Homeಮುಖಪುಟನಗುವನ್ನು ಕಠೋರ ಜಗತ್ತಿನ ಎದುರು ಗುರಾಣಿಯಾಗಿ, ಕಾವ್ಯವನ್ನು ಪ್ರತಿಭಟನೆಯ ಅಸ್ತ್ರವಾಗಿ ಬಳಸಿದ ಸಿದ್ಧಲಿಂಗಯ್ಯನವರು

ನಗುವನ್ನು ಕಠೋರ ಜಗತ್ತಿನ ಎದುರು ಗುರಾಣಿಯಾಗಿ, ಕಾವ್ಯವನ್ನು ಪ್ರತಿಭಟನೆಯ ಅಸ್ತ್ರವಾಗಿ ಬಳಸಿದ ಸಿದ್ಧಲಿಂಗಯ್ಯನವರು

- Advertisement -
- Advertisement -

ಕನ್ನಡದಲ್ಲಿ ಹಾಸ್ಯ ಬರವಣಿಗೆಯ ಒಂದು ಸಂಪ್ರದಾಯವಿದೆ. ಇದು ಪತ್ರಿಕೆಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಇಂದಿಗೂ ಜನಪ್ರಿಯವಾಗಿದೆ. ತಮಾಷೆಗೆ ಒಳಗಾಗುವವರು ದಡ್ಡ, ಪೆದ್ದ ಅಥವಾ ಸಮಾಜದ ಕೆಳವರ್ಗದವರೇ ಆಗಿರುತ್ತಾರೆ. ಸಿದ್ಧಲಿಂಗಯ್ಯ ಅವರ ಸಾಹಿತ್ಯಕ್ಕೆ ಬಂದರೆ, ಬಡವರ ಮೇಲೆ ಪ್ರಯೋಗ ಮಾಡುವ ಕ್ರೂರ ಹಾಸ್ಯ ಎಲ್ಲೂ ಕಾಣುವುದಿಲ್ಲ. ಎಷ್ಟೋ ಕಡೆ ಅದು ಉಳ್ಳವರನ್ನು ಎಚ್ಚರಿಸುವ ಹಾಸ್ಯವಾಗಿರುತ್ತದೆ. ಅದರಲ್ಲಿ ಚಾಪ್ಲಿನ್ ಮಾಡುವಂತಹ ಹಾಸ್ಯ ಸಿನಿಮಾದ ಒಂದು ಗುಣವಿದೆ. ಅನ್ಯಾಯವನ್ನು ಎತ್ತಿತೋರಿಸಲು ನಗುವನ್ನೇ ಅಸ್ತ್ರವಾಗಿಸಿಕೊಳ್ಳುವುದು ಅವರ ವಿಧಾನ ಎಂದು ತೋರುತ್ತದೆ.

ಅವರ ಬಾಲ್ಯದ ಘಟನೆ ಒಂದು ಹೇಳುತ್ತಾರೆ. ಒಂದು ದಿನ ಅವರು ಶಾಲೆಗೆ ಹೊರಡುವಾಗ ತಡವಾಯಿತು ಎಂದು ಅವರ ಅಕ್ಕ ನಡುದಾರಿಯಲ್ಲಿ ಬಂದು ಮುದ್ದೆಯನ್ನು ಕೊಡುತ್ತಾರೆ. ಅದನ್ನು ತಮ್ಮ ಚೀಲದಲ್ಲಿ ಹಾಕಿಕೊಂಡು ಶಾಲೆಗೆ ಹೋಗುತ್ತಾರೆ. ಆದರೆ ಶಾಲೆಯಲ್ಲಿ ಯಾರೋ ಹುಡುಗ ತನ್ನ ಪೆನ್ಸಿಲ್ ಕಳೆದುಹೋಯಿತು ಎಂದು ಶಿಕ್ಷಕರಿಗೆ ದೂರು ಕೊಟ್ಟಿರುತ್ತಾನೆ. ಆಗ ಟೀಚರ್ ಎಲ್ಲ ಮಕ್ಕಳ ಶಾಲಾಚೀಲಗಳನ್ನು ಹುಡುಕಲು ಶುರು ಮಾಡುತ್ತಾರೆ. ಸಿದ್ಧಲಿಂಗಯ್ಯ ಅವರು ಮಾತ್ರ ತನ್ನ ಚೀಲವನ್ನು ಪರಿಶೀಲಿಸಲು ಬಿಡುವುದಿಲ್ಲ. ಕೊನೆಗೆ ಶಿಕ್ಷಕರು ಬಲವಂತವಾಗಿ ಚೀಲವನ್ನು ತೆರೆದು ನೋಡಿದಾಗ ಅದರಲ್ಲಿ ಪೆನ್ಸಿಲ್ ಸಿಗದೆ ಮುದ್ದೆ ಸಿಗುತ್ತದೆ. ಅದನ್ನು ನೋಡಿ ಮಕ್ಕಳು ’ಮುದ್ದೆ, ಮುದ್ದೆ’ ಎಂದು ಅವರನ್ನು ಅಣಕಿಸಲು ಪ್ರಾರಂಭಿಸುತ್ತಾರೆ. ಹೀಗೆ ಮಕ್ಕಳಿಂದ ಹಿಡಿದು ಇಡೀ ಸಮುದಾಯದಲ್ಲಿ ಯಾವ ರೀತಿಯಲ್ಲಿ ಅಸೂಕ್ಷ್ಮತೆ ಇರುತ್ತದೆ ಎಂಬುದನ್ನು ಅವರು ತೋರುತ್ತಾ ಹೋಗುತ್ತಾರೆ.

