ಕಳೆದ 31 ವರ್ಷಗಳಲ್ಲಿ 150 ಬೋರ್ವೆಲ್ಗಳನ್ನು ಕೊರೆಸಿದರೂ ನೀರು ಸಿಕ್ಕಿರಲಿಲ್ಲ. ಆದರೆ ಕಳೆದ ವಾರ ಕೊನೆಯ ಪ್ರಯತ್ನ ಯಶಸ್ವಿಯಾಗಿ ನೀರು ಸಿಕ್ಕಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.
ಕುತುಗನಹಳ್ಳಿ ಗ್ರಾಮದ 53 ವರ್ಷದ ಅಶೋಕ್ ಮೇಟಿಯ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಕಳೆದ ಒಂದು ವಾರದಲ್ಲಿ 4 ಬೋರ್ವೆಲ್ಗಳನ್ನು ಕೊರೆಸಿದ್ದಾರೆ. 31 ವರ್ಷಗಳ ಪ್ರಯತ್ನವು ಕೊನೆಗೂ ಪ್ರತಿಫಲ ನೀಡಿದೆ.
“ನಾವು ನೀರನ್ನು ಪಡೆಯಲು ಕಳೆದ 31 ವರ್ಷಗಳಲ್ಲಿ ಎಲ್ಲಾ ರೀತಿಯಿಂದಲೂ ಪ್ರಯತ್ನಿಸಿದ್ದೇವೆ. ನೀರು ಸಿಗುವ ಬಿಂದುವನ್ನು ಕಂಡುಹಿಡಿಯಲು ನಾವು ಯಂತ್ರೋಪಕರಣಗಳ ವಿಧಾನ ಮತ್ತು ಸಾಂಪ್ರದಾಯಿಕ ವಿಧಾನಗಳನ್ನು ಬಳಸಿದ್ದೇವೆ. ಆದರೆ ಅವುಗಳೆಲ್ಲವೂ ವ್ಯರ್ಥವಾಗಿತ್ತು. ನಾವು ಜಮೀನಿನಲ್ಲಿ ಪೂಜೆಗಳನ್ನು ಸಹ ಮಾಡಿದ್ದೇವೆ. ಅಂತಿಮವಾಗಿ ಕಳೆದ ವಾರ ನೀರು ಸಿಕ್ಕಿದೆ. ಸುಮಾರು 3 ಇಂಚುಗಳಷ್ಟು ನೀರು ಬರುತ್ತಿದೆ” ಎಂದು ಅಶೋಕ್ ಮೇಟಿ ಹೇಳಿದರು.
ಇದನ್ನೂ ಓದಿ: ಭಾರತದಲ್ಲಿ ನ್ಯಾಯಾಂಗ ವ್ಯವಸ್ಥೆ ಕುಸಿದಿದೆ: ಅಯೋಧ್ಯೆ ತೀರ್ಪು ನೀಡಿದ್ದ ಮಾಜಿ ಸಿಜೆಐ ರಂಜನ್ ಗೊಗೊಯ್…
“ನಾವು ಮಳೆ ಆಶ್ರಿತ ಬೆಳೆಗಳನ್ನು ಮಾತ್ರ ಬೆಳೆಯುತ್ತಿದ್ದೆವು. ಈಗ ಬೋರ್ವೆಲ್ನಲ್ಲಿ ನೀರು ಸಿಕ್ಕಿರುವುದರಿಂದ ಕೃಷಿಯನ್ನು ಇನ್ನಷ್ಟು ವಿಸ್ತರಿಸಲು ಯೋಚಿಸುತ್ತಿದ್ದೇವೆ” ಎಂದು ಅವರು ಹೇಳಿದರು.
