ಕೊರೊನಾ ಸಂಕಷ್ಟದಲ್ಲಿ ಖಾಸಗಿ ಶಾಲೆಗಳ ಶುಲ್ಕ ವಿಚಾರ ಕೂಡ ಆಡಳಿತ ಮಂಡಳಿ ಮತ್ತು ಪೋಷಕರ ನಡುವಿನ ಸಂಘರ್ಷಕ್ಕೆ ಕಾರಣವಾಗಿತ್ತು. ಭಾನುವಾರ ಸಭೆ ನಡೆಸಿರುವ ಕರ್ನಾಟಕ ಖಾಸಗಿ ಶಾಲಾ-ಕಾಲೇಜುಗಳ ಆಡಳಿತ ಮಂಡಳಿಗಳ ಒಕ್ಕೂಟ, ಪ್ರಸಕ್ತ ವರ್ಷದ ಶಾಲಾ ಶುಲಕ್ವನ್ನು ಹೆಚ್ಚಿಸುವುದಿಲ್ಲ. ಸರ್ಕಾರ ಶುಲ್ಕ ನಿಗದಿಪಡಿಸಿದರೆ ಆದೇಶ ಪಾಲಿಸುತ್ತವೆ ಎಂದು ಹೇಳಿದೆ.
ಭಾನುವಾರ ನಡೆದ ವರ್ಚವಲ್ ಸಭೆಯಲ್ಲಿ ರುಪ್ಸಾ ಕರ್ನಾಟಕ ಸೇರಿದಂತೆ 12 ಸಂಘಟನೆಗಳು ಭಾಗವಹಿಸಿದ್ದವು. ರುಪ್ಸಾ ಸಂಘಟನೆ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ, ಪ್ರಸಕ್ತ ವರ್ಷದಲ್ಲಿ ಶುಲ್ಕ ಹೆಚ್ಚಿಸುವುದಿಲ್ಲ. ಎರಡು ವರ್ಷಗಳ ಹಿಂದಿನ ಶುಲ್ಕವನ್ನೇ ಪಡೆಯುತ್ತೇವೆ. ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದು ಭೌತಿಕ ತರಗತಿಗಳು ಆರಂಭವಾದರೇ ಪೂರ್ಣ ಶುಲ್ಕ ಪಡೆಯುತ್ತೇವೆ. ಆನ್ಲೈನ್ ತರಗತಿಗಳಿಗೆ ಸರ್ಕಾರ ಶುಲ್ಕ ನಿಗದಿ ಪಡಿಸಿದರೇ ಅದನ್ನೇ ಪಡೆಯುತ್ತೇವೆ ಎಂದಿದ್ದಾರೆ.
’ಕೊರೊನಾದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಕರ್ನಾಟಕ ಖಾಸಗಿ ಶಾಲಾ-ಕಾಲೇಜುಗಳ ಆಡಳಿತ ಮಂಡಳಿಗಳ ಒಕ್ಕೂಟದ ಅಡಿಯಲ್ಲಿ ಬರುವ 12 ಸಂಘಟನೆಗಳು ಒಪ್ಪಿಗೆ ನೀಡಿವೆ. ನಮ್ಮ ಒಕ್ಕೂಟದ ಅಡಿಯಲ್ಲಿ 10 ಸಾವಿರ ಶಾಲೆಗಳಿವೆ’ ಎಂದು ತಿಳಿಸಿದ್ದಾರೆ.
ಸರ್ಕಾರ ಶೇ 30 ರಷ್ಟು ಶುಲ್ಕ ಕಡಿತಗೊಳಿಸಿದರೂ ಇನ್ನೂ 70% ಶುಲ್ಕ ಕಟ್ಟದ ಪೋಷಕರು ಶುಲ್ಕ ಕಟ್ಟುವಂತೆ ಸರ್ಕಾರ ಮನವೊಲಿಸಬೇಕು. ಬಾಕಿ ವಸೂಲಿಗೆ ಸರ್ಕಾರ ಅಂತ್ಯ ಹಾಡಬೇಕು. ಶಾಲೆಗಳು ಪಡೆದಿರುವ ಸಾಲದ ಬಡ್ಡಿ ಮನ್ನ ಮಾಡಬೇಕು ಎಂದು ಇದೇ ವೇಳೆ ಒತ್ತಾಯಿಸಿದ್ದಾರೆ.
ಶಾಲಾ ಶುಲ್ಕ ವಿಚಾರದಲ್ಲಿ ಪೋಷಕರು ಮತ್ತು ಶಾಲಾ ಆಡಳಿತ ಮಂಡಳಿಗಳ ನಡುವೆ ಉಂಟಾಗಿರುವ ಸಂಘರ್ಷವನ್ನು ತಕ್ಷಣ ನಿವಾರಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದರು.
ಇದನ್ನೂ ಓದಿ: ಶಾಲಾ ಶುಲ್ಕ ವಿಚಾರ: ಸಮಸ್ಯೆ ಬಗೆಹರಿಸುವಂತೆ ಸಿಎಂ ಯಡಿಯೂರಪ್ಪಗೆ ಸಿದ್ದರಾಮಯ್ಯ ಪತ್ರ