ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ಮೂವರನೇ ಅಲೆ ಆರಂಭವಾಗಿದ್ದು, ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಆಪ್ ಸರ್ಕಾರ ಹಲವಾರು ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು, ಕೊರೊನಾ ಲಸಿಕೆ ಬರುವವರೆಗೆ ದೆಹಲಿಯಲ್ಲಿ ಶಾಲೆಗಳ ಪುನರಾರಂಭ ಸಾಧ್ಯವಿಲ್ಲ ಎಂದು ಶಿಕ್ಷಣ ಸಚಿವ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
ಕೊರೊನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ದೆಹಲಿಯ ಶಾಲೆಗಳನ್ನು ಮಾರ್ಚ್ನಿಂದ ಮುಚ್ಚಲಾಗಿದೆ. ಒಂಬತ್ತನೇ ತರಗತಿ ಮತ್ತು ಹನ್ನೆರಡನೇ ತರಗತಿಗಳಿಗೆ ಶಾಲೆಗಳನ್ನು ಪುನಃ ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದ್ದರೂ, ದೆಹಲಿ ಸರ್ಕಾರ ಶಾಲೆಗಳನ್ನು ತೆರಯದಿರಲು ನಿರ್ಧರಿಸಿತ್ತು.
ಅಕ್ಟೋಬರ್ 30 ರಂದು ಹೇಳಿಕೆ ನೀಡಿದ್ದ ಉಪಮುಖ್ಯಮಂತ್ರಿ ಮನೀಶ್ ಸಿಸೊಡಿಯಾ, ಮುಂದಿನ ಆದೇಶದವರೆಗೂ ಶಾಲೆಗಳು ಮುಚ್ಚಲ್ಪಡುತ್ತವೆ ಎಂದು ಘೋಷಿಸಿದ್ದರು.
“ಶಾಲೆಗಳನ್ನು ಮತ್ತೆ ತೆರೆಯುವುದು ಸುರಕ್ಷಿತವೇ ಎಂಬ ಬಗ್ಗೆ ನಾವು ಪೋಷಕರಿಂದ ಪ್ರತಿಕ್ರಿಯೆಯನ್ನು ಪಡೆಯುತ್ತಿದ್ದೇವೆ. ಆದರೆ ಶಾಲೆಗಳು ಪುನರಾರಂಭವಾದರೆ, ಮಕ್ಕಳಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚುತ್ತವೆ ಎಂಬ ಪ್ರತಿಕ್ರಿಯೆಗಳು ಬಂದಿವೆ ”ಎಂದು ಸಿಸೋಡಿಯಾ ಹೇಳಿದ್ದಾರೆ.
ಇದನ್ನೂ ಓದಿ: ಕೊರೊನಾ: 500 ರಿಂದ 2 ಸಾವಿರಕ್ಕೆ ಮಾಸ್ಕ್ ದಂಡ ಹೆಚ್ಚಿಸಿದ ದೆಹಲಿ ಸರ್ಕಾರ
“ಈಗಾಗಲೇ ದೆಹಲಿಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲು ಶಾಲೆಗಳನ್ನ ಆರಂಭಿಸಿದರೇ ಸೋಂಕು ಹರಡುವ ಸಾಧ್ಯತೆ ಮತ್ತಷ್ಟು ಹೆಚ್ಚಾಗುತ್ತದೆ. ಹೀಗಾಗಿ ಕೊರೊನಾ ಲಸಿಕೆ ಬರೋವರೆಗೂ ದೆಹಲಿಯಲ್ಲಿ ಶಾಲೆಗಳನ್ನು ಆರಂಭಿಸುವುದಿಲ್ಲ” ಎಂದಿದ್ದಾರೆ.
ಮಾರ್ಚ್ 25 ರಂದು ರಾಷ್ಟ್ರವ್ಯಾಪಿ ಲಾಕ್ಡೌನ್ ಘೋಷಿಸಿದಾರ ದೇಶಾದ್ಯಂತ ಶಾಲೆಗಳನ್ನು ಮುಚ್ಚಲಾಯಿತು. ಅನ್ಲಾಕ್ 5.0 ಮಾರ್ಗಸೂಚಿಗಳ ಪ್ರಕಾರ, ಶಾಲೆಗಳನ್ನು ಹಂತ ಹಂತಗಳಲ್ಲಿ ಪುನಃ ತೆರೆಯುವ ಬಗ್ಗೆ ರಾಜ್ಯಗಳು ನಿರ್ಧಾರ ತೆಗೆದುಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿತ್ತು.
ಹಲವು ರಾಜ್ಯಗಳಲ್ಲಿ ಶಾಲೆಗಳನ್ನು ಪುನರಾರಂಭಿಸಲಾಗಿದೆ. ಮತ್ತೆ ಕೆಲವೆಡೆ ಶಾಲೆ ಆರಂಭಿಸಿ, ಕೊರೊನಾ ಹೆಚ್ಚಾದ ಹಿನ್ನೆಲೆ ಮತ್ತೆ ಶಾಲೆಗಳನ್ನು ಮಚ್ಚಲಾಗಿದೆ. ಕರ್ನಾಟಕದಲ್ಲೂ ಡಿಸೆಂಬರ್ ಅಂತ್ಯದವರೆಗೂ ಶಾಲೆ ಪುನರಾರಂಭಿಸದಿರಲು ನಿರ್ಧರಿಸಲಾಗಿದೆ. ಆದರೆ ಹಲವು ತಜ್ಞರು ಕರ್ನಾಟಕದಲ್ಲಿ ಶಾಲೆ ಆರಂಭಿಸಲು ಒತ್ತಾಯಿಸಿದ್ದಾರೆ.
ದೆಹಲಿ ಸರ್ಕಾರದ ನಿರ್ಧಾರಕ್ಕೆ ಹಲವು ಪೋಷಕರು ಬೆಂಬಲ ವ್ಯಕ್ತಪಡಿಸಿ, ನಿರ್ಧಾರ ಸ್ವಾಗತಿಸಿದ್ದಾರೆ. ’ದೆಹಲಿಯಲ್ಲಿ ಕೊರೊನಾ ಮತ್ತು ಮಾಲಿನ್ಯ ಎರಡೂ ಜಾಸ್ತಿಯಾಗಿದೆ. ಆದ್ದರಿಂದ ಯಾರೂ ತಮ್ಮ ಮಕ್ಕಳನ್ನು ಮನೆಯಿಂದ ಹೊರಗೆ ಕಳುಹಿಸಲು ಬಯಸುವುದಿಲ್ಲ. ರಾಜ್ಯ ಸರ್ಕಾರವು ಉತ್ತಮ ನಿರ್ಧಾರ ತೆಗೆದುಕೊಂಡಿದೆ’ ಎಂದು ಆರನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಯ ತಾಯಿ ರಿಧಿಮಾ ಝಾ ಪ್ರತಿಕ್ರಿಯೆ ನೀಡಿದ್ದಾರೆ.


