂ ಮತ್ತು ಶುದ್ಧ ಮನುಷ್ಯರಿಗೂ ಅನ್ವಯ.

ಈಗ ಸಕ್ಕರೆಯ ಪರವಾಗಿ ವಕಾಲತ್ತು ವಹಿಸಲು ಹುಟ್ಟುಹಾಕಲಾಗಿರುವ ಮೀಟಾ.ಆರ್ಗ್ ಈ ಎಲ್ಲಾ ನಗ್ನ ಸತ್ಯಗಳ ವಿರುದ್ಧ ಹಿಂದೆ ಹೇಗೆ ತಂಬಾಕು ಲಾಬಿ ಸಿಗರೇಟಿನ ಪರ ಅಪಾರವಾದ ಪ್ರಚಾರ ಮಾಡಿತ್ತೋ ಹಾಗೆಯೇ ಮುಂದುವರಿಯುತ್ತಿದೆ. ತಂಬಾಕು ಲಾಬಿ ಸಿಗರೇಟಿಗೂ ಕ್ಯಾನ್ಸರ್‌ಗೂ ಸಂಬಂಧವೇ ಇಲ್ಲವೆಂದು ಸುಮಾರು 100 ವರ್ಷಗಳ ಕಾಲ “ವೈಜ್ಞಾನಿಕ” ಸಂಶೋಧನೆಗಳನ್ನು ಮಾಡಿ ಪ್ರಕಟಿಸಿತು. ಅನೇಕ ಲಾಬಿಗಳನ್ನು ಸೃಷ್ಟಿಮಾಡಿತ್ತು. ತಂಬಾಕಿನ ಪರವಾಗಿ ಅನೇಕ ಪುಸ್ತಕಗಳನ್ನು ಬರೆಯಲಾಯಿತು. ಡನ್‍ಹಿಲ್ ಎಂಬುವ ವ್ಯಕ್ತಿ ಜಂಟಲ್ ಆರ್ಟ್ ಆಫ್ ಸ್ಮೋಕಿಂಗ್ ಎನ್ನುವ ಪುಸ್ತಕ ಬರೆದ. ಕೊಕಕೋಲಾ ಕಂಪೆನಿಯವರು ಸಕ್ಕರೆ ಪರ ಇದೇ ರೀತಿಯ ವಕಾಲತ್ತನ್ನು ವಹಿಸುತ್ತಾರೆ. ಅನೇಕ ಬಾರಿ ಇಂತಹ ಲಾಬಿಗಳಿಗೆ ಕೊಕಕೋಲಾ ಮತ್ತು ಪೆಪ್ಸಿಯಂತಹ ಕಂಪೆನಿಗಳಿಂದ ಹಣ ಹೂಡಿಕೆಯಾಗುತ್ತದೆ. ಕೋಲಾ ಕಂಪೆನಿಗಳು ಹೇಳುವುದು ನಮ್ಮ ಕೋಲಾ ಕುಡಿದು ಸುಮಾರು 2 ಕಿ.ಮೀ ಓಡಿದರೆ ಯಾವ ಬೊಜ್ಜು ಬರುವುದಿಲ್ಲ ಎಂದು. ಸೋಮಾರಿಗಳು ಕೊಕಕೋಲಾ ಕುಡಿದು ಬೇಜವಾಬ್ದಾರಿಯಿಂದ ಕೊಕಕೋಲಾದಿಂದ ಬೊಜ್ಜು ಬರುತ್ತದೆ ಎಂದು ಹೇಳುತ್ತಾರೆ ಎನ್ನುವುದು ಅವರ ವಾದ. ಹೊರನೋಟಕ್ಕೆ ಸರಿ ಕಂಡರೂ ಅವರ ದೂರ್ತ ಆಲೋಚನೆ ಮತ್ತು ಅವರ ದುರುದ್ದೇಶ ಸ್ಪಷ್ಟವಾಗಿ ಗೋಚರವಾಗುತ್ತದೆ.

ಸಕ್ಕರೆ ಮತ್ತು ಕಬ್ಬನ್ನು ಮುಕ್ಕಾಲು ಭಾಗ ಕಮ್ಮಿ ಮಾಡಿ ಭಾರತೀಯರ ಆರೋಗ್ಯ, ಮಣ್ಣಿನ ಆರೋಗ್ಯ, ನೀರಿನ ಸಂರಕ್ಷಣೆ, ಪರಿಸರ ಪಾಲನೆಗಾಗಿ ಎಲ್ಲರೂ ಒಟ್ಟಾಗಿ ಚರ್ಚೆ ನಡೆಸಿ ಆರೋಗ್ಯಕರ ಕ್ರಮಗಳಿಗೆ ಮುಂದಾಗಬೇಕಿರುವ ತುರ್ತು ನಮ್ಮ ಮುಂದಿದೆ.


ಇದನ್ನೂ ಓದಿ: ಕನ್ನಡಕ್ಕೆ ಕನ್ನಡದ್ದೆ ಊಟ ಉಂಟಾ? ಡಾ. ಕೆ.ಸಿ ರಘು
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...