Homeನ್ಯಾಯ ಪಥಎಚ್ ಎಸ್ ದೊರೆಸ್ವಾಮಿ ಶ್ರದ್ಧಾಂಜಲಿ; ನಮ್ಮ ಕಾಲದ ಪ್ರಾಣವಾಯು: ಪ್ರೊ. ಎಂ ಎಸ್ ಆಶಾದೇವಿ

ಎಚ್ ಎಸ್ ದೊರೆಸ್ವಾಮಿ ಶ್ರದ್ಧಾಂಜಲಿ; ನಮ್ಮ ಕಾಲದ ಪ್ರಾಣವಾಯು: ಪ್ರೊ. ಎಂ ಎಸ್ ಆಶಾದೇವಿ

- Advertisement -
- Advertisement -

ದುರಿತ ಕಾಲವೆಂದರೇನೆನ್ನುವುದನ್ನು ಅದರೆಲ್ಲ ಅರ್ಥಬಾಹುಳ್ಯದಲ್ಲಿ, ಕಾರ್ಯಮಾದರಿಗಳಲ್ಲಿ ಕಂಡುಣ್ಣುತ್ತಿರುವ ದಾರುಣ ಸನ್ನಿವೇಶದಲ್ಲಿ ನಾವಿದ್ದೇವೆ. ಸಾವಿರ ಬಾರಿ ಯೇಟ್ಸ್‌ನ ಈ ಮಾತು ಬುದ್ಧು ಭಾವಗಳಲ್ಲಿ ಅನುರಣಿಸುತ್ತದೆ.

“ಸಜ್ಜನರು ದುರ್ಬಲರಾಗಿಬಿಟ್ಟಿದ್ದಾರೆ
ದುಷ್ಟರೋ ಅವರೆಲ್ಲ ಶಕ್ತಿಯಲ್ಲಿ ಅಟ್ಟಹಾಸ ಮಾಡುತ್ತಿದ್ದಾರೆ”

ಈ ಮಾತು ಸುಳ್ಳು ಎನಿಸುವ ಭರವಸೆ ಮೂಡಿಸುತ್ತಿದ್ದ ಬೆರಳೆಣಿಕೆಯ ವ್ಯಕ್ತಿತ್ವಗಳಲ್ಲಿ ದೊರೆಸ್ವಾಮಿಯವರು ಮೊದಲನೆಯವರು. ಮನುಷ್ಯ ಚೈತನ್ಯದಲ್ಲಿ ಅವರಿಗಿದ್ದ ನಂಬಿಕೆಯ ಮೂಲ ಯಾವುದು ಎನ್ನುವ ಪ್ರಶ್ನೆ ಅವರನ್ನು ನೋಡಿದಾಗಲೆಲ್ಲ ಕಾಡುತ್ತಿತ್ತು. ಲಂಕೇಶರ ದಾರ್ಶನಿಕ ಎನ್ನಬಹುದಾದ ಹೇಳಿಕೆಗಳಲ್ಲಿ ಒಂದೆಂದರೆ, ’ಮನುಷ್ಯ ಮೂಲತಃ ನೀಚ’ ಎನ್ನುವುದು. ಆದರೆ ತನ್ನ, ತನ್ನ ಪರಿಸರದಲ್ಲಿರುವ ಮನುಷ್ಯರ ನೀಚತನವನ್ನು ಮೀರಿಕೊಳ್ಳಲು ಯತ್ನಿಸಬೇಕಾಗಿರುವುದೇ ನಾಗರಿಕತೆಯ ಆದ್ಯ ಕೆಲಸಗಳಲ್ಲೊಂದು ಎನ್ನುವುದನ್ನೂ ಲಂಕೇಶರು ಅಷ್ಟೇ ಗಾಢವಾಗಿ ನಂಬಿದವರಾಗಿದ್ದರು. ದೊರೆಸ್ವಾಮಿಯವರು ಈ ಮಾದರಿಯವರು. ಗಾಂಧಿವಾದ ಎನ್ನುವ ಮಾತನ್ನು ಬಳಸುವುದೇ ಅಪಾರ ಹಿಂಜರಿಕೆಯ ಸಂಗತಿಯಾಗಿರುವ ಈ ಕಾಲದಲ್ಲಿ ದೊರೆಸ್ವಾಮಿಯವರು ನಮ್ಮಲ್ಲಿ ನಮಗೇ ಕಳೆದುಹೋಗುತ್ತಿರುವ ನಂಬಿಕೆಯನ್ನು ಹುಟ್ಟಿಸಬಲ್ಲಷ್ಟು ಅದಮ್ಯ ಆಶಾವಾದಿಯಾಗಿದ್ದರು ಎನ್ನುವುದೊಂದು ಸೋಜಿಗ.

