Homeಪುಸ್ತಕ ವಿಮರ್ಶೆಅತ್ಯಂತ ಕೆಟ್ಟ ಮನುಷ್ಯನೂ ಕೆಲವು ಬಾರಿ ನಾವು ತಿಳಿದುಕೊಂಡಿರುವುದಕ್ಕಿಂತ ಜಾಸ್ತಿಯೇ ಹೃದಯವಂತನಾಗಿರುತ್ತಾನೆ

ಅತ್ಯಂತ ಕೆಟ್ಟ ಮನುಷ್ಯನೂ ಕೆಲವು ಬಾರಿ ನಾವು ತಿಳಿದುಕೊಂಡಿರುವುದಕ್ಕಿಂತ ಜಾಸ್ತಿಯೇ ಹೃದಯವಂತನಾಗಿರುತ್ತಾನೆ

- Advertisement -
- Advertisement -

ಕೆ. ಶ್ರೀನಾಥ್ ಕನ್ನಡಕ್ಕೆ ಅನುವಾದಿಸಿರುವ ಫ್ಯೋದೊರ್ ದಾಸ್ತೋವ್‌ಸ್ಕಿಯವರ ’ಕರಮಜೋವ್ ಸಹೋದರರು’ ಕಾದಂಬರಿಯ ಮೊದಲ ಅಧ್ಯಾಯ

ಕರಮಜೋವ್ ಕುಟುಂಬದ ಚರಿತ್ರೆ- ಫೈಡರ್ ಪಾವ್ಲೋವಿಚ್ ಕರಮಜೋವ್

ಅಲೆಕ್ಸಿ ಕರಮಜೋವ್, ಫೈಡರ್ ಪಾವ್ಲೋವಿಚ್ ಕರಮಜೋವ್‌ನ ಮೂರನೆ ಮಗ. ಈ ಫೈಡರ್, ನಮ್ಮ ಪ್ರದೇಶದ ಎಲ್ಲೆಲ್ಲೂ ತನ್ನದೇ ಆದ ವಿಶಿಷ್ಟವಾದ ಕಾರಣಗಳಿಗೋಸ್ಕರ ಪ್ರಚಲಿತನಾದ ಜಮೀನುದಾರ, ಮತ್ತು ಇಂದಿಗೆ ಹದಿಮೂರು ವರ್ಷಗಳ ಹಿಂದೆ ನಡೆದ ಅವನ ದುರ್ಮರಣದಿಂದಾಗಿ ಎಲ್ಲರ ನೆನಪಿನಲ್ಲೂ ಉಳಿದಿರುವ ವ್ಯಕ್ತಿ. ಈ ಘಟನೆಯ ಬಗ್ಗೆ ವಿವರವಾಗಿ ಮುಂದೆ ಪ್ರಸ್ತಾಪಿಸುತ್ತೇನೆ. ಸದಕ್ಕೆ, ಅವನು ಎಂದೂ ತನ್ನ ಜಮೀನಿನಲ್ಲಿ ಕಾಲಿಟ್ಟಿರಲಿಲ್ಲದಿದ್ದರೂ ಅವನನ್ನು ಜಮೀನುದಾರ ಅಂತಲೇ ಕರೆಯುತ್ತೇನೆ. ನಾವು ಆಗಾಗ್ಗೆ ಸಮಾಜದಲ್ಲಿ ಕಾಣುವಂತಹ ಈ ರೀತಿಯ ವಿಚಿತ್ರ ವ್ಯಕ್ತಿಗಳ ಜಾತಿಗೆ ಇವನೂ ಸೇರಿದ್ದಾನೆ. ಇವನಲ್ಲಿರುವ ವೈಚಿತ್ರ್ಯ ಏನೆಂದರೆ, ಇವನೊಬ್ಬ ಅಹಿತಕರವಾದ ದುಷ್ಟ ಮತ್ತು ಅವಿವೇಕದಿಂದ ಕೂಡಿದ ವ್ಯಕ್ತಿ.

