ಕೃಷಿ ಕಾನೂನುಗಳನ್ನು ವಿರೋಧಿಸಿ ಲಕ್ಷಾಂತರ ರೈತರು ದೆಹಲಿಯ ಗಡಿಗಳಲ್ಲಿ ಹೋರಾಟ ನಡೆಸುತ್ತಿದ್ದಾರೆ. ಇದರ ಭಾಗವಾಗಿ ಗಣರಾಜ್ಯೋತ್ಸವದಂದು ನಡೆದ ಟ್ರ್ಯಾಕ್ಟರ್ ರ್ಯಾಲಿಯಲ್ಲಿ ನಡೆದ ಪಿತೂರಿಯಿಂದ ಕೆಲವು ಅಹಿತಕರ ಘಟನೆಗಳು ನಡೆದಿತ್ತು. ಇದರಿಂದ ಹೋರಾಟಕ್ಕೆ ಹಿನ್ನಡೆಯಾಗಿದೆಯೆಂದು ಕೆಲವರು ಭಾವಿಸಿದ್ದರು. ಆದರೆ ಇದು ಸುಳ್ಳು ಎಂಬುದನ್ನು ದೇಶಕ್ಕೆ ತಿಳಿಸಲು ರೈತರಿಗೆ ಹೆಚ್ಚಿನ ಸಮಯ ಬೇಕಾಗಲಿಲ್ಲ.
ಉತ್ತರಪ್ರದೇಶ ಮತ್ತು ದೆಹಲಿ ಗಡಿಗಳಲ್ಲಿರುವ ರೈತರನ್ನು ಖಾಲಿ ಮಾಡಿಸಲು ಸಾವಿರಾರು ಸಂಖ್ಯೆಯಲ್ಲಿ ಪೊಲೀಸರು ಜಮಾವಣೆಗೊಂಡಿದ್ದರು. ಆದರೆ, ರೈತರ ಹೋರಾಟ ದೆಹಲಿ ಗಡಿಗಳಲ್ಲಿ ಇನ್ನೂ ತೀವ್ರಗೊಳ್ಳುತ್ತಿದ್ದು, ಬೆಂಬಲದ ಮಹಾಪೂರವೇ ಹರಿದು ಬರುತ್ತಿದೆ. ಗುರುವಾರ ಮಧ್ಯರಾತ್ರಿಯೇ ಹರಿಯಾಣ ಮತ್ತು ಉತ್ತರಪ್ರದೇಶದ ಹತ್ತಾರು ಹಳ್ಳಿಯ ಜನರು ಗಡಿಗಳಿಗೆ ಆಗಮಿಸಿ ರೈತ ಹೋರಾಟಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಹಿಂದಕ್ಕೆ ಹೆಜ್ಜೆ ಇಡಲೊಪ್ಪದ ರೈತರು: ಸ್ಥಳ ಖಾಲಿ ಮಾಡಿದ ಹೆಚ್ಚುವರಿ ಪೊಲೀಸರು!
ಮುಜಫರ್ ನಗರದ ಸಿಸೌಲಿಯಲ್ಲಿರುವ ರೈತ ಮುಖಂಡ ರಾಕೇಶ್ ಟಿಕಾಯತ್ ಮನೆ ಮುಂದೆ ನೆರೆದ ಜನಸಂದಣಿಯು ನಾವೆಲ್ಲರೂ ನಿಮ್ಮ ಜೊತೆಗಿದ್ದೇವೆ. ಹೋರಾಟ ಬೆಂಬಲಿಸಲು ದೆಹಲಿಗೆ ಮೆರವಣಿಗೆ ಹೊರಡಲು ಸಿದ್ದ ಎಂದು ಘೋಷಿಸಿದ್ದಾರೆ.
