Homeಪುಸ್ತಕ ವಿಮರ್ಶೆಅತ್ಯಂತ ಕೆಟ್ಟ ಮನುಷ್ಯನೂ ಕೆಲವು ಬಾರಿ ನಾವು ತಿಳಿದುಕೊಂಡಿರುವುದಕ್ಕಿಂತ ಜಾಸ್ತಿಯೇ ಹೃದಯವಂತನಾಗಿರುತ್ತಾನೆ

ಅತ್ಯಂತ ಕೆಟ್ಟ ಮನುಷ್ಯನೂ ಕೆಲವು ಬಾರಿ ನಾವು ತಿಳಿದುಕೊಂಡಿರುವುದಕ್ಕಿಂತ ಜಾಸ್ತಿಯೇ ಹೃದಯವಂತನಾಗಿರುತ್ತಾನೆ

- Advertisement -
- Advertisement -

ಕೆ. ಶ್ರೀನಾಥ್ ಕನ್ನಡಕ್ಕೆ ಅನುವಾದಿಸಿರುವ ಫ್ಯೋದೊರ್ ದಾಸ್ತೋವ್‌ಸ್ಕಿಯವರ ’ಕರಮಜೋವ್ ಸಹೋದರರು’ ಕಾದಂಬರಿಯ ಮೊದಲ ಅಧ್ಯಾಯ

ಕರಮಜೋವ್ ಕುಟುಂಬದ ಚರಿತ್ರೆ- ಫೈಡರ್ ಪಾವ್ಲೋವಿಚ್ ಕರಮಜೋವ್

ಅಲೆಕ್ಸಿ ಕರಮಜೋವ್, ಫೈಡರ್ ಪಾವ್ಲೋವಿಚ್ ಕರಮಜೋವ್‌ನ ಮೂರನೆ ಮಗ. ಈ ಫೈಡರ್, ನಮ್ಮ ಪ್ರದೇಶದ ಎಲ್ಲೆಲ್ಲೂ ತನ್ನದೇ ಆದ ವಿಶಿಷ್ಟವಾದ ಕಾರಣಗಳಿಗೋಸ್ಕರ ಪ್ರಚಲಿತನಾದ ಜಮೀನುದಾರ, ಮತ್ತು ಇಂದಿಗೆ ಹದಿಮೂರು ವರ್ಷಗಳ ಹಿಂದೆ ನಡೆದ ಅವನ ದುರ್ಮರಣದಿಂದಾಗಿ ಎಲ್ಲರ ನೆನಪಿನಲ್ಲೂ ಉಳಿದಿರುವ ವ್ಯಕ್ತಿ. ಈ ಘಟನೆಯ ಬಗ್ಗೆ ವಿವರವಾಗಿ ಮುಂದೆ ಪ್ರಸ್ತಾಪಿಸುತ್ತೇನೆ. ಸದಕ್ಕೆ, ಅವನು ಎಂದೂ ತನ್ನ ಜಮೀನಿನಲ್ಲಿ ಕಾಲಿಟ್ಟಿರಲಿಲ್ಲದಿದ್ದರೂ ಅವನನ್ನು ಜಮೀನುದಾರ ಅಂತಲೇ ಕರೆಯುತ್ತೇನೆ. ನಾವು ಆಗಾಗ್ಗೆ ಸಮಾಜದಲ್ಲಿ ಕಾಣುವಂತಹ ಈ ರೀತಿಯ ವಿಚಿತ್ರ ವ್ಯಕ್ತಿಗಳ ಜಾತಿಗೆ ಇವನೂ ಸೇರಿದ್ದಾನೆ. ಇವನಲ್ಲಿರುವ ವೈಚಿತ್ರ್ಯ ಏನೆಂದರೆ, ಇವನೊಬ್ಬ ಅಹಿತಕರವಾದ ದುಷ್ಟ ಮತ್ತು ಅವಿವೇಕದಿಂದ ಕೂಡಿದ ವ್ಯಕ್ತಿ.