ಅವರ ಹಸನ್ಮುಖವನ್ನು ನೋಡಿದಾಗಲೆಲ್ಲ ’ಅಳು ನುಂಗಿ ನಗು ಒಮ್ಮೆ ಎನ್ನುವ ಬೇಂದ್ರೆಯವರ ಮಾತು ಮನಸ್ಸಿನಲ್ಲಿ ಹಾದುಹೋಗುತ್ತಿತ್ತು. ತೀವ್ರವಾದ ಹೋರಾಟದ ಸಂದರ್ಭದಲ್ಲಿಯೂ ಪರಿಚಿತರನ್ನು ಕಂಡಾಗ ಅವರ ಮುಖದಲ್ಲಿ ಅರಳುತ್ತಿದ್ದ ಮುಗುಳ್ನಗೆಯೇ ಅವರ ವ್ಯಕ್ತಿತ್ವದ ರೂಪಕ. ಎಂಥ ವಿಷಮ ಸನ್ನಿವೇಶವನ್ನೂ ಮನೋಬಲದಿಂದ, ನೈತಿಕ ಬಲದಿಂದ ಎದುರಿಸಬಲ್ಲೆನೆನ್ನುವ ಅಖಂಡ ಆತ್ಮವಿಶ್ವಾಸದಿಂದ ಮಾತ್ರ ಅದು ಹುಟ್ಟುತ್ತದೆಯೇನೋ.

ಅನೇಕ ಕಾರ್ಯಕ್ರಮಗಳಲ್ಲಿ ಅವರೊಡನೆ ಪಾಲ್ಗೊಂಡ ಅನುಭವಗಳನ್ನು ಹಂಚಿಕೊಳ್ಳುವುದೆಂದರೆ, ನಮ್ಮ ಕಾಲದ ಸಾಕ್ಷಿಪ್ರಜ್ಞೆಯ ಎದುರು ನಾವು ಕಕ್ಕಾಬಿಕ್ಕಿಯಾದದ್ದನ್ನು ಹೇಳಿಕೊಳ್ಳುವುದೆಂದೇ ಅರ್ಥ. ನಮ್ಮಲ್ಲಿ ನಮಗೆ ನಾಚಿಕೆ, ಆತ್ಮವಿಮರ್ಶೆ ಹುಟ್ಟುವಂತೆ ಮಾಡುತ್ತಿತ್ತು ಅವರ ಉಪಸ್ಥಿತಿ ಮತ್ತು ಮಾತು. ಕಾರ್ಯಕ್ರಮವೊಂದರಲ್ಲಿ ನಾವಿಬ್ಬರೂ ಮುಖ್ಯ ಅತಿಥಿಗಳು. ಆದರೆ ಆಯೋಜಕರು ಕರೆದಿದ್ದ ಇತರ ’ಗಣ್ಯರ ಮಾತುಗಳು ಮುಗಿಯುತ್ತಲೇ ಇಲ್ಲ. ಒಬ್ಬರಾದ ಮೇಲೊಬ್ಬರು ಮಾತಿನಮಲ್ಲರು, ಮಾತಿನ ಮಳೆ ಸುರಿಸುತ್ತಲೇ ಇದ್ದರು. ಕೊನೆಗೆ ಉಳಿದ ನಮ್ಮಿಬ್ಬರಲ್ಲಿ ಮೊದಲು ದೊರೆಸ್ವಾಮಿಯವರನ್ನು ಆಹ್ವಾನಿಸಿದಾಗ ಈ ಹಿರಿಯರು, ಇರಿ ಮೊದಲು ಆಶಾತಾಯಿಯವರ ಮಾತು ಕೇಳೋಣ ಎಂದು ಒತ್ತಾಯಿಸಿ ನನಗೇ ಮೊದಲು ಮಾತನಾಡಹಚ್ಚಿದರು. ಒಳಗಿದ್ದ ಅಸಹನೆಯನ್ನೆಲ್ಲ ಮಾತಿನಲ್ಲಿ ನಾನು ಹೊರಹಾಕಿದೆ. ಗಾಂಧಿಯವರೇನಾದರೂ ಈ ಸಭೆಯಲ್ಲಿ ಇದ್ದಿದ್ದರೆ, ಅಯ್ಯಾ, ಪುರುಷೋತ್ತಮರಿರಾ,