ಚಾರ್ಲಿ ಚಾಪ್ಲಿನ್ ತನ್ನ ಆತ್ಮ ಚರಿತ್ರೆಯಲ್ಲಿ ಹೇಳುತ್ತಾನೆ : “ಬಾಲ್ಕನಿಯಿಂದ ಬಿದ್ದ ವಸ್ತುವೊಂದು ಬಡವನ ತಲೆ ಮೇಲೆ ಬಿದ್ದರೆ ಅದು ಹಾಸ್ಯವಲ್ಲ, ಯಾರೂ ನಗುವುದಿಲ್ಲ. ಆದರೆ ದರ್ಪದಿಂದ ಮೆರೆಯುವ ಸಾಹುಕಾರನ ತಲೆ ಮೇಲೆ ಬಿದ್ದರೆ ಅದು ತುಂಬಾ ತಮಾಷೆಯಾಗಿ ಕಾಣುತ್ತದೇ” ಎಂದು. ಸಿದ್ಧಲಿಂಗಯ್ಯ ಅವರು ಹಾಸ್ಯ ಸಾಹಿತ್ಯವನ್ನು ಇದೇ ರೀತಿ ಮರುವ್ಯಾಖ್ಯಾನಿಸುತ್ತಾರೆ. ಏನೂ ತಿಳಿಯದವರನ್ನು, ಏನೂ ಇಲ್ಲದವರನ್ನು ಆಡಿಕೊಳ್ಳುವುದು ಏಕೆ ತಪ್ಪು ಎಂದು ಸಿದ್ಧಲಿಂಗಯ್ಯ ಅವರು ತಮ್ಮ ಬರಹಗಳ ಮೂಲಕ ತೋರಿಸಿಕೊಡುತ್ತಾರೆ.

’ಇಕ್ರಲಾ, ವದೀರ್‍ಲಾ’ ತುಂಬಾ ಹೆಸರು ಮಾಡಿದ ಪದ್ಯ. ಅದನ್ನು ಹೇಗೆ ಬರೆದಿದ್ದು ಎಂದು ಅವರು ಒಮ್ಮೆ ಹೇಳಿದ್ದರು. ಐಎಎಂನ ಕೆಲವರು, ದಲಿತರು ಹೇಗೆ ಬದುಕುತ್ತಾರೆ ಎಂದು ತಿಳಿಯಲು ತಮಿಳುನಾಡಿನ ದಲಿತರ ಕೇರಿಯಲ್ಲಿ 15 ದಿನಗಳು ಉಳಿದ ಪ್ರಸಂಗ ನಡೆಯಿತಂತೆ. ಅದಾದ ನಂತರ ಅಲ್ಲಿನ ಜನರು ತುಂಬಾ ನೋವಿನಿಂದ ಸಿದ್ಧಲಿಂಗಯ್ಯ ಅವರೊಂದಿಗೆ ಅದರ ಬಗ್ಗೆ ಹೇಳಿಕೊಳ್ಳುತ್ತಾರೆ. ಆಗ ಆ ಪದ್ಯ ಬರೆದಿದ್ದು ಎಂದು ಅವರು ಹೇಳಿಕೊಂಡಿದ್ದಾರೆ. ಜನರ ಅಸೂಕ್ಷ್ಮತೆ ಹೇಗಿರುತ್ತದೆ ಎಂಬುದನ್ನು ನೋಡಿ ರೊಚ್ಚಿನಿಂದ ಅವರು ಬರೆದ ಪದ್ಯ ಅದು. ಮೊದಲೆಲ್ಲಾ ರೋಷದಲ್ಲಿ ಬರೆಯುತ್ತಿದ್ದ ಅವರ ವರಸೆ ಬರಬರುತ್ತ ಸೌಮ್ಯವಾಗಿ ಬದಲಾಯಿತು. ಅವರ ಆತ್ಮಕಥನದಲ್ಲಿ ಸಮಾನತೆಯ ಬಗೆಗಿನ ಚಿಂತನೆ, ಮೂಢನಂಬಿಕೆ ವಿರುದ್ಧದ ಚಿಂತನೆಯನ್ನು ನಾವು ಕಾಣಬಹುದು, ಆದರೆ ಮೊದಲಿನ ಆಕ್ರೋಶ ಅಲ್ಲಿಲ್ಲ.