ಇವನು ಎಷ್ಟೇ ಪ್ರಜ್ಞಾಶೂನ್ಯನಾಗಿದ್ದರೂ ತನ್ನ ಸ್ವಂತ ವಹಿವಾಟುಗಳನ್ನು ನಿಭಾಯಿಸುವ ಸಾಮರ್ಥ್ಯವುಳ್ಳವನಾಗಿದ್ದ. ಅವನಲ್ಲಿದ್ದ ಸಣ್ಣ ಜಮೀನನ್ನು ಬಿಟ್ಟರೆ, ಅವನ ಜೀವನ ಸೊನ್ನೆಯಿಂದಲೇ ಶುರುವಾಯಿತು. ಅವನು ಬೇರೆಯವರ ಔತಣಕೂಟಗಳಲ್ಲಿ, ಆಮಂತ್ರಣವಿರಲಿ ಇಲ್ಲದಿರಲಿ, ಯಾವುದೇ ಹಿಂಜರಿಕೆಯಿಲ್ಲದೆ ವಿನಮ್ರತೆಯಿಂದಲೇ ಭಾಗವಹಿಸುತ್ತಿದ್ದ. ಆದರೆ, ಅವನ ಸಾವಿನ ನಂತರ ಬಹಿರಂಗವಾದದ್ದು, ಅವನಲ್ಲಿ ಒಂದು ಲಕ್ಷ ರೂಬಲ್ಲುಗಳಷ್ಟು ನಗದು ಹಣವಿತ್ತೆಂಬುದು. ಅವನು ತನ್ನ ಇಡೀ ಜೀವನವನ್ನು ಒಬ್ಬ ಅಪ್ರಜ್ಞಾವಂತ ಮತ್ತು ಹಾಸ್ಯಾಸ್ಪದ ವ್ಯಕ್ತಿಯಾಗಿಯೇ ಸವೆಸಿದ. ಆದರೆ ಅವನು ಅತಿ ಮೂರ್ಖನಾಗಿರಲಿಲ್ಲ. ಸಾಮಾನ್ಯವಾಗಿ ಈ ರೀತಿಯ ವ್ಯಕ್ತಿಗಳು ಸಾಕಷ್ಟು ಜಾಣರೂ ಬುದ್ಧಿವಂತರೂ ಆಗಿರುತ್ತಾರೆ.

ಅವನಿಗೆ ಎರಡು ಮದುವೆಗಳಾಗಿದ್ದು, ಎರಡೂ ಮದುವೆಗಳಿಂದ ಮೂರು ಗಂಡು ಮಕ್ಕಳಿದ್ದರು. ಮೊದಲನೇ ಹೆಂಡತಿಯ ಮಗ ಡಿಮಿಟ್ರಿ; ಇವಾನ್ ಮತ್ತು ಅಲೆಕ್ಸಿ ಎರಡನೇ ಹೆಂಡತಿಯ ಮಕ್ಕಳು. ಫೈಡರ್‌ನ ಮೊದಲನೇ ಹೆಂಡತಿ, ಅಡೆಲೈಡ ಇವಾನೊವ್ನ, ಶ್ರೀಮಂತ ಮತ್ತು ಪ್ರತಿಷ್ಠಿತ ವರ್ಗದ ಕುಟುಂಬದಿಂದ ಬಂದವಳು, ಮತ್ತು ಈ ಕುಟುಂಬ ಆ ಫಾಸಲೆಯ ಪ್ರತಿಷ್ಠಿತ ಜಮೀನುದಾರರಲ್ಲಿ ಒಂದು. ಅವರದು ಮಿಯುಸೋವ್ ಎಂಬ ಕುಟುಂಬ. ಈ ರೀತಿಯ ಐಶ್ವರ್ಯದ ವಾರಸುದಾರಳೂ ರೂಪವತಿಯೂ ಆದ, ಅಲ್ಲದೇ ಬುದ್ಧಿವಂತಳೂ ಆದ ಅಡೆಲೈಡ, ಇಂಥ ನಾಲಾಯಕ್ ಮನುಷ್ಯನನ್ನು ಹೇಗೆ ಮದುವೆಯಾದಳು ಅನ್ನುವ ವಿಸ್ಮಯವನ್ನು ನಾನು ವಿವರಿಸುವ ಗೋಜಿಗೆ ಹೋಗುವುದಿಲ್ಲ.