ಇವನು ಎಷ್ಟೇ ಪ್ರಜ್ಞಾಶೂನ್ಯನಾಗಿದ್ದರೂ ತನ್ನ ಸ್ವಂತ ವಹಿವಾಟುಗಳನ್ನು ನಿಭಾಯಿಸುವ ಸಾಮರ್ಥ್ಯವುಳ್ಳವನಾಗಿದ್ದ. ಅವನಲ್ಲಿದ್ದ ಸಣ್ಣ ಜಮೀನನ್ನು ಬಿಟ್ಟರೆ, ಅವನ ಜೀವನ ಸೊನ್ನೆಯಿಂದಲೇ ಶುರುವಾಯಿತು. ಅವನು ಬೇರೆಯವರ ಔತಣಕೂಟಗಳಲ್ಲಿ, ಆಮಂತ್ರಣವಿರಲಿ ಇಲ್ಲದಿರಲಿ, ಯಾವುದೇ ಹಿಂಜರಿಕೆಯಿಲ್ಲದೆ ವಿನಮ್ರತೆಯಿಂದಲೇ ಭಾಗವಹಿಸುತ್ತಿದ್ದ. ಆದರೆ, ಅವನ ಸಾವಿನ ನಂತರ ಬಹಿರಂಗವಾದದ್ದು, ಅವನಲ್ಲಿ ಒಂದು ಲಕ್ಷ ರೂಬಲ್ಲುಗಳಷ್ಟು ನಗದು ಹಣವಿತ್ತೆಂಬುದು. ಅವನು ತನ್ನ ಇಡೀ ಜೀವನವನ್ನು ಒಬ್ಬ ಅಪ್ರಜ್ಞಾವಂತ ಮತ್ತು ಹಾಸ್ಯಾಸ್ಪದ ವ್ಯಕ್ತಿಯಾಗಿಯೇ ಸವೆಸಿದ. ಆದರೆ ಅವನು ಅತಿ ಮೂರ್ಖನಾಗಿರಲಿಲ್ಲ. ಸಾಮಾನ್ಯವಾಗಿ ಈ ರೀತಿಯ ವ್ಯಕ್ತಿಗಳು ಸಾಕಷ್ಟು ಜಾಣರೂ ಬುದ್ಧಿವಂತರೂ ಆಗಿರುತ್ತಾರೆ.

ಅವನಿಗೆ ಎರಡು ಮದುವೆಗಳಾಗಿದ್ದು, ಎರಡೂ ಮದುವೆಗಳಿಂದ ಮೂರು ಗಂಡು ಮಕ್ಕಳಿದ್ದರು. ಮೊದಲನೇ ಹೆಂಡತಿಯ ಮಗ ಡಿಮಿಟ್ರಿ; ಇವಾನ್ ಮತ್ತು ಅಲೆಕ್ಸಿ ಎರಡನೇ ಹೆಂಡತಿಯ ಮಕ್ಕಳು. ಫೈಡರ್‌ನ ಮೊದಲನೇ ಹೆಂಡತಿ, ಅಡೆಲೈಡ ಇವಾನೊವ್ನ, ಶ್ರೀಮಂತ ಮತ್ತು ಪ್ರತಿಷ್ಠಿತ ವರ್ಗದ ಕುಟುಂಬದಿಂದ ಬಂದವಳು, ಮತ್ತು ಈ ಕುಟುಂಬ ಆ ಫಾಸಲೆಯ ಪ್ರತಿಷ್ಠಿತ ಜಮೀನುದಾರರಲ್ಲಿ ಒಂದು. ಅವರದು ಮಿಯುಸೋವ್ ಎಂಬ ಕುಟುಂಬ. ಈ ರೀತಿಯ ಐಶ್ವರ್ಯದ ವಾರಸುದಾರಳೂ ರೂಪವತಿಯೂ ಆದ, ಅಲ್ಲದೇ ಬುದ್ಧಿವಂತಳೂ ಆದ ಅಡೆಲೈಡ, ಇಂಥ ನಾಲಾಯಕ್ ಮನುಷ್ಯನನ್ನು ಹೇಗೆ ಮದುವೆಯಾದಳು ಅನ್ನುವ ವಿಸ್ಮಯವನ್ನು ನಾನು ವಿವರಿಸುವ ಗೋಜಿಗೆ ಹೋಗುವುದಿಲ್ಲ.