ಶತಮಾನಗಳಿಂದ ನೀವು ಆಡಿದ್ದು, ಹೆಣ್ಣುಮಕ್ಕಳು ಕೇಳಿದ್ದೇ ಆಯಿತು, ಈಗಲಾದರೂ ಅವರಿಗೆ
ಮೊದಲೇ ಮಾತನಾಡೋಕೆ ಅವಕಾಶ ಮಾಡಿಕೊಡಿ ಅಂತ ಹೇಳುತ್ತಿದ್ದರು ಎನ್ನುವ ಖಾತ್ರಿ ನನಗಿದೆ ಎಂದೆ. ಮಾತು ಮುಗಿಸಿದ ಮೇಲೆ ದೊರೆಸ್ವಾಮಿಯವರು, ನಾನು ಹೇಳಬೇಕು ಅಂದಿದ್ದನ್ನ ನೀವೇ ಹೇಳಿದ್ದು ಒಳ್ಳೆಯದಾಯಿತು ಎಂದರಲ್ಲದೆ, ಆಯೋಜಕರಿಗೆ, ಈ ಪಾಟಿ ಜನರನ್ನು ಯಾಕ್ರಿ ಮಾತನಾಡಿಸ್ತೀರಾ, ಸಮಯ ವ್ಯರ್ಥ ಅಲ್ವಾ ಅಂತ ಮುಲಾಜಿಲ್ಲದೆ ತರಾಟೆಗೆ ತೆಗೆದುಕೊಂಡರು.

ನಮ್ಮ ಕಾಲೇಜು ವಿಶ್ವವಿದ್ಯಾಲಯವಾಗುವ ಪ್ರಕ್ರಿಯೆ ನಡೆಯುತ್ತಿತ್ತು. ಅದಕ್ಕೆ ಅನೇಕ ತೊಡಕುಗಳು. ದೊರೆಸ್ವಾಮಿಯವರು ಸಿಕ್ಕಾಗೊಮ್ಮೆ, ಇದಕ್ಕೆ ಏನಾದರೂ ಮಾಡಬೇಕು ಅಂದೆ, ’ಅದಕ್ಕೇನು, ನಡಿಯಮ್ಮ, ಯಾವತ್ತು, ಎಲ್ಲಿ, ಎಷ್ಟು ಹೊತ್ತಿಗೆ ಬರಬೇಕು ಹೇಳಿ’ ಅಂತ ನಿಂತ ಕಾಲ ಮೇಲೆ ಹೇಳಿದರು. ಅಲ್ಲಾ, ನಿಮಗೆ ತೊಂದರೆ.. ಅಂತ ನಾನು ತೊದಲಿದರೆ, ’ಇಂಥ ಕೆಲಸಗಳನ್ನ ಮಾಡದೇ ಇದ್ದರೆ ತೊಂದರೆ’ ಎಂದು ನನ್ನ ಸಂಕೋಚವನ್ನು ಅಲ್ಲಿಯೇ ತೊಡೆದರು. ಗೆಳತಿ ಗೌರಿಯ ಹತ್ಯೆಯ ಸಂದರ್ಭದಲ್ಲಿ ಎಲ್ಲರಿಗೂ ಅವರು ತುಂಬಿದ ಧೈರ್ಯದ ಬಗ್ಗೆ ಹೆಚ್ಚು ಹೇಳಬೇಕಿಲ್ಲ. ಒಂದು ಪತ್ರಿಕಾಗೋಷ್ಠಿಯನ್ನು ಆಯೋಜಿಸಿ ಕವಿತಾ, ಶಿವಸುಂದರ್ ಎಲ್ಲರೂ ಯಾರು ಯಾರು ಬರುತ್ತಾರೋ, ಬರುವುದಿಲ್ಲವೋ ಎಂದು ಪ್ರೆಸ್‌ಕ್ಲಬ್‌ನಲ್ಲಿ ಕಾಯುತ್ತಾ ಕೂತಿದ್ದಾಗ,
ಶಿವಸುಂದರ್ ’ಬಂದ್ರಲ್ಲಾ ಎಂದರು. ದೂರದಲ್ಲಿ ದೊರೆಸ್ವಾಮಿಯವರನ್ನು ನೋಡಿದ್ದೇ ಇನ್ನು ಯಾರು ಬಂದರೇನು, ಬಿಟ್ಟರೇನು ಅನ್ನಿಸಿ ಬಿಟ್ಟಿತು ನಮಗೆಲ್ಲ! ಟೌನ್‌ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು, ಪ್ರಜಾಪ್ರಭುತ್ವವನ್ನು ಕುರಿತಂತೆ, ಈ ಹೊತ್ತಿನಲ್ಲಿ ನಾವು ಮೈಮರೆತರೆ ಅನುಭವಿಸಬೇಕಾದ ನರಕದ ಬಗ್ಗೆ ಆಡಿದ ಮಾತುಗಳು, ಅವುಗಳಲ್ಲಿದ್ದ ಕಾಣ್ಕೆ, ಸದ್ಯ ಭಾರತದ ಸಂದರ್ಭವನ್ನು ಕುರಿತಂತೆ ಸತ್ಯದ ನವದರ್ಶನ ಮಾಡಿಸಿತು.