ಒಬ್ಬ ಸ್ವಾಮೀಜಿ ಪತ್ರಿಕೆಯಲ್ಲಿ ’ನಾನು ದೇವರನ್ನು ತೋರಿಸುತ್ತೇನೆ’ ಎಂದು ಜಾಹಿರಾತು ನೀಡುತ್ತಾನೆ. ಸಿದ್ಧಲಿಂಗಯ್ಯ ಮೂರ್ನಾಲ್ಕು ಸ್ನೇಹಿತ ಜೊತೆಗೂಡಿ ಅಲ್ಲಿಗೆ ತೆರಳುತ್ತಾರೆ. ದೇವರನ್ನು ತೋರಿಸಿ ಎಂದು ಹೇಳುತ್ತಾರೆ. ಆಗ ಸ್ವಾಮೀಜಿ ’ನಾನೇ ದೇವರು’ ಎಂದು ಹೇಳುತ್ತಾನೆ. ’ಯಾವ ದೇವರು?’ ಎಂದು ಕೇಳಿದಾಗ ’ಶಿವ’ ಎಂದು ಹೇಳುತ್ತಾನೆ. ಆಗ ಸಿದ್ದಲಿಂಗಯ್ಯ ಅವರು, ’ನೀವೊಂದು ಕೊಲೆ ಮಾಡಿದ್ದೀರಿ’ ಎನ್ನುತ್ತಾರೆ. ಸ್ವಾಮೀಜಿ ತಬ್ಬಿಬ್ಬಾದಾಗ, ’ನೀವು ದೊಡ್ಡದಾಗಿ ಕಣ್ಣು ಬಿಟ್ಟು ಆ ಮನ್ಮಥನನ್ನ ಕೊಲೆ ಮಾಡಿದ್ದೀರಾ,’ ಎಂದು ಹೇಳುತ್ತಾರೆ. ಆಗ ಸ್ವಾಮೀಜಿ ಹೇಳೋದು: ’ಹೋ ಹೌದು ಅವನು ತುಂಬಾ ತಲೆಹರಟೆ ಮಾಡುತ್ತಿದ್ದ. ಅದಕ್ಕೆ ಹಾಗೆ ಮಾಡಿದೆ.’ ’ತಮ್ಮ ವಾಸ ಎಲ್ಲಿ ಅಂದರೆ ಕೈಲಾಸ ಪರ್ವತ ಎಂದು ಹೇಳುತ್ತಾನೆ. ಅದಕ್ಕೆ ಸಿದ್ಧಲಿಂಗಯ್ಯ ಅವರು, ’ಚೀನಾದವರು ದಾಳಿ ಮಾಡಿದರಲ್ಲ ನೀವ್ಯಾಕೆ ತಡೆಯಲಿಲ್ಲ?’ ಎಂದು ಕೇಳುತ್ತಾರೆ.
’ಇಂಡಿಯಾದವರಿಗೆ ನನ್ನ ಮೇಲೆ ಭಕ್ತಿ ಕಡಿಮೆಯಾಗಿತ್ತು, ಅವರಿಗೆ ಸ್ವಲ್ಪ ಬುದ್ಧಿ ಕಲಿಸೋಣ ಎಂದು ನಾನೇ ಅವರನ್ನು ಛೂ ಬಿಟ್ಟೆ,’ ಎಂದು ಸ್ವಾಮೀಜಿ ಹೇಳುತ್ತಾರೆ.