ಆದರೆ, ನನಗೊಬ್ಬಳು ಯುವತಿಯ ಬಗ್ಗೆ ತಿಳಿದಿದೆ. ಹಿಂದಿನ ಭಾವನಾತ್ಮಕತೆಯಲ್ಲಿ ವಿಹರಿಸುತ್ತಿದ್ದ ಯುವತಿಯರ ಪೀಳಿಗೆಗೆ ಸೇರಿದವಳು ಅವಳು ಮತ್ತು ಸ್ವಲ್ಪ ಸಮಯದ ನಂತರ ಒಬ್ಬ ಯುವಕನ ಜತೆಗೆ ನಿಗೂಢವಾಗಿ ನೆಲೆಸಿದ್ದ ಗಾಢಪ್ರೇಮದ ಕಾರಣಗಳಿಗೋಸ್ಕರ, ಅವನನ್ನು ಸುಲಭ ರೀತಿಯಲ್ಲಿ ವಿವಾಹವಾಗಬಹುದಾಗಿದ್ದರೂ, ಒಂದು ಮನೋಹರ ನದಿಯ ಬದಿಯಿದ್ದ ಶಿಖರವೊಂದರಿಂದ ಕೆಳಗೆ ಹಾರಿ ಅವರ ಪರಸ್ಪರ ಸಂಬಂಧವನ್ನು ಕೊನೆಗೊಳಿಸಿಕೊಂಡಳು. ಈ ರೀತಿ ಎಸಗಿದ ಕೃತ್ಯ, ಬರಿಯ ಅವಳ ಚಂಚಲಚಿತ್ತವನ್ನು ತೃಪ್ತಿಗೊಳಿಸಲೋಸ್ಕರ ಮತ್ತು ಶೇಕ್ಸ್‌ಪಿಯರಿನ ಒಪೀಲಿಯಾ ಪಾತ್ರವನ್ನು ಅನುಕರಿಸುವುದಕ್ಕೋಸ್ಕರ. ಈ ಶಿಖರ ಮನೋಹರವಾದ ಮತ್ತು ದೃಶ್ಯ ವಿಹಂಗಮವಾಗಿಲ್ಲದೆ ಇದ್ದಿದ್ದರೆ ಮತ್ತು ನೀರಸ ನದಿಯ ದಡವಾಗಿದ್ದಿದ್ದರೆ ಈ ಆತ್ಮಹತ್ಯೆಯ ಘಟನೆ ನಡೆಯುತ್ತಿರಲಿಲ್ಲವೋ ಏನೋ! ಇದೊಂದು ನಡೆದ ಘಟನೆ ಮತ್ತು ಇಂಥ ಘಟನೆ ಕಳೆದ ಹಿಂದಿನ ಮೂರು ಪೀಳಿಗೆಗಳಲ್ಲೆಂದೂ ಪುನರಾವರ್ತನೆಯಾಗಿರಲಿಲ್ಲ.

ಅಡೆಲೈಡಳ ಈ ವಿವಾಹ ಒಂದು ರೀತಿಯಲ್ಲಿ, ಬೇರೆ ವ್ಯಕ್ತಿಗಳ ಅನಿಸಿಕೆಗಳ ಒಂದು ಪ್ರತಿಧ್ವನಿ ಎನ್ನಬಹುದು. ಅವಳು ಮಾನಸಿಕ ಸ್ವಾತಂತ್ರ್ಯದಿಂದ ವಂಚಿತಳಾದ ಕಾರಣ ಸಿಟ್ಟಿಗೆದ್ದು ಉದ್ರೇಕದಿಂದ ಕೈಗೊಂಡ ನಿರ್ಧಾರ ಅದು. ಅವಳು ಬಹುಶಃ, ಸ್ತ್ರೀಸ್ವಾತಂತ್ರ್ಯದ ಮಹತ್ವವನ್ನು ಎತ್ತಿ ಹಿಡಿಯುವುದಕ್ಕೋಸ್ಕರ, ಅಲ್ಲದೇ ವರ್ಗಭೇದ ಮತ್ತು ಅವಳ ಕುಟುಂಬದಲ್ಲಿನ ನಿರಂಕುಶತೆಯನ್ನು ಧಿಕ್ಕರಿಸುವುದಕ್ಕೋಸ್ಕರ ಈ ವಿವಾಹವಾದಳು ಅನ್ನಿಸುತ್ತದೆ. ಅನಿಶ್ಚಿತವಾದ ಕಲ್ಪನೆಯ ಲೋಕದಲ್ಲಿ ತೇಲಾಡುವ ಅವಳ ಮನಸ್ಥಿತಿ ಅವಳನ್ನು ಈ ಕೆಲಸಕ್ಕೆ ಪ್ರೇರೇಪಿಸಿರಬಹುದು.