ಕೊಪ್ಪಳ ಜಿಲ್ಲೆಯ ಹಲವಾರು ಪ್ರದೇಶಗಳಲ್ಲಿ ಅಂತರ್ಜಲ ಕೆಲವೊಮ್ಮೆ ತುಂಬಾ ಆಳದಲ್ಲಿರುತ್ತದೆ. ಕಳೆದ ಎರಡು ವರ್ಷಗಳಿಂದ ಈ ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದು, ಇದು ಅಂತರ್ಜಲ ಮಟ್ಟವನ್ನು ಹೆಚ್ಚಿಸಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹಾಗಾಗಿ ಈ ರೈತ ಬೋರ್ವೆಲ್ನಲ್ಲಿ ನೀರು ಪಡೆಯಲು ಸಾಧ್ಯವಾಗಿರಬಹುದು ಎಂದು ಜಲವಿಜ್ಞಾನ ತಜ್ಞರು ಹೇಳಿದ್ದಾರೆ ಎಂದು ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
“ಅಶೋಕ್ ಮೇಟಿಯವರು ಬೋರ್ವೆಲ್ ಕೊರೆಸುವುದರಲ್ಲಿ ವಿಫಲವಾಗಿದ್ದರೂ ಸಹ ತಮ್ಮ ಪ್ರಯತ್ನವನ್ನು ನಿಲ್ಲಿಸಲಿಲ್ಲ. ಇವರ ಕುಟುಂಬವು 27 ಎಕರೆ ಭೂಮಿಯನ್ನು ಹೊಂದಿದೆ” ಎಂದು ಕುತಗನಹಳ್ಳಿಯ ಗ್ರಾಮಸ್ಥರೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: ಬಿಜೆಪಿಯ ರಾಗಗಳಿಗೆ ರಾಜ್ಯಪಾಲರನ್ನು ನೃತ್ಯ ಮಾಡಿಸಲಾಗುತ್ತಿದೆ: ಶಿವಸೇನೆ
“ಸತತವಾಗಿ ಬೋರ್ವೆಲ್ ಕೊರೆಸಿದ್ದರಿಂದ ಸುಮಾರು 20 ಲಕ್ಷಕ್ಕೂ ಹೆಚ್ಚಿನ ಹಣ ಖರ್ಚಾಗಿತ್ತು. ಇದರಿಂದ ಬೇಸತ್ತ ಕುಟುಂಬವು 27 ಎಕರೆ ಭೂಮಿಯನ್ನು ಮಾರಾಟ ಮಾಡಲು ನಿರ್ಧರಿಸಿತ್ತು. ಆದರೆ ಕೊನೆಯ ಪ್ರಯತ್ನವಾಗಿ ಕುಟುಂಬದವರಿಗೆ ತಿಳಿಸದೇ ಕಳೆದ ಭಾನುವಾರ ರಾತ್ರಿ ಬೋರ್ವೆಲ್ ಕೊರೆಸಲು ನಿರ್ಧರಿಸಿದೆ. ಆಗ ನಮ್ಮ ಪ್ರಯತ್ನಕ್ಕೆ ಪ್ರತಿಫಲ ಸಿಕ್ಕಿತು” ಎಂದು ಅಶೋಕ್ ಮೇಟಿ ಕುಟುಂಬ ಸದಸ್ಯರಾದ ಚನ್ನಕುಮಾರ ಮೇಟಿ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ.
“ಆದರೆ ಬಸಾಪುರ ವಿಮಾನ ನಿಲ್ದಾಣ ವಿಸ್ತರಣೆಗಾಗಿ ಭೂಮಿಯನ್ನು ವಶಪಡಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಸೋಮವಾರ ಸರ್ಕಾರ ನಮಗೆ ನೋಟಿಸ್ ನೀಡಿದೆ. ಈಗ ನಾವು ಸಂತೋಷ ಪಡಬೇಕೋ ಅಥವಾ ನೋಟಿಸ್ಗೆ ಉತ್ತರಿಸಬೇಕೋ ತಿಳಿಯುತ್ತಿಲ್ಲ” ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ನಾಳೆ ಪ್ರಧಾನಿ ತಮಿಳುನಾಡಿಗೆ – ಇಂದೇ ಪ್ರಾರಂಭವಾದ #GoBackModi ಟ್ರೆಂಡಿಂಗ್



ಆದುನಿಕ ಬಗೀರತ, ನಿಮಗೊಂದು ಸಲಾಂ.