ಟೊಯೋಟಾ ಕಿರ್ಲೋಸ್ಕರ್ ಆಡಳಿತ ಮಂಡಳಿಯ ದೌರ್ಜನ್ಯದ ವಿರುದ್ದ ಕಾರ್ಮಿಕರು ನಡೆಸುತ್ತಿರುವ ಹೋರಾಟ ಇಂದು 17 ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಕೂಡಾ ಕಾರ್ಮಿಕರು ಕಂಪೆನಿಯ ಒಳಗೆ ಪ್ರವೇಶ ಕೋರಿ ಸರತಿ ಸಾಲಿನಲ್ಲಿ ನಿಂತರು ಕಂಪೆನಿಯು ಅವರನ್ನು ಪ್ರವೇಶಿಸಲು ಬಿಡಲಿಲ್ಲ. ಸರ್ಕಾರವು ನವೆಂಬರ್ 18 ರಂದು ಲಾಕೌಟ್ ನಿಷೇಧಿಸಿ ಆದೇಶ ಹೊರಡಿಸಿದ್ದರೂ ಕಂಪೆನಿಯು ಕಾರ್ಮಿಕರನ್ನು ಒಳಕ್ಕೆ ಬಿಟ್ಟಿರಲಿಲ್ಲ.
ಕೆಳೆದ ಕೆಲವು ದಿನದಿಂದ ಕೆಲಸ ನಿರ್ವಹಿಸುವುದಾಗಿ ಕಾರ್ಮಿಕರು ಹೇಳುತ್ತಾ ಬಂದಿದ್ದರೂ ಕಂಪನಿಯು ಶಿಫ್ಟ್ ನೆಪ ಹೇಳುತ್ತಾ ಕಾರ್ಮಿಕರ ಪ್ರವೇಶವನ್ನು ತಡೆದಿತ್ತು. ಆದರೆ ನಿನ್ನೆಯಿಂದ ಕಾರ್ಮಿಕರು ಕೆಲಸಕ್ಕೆ ಬರುತ್ತಿಲ್ಲ ಎಂದು ಎರಡನೆ ಬಾರಿಗೆ ಲಾಕ್ಔಟ್ ಘೋಷಿಸಿದೆ. ಇದನ್ನು ವಿರೋಧಿಸಿ ಕಾರ್ಮಿಕರು ತಮ್ಮ ಪ್ರತಿಭಟನೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: 16 ನೇ ದಿನಕ್ಕೆ ಟೊಯೊಟಾ ಕಿರ್ಲೊಸ್ಕರ್ ಕಾರ್ಮಿಕರ ಪ್ರತಿಭಟನೆ: ಸಿಐಟಿಯು ಬೆಂಬಲ
ಕಾರ್ಮಿಕರು ಕಂಪೆನಿಯೊಳಗಡೆ ಅನುಭವಿಸುವ ಸಂಕಷ್ಟ, ಶೋಷಣೆಗಳ ಬಗ್ಗೆ ಮಾಧ್ಯಮಕ್ಕೆ ವಿವರಿಸಿದ ಕಂಪನಿಯ ಕಾರ್ಮಿಕರ ಸಂಘಟನೆಯ ಅಧ್ಯಕ್ಷ ಪ್ರಸನ್ನ ಕುಮಾರ್ ಚಕ್ಕೆರೆ, ಪ್ರತಿಭಟನೆಯ ಬೇಡಿಕೆಗಳನ್ನು ತಿಳಿಸಿದರು.
ನಂತರ ಕಾರ್ಮಿಕ ಸಂಘಟನೆಯ ಕಾನೂನು ಸಲಹೆಗಾರ ಮುರುಳಿಧರ್ ಮಾತನಾಡಿ ಕಾರ್ಮಿಕ ಸಂಘಟನೆ ಕಾನೂನಿನ ಬೆಂಬಲ ನೀಡುವುದಾಗಿ ಭರವಸೆ ನೀಡಿದರು. ಅಷ್ಟೆ ಅಲ್ಲದೆ ನಾಳೆ ನಡೆಯುವ ಅಖಿಲ ಭಾರತ ಮುಷ್ಕರಕ್ಕೆ ಬೆಂಬಲ ನೀಡಿದ ಕಾರ್ಮಿಕ ಸಂಘಟನೆಯು, ಬೈಕ್ ರ್ಯಾಲಿ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡುವುದಾಗಿ ಹೇಳಿದೆ.
ಆಡಳಿತ ಮಂಡಳಿಯ ದುರ್ವತನೆ ಬಗ್ಗೆ ಪ್ರಶ್ನಿಸಿದ್ದಕ್ಕೆ ಹಲವು ಕಾರ್ಮಿರನ್ನು ವಜಾ ಮಾಡಿರುವ ಕಂಪೆನಿಯು ನವೆಂಬರ್ 10 ರಿಂದ ಮುಷ್ಕರದ ನೆಪ ಹೇಳಿ ಲಾಕ್ಔಟ್ ಘೋಷಿಸಿತ್ತು. ಆದರೆ ಕಾರ್ಮಿಕ ಸಂಘಟನೆ ವಜಾ ಗೊಳಿಸಿರುವ ಉದ್ಯೋಗಿಗಳನ್ನು ವಾಪಾಸು ಕೆಲಸಕ್ಕೆ ನೇಮಿಸಿ, ಕಾರ್ಮಿಕರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕೆಂದು ಬೇಡಿಕೆಯಿಟ್ಟಿದೆ.
ಇದನ್ನೂ ಓದಿ: ಕರ್ನಾಟಕದ ಕಾರ್ಮಿಕರು ಮತ್ತು ಜಪಾನಿ ಆಡಳಿತದ ನಡುವಿನ ತಿಕ್ಕಾಟ: ಟೊಯೋಟಾದಲ್ಲಿ ನಡೆಯುತ್ತಿರುವುದೇನು?