ಗಾಜಿಪುರ್ ಗಡಿಯಲ್ಲಿ ರಾಕೇಶ್ ಟಿಕಾಯತ್ ರೈತ ಹೋರಾಟ ಮುಂದುವರೆಸುತ್ತಿದ್ದಾರೆ. ಆದರೆ ಗಣರಾಜ್ಯೋತ್ಸವದಂದು ಕೆಂಪು ಕೋಟೆಯ ಅಹಿತಕರ ಘಟನೆ ಜರುಗಿದ ನಂತರ ರೈತ ಹೋರಾಟ ಹತ್ತಿಕ್ಕಲು ಉತ್ತರ ಪ್ರದೇಶ ಪೊಲೀಸರು ಯತ್ನಿಸುತ್ತಿದ್ದು, ಇಂದು ಅವರು ಅಲ್ಲಿಂದ ತೆರವು ಮಾಡಬೇಕೆಂದು ಒತ್ತಾಯಿಸಿದ್ದರು. ಗಡಿಯ ಜನರಿಗೆ ನೀರು, ವಿದ್ಯುತ್ ಸಂಪರ್ಕ ಕಿತ್ತು ಹಾಕಲಾಗಿತ್ತು. ನಿನ್ನೆ ರಾತ್ರಿ ಕೆಲವೆಡೆ ಲಾಠೀ ಚಾರ್ಜ್ ಸಹ ಮಾಡಲಾಗಿತ್ತು.
ಇಂದು ಶತಾಯ ಗತಾಯ ರೈತರನ್ನು ಅಲ್ಲಿಂದ ತೆರವುಗೊಳಿಸಲು ಮುಂದಾದಾಗ ರೈತ ಮುಖಂಡ ರಾಕೇಶ್ ಟಿಕಾಯತ್ ನಮ್ಮ ಮೇಲೆ ಗುಂಡು ಹಾರಿಸಿದರೂ ಸರಿಯೇ ಇಲ್ಲಿಂದ ಕದಲುವುದಿಲ್ಲ ಎಂದು ಘೋಷಿಸಿದ್ದಾರೆ. ಅಲ್ಲದೇ ಪೊಲೀಸರು ನಮ್ಮನ್ನು ತೆರವುಗೊಳಿಸಿದರೆ ನಮ್ಮ ಸಾವಿಗೆ ಅವರೇ ಕಾರಣರಾಗುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದರಿಂದ ಬಹಳಷ್ಟು ರೈತರು ಕೆರಳಿದ್ದು ಪೊಲೀಸರ ವಿರುದ್ಧ ಹರಿಹಾಯ್ದಿದ್ದಾರೆ. ಅವರೆಲ್ಲರೂ ಸದ್ಯಕ್ಕೆ ಟಿಕಾಯತ್ ಮನೆ ಮುಂದೆ ಜಮಾಯಿಸಿ ಹೋರಾಟಕ್ಕೆ ಬೇಷರತ್ ಬೆಂಬಲ ಘೋಷಿಸಿದ್ದಾರೆ.
ಇದನ್ನೂ ಓದಿ: ಟ್ರ್ಯಾಕ್ಟರ್ ರ್ಯಾಲಿ: ಕಾಂಗ್ರೆಸ್ ಸಂಸದ ಶಶಿ ತರೂರ್ ಸೇರಿ 6 ಜನರ ವಿರುದ್ಧ ದೇಶದ್ರೋಹ…
“ಸುಪ್ರೀಂ ಕೋರ್ಟ್ ಶಾಂತಿಯುತ ಧರಣಿಯನ್ನು ಸಮರ್ಥಿಸಿದೆ. ಗಾಜಿಪುರ ಗಡಿಯಲ್ಲಿ ಯಾವುದೇ ಹಿಂಸಾಚಾರ ನಡೆದಿಲ್ಲ. ಇದರ ಹೊರತಾಗಿಯೂ, ಸರ್ಕಾರವು ದಮನಕಾರಿ ನೀತಿಯನ್ನು ಅನುಸರಿಸುತ್ತಿದೆ. ಇದು ಉತ್ತರ ಪ್ರದೇಶ ಸರ್ಕಾರದ ಮುಖ” ಎಂದು ರಾಕೇಶ್ ಟಿಕಾಯತ್ ಕಿಡಿಕಾರಿದ್ದಾರೆ.
ಇನ್ನು, ಮಾಜಿ ಕೇಂದ್ರ ಸಚಿವ, ರಾಷ್ಟ್ರೀಯ ಲೋಕದಳ್ ಮುಖ್ಯಸ್ಥ ಅಜಿತ್ಸಿಂಗ್ ಚೌಧರಿ ಬಿಕೆಯು ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.