ಆದರೆ, ನನಗೊಬ್ಬಳು ಯುವತಿಯ ಬಗ್ಗೆ ತಿಳಿದಿದೆ. ಹಿಂದಿನ ಭಾವನಾತ್ಮಕತೆಯಲ್ಲಿ ವಿಹರಿಸುತ್ತಿದ್ದ ಯುವತಿಯರ ಪೀಳಿಗೆಗೆ ಸೇರಿದವಳು ಅವಳು ಮತ್ತು ಸ್ವಲ್ಪ ಸಮಯದ ನಂತರ ಒಬ್ಬ ಯುವಕನ ಜತೆಗೆ ನಿಗೂಢವಾಗಿ ನೆಲೆಸಿದ್ದ ಗಾಢಪ್ರೇಮದ ಕಾರಣಗಳಿಗೋಸ್ಕರ, ಅವನನ್ನು ಸುಲಭ ರೀತಿಯಲ್ಲಿ ವಿವಾಹವಾಗಬಹುದಾಗಿದ್ದರೂ, ಒಂದು ಮನೋಹರ ನದಿಯ ಬದಿಯಿದ್ದ ಶಿಖರವೊಂದರಿಂದ ಕೆಳಗೆ ಹಾರಿ ಅವರ ಪರಸ್ಪರ ಸಂಬಂಧವನ್ನು ಕೊನೆಗೊಳಿಸಿಕೊಂಡಳು. ಈ ರೀತಿ ಎಸಗಿದ ಕೃತ್ಯ, ಬರಿಯ ಅವಳ ಚಂಚಲಚಿತ್ತವನ್ನು ತೃಪ್ತಿಗೊಳಿಸಲೋಸ್ಕರ ಮತ್ತು ಶೇಕ್ಸ್‌ಪಿಯರಿನ ಒಪೀಲಿಯಾ ಪಾತ್ರವನ್ನು ಅನುಕರಿಸುವುದಕ್ಕೋಸ್ಕರ. ಈ ಶಿಖರ ಮನೋಹರವಾದ ಮತ್ತು ದೃಶ್ಯ ವಿಹಂಗಮವಾಗಿಲ್ಲದೆ ಇದ್ದಿದ್ದರೆ ಮತ್ತು ನೀರಸ ನದಿಯ ದಡವಾಗಿದ್ದಿದ್ದರೆ ಈ ಆತ್ಮಹತ್ಯೆಯ ಘಟನೆ ನಡೆಯುತ್ತಿರಲಿಲ್ಲವೋ ಏನೋ! ಇದೊಂದು ನಡೆದ ಘಟನೆ ಮತ್ತು ಇಂಥ ಘಟನೆ ಕಳೆದ ಹಿಂದಿನ ಮೂರು ಪೀಳಿಗೆಗಳಲ್ಲೆಂದೂ ಪುನರಾವರ್ತನೆಯಾಗಿರಲಿಲ್ಲ.

ಅಡೆಲೈಡಳ ಈ ವಿವಾಹ ಒಂದು ರೀತಿಯಲ್ಲಿ, ಬೇರೆ ವ್ಯಕ್ತಿಗಳ ಅನಿಸಿಕೆಗಳ ಒಂದು ಪ್ರತಿಧ್ವನಿ ಎನ್ನಬಹುದು. ಅವಳು ಮಾನಸಿಕ ಸ್ವಾತಂತ್ರ್ಯದಿಂದ ವಂಚಿತಳಾದ ಕಾರಣ ಸಿಟ್ಟಿಗೆದ್ದು ಉದ್ರೇಕದಿಂದ ಕೈಗೊಂಡ ನಿರ್ಧಾರ ಅದು. ಅವಳು ಬಹುಶಃ, ಸ್ತ್ರೀಸ್ವಾತಂತ್ರ್ಯದ ಮಹತ್ವವನ್ನು ಎತ್ತಿ ಹಿಡಿಯುವುದಕ್ಕೋಸ್ಕರ, ಅಲ್ಲದೇ ವರ್ಗಭೇದ ಮತ್ತು ಅವಳ ಕುಟುಂಬದಲ್ಲಿನ ನಿರಂಕುಶತೆಯನ್ನು ಧಿಕ್ಕರಿಸುವುದಕ್ಕೋಸ್ಕರ ಈ ವಿವಾಹವಾದಳು ಅನ್ನಿಸುತ್ತದೆ. ಅನಿಶ್ಚಿತವಾದ ಕಲ್ಪನೆಯ ಲೋಕದಲ್ಲಿ ತೇಲಾಡುವ ಅವಳ ಮನಸ್ಥಿತಿ ಅವಳನ್ನು ಈ ಕೆಲಸಕ್ಕೆ ಪ್ರೇರೇಪಿಸಿರಬಹುದು.

