ಪ್ರಧಾನಿ ಮೋದಿಗೆ ಕನಿಷ್ಠ ಕಾಮನ್ ಸೆನ್ಸ್ ಇಲ್ಲ ಎನ್ನುವುದು ಅವರು ತೆಗೆದುಕೊಳ್ಳುತ್ತಿರುವ ನಿರ್ಧಾರಗಳಿಂದ ಸಾಬೀತಾಗಿದೆ. ಸತತ ಸುಳ್ಳುಗಳಿಂದ ಜನರನ್ನು ಹಾದಿ ತಪ್ಪಿಸುವುದು ಅವರಿಗೆ ರೂಡಿಯಾಗಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅವರು ಶುಕ್ರವಾರ ದೆಹಲಿಯಲ್ಲಿ ಆರೋಪಿಸಿದ್ದಾರೆ.
ದೆಹಲಿ ಕರ್ನಾಟಕ ಸಂಘದ ಆವರಣದಲ್ಲಿ ರೈತ ಹೋರಾಟಕ್ಕೆ ಬೆಂಬಲ ಸೂಚಿಸಲು ಆಗಮಿಸಿದ ನಿಯೋಗ ಏರ್ಪಡಿಸಿದ್ದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, “ಕೊರೊನಾ ಎಂದು ಮನೆಯಲ್ಲಿ ಕೂಡಿ ಹಾಕಿ ರೈತರ ಕತ್ತು ಹಿಸುಕುವ ಮೂರು ಕಾನೂನನ್ನು ಜಾರಿಗೆ ತಂದ್ದಿದ್ದಾರೆ. ಈ ಮೂಲಕ ಪ್ರಜಾಪ್ರಭುತ್ವವನ್ನು ಅವಮಾನಿಸಿ ಕೆಲವರ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿರುವುದು ನಿಚ್ಚಳವಾಗಿದೆ” ಎಂದು ಅವರು ಕಿಡಿಕಾರಿದ್ದಾರೆ.
ಇದನ್ನೂ ಓದಿ: ರೈತ ಹೋರಾಟದಲ್ಲಿ ಖಲೀಸ್ತಾನಿ ಕರಪತ್ರ ಹಂಚಿಕೆ: RSS ಕಾರ್ಯಕರ್ತ ಬಂಧನ!
“ರೈತರ ಹೋರಾಟದ ನೈತಿಕ ಶಕ್ತಿಯನ್ನು ಎದುರಿಸಲಾಗದೆ ಅಪಪ್ರಚಾರ ಮಾಡುತ್ತಿದ್ದಾರೆ. ರೈತರ ಬಗ್ಗೆ ಕಾಳಜಿಯಿದ್ದದ್ದೆ ಆದಲ್ಲಿ ರೈತ ಸಂಘದ ಹತ್ತು ಜನ ಸಾಮಾನ್ಯ ಕಾರ್ಯಕರ್ತರನ್ನು ಮಾತುಕತೆಗೆ ಕಳಿಸುತ್ತೇವೆ. ತಾಕತ್ತು ಇದ್ದರೆ ಪ್ರಧಾನಿ ಮುಖಾಮುಖಿ ಆಗಲಿ” ಎಂದು ನಾಗೇಂದ್ರ ಅವರು ಸವಾಲು ಹಾಕಿದ್ದಾರೆ.
