ಪಿ.ಕೆ.ಮಲ್ಲನಗೌಡ |
ನೋಡಲು ಗೋವಿನಂತಿರುವ ಧಾರವಾಡ ಸಂಸದ ಪ್ರಹ್ಲಾದ್ ಜೋಷಿಯವರಿಗೆ ಎದುರಾಗಿ ಧಾಡಸಿ ‘ಬಸವ’ ವಿನಯ ಕುಲಕರ್ಣಿ ಠಕ್ಕರ್ ಕೊಡುತ್ತಿದ್ದಾರೆ. ‘ಹಿಂದುತ್ವ’ದ ಪ್ರತಿಪಾದಕ ಜೋಷಿ ಕೆಲಸ ಮಾಡಿದ್ದಕ್ಕಿಂತ ಪ್ರಚಾರಕ್ಕೆ ಹಾತೊರೆದದ್ದೇ ಹೆಚ್ಚು. ಮೂರು ಸಲ ಸಂಸದರಾದೂ ಈಗಲೂ ಅವರು ಮೋದಿ ಮುಖವಾಡದಲ್ಲಿ ಮತ ಬೇಡುತ್ತಿದ್ದಾರೆ. ಈಗ ಯಾವ ಅಧಿಕಾರವೂ ಇಲ್ಲದ ವಿನಯ ಕುಲಕರ್ಣಿ ಈ ಸಲ ಗೆಲ್ಲಲು ಎಲ್ಲ ಮಾರ್ಗಗಳಲ್ಲೂ ಪ್ರಯ್ನಿಸುತ್ತಿದ್ದಾರೆ.

ಮೂರು ಸಲ ಸಂಸದರಾಗಿರುವ ಜೋಷಿ ಬಗ್ಗೆ ಜನಕ್ಕೆ ಭ್ರಮನಿರಸವಾಗಿದೆ. ಬಿಜೆಪಿಯ ಸ್ಥಳಿಯ ನಾಯಕರನ್ನು ತುಳಿದ ಆರೋಪವನ್ನು ಎದುರಿಸುತ್ತಿರುವ ಜೋಷಿಗೆ ಈ ಸಲ ಪಕ್ಷದೊಳಗೇ ಸಾಕಷ್ಟು ವಿರೋಧವಿದೆ. ರಂಗಾ ಬದ್ದಿ, ದತ್ತಾ ಡೋರ್ಲೆ, ರಾಜೇಂದ್ರ ಗೋಖಲೆ, ಮಹೇಶ ತೆಂಗಿನಕಾಯಿ-ಇವರೆಲ್ಲ ಜೋಷಿಯ ಸ್ವಾರ್ಥಕ್ಕೆ ತಮ್ಮ ರಾಜಕೀಯ ಜೀವನದಲ್ಲಿ ಹಿನ್ನಡೆ ಅನುಭವಿಸಿದವರು.
ತಮ್ಮ ಸೋಲಿಗೆ ಜೋಷಿಯೇ ಕಾರಣವೆಂದು ಅತೃಪ್ತಿ ವ್ಯಕ್ತಪಡಿಸುತ್ತಲೇ ಬಂದಿರುವ ಬಿಜೆಪಿ ಮಾಜಿ ಶಾಸಕ ಚಿಕ್ಕನಗೌಡರ್ ಜೋಷಿ ಸೋಲಲೆಂದೇ ಬಯಸಿದ್ದಾರೆ. ಚಿಕ್ಕನಗೌಡರ್ ಮಗಳು ನಿನ್ನೆಯಷ್ಟೇ ಜೋಷಿ ವಿರುದ್ಧ ಬಹಿರಂಗವಾಗಿ ಆಕ್ರೋಶ ಹೊರ ಹಾಕಿದ್ದಾರೆ.
ಬಿಜೆಪಿಗೆ ಈ ಸಲ ಲಿಂಗಾಯತ/ವೀರಶೈವ ಸಮುದಾಯ ದೊಡ್ಡ ಏಟು ನೀಡಲಿದೆ. ಬಿಜೆಪಿಗೆ ಇಲ್ಲ ಸಾಕಷ್ಟು ಕೇಡರ್ಸ್ ಇದ್ದರೂ ಜೋಷಿಗೆ ಜನರನ್ನು ಎದುರಿಸುವುದು ಕಷ್ಟವಾಗುತ್ತಿದೆ.
ಇನ್ನೊಂದು ಕಡೆ ಕಾಂಗ್ರೆಸ್ನ ವಿನಯ ಕುಲಕರ್ಣಿ ಬಿರುಸಾದ ಪ್ರಚಾರದಲ್ಲಿ ತೊಡಗಿ ಎಲ್ಲ ಸಮುದಾಯಗಳನ್ನು ತಲುಪುತ್ತಿದ್ದಾರೆ.

ವಿನಯಗೆ ಇಲ್ಲಿ ಅಭಿಮಾನಿ ಪಡೆಯೂ ಇದ್ದು, ಅದು ಅಗ್ರೆಸಿವ್ ಕೂಡ ಆಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಈ ಸಲ ಕಾಂಗ್ರೆಸ್ನಲ್ಲಿ ಒಗ್ಗಟ್ಟು ಕಂಡು ಬಂದಿದೆ. ಟಿಕೆಟ್ ಆಕಾಂಕ್ಷಿಯಾಗಿದ್ದ ಐ.ಜಿ. ಸನದಿ ಕೂಡ ಪ್ರಚಾರದಲ್ಲಿ ತೊಡಗಿದ್ದಾರೆ. ಕಲಘಟಗಿಯಿಂದ ಸೋತಿದ್ದ ಸಂತೋಷ ಲಾಡ್ ವಿನಯ್ ಪರವಾಗಿ ಬೃಹತ್ ರ್ಯಾಲಿ ಮಾಡಿದ್ದಾರೆ. ಇಲ್ಲಿ ಜೆಡಿಎಸ್ಗೂ ಒಂದು ಮಟ್ಟದ ನೆಲೆಯಿದೆ. ಜೆಡಿಎಸ್ನ ಬಸವರಾಜ ಹೊರಟ್ಟಿ, ಕೋನರಡ್ಡಿ ಮತ್ತು ಹಲವು ಕಾರ್ಪೋರೇಟರುಗಳು ವಿನಯ ಪರ ಕೆಲಸ ಮಾಡುತ್ತಿದ್ದಾರೆ.
ಈ ಸಲ ಇತರ ಸಮುದಾಯಗಳ ಜೊತೆಗೆ ಲಿಂಗಾಯತ ಸಮೂಹ ವಿನಯ ಕುಲಕರ್ಣಿ ಪರ ನಿಂತಂತೆ ಕಾಣುತ್ತಿದೆ. ಹೀಗಾಗಿ ಜೋಷಿಗೆ ಇದು ಅತಿ ಕಷ್ಟದ ಚುನಾವಣೆ.