ಈ ರೀತಿಯ ಉದಾತ್ತವಾದ ಅನಿಸಿಕೆಗಳ ಜತೆ, ತನ್ನ ಪರಾವಲಂಬಿ ಜೀವನ ಮತ್ತು ದುರುಳತನವಿದ್ದರೂ ಯಾವುದೋ ಒಂದು ತಾತ್ಕಾಲಿಕ ಕ್ಷಣದಲ್ಲಿ ಫೈಡರ್‌ನ ಮನೋಪ್ರವೃತ್ತಿ ಇವಳ ಜತೆ ಹೊಂದಿಕೊಂಡುಬಿಟ್ಟಿತ್ತೇನೊ? ಈ ಮದುವೆ ಹೆಚ್ಚು ರಸವತ್ತಾಗಿದ್ದು, ಅವರಿಬ್ಬರ ಪ್ರೇಮ ಪಲಾಯನದಿಂದ. ಅಡೆಲೈಡಳ ಅಭಿರುಚಿ ಈ ಪಲಾಯನಕ್ಕೆ ಪುಷ್ಟಿ ಕೊಟ್ಟಿತು. ಫೈಡರ್‌ನ ಅಂದಿನ ಹೀನಾಯ ಪರಿಸ್ಥಿತಿಯಲ್ಲಿ, ತನ್ನ ಬದುಕನ್ನು ರೂಪಿಸಿಕೊಳ್ಳಲು ಈ ಕೃತ್ಯ ಅವನಿಗೆ ಅತ್ಯವಶ್ಯಕವಾಗಿತ್ತು. ಸುಸಂಸ್ಕೃತ ಕುಟುಂಬದ ಜತೆಗೆ ಅವನ ನೆಂಟಸ್ತನ ಬೆಳೇಸಿ, ಅವನ ಮುಂದಿನ ಬದುಕಿಗೆ ಅತ್ಯಮೂಲ್ಯವಾದ ವರದಕ್ಷಿಣೆಯೇ ಅವನ ಈ ಮದುವೆಯ ಮೂಲೋದ್ದೇಶವಾಗಿತ್ತು. ಸ್ತ್ರೀಲಂಪಟ ಸ್ವಭಾವದ ಫೈಡರ್‌ಗೆ ಅಡೆಲೈಡಳ ಸೌಂದರ್ಯವೊಂದೇ ಆಕರ್ಷಣೆಯಾಗಿರಲಿಲ್ಲ.

ಈ ಪುಸ್ತಕ ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ತಮ್ಮ ಪ್ರೇಮಪಲಾಯನದ ನಂತರ, ಕ್ಷಣಮಾತ್ರದಲ್ಲಿ ಅಡೆಲೈಡಳಿಗೆ ತನ್ನ ಗಂಡನ ಬಗ್ಗೆ ತಿರಸ್ಕಾರವಲ್ಲದೇ ಬೇರೆ ಯಾವ ಭಾವನೆಗಳೂ ಇರಲಿಲ್ಲ. ಈ ಮದುವೆಯ ಯಶಸ್ಸಿನ ನಿಜವಾದ ಬಣ್ಣ ಶೀಘ್ರವಾಗಿ ಗೋಚರಿಸತೊಡಗಿತು. ಅಡೆಲೈಡಳ ಕುಟುಂಬದವರು ಸ್ವಲ್ಪ ಸಮಯದ ನಂತರ ಈ ಮದುವೆಯನ್ನು ಒಪ್ಪಿಕೊಂಡು, ಅಡೆಲೈಡಳ ಪಾಲಿನ ವರದಕ್ಷಿಣೆಯನ್ನು ಬೇರೆ ತೆಗೆದಿಟ್ಟರೂ ಕೂಡ ಈ ಗಂಡ-ಹೆಂಡಿರ ವೈವಾಹಿಕ ಜೀವನ ಎಡರುತೊಡರುಗಳಿಂದಲೇ ಕೂಡಿತ್ತು. ಅವರಿಬ್ಬರ ನಡುವೆ ನಿರಂತರ ಅಹಿತಕರ ಘಟನೆಗಳು ನಡೆಯುತ್ತಲೇ ಇದ್ದವು. ಅವನ ಹೆಂಡತಿ, ತರುಣಿ, ಅವನಿಗಿಂತಲೂ ಹೆಚ್ಚು ಧಾರಾಳಿ ಮತ್ತು ಘನತೆಯಿಂದ ಕೂಡಿದವಳಾಗಿದ್ದಳು.

