ಮಾಲೆಗಾಂವ್ ಭಯೋತ್ಪಾದಕ ಸ್ಪೋಟದ ಪ್ರಮುಖ ಆರೋಪಿ, ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್ ಅವರ ಕುರಿತಂತೆ, ‘ಪ್ರಧಾನಿ ಮೋದಿ ಮನಸು ಬದಲಾಯಿಸಿರುವ ಹಾಗೆ ತೋರುತ್ತಿದೆ’ ಎಂದು ಕಾಂಗ್ರೆಸ್ ಸಂಸದ ಮಾಣಿಕಂ ಟ್ಯಾಗೋರ್ ಶುಕ್ರವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮವಾರ ಅಂತರ್ರಾಷ್ಟ್ರೀಯ ಯೋಗ ದಿನಾಚರಣೆ ನಡೆಯಲಿದೆ. ಅಂದು ಸಂಸದರಿಗಾಗಿ ಲೋಕಸಭೆಯು ನಾಲ್ಕು ಆನ್ಲೈನ್ ಅಧಿವೇಶನಗಳನ್ನು ಆಯೋಜಿಸಿದೆ. ಅದರಲ್ಲಿ ಒಂದು ಅಧಿವೇಶನವನ್ನು ಉದ್ದೇಶಿಸಿ ಬಿಜೆಪಿಯ ವಿವಾದಾತ್ಮಕ ಸಂಸದೆ ಪ್ರಜ್ಞಾ ಠಾಕೂರ್ ಮಾತನಾಡಲಿದ್ದಾರೆ. ಇದಕ್ಕೆ ಕಾಂಗ್ರೆಸ್ ಪಕ್ಷವು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಮಹಾತ್ಮ ಗಾಂಧಿಯವರ ಹಂತಕ ನಾಥುರಾಮ್ ಗೋಡ್ಸೆಯನ್ನು 2019 ರ ಚುನಾವಣಾ ಪ್ರಚಾರದ ಸಂದರ್ಭದಲ್ಲಿ “ದೇಶಭಕ್ತ” ಎಂದು ವೈಭವೀಕರಿಸಿ ಹೇಳಿಕೆ ನೀಡಿದ್ದ ಪ್ರಜ್ಞಾ ಠಾಕೂರ್ ಅವರ ಟೀಕೆಗಳನ್ನು ಪ್ರಧಾನಿ ಮೋದಿ ಖಂಡಿಸಿದ್ದರು. ಈ ಹೇಳಿಕೆಗಾಗಿ ತಾನು ಅವರನ್ನು ಮನಪೂರ್ವಕವಾಗಿ ಕ್ಷಮಿಸುವುದಿಲ್ಲ ಎಂದು ಹೇಳಿದ್ದರು.
ಇದನ್ನೂ ಓದಿ: ಪ್ರಗ್ಯಾ ಠಾಕೂರ್ ಸಹಚರರಿಗೆ ಗೌರಿ ಲಂಕೇಶ್ ಹತ್ಯೆಯ ಜೊತೆಗೆ ನಂಟು: ಕೋರ್ಟ್ ಗೆ ಹೇಳಿದ ಎಸ್ಐಟಿ
ವಿವಾದದ ಕುರಿತು ಪ್ರಧಾನಿ ಮೋದಿ ನೀಡುವ ಹೇಳಿಕೆಯ ವಿಡಿಯೋವನ್ನು ತನ್ನ ಟ್ವೀಟ್ನಲ್ಲಿ ಪೋಸ್ಟ್ ಮಾಡಿರುವ ತಮಿಳುನಾಡಿನ ಕಾಂಗ್ರೆಸ್ ಸಂಸದ ಮಾಣಿಕಂ ಟ್ಯಾಗೋರ್, “ಮೋದಿ ಸಾಹೀಬ್ ಅವರು ಪ್ರಜ್ಞಾ ಠಾಕೂರ್ ಅವರ ಕುರಿತಂತೆ ಮನಸ್ಸನ್ನು ಬದಲಾಯಿಸಿದ್ದೀರಾ? ಪ್ರಧಾನ ಮಂತ್ರಿಯ ಕನಸಿನ ಯೋಜನೆಯಾದ ಯೋಗ ದಿನದಂದು ಎಲ್ಲಾ ಸಂಸದರಿಗೆ ಅವರು ಮುಖ್ಯ ಅತಿಥಿಯಾಗಲಿದ್ದಾರೆ. ಇದು ಮನಪೂರ್ವಕವಾಗಿ ಕ್ಷಮಿಸಿರುವುದನ್ನು ತೋರಿಸುತ್ತದೆ” ಎಂದು ಆಕ್ರೋಶ ವ್ಯಕ್ತಪಡಸಿದ್ದಾರೆ.
Had Modi sahib changed his heart on #PragayaThakur ?
