ಕಾನೂನು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಬಂಧನವಾಗಿದ್ದ ಬಿಜೆಪಿ ಮುಖಂಡ ಸ್ವಾಮಿ ಚಿನ್ಮಯಾನಂದ ಅವರನ್ನು ಶಾಸಕರ ವಿಶೇಷ ನ್ಯಾಯಾಲಯ ಶುಕ್ರವಾರ ಖುಲಾಸೆಗೊಳಿಸಿದೆ.
ಪ್ರಕರಣವನ್ನು ಸಾಬೀತುಪಡಿಸಲು ಬೇಕಾದ ಸಾಕ್ಷ್ಯಗಳಿಲ್ಲದ ಕಾರಣಕ್ಕೆ ಅವರು ಈ ಆರೋಪಗಳಿಂದ ಮುಕ್ತರಾಗಿದ್ದಾರೆ ಎಂದು ವಿಶೇಷ ನ್ಯಾಯಾಧೀಶ ಪಿ.ಕೆ.ರಾಯ್ ಹೇಳಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ.
ಸ್ವಾಮಿ ಚಿನ್ಮಯಾನಂದರಿಂದ ಹಣ ಸುಲಿಗೆ ಮಾಡಲು ಯತ್ನಿಸುತ್ತಿದ್ದಾರೆ ಎಂದು ಕಾನೂನು ವಿದ್ಯಾರ್ಥಿನಿ ಮತ್ತು ಇತರರಾದ ಸಂಜಯ್ ಸಿಂಗ್, ಡಿಪಿಎಸ್ ರಾಥೋಡ್, ವಿಕ್ರಮ್ ಸಿಂಗ್, ಸಚಿನ್ ಸಿಂಗ್ ಮತ್ತು ಅಜೀತ್ ಸಿಂಗ್ ಅವರ ಮೇಲೆ ಆರೋಪ ಹೊರಿಸಲಾಗಿತ್ತು. ಇದಕ್ಕೂ ಸರಿಯಾದ ಸಾಕ್ಷ್ಯಗಳಿಲ್ಲದ ಕಾರಣ ಅವರನ್ನೂ ನ್ಯಾಯಾಲಯ ಖುಲಾಸೆಗೊಳಿಸಿದೆ.
“ಸ್ವಾಮಿ ಚಿನ್ಮಯಾನಂದ್ ಒಂದು ವರ್ಷ ನನ್ನನ್ನು ಅತ್ಯಾಚಾರ ಎಸಗಿದರು ಮತ್ತು ದೈಹಿಕವಾಗಿ ಶೋಷಿಸಿದ್ದಾರೆ” ಎಂದು 23 ವರ್ಷದ ಕಾನೂನು ವಿದ್ಯಾರ್ಥಿನಿ ಆಗಸ್ಟ್ 27, 2019 ರಂದು ದೂರು ನೀಡಿದ್ದರು. ಇದರ ಆಧಾರದಲ್ಲಿ ಸ್ವಾಮಿ ಚಿನ್ಮಯಾನಂದ ಅವರನ್ನು 2019 ರ ಸೆಪ್ಟೆಂಬರ್ 20 ರಂದು ಬಂಧಿಸಲಾಗಿತ್ತು.
ಇದನ್ನೂ ಓದಿ: ಅತ್ಯಾಚಾರದ ಆರೋಪದಲ್ಲಿ ಬಿಜೆಪಿ ಮುಖಂಡ ಚಿನ್ಮಯಾನಂದ್ ಬಂಧನ..
ಉತ್ತರ ಪ್ರದೇಶದ ಶಹಜಹಾನ್ಪುರದ ತನ್ನ ಮನೆಯಿಂದ ನಾಪತ್ತೆಯಾಗಿದ್ದ ಆಕೆ ರಾಜಸ್ಥಾನದಲ್ಲಿ ಪತ್ತೆಯಾಗಿ, ಚಿನ್ಮಯಾನಂದ್ ಅವರು ಒಂದು ವರ್ಷದಿಂದ ಅತ್ಯಾಚಾರ ಮತ್ತು ಶೋಷಣೆ ನಡೆಸಿದ್ದರು ಎಂದು ಆ ಕಾನೂನು ವಿದ್ಯಾರ್ಥಿನಿ ದೂರಿದ್ದರು. ಮುಖಕ್ಕೆ ಕಪ್ಪು ಬಟ್ಟೆ ಧರಿಸಿ ಪತ್ರಿಕಾಗೋಷ್ಟಿ ನಡೆಸಿದ್ದಲ್ಲದೇ ಕೆಲವು ಸಾಕ್ಷಿಯ ಕೆಲ ವಿಡಿಯೋಗಳನ್ನು ಸಹ ಲೀಕ್ ಮಾಡಿದ್ದರು.