ಅಡೆಲೈಡಳಿಗೆ ತಂದೆಯ ಮನೆಯಿಂದ ಸಂದಾಯವಾದ ಇಪ್ಪತ್ತೈದು ಸಾವಿರ ರೂಬಲ್ಲುಗಳನ್ನು ಫೈಡರೇ ಲಪಟಾಯಿಸಿಬಿಟ್ಟಿದ್ದ. ಅವಳ ವರದಕ್ಷಿಣೆಯ ಭಾಗವಾದ ಒಂದು ಸಣ್ಣ ಹಳ್ಳಿ ಮತ್ತು ಒಂದು ಅಮೂಲ್ಯವಾದ ಮನೆಯನ್ನು ಮೋಸದಿಂದ ಹೊಡೆದುಕೊಳ್ಳಲು ಫೈಡರ್ ಹೊಂಚುಹಾಕುತ್ತಿದ್ದ. ಈ ಕೆಲಸದಲ್ಲಿ ಫೈಡರ್ ಬಹುಶಃ, ಅಡೆಲೈಡಳ ನೈತಿಕ ನಿಶ್ಯಕ್ತಿ ಮತ್ತು ಅವನ ಸಾನ್ನಿಧ್ಯದಿಂದ ದೂರ ಹೋಗುವ ಹಂಬಲಗಳ ಕಾರಣಗಳಿಂದ ಈ ಆಸ್ತಿಗಳನ್ನು ಹೊಡೆದುಕೊಳ್ಳುವಲ್ಲಿ ಸಫಲನಾಗುತ್ತಿದ್ದನೇನೋ, ಆದರೆ ಅಡೆಲೈಡಳ ಕುಟುಂಬದವರ ಮಧ್ಯಸ್ಥಿಕೆಯಿಂದ ಅದು ಅಸಾಧ್ಯವಾಯಿತು. ಇವರಿಬ್ಬರ ನಡುವೆ ಆಗಿಂದಾಗ್ಗೆ ಹೊಡೆದಾಟಗಳು ಆಗುತ್ತಲೇ ಇದ್ದವು. ವಿಚಿತ್ರವೇನೆಂದರೆ, ಫೈಡರ್ ಅಡೆಲೈಡಳನ್ನು ಹೊಡೆಯುತ್ತಿರಲಿಲ್ಲ, ಆದರೆ ಅಡೆಲೈಡಳೇ ಅವನಿಗೆ ಬಾರಿಸುತ್ತಿದ್ದಳು.