ಅವರೊಡನೆಯ ಕೊನೆಯ ಭೇಟಿ ಆನ್‌ಲೈನ್‌ನಲ್ಲಿ ಏಪ್ರಿಲ್ 10ರಂದು ನಡೆದ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ. ನಾವೆಲ್ಲ ಅವರ ಬಗ್ಗೆ ಮಾತನಾಡುತ್ತಿದ್ದರೆ, ಸಂಕೋಚದಿಂದ ಮುದುಡಿದ ದೇಹದಲ್ಲಿ, ಆದರೆ ಆಗಲೂ ಅದೇ ಮುಗುಳ್ನಗೆ ಅವರ ಮುಖದಲ್ಲಿ ಅವರಿದ್ದರು. ನಾನೇನೋ ಬಹಳ ಸಾಧನೆ ಮಾಡಿದವನ ಹಾಗೆ ಇವರೆಲ್ಲ ಮಾತನಾಡುತ್ತಿದ್ದಾರೆ, ಆದರೆ ಇದೆಲ್ಲ ನಾನು, ನಾವು ಮಾಡಲೇಬೇಕಾದ ಕೆಲಸಗಳಲ್ಲವೆ ಎಂದರು. ಅಹಂಕಾರ, ಸ್ವಾರ್ಥ ಸೋಕದ ವ್ಯಕ್ತಿತ್ವ ಹೇಗಿರುತ್ತದೆ ಎನ್ನುವುದರ ಸಾಕಾರ ರೂಪ ದೊರೆಸ್ವಾಮಿಯವರು.

104ರ ವಯಸ್ಸಿನಲ್ಲಿ ತೀರಿಕೊಂಡ ದೊರೆಸ್ವಾಮಿಯವರ ಬಗೆಗೆ ಇದನ್ನು ಬಯಸುವುದು ದುರಾಸೆಯೇನೋ, ಆದರೂ ಕವಿತೆಯ ಆ ಸಾಲು ನೆನಪಾಗುತ್ತದೆ ಅಯಾಚಿತವಾಗಿ..
’ಮಹಾತ್ಮಾ ನೀನಿನ್ನೀಸು ಕಾಲ ಬದುಕಬೇಕಿತ್ತು’

ಪ್ರೊ. ಎಂ.ಎಸ್ ಆಶಾದೇವಿ
ವಿಮರ್ಶಕಿ, ಲೇಖಕಿ ಮತ್ತು ಪ್ರಾಧ್ಯಾಪಕಿ. ಪ್ರಸ್ತುತ ಬೆಂಗಳೂರಿನ
ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಸ್ತ್ರೀಮತವನುತ್ತರಿಸಲಾಗದೆ’, ‘ನಡುವೆ ಸುಳಿವಾತ್ಮ ಅವರ ವಿಮರ್ಶಾ ಕೃತಿಗಳು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...