ಈ ಕುರಿತು ಹಿಂದಿಯಲ್ಲಿ ಟ್ವೀಟ್ ಮಾಡಿರುವ ಅಜಿತ್ಸಿಂಗ್ ಪುತ್ರ ಮತ್ತು ಆರ್ಎಲ್ಡಿ ಉಪಾಧ್ಯಕ್ಷ ಜಯಂತ್ ಚೌಧರಿ, ಅದರಲ್ಲಿ ಅಜಿತ್ಸಿಂಗ್ ಸಂದೇಶವನ್ನು ಹಾಕಿದ್ದಾರೆ. “ಇದು ರೈತರ ಜೀವನ್ಮರಣದ ಪ್ರಶ್ನೆ, ಯಾರೂ ಚಿಂತಿಸಬೇಡಿ. ಈ ಸಂದರ್ಭದಲ್ಲಿ ನಾವೆಲ್ಲ ಒಟ್ಟಾಗಿ, ಐಕ್ಯತೆಯಿಂದ ಇರೋಣ- ಇದು ಚೌಧರಿ ಸಾಹಿಬ್ (ಅಜಿತ್ಸಿಂಗ್) ಅವರ ಸಂದೇಶ” ಎಂದು ಬರೆದುಕೊಂಡಿದ್ದಾರೆ.
अभी चौधरी अजित सिंह जी ने BKU के अध्यक्ष और प्रवक्ता, नरेश टिकैत जी और राकेश टिकैत जी से बात की है।
“चिंता मत करो, किसान के लिए जीवन मरण का प्रश्न है। सबको एक होना है, साथ रहना है” – ये संदेश दिया है चौधरी साहब ने!
— Jayant Chaudhary (@jayantrld) January 28, 2021
ಇದನ್ನೂ ಓದಿ: ʼಬಾರ್ಡರ್ʼಗಳಲ್ಲಿ ರಾತ್ರಿ ಆಗಿದ್ದೇನು? – ಗ್ರೌಂಡ್ ರಿಪೋರ್ಟ್
ಅಜಿತ್ಸಿಂಗ್ ಅವರು ರಾಕೇಶ್ ಟಿಕಾಯತ್ ಮತ್ತು ಅವರ ಸಹೋದರ ನರೇಶ್ ಟಿಕಾಯತ್ ಅವರೊಂದಿಗೆ ಮಾತನಾಡಿದ್ದು, ಬಿಕೆಯು ಹೋರಾಟಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ನಿನ್ನೆ ಯುಪಿ ಗಡಿಯಲ್ಲಿ ಭಾರಿ ಸಂಖ್ಯೆಯಲ್ಲಿ ಪೊಲೀಸರನ್ನು ಜಮಾವಣೆ ಮಾಡಿ ರೈತರನ್ನು ಸ್ಥಳದಿಂದ ಎತ್ತಂಗಡಿ ಮಾಡಲು ಯುಪಿ ಸರ್ಕಾರ ಯತ್ನಿಸಿದ ನಂತರ ಉತ್ತರ ಭಾತರದ ಪ್ರಮುಖ ರಾಜ್ಯಗಳಲ್ಲಿ ರೈತ ಹೋರಾಟಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದ್ದು, ನಿನ್ನೆ ರಾತ್ರಿಯಿಂದಲೇ ಸಾವಿರಾರು ರೈತರು, ನೂರಾರು ಟ್ರ್ಯಾಕ್ಟರ್ಗಳು ಈಗ ಗಾಜಿಪುರ ಮತ್ತು ಸಿಂಘು ಗಡಿ ತಲುಪಿದ್ದಾರೆ.
ಟಿಕಾಯತ್ ಅವರ ರಾತ್ರಿಯ ಭಾವನಾತ್ಮಕ ಭಾಷಣವು ಸಾಕಷ್ಟು ಜನಪ್ರಿಯವಾಗಿದ್ದು, ರೈತ ಹೋರಾಟಕ್ಕೆ ಹೆಚ್ಚಿನ ಬೆಂಬಲ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: ಜನರನ್ನು ಪ್ರಚೋದಿಸುವ ಟಿವಿ ಕಾರ್ಯಕ್ರಮ ನಿಗ್ರಹಿಸಿ: ಕೇಂದ್ರಕ್ಕೆ ಸುಪ್ರೀಂ ತಾಕೀತು