ಹೀಗೆ ಸಿದ್ಧಲಿಂಗಯ್ಯ ಅವರ ಜೀವನದುದ್ದಕ್ಕೂ ತುಂಟತನದಿಂದ ಸತ್ಯವನ್ನು ಬಯಲು ಮಾಡುವಂತಹ ಸುಮಾರು ಘಟನೆ ನಡೆದಿದೆ. ಅವರು ದೇವರನ್ನು ನಂಬಲ್ಲ ಎಂದು ಕೊನೆಯವರೆಗೂ ಹೇಳುತ್ತಿದ್ದರು. ಮೂಢನಂಬಿಕೆಗಳ ವಿರುದ್ಧ ಇದ್ದರು. ಪ್ರತಿನಿತ್ಯ ನಡೆಯುವ ಘಟನೆಯನ್ನು ತುಂಟತನದಿಂದಲೆ ನೋಡುತ್ತಿದ್ದರು. ಅವರ ಸುತ್ತಮುತ್ತಲು ಇರುವವರನ್ನು ಯಾವ ರೀತಿಯಲ್ಲಿ ನಗಿಸುತ್ತಿದ್ದರೆಂದರೆ ಗಂಭೀರ ಮುಖ ಹಾಕಿಕೊಂಡು ಕೂರುವುದು ಕಷ್ಟವಾಗಿರುತ್ತಿತ್ತು. ಒಮ್ಮೆ ಜೋಗ ಜಲಪಾತ ನೋಡಿ ಮೂರು ನಾಲ್ಕು ಜನ ಹೆಗ್ಗೋಡಿಗೆ ಹಿಂತಿರುಗಿದ್ದೆವು. ತಕ್ಷಣ ಒಳಗಡೆ ಹೋಗಿ ಮುಸುಕು ಹಾಕಿ ಮಲಗಿಬಿಟ್ಟರು. ’ನಾವಿನ್ನೂ ಒಳಗಡೆ ಕಾಲಿಟ್ಟಿದ್ದಷ್ಟೇ, ಅಷ್ಟರೊಳಗೆ ಮಲಗಿಬಿಟ್ಟಿದ್ದೀರಲ್ಲ?’ ಎಂದು ಅಚ್ಚರಿಯಿಂದ ಕೇಳಿದೆ. ಅದಕ್ಕೆ ಅವರು, ’ನೋಡಿ ನಾನು ಹೇಗೆಂದರೆ, ಸಮಯ ವೇಸ್ಟ್ ಮಾಡುವುದಿಲ್ಲ. ಐದು ನಿಮಿಷ ಸಿಕ್ಕರೂ ಮಲಗಿ ನಿದ್ದೆಮಾಡಿಬಿಡುತ್ತೇನೆ,’ ಎಂದು ಹೇಳಿದ್ದರು.

ದಲಿತ ಸಂಘರ್ಷ ಸಮಿತಿ ಹೇಗೆ ಕಟ್ಟಿದ್ದು ಎಂದು ಕೂಡ ಅವರು ಬರೆದುಕೊಂಡಿದ್ದಾರೆ. ಕೊನೆಗೆ ಅವರು ಬಿಜೆಪಿ ಜೊತೆಗಿನ ಸಂಪರ್ಕ ಮತ್ತು ಅಮಿತ್ ಷಾ ಅವರನ್ನು ಭೇಟಿಯಾಗಿದ್ದರ ಬಗ್ಗೆ ತುಂಬಾ ಟೀಕೆಗಳು ಬಂದವು. ಆದರೆ ತಮ್ಮ ರಾಜಕೀಯ ನಿಲುವನ್ನು ಬದಲಾಯಿಸಿಲ್ಲ ಎಂದೇ ಹೇಳುತ್ತಿದ್ದರು. ’ನಾನಿನ್ನೂ ನಾಸ್ತಿಕನಾಗಿಯೆ ಇದ್ದೇನೆ. ದಲಿತರ ಪರವಾಗಿ, ಕನ್ನಡದ ಪರವಾಗಿ, ಇರುವ ಬೇಡಿಕೆಯನ್ನು ಇಟ್ಟು ಒತ್ತಾಯ ಮಾಡಿದೆ,’ ಎಂದು ಹೇಳುತ್ತಿದ್ದರು. ಈ ನಿಲುವನ್ನು ಅನುಮಾನದಿಂದಲೇ ಅವರ ಹೋರಾಟದ ಜೊತೆಗಾರರು ಕಂಡಿದ್ದು ಎಲ್ಲರಿಗೂ ಗೊತ್ತಿರುವ ವಿಷಯವೇ.

