“ಕೇಂದ್ರದಲ್ಲಿ ವಿರೋಧ ಪಕ್ಷದಲ್ಲಿರುವ ಕಾಂಗ್ರೆಸ್ ದುರ್ಬಲವಾಗಿದೆ ಮತ್ತು ವಿಘಟನೆಯಾಗಿದೆ. ಹಾಗಾಗಿ ಬಿಜೆಪಿಯೇತರ ಪಕ್ಷಗಳೆಲ್ಲವೂ UPA ಅಡಿಯಲ್ಲಿ ಒಂದಾಗಬೇಕು” ಎಂದು ಶಿವಸೇನೆಯ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.
“ಕೇಂದ್ರದಲ್ಲಿ ಅಧಿಕಾರದಲ್ಲಿರುವವರು ಈ ರೈತರ ಪ್ರತಿಭಟನೆಯ ಬಗ್ಗೆ ಅಸಡ್ಡೆ ಹೊಂದಿದ್ದಾರೆ. ಸರ್ಕಾರದ ಈ ಉದಾಸೀನ ನಡವಳಿಕೆಗೆ ಪರಿಣಾಮಕಾರಿಯಾದ ವಿರೋಧವಿಲ್ಲದಿರುವುದೇ ಕಾರಣ. ಇದು ಪ್ರಜಾಪ್ರಭುತ್ವದ ವಿಘಟನೆಗೂ ಕಾರಣವಾಗಿದೆ” ಎಂದು ಸಾಮ್ನಾ ಹೇಳಿದೆ.
ಇದನ್ನೂ ಓದಿ: ಕೇರಳದಲ್ಲಿ ನವ ವಿವಾಹಿತನ ಕೊಲೆ: ಮರ್ಯಾದೆಹೀನ ಹತ್ಯೆ ಶಂಕೆಯಲ್ಲಿ ವಧುವಿನ ತಂದೆ, ಚಿಕ್ಕಪ್ಪನ ಬಂಧನ
“ಕೇಂದ್ರ ಸರ್ಕಾರವನ್ನು ದೂಷಿಸುವ ಬದಲು, ವಿರೋಧ ಪಕ್ಷಗಳು ತನ್ನ ನಾಯಕತ್ವದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವುದು ಮುಖ್ಯ. ಪ್ರತಿಪಕ್ಷಗಳ ನಾಯಕತ್ವಕ್ಕೆ ಸಾಮೂಹಿಕ ಮನವಿ ಇರಬೇಕು” ಎಂದು ಹೇಳಿದೆ.
“ರಾಹುಲ್ ಗಾಂಧಿ ಏಕಾಂಗಿಯಾಗಿ ತೀವ್ರ ಹೋರಾಟ ನಡೆಸುತ್ತಿದ್ದಾರೆ. ಆದರೂ ಏನೋ ಕೊರತೆಯಿದೆ. ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ (UPA)ನ ಪ್ರಸ್ತುತ ಸ್ಥಿತಿ ಎನ್ಜಿಒನಂತಾಗಿದೆ. ಯುಪಿಎ ಘಟಕಗಳು ಸಹ ರೈತರ ಪ್ರತಿಭಟನೆಯನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಈ ಘಟಕಗಳು ನಿಖರವಾಗಿ ಏನು ಮಾಡುತ್ತವೆ ಎಂಬುದರ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ” ಎಂದು ಸಾಮ್ನಾ ಆರೋಪಿಸಿದೆ.
ಇದನ್ನೂ ಓದಿ: ತೀವ್ರಗೊಂಡ ದೆಹಲಿ ಹೋರಾಟ – ಎರಡು ಹೆದ್ದಾರಿಗಳನ್ನು ಮುಚ್ಚಿದ ರೈತರು!
“ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ರಾಷ್ಟ್ರಮಟ್ಟದಲ್ಲಿ ಸ್ವತಂತ್ರ ವ್ಯಕ್ತಿತ್ವ ಹೊಂದಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಏಕಾಂಗಿ ಯುದ್ಧ ನಡೆಸುತ್ತಿದ್ದಾರೆ. ಈ ಸಮಯದಲ್ಲಿ ದೇಶದ ವಿರೋಧ ಪಕ್ಷಗಳು ಅವರ ಪರವಾಗಿ ನಿಲ್ಲಬೇಕು. ಮಮತಾ ಬ್ಯಾನರ್ಜಿ ಪವಾರ್ ಅವರನ್ನು ಮಾತ್ರ ಸಂಪರ್ಕಿಸಿದ್ದಾರೆ. ಅವರು ಮಾತ್ರ ಬಂಗಾಳಕ್ಕೆ ಹೋಗುತ್ತಿದ್ದಾರೆ. ಆದರೆ ಇದನ್ನು ಕಾಂಗ್ರೆಸ್ ನಾಯಕತ್ವದಲ್ಲಿ ಮಾಡಬೇಕಿತ್ತು” ಎಂದು ಅದು ಹೇಳಿದೆ.