ಈ ರೀತಿಯ ಉದಾತ್ತವಾದ ಅನಿಸಿಕೆಗಳ ಜತೆ, ತನ್ನ ಪರಾವಲಂಬಿ ಜೀವನ ಮತ್ತು ದುರುಳತನವಿದ್ದರೂ ಯಾವುದೋ ಒಂದು ತಾತ್ಕಾಲಿಕ ಕ್ಷಣದಲ್ಲಿ ಫೈಡರ್‌ನ ಮನೋಪ್ರವೃತ್ತಿ ಇವಳ ಜತೆ ಹೊಂದಿಕೊಂಡುಬಿಟ್ಟಿತ್ತೇನೊ? ಈ ಮದುವೆ ಹೆಚ್ಚು ರಸವತ್ತಾಗಿದ್ದು, ಅವರಿಬ್ಬರ ಪ್ರೇಮ ಪಲಾಯನದಿಂದ. ಅಡೆಲೈಡಳ ಅಭಿರುಚಿ ಈ ಪಲಾಯನಕ್ಕೆ ಪುಷ್ಟಿ ಕೊಟ್ಟಿತು. ಫೈಡರ್‌ನ ಅಂದಿನ ಹೀನಾಯ ಪರಿಸ್ಥಿತಿಯಲ್ಲಿ, ತನ್ನ ಬದುಕನ್ನು ರೂಪಿಸಿಕೊಳ್ಳಲು ಈ ಕೃತ್ಯ ಅವನಿಗೆ ಅತ್ಯವಶ್ಯಕವಾಗಿತ್ತು. ಸುಸಂಸ್ಕೃತ ಕುಟುಂಬದ ಜತೆಗೆ ಅವನ ನೆಂಟಸ್ತನ ಬೆಳೇಸಿ, ಅವನ ಮುಂದಿನ ಬದುಕಿಗೆ ಅತ್ಯಮೂಲ್ಯವಾದ ವರದಕ್ಷಿಣೆಯೇ ಅವನ ಈ ಮದುವೆಯ ಮೂಲೋದ್ದೇಶವಾಗಿತ್ತು. ಸ್ತ್ರೀಲಂಪಟ ಸ್ವಭಾವದ ಫೈಡರ್‌ಗೆ ಅಡೆಲೈಡಳ ಸೌಂದರ್ಯವೊಂದೇ ಆಕರ್ಷಣೆಯಾಗಿರಲಿಲ್ಲ.

ಈ ಪುಸ್ತಕ ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ತಮ್ಮ ಪ್ರೇಮಪಲಾಯನದ ನಂತರ, ಕ್ಷಣಮಾತ್ರದಲ್ಲಿ ಅಡೆಲೈಡಳಿಗೆ ತನ್ನ ಗಂಡನ ಬಗ್ಗೆ ತಿರಸ್ಕಾರವಲ್ಲದೇ ಬೇರೆ ಯಾವ ಭಾವನೆಗಳೂ ಇರಲಿಲ್ಲ. ಈ ಮದುವೆಯ ಯಶಸ್ಸಿನ ನಿಜವಾದ ಬಣ್ಣ ಶೀಘ್ರವಾಗಿ ಗೋಚರಿಸತೊಡಗಿತು. ಅಡೆಲೈಡಳ ಕುಟುಂಬದವರು ಸ್ವಲ್ಪ ಸಮಯದ ನಂತರ ಈ ಮದುವೆಯನ್ನು ಒಪ್ಪಿಕೊಂಡು, ಅಡೆಲೈಡಳ ಪಾಲಿನ ವರದಕ್ಷಿಣೆಯನ್ನು ಬೇರೆ ತೆಗೆದಿಟ್ಟರೂ ಕೂಡ ಈ ಗಂಡ-ಹೆಂಡಿರ ವೈವಾಹಿಕ ಜೀವನ ಎಡರುತೊಡರುಗಳಿಂದಲೇ ಕೂಡಿತ್ತು. ಅವರಿಬ್ಬರ ನಡುವೆ ನಿರಂತರ ಅಹಿತಕರ ಘಟನೆಗಳು ನಡೆಯುತ್ತಲೇ ಇದ್ದವು. ಅವನ ಹೆಂಡತಿ, ತರುಣಿ, ಅವನಿಗಿಂತಲೂ ಹೆಚ್ಚು ಧಾರಾಳಿ ಮತ್ತು ಘನತೆಯಿಂದ ಕೂಡಿದವಳಾಗಿದ್ದಳು.