ಅವರಿಗೆ ಎಲ್ಲೆಡೆ ಸ್ನೇಹಿತರಿದ್ದರು ಎನ್ನುವುದಂತೂ ನಿಜ. ಯಡಿಯೂರಪ್ಪ ಅವರನ್ನು ಕೊಂಡಾಡಿ ಬಸವಣ್ಣ ಎಂದು ಪರಾಕು ಹಾಕಿದರು ಎಂಬ ಆಪಾದನೆ ಅವರ ಮೇಲೆ ಇತ್ತು. ಅದು ತಪ್ಪಾಗಿ ವರದಿಯಾಗಿದೆ ಎಂದು ಅವರು ಹೇಳಿದ ಒಂದು ವಿಡಿಯೋ ಇಂಟರ್ನೆಟ್‌ನಲ್ಲಿ ಕಾಣಬಹುದು.

ಆತ್ಮಚರಿತ್ರೆ ಸಾಮಾನ್ಯವಾಗಿ ಇಂತಹ ಜಾಗದಲ್ಲಿ ಹುಟ್ಟಿದೆ, ಇಲ್ಲಿ ಬೆಳೆದೆ ಎಂಬ ರೀತಿ ಬರೆಯುತ್ತಾರೆ. ಆದರೆ ಸಿದ್ಧಲಿಂಗಯ್ಯನವರು ಅದಕ್ಕೆ ಬದಲಾಗಿ ಪ್ರಸಂಗಗಳ ಮೂಲಕ ತಮ್ಮ ಜೀವನದ ಕತೆಯನ್ನು ಹೇಳುತ್ತಾರೆ. ಅವರ ಆತ್ಮಚರಿತ್ರೆಯನ್ನು ಓದಿದಾಗ ಅವರು ತಮ್ಮ ಬಗ್ಗೆ ಬರೆಯುವುದಕ್ಕಿಂತ, ತಮ್ಮ ಸುತ್ತಮುತ್ತಲಿನ ಜನರ ಬಣ್ಣ ಬಣ್ಣದ ಬದುಕನ್ನು ಚಿತ್ರಿಸುವುದೇ ಹೆಚ್ಚಾಗಿದೆ. ಹಾಗಾಗಿ ಆತ್ಮ ಚರಿತ್ರೆ ಅನ್ನುವುದನ್ನೂ ಅವರು ಕನ್ನಡ ಸಂದಂರ್ಭದಲ್ಲಿ ಮರುವ್ಯಾಖ್ಯಾನಿಸಿದರು. ಆ ಪ್ರಕಾರವನ್ನು ಹೀಗೂ ಬರೆಯಬಹುದು ಎಂದು ತೋರಿಸಿಕೊಟ್ಟವರು ಅವರೇ ಆಗಿದ್ದಾರೆ. ನನಗೆ ಗೊತ್ತಿದ್ದ ಮಟ್ಟಿಗೆ ಆ ರೀತಿಯಾದ ಆತ್ಮ ಚರಿತ್ರೆಗಳು ಯಾವುದೂ ಇಲ್ಲ.

ಅವರ ಕಾವ್ಯದ ಎರಡು ಮಗ್ಗುಲನ್ನು ಎಲ್ಲರೂ ಗುರುತಿಸುತ್ತಾರೆ. ಮೊದಲಿನದು ರೊಚ್ಚಿನ, ಆಕ್ರೋಶದ ಕಾವ್ಯ, ಮತ್ತು ಎರಡನೆಯದ್ದು ನವಿರು ಪ್ರೇಮ ಕಾವ್ಯ. ’ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು’ ಥರದ ಹಾಡುಗಳು ಸಮುದಾಯ ಗೀತೆಗಳೂ, ಹೋರಾಟ ಗೀತೆಗಳೂ, ಸೊಗಸೆನಿಸುವ ಕಾವ್ಯವೂ ಒಟ್ಟೊಟ್ಟಿಗೆ ಆಗಿವೆ. ಅವರು ಎರಡನೆ ಹಂತದಲ್ಲಿ ಬರೆದಂತಹ ಪ್ರೇಮ ಗೀತೆಗಳ ಬಗ್ಗೆ ಬಂದ ಟೀಕೆಯ ಬಗ್ಗೆಯೂ ತಮಾಷೆಯಾಗೇ ಮಾತಾಡುತ್ತಿದ್ದರು. ಮದರಾಸಿಗೆ ಹೋಗಿ ಸಿನಿಮಾ ಹಾಡು ಬರೆದು ಬಂದ ಅನುಭವವನ್ನೂ ಕೀಟಲೆ ಮಾಡಿಕೊಂಡು ಹೇಳಿಕೊಳ್ಳುತ್ತಿದ್ದರು.