On PM’s pet Project on the #YogaDay now she will be the chief guest for all MPs shows the mann se maaf ? pic.twitter.com/FvNzsXfzDA— Manickam Tagore .B??✋மாணிக்கம் தாகூர்.ப (@manickamtagore) June 18, 2021
ವಿಡಿಯೊದಲ್ಲಿ, ಗಾಂಧಿಯ ಕೊಲೆಗಾರನನ್ನು ಹೊಗಳಿದ ಬಿಜೆಪಿ ಅಭ್ಯರ್ಥಿಯ ಬಗ್ಗೆ ಮೋದಿಯೊಂದಿಗೆ ಪತ್ರಕರ್ತ ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ಮೋದಿ, “ಗಾಂಧಿ ಮತ್ತು ಗಾಡ್ಸೆ ಕುರಿತಾದ ಕಾಮೆಂಟ್ಗಳು ಭಯಾನಕವಾಗಿದೆ. ಇದು ತಿರಸ್ಕಾರಾರ್ಹ ಮತ್ತು ಖಂಡನೀಯವಾಗಿದ್ದು, ಈ ರೀತಿಯ ಮನಸ್ಥಿತಿಯು ಸುಸಂಸ್ಕೃತ ಸಮಾಜದ್ದಲ್ಲ. ಈ ರೀತಿಯ ಹೇಳಿಕೆ ನೀಡುವವರು ಭವಿಷ್ಯದಲ್ಲಿ 100 ಬಾರಿ ಯೋಚಿಸಬೇಕು. ತನ್ನ ಹೇಳಿಕೆಗಾಗಿ ಅವರು ಈಗ ಕ್ಷಮೆಯಾಚಿಸಿದ್ದಾರೆ, ಅದು ಒಳ್ಳೆಯದಾಗಿದೆ. ಆದರೆ ನಾನು ಅವರನ್ನು ನನ್ನ ಮನಪೂರ್ವಕವಾಗಿ ಕ್ಷಮಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದರು.
ಇದನ್ನೂ ಓದಿ: ಮಾಲೆಗಾಂವ್ ಸ್ಪೋಟ: 2 ನೇ ಬಾರಿಯೂ ವಿಚಾರಣೆಗೆ ತಪ್ಪಿಸಿಕೊಂಡ ಪ್ರಜ್ಞಾ ಸಿಂಗ್ ಠಾಕೂರ್
ಪ್ರಜ್ಞಾ ಠಾಕೂರ್ ಭೋಪಾಲ್ನಲ್ಲಿ ಕಾಂಗ್ರೆಸ್ನ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಅವರನ್ನು ಸೋಲಿಸಿ ಚುನಾವಣೆಯಲ್ಲಿ ಜಯಗಳಿಸಿದ್ದರು. ಅಂದಿನಿಂದ ಅವರು ಹಲವಾರು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಲೆ ಬಂದಿದ್ದಾರೆ.
ಮಹಾತ್ಮ ಗಾಂಧಿ ಮೇಲಿನ ವಿವಾದಾತ್ಮಕ ಹೇಳಿಕೆ ನಂತರ ಪ್ರಜ್ಞಾ ಠಾಕೂರ್ ಅವರನ್ನು ರಕ್ಷಣಾ ಸಂಸದೀಯ ಸಮಿತಿಯಿಂದ ಕಿತ್ತುಹಾಕಲಾಯಿತು ಮತ್ತು ಬಿಜೆಪಿ ಸಂಸದೀಯ ಸಭೆಗಳಿಂದ ಹೊರಗಿಡಲಾಗಿತ್ತು.
ಸಂಸದೆ ಪ್ರಜ್ಞಾ ಠಾಕೂರ್ 2008 ರ ‘ಮಾಲೆಗಾಂವ್ ಸ್ಫೋಟ’ದಲ್ಲಿನ ಪ್ರಮುಖ ಆರೋಪಿಯಾಗಿದ್ದು, ಜಾಮೀನಿನ ಮೇಲೆ ಹೊರಗಡೆಯಿದ್ದಾರೆ. ಮುಂಬೈಯಿಂದ 200 ಕಿ.ಮೀ ದೂರದಲ್ಲಿರುವ ಮಾಲೆಗಾಂವ್ ಎಂಬ ಪಟ್ಟಣದ ಮಸೀದಿಯ ಬಳಿ ಮೋಟಾರ್ ಸೈಕಲ್ನಲ್ಲಿ ಸ್ಫೋಟಕ ಸಾಧನವೊಂದು ಸ್ಪೋಟಗೊಂಡಿದ್ದರಿಂದ ಆರು ಜನರು ಸಾವನ್ನಪ್ಪಿದ್ದು ಮತ್ತು 100 ಕ್ಕೂ ಹೆಚ್ಚು ಜನರು ಗಾಯಗೊಂದಿದ್ದರು.
ಇದನ್ನೂ ಓದಿ: ಮಾಲೆಗಾಂವ್ ಸ್ಫೋಟ ತಡೆಗಟ್ಟಲು ಏನು ಮಾಡಿದಿರಿ?: ಆರೋಪಿ ಪುರೋಹಿತ್ಗೆ ಹೈಕೋರ್ಟ್ ಪ್ರಶ್ನೆ