ಅಡೆಲೈಡ ಶಕ್ತಿವಂತ ಮತ್ತು ಮುಂಗೋಪಿ ಹೆಣ್ಣಾಗಿದ್ದರಿಂದ ಇದು ನಿಜವಿರಬಹುದು. ಕೊನೆಗೆ ಅಡೆಲೈಡ, ಒಬ್ಬ ಅನಾಥ ದೈವಶಾಸ್ತ್ರದ ವಿದ್ಯಾರ್ಥಿಯ ಜತೆ ಅಲ್ಲಿಂದ ಪಲಾಯನಗೈದಳು. ಜತೆಗೆ ಅವಳಿಗೆ ಹುಟ್ಟಿದ್ದ ಡಿಮಿಟ್ರಿ ಎಂಬ ಮಗುವನ್ನೂ ಅನಾಥನನ್ನಾಗಿ ಮಾಡಿ ಹೊರಟುಹೋಗಿದ್ದಳು. ನಂತರ ಫೈಡರ್ ತನ್ನ ಮನೆಯನ್ನು ವ್ಯಭಿಚಾರ ಕೇಂದ್ರವನ್ನಾಗಿ ಪರಿವರ್ತಿಸಿದ, ಮತ್ತು ಅವನು ಕುಡಿತ ವ್ಯಭಿಚಾರಗಳ ಬಲಿಪಶುವಾದ. ಮಧ್ಯೆ ಮಧ್ಯೆ ಇಡೀ ಪ್ರಾಂತ್ಯದ ಪ್ರದೇಶಗಳಿಗೆ ಹೋಗಿ ಅಡೆಲೈಡ ತನ್ನನ್ನು ಬಿಟ್ಟುಹೋದದ್ದರ ಬಗ್ಗೆ ಎಲ್ಲರ ಮುಂದೆ ಕಣ್ಣೀರಿಡುತ್ತಿದ್ದ. ಒಬ್ಬ ಸಂಭಾವಿತ ಗಂಡ, ತನ್ನ ವೈವಾಹಿಕ ಜೀವನದ ಬಗ್ಗೆ ಹೇಳಬಾರದಂತಹ ನಾಚಿಕೆಗೇಡಿನ ವಿಷಯಗಳನ್ನೆಲ್ಲ ಬಹಿರಂಗಪಡಿಸುತ್ತಿದ್ದ. ಅವನಿಗೆ ಆತ್ಮ ಸಂತೋಷವನ್ನುಂಟು ಮಾಡುತ್ತಿದ್ದ ಸಂಗತಿಯೆಂದರೆ, ಅವನೊಂದು ರೀತಿಯ ಘಾಸಿಗೊಂಡ ಪತಿಯೆಂಬ ಅವನ ಕಪಟನಾಟಕದ ಪಾತ್ರ.

“ನೀನೊಬ್ಬ, ದುಃಖಪಡುವ ಬದಲು, ನಿನ್ನ ಜೀವನದಲ್ಲಿ ಬಡ್ತಿ ಸಿಕ್ಕವನಂತೆ, ಸಂತೋಷ ಪಡುತ್ತಿದ್ದೀಯಲ್ಲ ಅಂತ ಜನ ಅವನನ್ನು ಅಪಹಾಸ್ಯ ಮಾಡುತ್ತಿದ್ದರು. ಅವಹೇಳನಕ್ಕೊಳಗಾದ ಪರಿಸ್ಥಿತಿಯನ್ನೂ ಲೆಕ್ಕಿಸದೆ ಅವನು ವಿದೂಷಕನ ರೀತಿ ವರ್ತಿಸುತ್ತಿದ್ದ.

ಕೊನೆಗೂ ಅವನ ಓಡಿಹೋದ ಹೆಂಡತಿ ಎಲ್ಲಿದ್ದಾಳೆ ಎಂಬ ಸುಳಿವು ಅವನಿಗೆ ಸಿಕ್ಕಿತು. ಆ ಪಾಪದ ಹೆಣ್ಣು ಪೀಟರ್ಸ್‌ಬರ್ಗಿಗೆ ದೈವಶಾಸ್ತ್ರದ ವಿದ್ಯಾರ್ಥಿಯ ಜತೆ ಹೋಗಿದ್ದಳು. ಅಲ್ಲಿ ಅವಳು ಸಂಪೂರ್ಣ ವಿಮೋಚನೆಗೆ ತನ್ನನ್ನು ತಾನೇ ಅರ್ಪಿಸಿಕೊಂಡಿದ್ದಳು. ಫೈಡರ್ ಕೂಡಲೇ ಪೀಟರ್ಸ್‌ಬರ್ಗಿಗೆ ಹೊರಡಲು ತರಾತುರಿ ನಡೆಸುತ್ತಿದ್ದ. ಆದರೆ ಅದು ಯಾವ ಕಾರಣಕ್ಕೆನ್ನುವುದು ಅವನಿಗೇ ತಿಳಿದಿರಲಿಲ್ಲ. ಅಲ್ಲಿಗೆ ಹೊರಡುವುದಕ್ಕೆ ತನ್ನಲ್ಲಿ ಧೈರ್ಯ ತುಂಬಿಕೊಳ್ಳುವ ಕಾರಣವನ್ನೊಡ್ಡಿ ಅತಿಯಾಗಿ ಕುಡಿಯಲಾರಂಭಿಸಿದ. ಅದೇ ಸಮಯದಲ್ಲೇ ಅವನ ಹೆಂಡತಿಯ ಕುಟುಂಬದವರಿಗೆ ಅಡೆಲೈಡಳ ಸಾವಿನ ಸುದ್ದಿ ಮುಟ್ಟಿತು. ಅವಳ ಸಾವಿನ ಕಾರಣಗಳ ಬಗ್ಗೆ ಅನೇಕ ಊಹಾಪೋಹಗಳು ಹುಟ್ಟಿಕೊಂಡಿದ್ದವು.