ಕನ್ನಡ ಕಾವ್ಯದಲ್ಲಿ ಪ್ರತಿಭಟನೆಯ ಅಂಶ ಮೊದಲಿನಿಂದಲೂ ಇದ್ದರೂ, ಸಿದ್ಧಲಿಂಗಯ್ಯ ಅವರ ಬರಹದ ಭಾಷೆ ಹೊಸದಾಗಿದೆ. ಈ ಹಿಂದೆ ಶಿಷ್ಟ ಭಾಷೆ ಎಂದು ಯಾವುದು ಅನ್ನಿಸಿಕೊಂಡಿತ್ತೋ ಅದಕ್ಕೆ ಎದುರಾಗುವಂತಹ ಹಾಗೂ ಅದನ್ನು ಮೀರಿದ ತೀವ್ರತೆ ತೋರಿಸುವ ಭಾಷೆಯನ್ನು ಅವರು ಬಳಸಿದರು. ಬಹಳ ಜನ ಸ್ನೇಹಿತರ ಜೊತೆಗೂಡಿ ಚಳುವಳಿಗಳನ್ನು ಹುಟ್ಟುಹಾಕುವುದರಲ್ಲಿ, ಅದಕ್ಕೊಂದು ಸೈದ್ಧಾಂತಿಕ ದಿಕ್ಕು ತೋರುವ ನಿಟ್ಟಿನಲ್ಲಿ ಮಾಡಿದ ಕೆಲಸವನ್ನು ಸ್ವಲ್ಪ ಕಡಿಮೆಯೇ ಬರೆದುಕೊಂಡಿದ್ದಾರೆ. ಡಿ.ಆರ್. ನಾಗರಾಜ್ ಮತ್ತು ಅವರ ಸಂಬಂಧ ಬಹಳ ಸ್ನೇಹದ ಮತ್ತು ತುಂಟತನದ ಸಂಬಂಧವಾಗಿತ್ತು. ಅವರು ಒಬ್ಬರನ್ನೊಬ್ಬರು ತಮಾಷೆ ಮಾಡಿಕೊಂಡೇ ಇರುತ್ತಿದ್ದರು.

ನಗುವನ್ನು ಕಠೋರ ಜಗತ್ತಿನ ಎದುರು ಹೇಗೆ ಗುರಾಣಿಯಾಗಿ ಬಳಸಬಹುದು ಎನ್ನುವುದನ್ನು ತೋರಿಸಿಕೊಟ್ಟಂತೆಯೇ, ಪ್ರತಿಭಟನೆಯ ಹೊಸ ದನಿಯೊಂದನ್ನು ಅವರು ಕನ್ನಡ ಸಾರಸ್ವತ ಲೋಕಕ್ಕೆ ತೋರಿಸಿಕೊಟ್ಟಿದ್ದಾರೆ.

(ಬರಹ ರೂಪಕ್ಕೆ): ಬಾಪು ಅಮ್ಮೆಂಬಳ

ಎಸ್ ಆರ್ ರಾಮಕೃಷ್ಣ

ಎಸ್ ಆರ್ ರಾಮಕೃಷ್ಣ
ಹಿರಿಯ ಪತ್ರಕರ್ತ ಮತ್ತು ಸಂಗೀತ ನಿರ್ದೇಶಕ. ಸಿದ್ಧಲಿಂಗಯ್ಯವನವರ ಆತ್ಮಕತೆ ’ಊರುಕೇರಿ’, ಅನಂತಮೂರ್ತಿಯವರ ಆತ್ಮಕತೆ ’ಸುರಗಿ’ಯನ್ನು ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ಗಿರೀಶ್ ಕಾಸರವಳ್ಳಿಯವರ ’ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಸೇರಿದಂತೆ ಹಲವು ಸಿನಿಮಾಗಳಿಗೆ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಸೇವೆಸಲ್ಲಿಸುತ್ತಿದ್ದಾರೆ.


ಇದನ್ನೂ ಓದಿ: ‘ಜೈಲನ್ನು ತೋರಿಸಿ ನಮ್ಮನ್ನು ಬೆದರಿಸಲಾಗದು’ – ಬಿಡುಗಡೆಗೊಂಡ ವಿದ್ಯಾರ್ಥಿ ಹೋರಾಟಗಾರರ ಘೋಷಣೆಗಳಿವು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...