ಅಡೆಲೈಡಳಿಗೆ ತಂದೆಯ ಮನೆಯಿಂದ ಸಂದಾಯವಾದ ಇಪ್ಪತ್ತೈದು ಸಾವಿರ ರೂಬಲ್ಲುಗಳನ್ನು ಫೈಡರೇ ಲಪಟಾಯಿಸಿಬಿಟ್ಟಿದ್ದ. ಅವಳ ವರದಕ್ಷಿಣೆಯ ಭಾಗವಾದ ಒಂದು ಸಣ್ಣ ಹಳ್ಳಿ ಮತ್ತು ಒಂದು ಅಮೂಲ್ಯವಾದ ಮನೆಯನ್ನು ಮೋಸದಿಂದ ಹೊಡೆದುಕೊಳ್ಳಲು ಫೈಡರ್ ಹೊಂಚುಹಾಕುತ್ತಿದ್ದ. ಈ ಕೆಲಸದಲ್ಲಿ ಫೈಡರ್ ಬಹುಶಃ, ಅಡೆಲೈಡಳ ನೈತಿಕ ನಿಶ್ಯಕ್ತಿ ಮತ್ತು ಅವನ ಸಾನ್ನಿಧ್ಯದಿಂದ ದೂರ ಹೋಗುವ ಹಂಬಲಗಳ ಕಾರಣಗಳಿಂದ ಈ ಆಸ್ತಿಗಳನ್ನು ಹೊಡೆದುಕೊಳ್ಳುವಲ್ಲಿ ಸಫಲನಾಗುತ್ತಿದ್ದನೇನೋ, ಆದರೆ ಅಡೆಲೈಡಳ ಕುಟುಂಬದವರ ಮಧ್ಯಸ್ಥಿಕೆಯಿಂದ ಅದು ಅಸಾಧ್ಯವಾಯಿತು. ಇವರಿಬ್ಬರ ನಡುವೆ ಆಗಿಂದಾಗ್ಗೆ ಹೊಡೆದಾಟಗಳು ಆಗುತ್ತಲೇ ಇದ್ದವು. ವಿಚಿತ್ರವೇನೆಂದರೆ, ಫೈಡರ್ ಅಡೆಲೈಡಳನ್ನು ಹೊಡೆಯುತ್ತಿರಲಿಲ್ಲ, ಆದರೆ ಅಡೆಲೈಡಳೇ ಅವನಿಗೆ ಬಾರಿಸುತ್ತಿದ್ದಳು.