ಕೆಲವು, ಅವಳು ಸಣ್ಣ ರೂಮಿನಲ್ಲಿ ಹಸಿವಿನಿಂದ ಅಸು ನೀಗಿದಳು ಎಂದೂ, ಮತ್ತೆ ಕೆಲವು ಟೈಫಾಯ್ಡಿನಿಂದ ಸತ್ತಳು ಎಂದು. ಫೈಡರ್ ಅವಳ ಸಾವಿನ ಸುದ್ದಿ ಕೇಳಿದಾಗ ಕುಡಿದಿದ್ದ. ಕೆಲವರು ಅವನು ಅದನ್ನು ಕೇಳಿದವನೇ ಬೀದಿಯಲ್ಲಿ ಓಡಿ ಸಂತೋಷದಿಂದ ಕುಣಿದಾಡಿದ ಎಂದೂ, ಇನ್ನು ಕೆಲವರು ಸಣ್ಣ ಮಗುವಿನ ರೀತಿ ಗೋಳಿಟ್ಟ ಎಂದೂ ಹೇಳುತ್ತಾರೆ. ಅವನ ಬಗ್ಗೆ ಅವನೇ ಹುಟ್ಟುಹಾಕಿದ್ದ ಅಸಹ್ಯದ ಭಾವನೆಗಳ ನಂತರವೂ, ಜನರು ಅವನ ಬಗ್ಗೆ ಮರುಗಿದರು. ಇಲ್ಲಿ ಎರಡೂ ಹೇಳಿಕೆಗಳು ನಿಜವಿರಬಹುದು. ಒಂದು ಅವನಿಗೆ ಸಿಕ್ಕ ವಿಮೋಚನೆಯಿಂದ ಸಂತೋಷ ಮತ್ತು ಇನ್ನೊಂದು ವಿಮೋಚನೆ ಕೊಟ್ಟವಳ ಬಗ್ಗೆ ಸಂತಾಪ. ವಾಡಿಕೆಯಲ್ಲಿರುವ ನಿಯಮವೇನೆಂದರೆ, ಅತ್ಯಂತ ಕೆಟ್ಟ ಮನುಷ್ಯನೂ ಕೂಡ ಕೆಲವು ಬಾರಿ ನಾವು ತಿಳಿದುಕೊಂಡಿರುವುದಕ್ಕಿಂತ ಜಾಸ್ತಿಯೇ ಅಮಾಯಕ ಮತ್ತು ಹೃದಯವಂತನಾಗಿರುತ್ತಾನೆ. ಇದರಲ್ಲಿ ನಾವೂ ಸೇರಿದ್ದೇವೆ.


ಇದನ್ನೂ ಓದಿ: ಪುಟಕ್ಕಿಟ್ಟ ಪುಟಗಳು: ಚೈತನ್ಯಪೂರ್ಣವಾಗಿರಲು ಪ್ರೇರೇಪಿಸುವ ಓಶೋನ ‘ಭಾರತ ಎನ್ನೊಲವು’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...