ಮೂರು ಬಾರಿ ಸಂಸದ ಚಿನ್ಮಯಾನಂದ್ ನೇತೃತ್ವದ ಮಂಡಳಿಯು ನಡೆಸುವ ಕಾನೂನು ಕಾಲೇಜಿನಲ್ಲಿ 23 ವರ್ಷದ ಸಂತ್ರಸ್ತೆ ಕಾನೂನು ವಿದ್ಯಾರ್ಥಿಯಾಗಿದ್ದಳು. ಆಕೆಗೆ ದಾಖಲಾತಿಗಾಗಿ ಸಹಾಯ ಮಾಡುವುದಾಗಿ ಆಮಿಷತೋರಿಸಿ ಶೋಷಣೆ ನಡೆಸಿದ್ದಾರೆ ಎಂಬ ಆರೋಪ ಚಿನ್ಮಯಾನಂದ್ ಮೇಲಿದೆ.
ಆಕೆ ಸ್ನಾನ ಮಾಡುವುದನ್ನು ಚಿತ್ರೀಕರಿಸಿದ ವೀಡಿಯೊದೊಂದಿಗೆ ಅವಳನ್ನು ಬ್ಲ್ಯಾಕ್ ಮೇಲ್ ಮಾಡಿ ಅತ್ಯಾಚಾರ ಮಾಡಿದ್ದಾರೆ. ಹಲವಾರು ಆಶ್ರಮಗಳು ಮತ್ತು ಸಂಸ್ಥೆಗಳನ್ನು ನಡೆಸುತ್ತಿರುವ ರಾಜಕಾರಣಿ ತನ್ನ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ್ದಾಳೆ ಎಂದು ಸಂತ್ರಸ್ತೆ ದೂರಿದ್ದಾರೆ. ಅಲ್ಲದೇ ಆಕೆಯನ್ನು ಗನ್ಪಾಯಿಂಟ್ನಲ್ಲಿಟ್ಟು ಅವನ ಕೋಣೆಗೆ ಕರೆತರಲಾಯಿತು ಮತ್ತು ಮಸಾಜ್ ಮಾಡುವಂತೆ ಒತ್ತಾಯಿಸಲಾಯಿತು ಎಂದು ಆರೋಪಿಸಿದ್ದಾರೆ.
“ಸಂತ ಸಮಾಜದ ದೊಡ್ಡ ನಾಯಕ” ಇತರ ಅನೇಕ ಹುಡುಗಿಯರ ಜೀವನವನ್ನು ನಾಶಪಡಿಸಿದ್ದಾನೆ ಮತ್ತು ನನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ” ಎಂದು ತನ್ನ ಫೇಸ್ಬುಕ್ ಪೋಸ್ಟ್ ನಲ್ಲಿ ಬರೆದು ಆಕೆ ಕಣ್ಮರೆಯಾಗಿದ್ದಳು. ಒಂದು ವಾರದ ನಂತರ ಆಗಸ್ಟ್ 30 ರಂದು ಆಕೆಯನ್ನು ರಾಜಸ್ಥಾನದಲ್ಲಿ ಪತ್ತೆಹಚ್ಚಲಾಗಿತ್ತು. ಇದೇ ಸಂದರ್ಭದಲ್ಲಿ ಆಕೆ ತನಗೆ ಸಹಾಯ ಮಾಡುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೋರಿದ್ದರು.
ಇದನ್ನೂ ಓದಿ: ಬಿಜೆಪಿ ಮುಖಂಡ ಚಿನ್ಮಯಾನಂದ್ ವಿರುದ್ಧ ಅತ್ಯಾಚಾರದ ಆರೋಪ; ದೆಹಲಿಯಲ್ಲಿ ದೂರು ದಾಖಲಿಸಿದ ಯುವತಿ