ಕೃಷಿ ವಿಜ್ಞಾನಿ ಪ್ರಕಾಶ್ ಕಮ್ಮರಡಿ ಮಾತನಾಡಿ, “ಹಾಲಿ ಇರುವ ಸರ್ಕಾರ ರೈತ ವಿರೋಧಿಯಲ್ಲ. ರೈತ ದ್ರೋಹಿ ಸರ್ಕಾರ. ರೈತರು ಕೇಳದೆ ಇರುವಂತ ಭೂ ಸುಧಾರಣೆ ಮತ್ತು ಎಪಿಎಂಸಿ ಕಾಯ್ದೆಯನ್ನು ತಿದ್ದುಪಡಿ ಮಾಡಿದೆ. ಈ ಕಾನೂನು ತಿದ್ದುಪಡಿಯಿಂದ ಕೇವಲ ರೈತರಿಗೆ ಮಾತ್ರ ಅನ್ಯಾಯ ಆಗುವುದಲ್ಲ. ದಲಿತ, ಕಾರ್ಮಿಕ ಸೇರಿದಂತೆ ಗ್ರಾಹಕರಿಗೂ ಘೋರ ಅನ್ಯಾಯವಾಗಲಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ತೀವ್ರಗೊಂಡ ಹೋರಾಟ: ಟೋಲ್ ಪ್ಲಾಜಾಗಳನ್ನು ವಶಕ್ಕೆ ಪಡೆದ ರೈತರು
ಕರ್ನಾಟಕ ಜನ ಶಕ್ತಿಯ ರಾಜ್ಯಾಧ್ಯಕ್ಷ ನೂರ್ ಶ್ರೀಧರ್ ಮಾತನಾಡಿ, “ದಕ್ಷಿಣ ಭಾರತದ ರೈತರಿಗೆ ಈಗ ಸುಗ್ಗಿಯ ಕಾಲ. ಹೀಗಾಗಿ ಈ ಕಾಯ್ದೆಯ ವಿರುದ್ದದ ಹೋರಾಟ ಬಿರುಸುಗೊಂಡಿಲ್ಲ. ಸುಗ್ಗಿ ಮುಗಿದ ನಂತರ ಮಾಡುವ ಸುಗ್ಗಿ ಹಬ್ಬವನ್ನು ಹೋರಾಟದ ದಿನವನ್ನಾಗಿ ಆಚರಿಸಲಾಗುವುದು ಹಾಗೂ ಜನವರಿ 26 ದೇಶದ ರೈತರು, ದಲಿತರು, ಕಾರ್ಮಿಕರು ದೆಹಲಿ ಮುತ್ತಿಗೆ ಹಾಕುವ ಸಂದರ್ಭ ಬರುವುದು” ಎಂದು ಸರ್ಕಾರಕ್ಕೆ ಎಚ್ಚರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಗುರುಪ್ರಸಾದ್ ಕೆರೆಗೋಡು, ಎಸ್. ಆರ್. ಹಿರೇಮಠ್, ಕಾಳಪ್ಪ, ಜಿ.ಜಿ ಹಳ್ಳಿ ನಾರಾಯಣಸ್ವಾಮಿ, ಬಿ.ಆರ್ ಪಾಟೀಲ್, ಅಪರ್ಣ, ನಾಗಮ್ಮ ಮತ್ತಿತರರು ಹಾಜರಿದ್ದರು. ಸುದ್ದಿಗೋಷ್ಠಿಯ ನಂತರ ನಿಯೋಗವು ಹರಿಯಾಣ ರಾಜಾಸ್ಥಾನ ದೆಹಲಿಯ ಗಡಿಯಾಗಿರುವ ಷಹಜಾನ್ ಪುರದಲ್ಲಿ ನಡೆಯುತ್ತಿರುವ ರೈತ ಹೋರಾಟದ ಸ್ಥಳಕ್ಕೆ ಬೇಟಿಯಿತ್ತು ಅಲ್ಲಿನ ಮುಖಂಡರೊಂದಿಗೆ ಚರ್ಚೆ ನಡೆಸಿತು. ಶನಿವಾರ ನಿಯೋಗವು ದೆಹಲಿ ಸಮೀಪದ ಟಿಕ್ರಿ ಗಡಿಯಲ್ಲಿ ನಡೆಯುತ್ತಿರುವ ಹೋರಾಟದ ಸ್ಥಳಕ್ಕೆ ಬೇಟಿಯಿತ್ತು ಹೊರಾಟದಲ್ಲಿ ಭಾಗಿಯಾಗಲಿದೆ.
ಇದನ್ನೂ ಓದಿ: ರೈತ ಹೋರಾಟದಲ್ಲಿ ಗಾಂಧಿ- ಅಂಬೇಡ್ಕರ್ ವಿಚಾರಗಳು