ಅಡೆಲೈಡ ಶಕ್ತಿವಂತ ಮತ್ತು ಮುಂಗೋಪಿ ಹೆಣ್ಣಾಗಿದ್ದರಿಂದ ಇದು ನಿಜವಿರಬಹುದು. ಕೊನೆಗೆ ಅಡೆಲೈಡ, ಒಬ್ಬ ಅನಾಥ ದೈವಶಾಸ್ತ್ರದ ವಿದ್ಯಾರ್ಥಿಯ ಜತೆ ಅಲ್ಲಿಂದ ಪಲಾಯನಗೈದಳು. ಜತೆಗೆ ಅವಳಿಗೆ ಹುಟ್ಟಿದ್ದ ಡಿಮಿಟ್ರಿ ಎಂಬ ಮಗುವನ್ನೂ ಅನಾಥನನ್ನಾಗಿ ಮಾಡಿ ಹೊರಟುಹೋಗಿದ್ದಳು. ನಂತರ ಫೈಡರ್ ತನ್ನ ಮನೆಯನ್ನು ವ್ಯಭಿಚಾರ ಕೇಂದ್ರವನ್ನಾಗಿ ಪರಿವರ್ತಿಸಿದ, ಮತ್ತು ಅವನು ಕುಡಿತ ವ್ಯಭಿಚಾರಗಳ ಬಲಿಪಶುವಾದ. ಮಧ್ಯೆ ಮಧ್ಯೆ ಇಡೀ ಪ್ರಾಂತ್ಯದ ಪ್ರದೇಶಗಳಿಗೆ ಹೋಗಿ ಅಡೆಲೈಡ ತನ್ನನ್ನು ಬಿಟ್ಟುಹೋದದ್ದರ ಬಗ್ಗೆ ಎಲ್ಲರ ಮುಂದೆ ಕಣ್ಣೀರಿಡುತ್ತಿದ್ದ. ಒಬ್ಬ ಸಂಭಾವಿತ ಗಂಡ, ತನ್ನ ವೈವಾಹಿಕ ಜೀವನದ ಬಗ್ಗೆ ಹೇಳಬಾರದಂತಹ ನಾಚಿಕೆಗೇಡಿನ ವಿಷಯಗಳನ್ನೆಲ್ಲ ಬಹಿರಂಗಪಡಿಸುತ್ತಿದ್ದ. ಅವನಿಗೆ ಆತ್ಮ ಸಂತೋಷವನ್ನುಂಟು ಮಾಡುತ್ತಿದ್ದ ಸಂಗತಿಯೆಂದರೆ, ಅವನೊಂದು ರೀತಿಯ ಘಾಸಿಗೊಂಡ ಪತಿಯೆಂಬ ಅವನ ಕಪಟನಾಟಕದ ಪಾತ್ರ.

“ನೀನೊಬ್ಬ, ದುಃಖಪಡುವ ಬದಲು, ನಿನ್ನ ಜೀವನದಲ್ಲಿ ಬಡ್ತಿ ಸಿಕ್ಕವನಂತೆ, ಸಂತೋಷ ಪಡುತ್ತಿದ್ದೀಯಲ್ಲ ಅಂತ ಜನ ಅವನನ್ನು ಅಪಹಾಸ್ಯ ಮಾಡುತ್ತಿದ್ದರು. ಅವಹೇಳನಕ್ಕೊಳಗಾದ ಪರಿಸ್ಥಿತಿಯನ್ನೂ ಲೆಕ್ಕಿಸದೆ ಅವನು ವಿದೂಷಕನ ರೀತಿ ವರ್ತಿಸುತ್ತಿದ್ದ.

ಕೊನೆಗೂ ಅವನ ಓಡಿಹೋದ ಹೆಂಡತಿ ಎಲ್ಲಿದ್ದಾಳೆ ಎಂಬ ಸುಳಿವು ಅವನಿಗೆ ಸಿಕ್ಕಿತು. ಆ ಪಾಪದ ಹೆಣ್ಣು ಪೀಟರ್ಸ್‌ಬರ್ಗಿಗೆ ದೈವಶಾಸ್ತ್ರದ ವಿದ್ಯಾರ್ಥಿಯ ಜತೆ ಹೋಗಿದ್ದಳು. ಅಲ್ಲಿ ಅವಳು ಸಂಪೂರ್ಣ ವಿಮೋಚನೆಗೆ ತನ್ನನ್ನು ತಾನೇ ಅರ್ಪಿಸಿಕೊಂಡಿದ್ದಳು. ಫೈಡರ್ ಕೂಡಲೇ ಪೀಟರ್ಸ್‌ಬರ್ಗಿಗೆ ಹೊರಡಲು ತರಾತುರಿ ನಡೆಸುತ್ತಿದ್ದ. ಆದರೆ ಅದು ಯಾವ ಕಾರಣಕ್ಕೆನ್ನುವುದು ಅವನಿಗೇ ತಿಳಿದಿರಲಿಲ್ಲ. ಅಲ್ಲಿಗೆ ಹೊರಡುವುದಕ್ಕೆ ತನ್ನಲ್ಲಿ ಧೈರ್ಯ ತುಂಬಿಕೊಳ್ಳುವ ಕಾರಣವನ್ನೊಡ್ಡಿ ಅತಿಯಾಗಿ ಕುಡಿಯಲಾರಂಭಿಸಿದ. ಅದೇ ಸಮಯದಲ್ಲೇ ಅವನ ಹೆಂಡತಿಯ ಕುಟುಂಬದವರಿಗೆ ಅಡೆಲೈಡಳ ಸಾವಿನ ಸುದ್ದಿ ಮುಟ್ಟಿತು. ಅವಳ ಸಾವಿನ ಕಾರಣಗಳ ಬಗ್ಗೆ ಅನೇಕ ಊಹಾಪೋಹಗಳು ಹುಟ್ಟಿಕೊಂಡಿದ್ದವು.