“ತೃಣಮೂಲ ಕಾಂಗ್ರೆಸ್, ಶಿವಸೇನೆ, ಅಕಾಲಿ ದಳ, ಬಹುಜನ ಸಮಾಜ ಪಕ್ಷ (ಬಿಎಸ್ಪಿ), ಅಖಿಲೇಶ್ ಯಾದವ್, ಜಗನ್ಮೋಹನ್ ರೆಡ್ಡಿಯವರ ವೈಎಸ್ಆರ್ ಕಾಂಗ್ರೆಸ್, ತೆಲಂಗಾಣದ ಕೆ ಚಂದ್ರಶೇಖರ್ ರಾವ್, ಒಡಿಶಾದ ನವೀನ್ ಪಟ್ನಾಯಕ್, ಕರ್ನಾಟಕದ ಎಚ್ ಡಿ ಕುಮಾರಸ್ವಾಮಿ ಸೇರಿದಂತೆ ಎಲ್ಲರೂ ಬಿಜೆಪಿಗೆ ವಿರುದ್ಧವಾಗಿದ್ದಾರೆ. ಆದರೆ ಇವರೆಲ್ಲರೂ ಕಾಂಗ್ರೆಸ್ ನೇತೃತ್ವದ UPAನ ಭಾಗವಾಗಿಲ್ಲ. ಇವರೆಲ್ಲರೂ UPAಗೆ ಸೇರದಿದ್ದರೆ, ಪ್ರತಿಪಕ್ಷಗಳು ಒಂದು ದೊಡ್ಡ ಪರ್ಯಾಯವನ್ನು ಒದಗಿಸಲು ಸಾಧ್ಯವಿಲ್ಲ” ಎಂದು ಹೇಳಿದೆ.
ಇದನ್ನೂ ಓದಿ: ಕೆಲವರು ನನಗೆ ಪ್ರಜಾಪ್ರಭುತ್ವದ ಪಾಠ ಕಲಿಸಲು ಬಯಸುತ್ತಿದ್ದಾರೆ: ತಿರುಗೇಟು ನೀಡಿದ ಪ್ರಧಾನಿ
“ಕೃಷಿ ಕಾನೂನುಗಳ ಬಗ್ಗೆ ಪ್ರತಿಭಟನಾ ಮೆರವಣಿಗೆಯಲ್ಲಿ ಪ್ರಿಯಾಂಕಾ ಗಾಂಧಿಯವರನ್ನು ದೆಹಲಿಯಲ್ಲಿ ಬಂಧಿಸಲಾಯಿತು. ರಾಹುಲ್ ಗಾಂಧಿಯನ್ನು ಬಿಜೆಪಿ ಸಾರ್ವಜನಿಕವಾಗಿ ಅಪಹಾಸ್ಯ ಮಾಡಿತು. ಮಹಾರಾಷ್ಟ್ರದ ಠಾಕ್ರೆ ಸರ್ಕಾರ ಕಾರ್ಯನಿರ್ವಹಿಸಲು ಅನುಮತಿ ಇಲ್ಲ. ಮಧ್ಯಪ್ರದೇಶದಲ್ಲಿ ಕಮಲ್ ನಾಥ್ ಸರ್ಕಾರವನ್ನು ಉರುಳಿಸುವಲ್ಲಿ ಪ್ರಧಾನ ಮಂತ್ರಿಯವರ ಪಾಲು ಇದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಇದೆಲ್ಲವೂ ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ” ಎಂದು ಅದು ಹೇಳಿದೆ.
“ಹಾಗಾಗಿ ಪರಿಸ್ಥಿತಿ ಮತ್ತಷ್ಟು ಹದಗೆಡದಂತೆ ನೋಡಿಕೊಳ್ಳುವ ಜವಾಬ್ದಾರಿ ಕಾಂಗ್ರೆಸ್ ಮೇಲಿದೆ. ಆದರೆ ಕಾಂಗ್ರೆಸ್ ಮತ್ತು UPAನ ನಾಯಕತ್ವ ಮತ್ತು ಭವಿಷ್ಯದ ಬಗ್ಗೆ ಸ್ಪಷ್ಟತೆ ಇಲ್ಲ. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(ಎನ್ಡಿಎ)ದಲ್ಲಿ ಬಿಜೆಪಿಯನ್ನು ಹೊರತುಪಡಿಸಿ ಬೇರೆ ಪಕ್ಷಗಳಿಲ್ಲ ಎಂಬಂತೆ UPAನಲ್ಲಿಯೂ ಬೇರೆ ಯಾರೂ ಇಲ್ಲ. ಬಿಜೆಪಿಗೆ ಮೋದಿ-ಅಮಿತ್ ಶಾ ಅವರಂತೆ UPAನಲ್ಲಿ ಪ್ರಭಲ ನಾಯಕರು ಯಾರೂ ಇಲ್ಲ. ಇದರ ಬಗ್ಗೆ ಕಾಂಗ್ರೆಸ್ ಗಂಭೀರವಾಗಿ ಆಲೋಚನೆ ಮಾಡದಿದ್ದರೆ ಎಲ್ಲರಿಗೂ ಭವಿಷ್ಯ ಕಷ್ಟಕರವಾಗಿರಲಿದೆ” ಎಂದು ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ಜೆಡಿಎಸ್ ಕೇವಲ ದೇವೇಗೌಡ-ಕುಮಾರಸ್ವಾಮಿಯವರ ಪಕ್ಷವಲ್ಲ: ಹೆಚ್.ಡಿ ದೇವೇಗೌಡ