ಕೆಲವು, ಅವಳು ಸಣ್ಣ ರೂಮಿನಲ್ಲಿ ಹಸಿವಿನಿಂದ ಅಸು ನೀಗಿದಳು ಎಂದೂ, ಮತ್ತೆ ಕೆಲವು ಟೈಫಾಯ್ಡಿನಿಂದ ಸತ್ತಳು ಎಂದು. ಫೈಡರ್ ಅವಳ ಸಾವಿನ ಸುದ್ದಿ ಕೇಳಿದಾಗ ಕುಡಿದಿದ್ದ. ಕೆಲವರು ಅವನು ಅದನ್ನು ಕೇಳಿದವನೇ ಬೀದಿಯಲ್ಲಿ ಓಡಿ ಸಂತೋಷದಿಂದ ಕುಣಿದಾಡಿದ ಎಂದೂ, ಇನ್ನು ಕೆಲವರು ಸಣ್ಣ ಮಗುವಿನ ರೀತಿ ಗೋಳಿಟ್ಟ ಎಂದೂ ಹೇಳುತ್ತಾರೆ. ಅವನ ಬಗ್ಗೆ ಅವನೇ ಹುಟ್ಟುಹಾಕಿದ್ದ ಅಸಹ್ಯದ ಭಾವನೆಗಳ ನಂತರವೂ, ಜನರು ಅವನ ಬಗ್ಗೆ ಮರುಗಿದರು. ಇಲ್ಲಿ ಎರಡೂ ಹೇಳಿಕೆಗಳು ನಿಜವಿರಬಹುದು. ಒಂದು ಅವನಿಗೆ ಸಿಕ್ಕ ವಿಮೋಚನೆಯಿಂದ ಸಂತೋಷ ಮತ್ತು ಇನ್ನೊಂದು ವಿಮೋಚನೆ ಕೊಟ್ಟವಳ ಬಗ್ಗೆ ಸಂತಾಪ. ವಾಡಿಕೆಯಲ್ಲಿರುವ ನಿಯಮವೇನೆಂದರೆ, ಅತ್ಯಂತ ಕೆಟ್ಟ ಮನುಷ್ಯನೂ ಕೂಡ ಕೆಲವು ಬಾರಿ ನಾವು ತಿಳಿದುಕೊಂಡಿರುವುದಕ್ಕಿಂತ ಜಾಸ್ತಿಯೇ ಅಮಾಯಕ ಮತ್ತು ಹೃದಯವಂತನಾಗಿರುತ್ತಾನೆ. ಇದರಲ್ಲಿ ನಾವೂ ಸೇರಿದ್ದೇವೆ.


ಇದನ್ನೂ ಓದಿ: ಪುಟಕ್ಕಿಟ್ಟ ಪುಟಗಳು: ಚೈತನ್ಯಪೂರ್ಣವಾಗಿರಲು ಪ್ರೇರೇಪಿಸುವ ಓಶೋನ ‘ಭಾರತ ಎನ್ನೊಲವು’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...