ಮಹಾರಾಷ್ಟ್ರ ರಾಜಕೀಯದಲ್ಲಿ ಹೊಸ ರಾಜಕೀಯ ಬೆಳವಣಿಗೆಗಳು ಅರಂಭವಾಗಿವೆ. ಶಿವಸೇನೆ, ಎನ್ಸಿಪಿ, ಕಾಂಗ್ರೆಸ್ ಮೈತ್ರಿಕೂಟದಲ್ಲಿ ಸಣ್ಣದಾದ ಅಸಮಾಧಾನದ ಕಿಡಿ ಹೊತ್ತಿಕೊಂಡಿದೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಬಂದ ದಿನದಿಂದಲೂ ಮಹಾರಾಷ್ಟ್ರ ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿ ಠಾಕ್ರೆ ವಿರುದ್ಧ ತಮ್ಮ ಆಕ್ಷೇಪಗಳನ್ನು ಹೊರಹಾಕುತ್ತಲೇ ಬಂದಿದ್ದಾರೆ. ಕೆಳಹಂತದ ನಾಯಕರಿಂದ ಆರಂಭವಾದ ಈ ಭಿನ್ನಮತ ಮತ್ತು ಮೈತ್ರಿಯ ಬಗೆಗಿನ ಅಸಮಾಧಾನ ನಿಧಾನಕ್ಕೆ ಕಾಂಗ್ರೆಸ್ನ ಉನ್ನತ ನಾಯಕರಿಂದಲೂ ಬರತೊಡಗಿದೆ. ಇದಕ್ಕೆ ತುಪ್ಪ ಸುರಿಯುವಂತೆ ಇಂದು ಮಹಾರಾಷ್ಟ್ರ ಕಾಂಗ್ರೆಸ್ನ ರಾಜ್ಯಾಧ್ಯಕ್ಷ ನಾನಾ ಪಟೋಲಿ ಹೇಳಿಕೆಯನ್ನು ನೀಡಿದ್ದಾರೆ.
ಬಿಜೆಪಿಯನ್ನು ಅಧಿಕಾರದಿಂದ ತಡೆಯುವುದಾಕ್ಕಾಗಿ ಮಾತ್ರ ಕಾಂಗ್ರೆಸ್ ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಹಾಗಾಗಿ ಕಾಂಗ್ರೆಸ್ ಮಹಾರಾಷ್ಟ್ರ ವಿಕಾಸ ಅಘಾಡಿಯ ಭಾಗವಾಗಿದೆ. ಕಾಂಗ್ರೆಸ್ ಮತ್ತು ಶಿವಸೇನೆ ಮಹಾರಾಷ್ಟ್ರದಲ್ಲಿ ನಡೆಯುವ ಎಲ್ಲಾ ಚುನಾವಣೆಗಳಲ್ಲಿ ಒಟ್ಟಾಗಿ ಸ್ಪರ್ಧಿಸುತ್ತವೆ ಎಂಬ ಕುರಿತು ಮೈತ್ರಿ ಸರ್ಕಾರ ರಚನೆಯ ಸಂದರ್ಭದಲ್ಲಿ ಯಾವುದೇ ಚರ್ಚೆಯಾಗಿಲ್ಲ. ಪ್ರತಿಯೊಂದು ರಾಜಕೀಯ ಪಕ್ಷವೂ ತನ್ನ ಮತದಾರರ ಬೇಸ್ ಅನ್ನು ಬೆಳೆಸಲು ಪ್ರಯತ್ನಿಸುತ್ತದೆ. ಕಾಂಗ್ರೆಸ್ ಕೂಡ ಮಹಾರಾಷ್ಟ್ರದಲ್ಲಿ ಅದನ್ನೆ ಮಾಡುತ್ತಿದೆ. ಆದರೆ ಕಾಂಗ್ರೆಸ್ ತಾನಾಗಿಯೇ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಮೈತ್ರಿ ಸರ್ಕಾರವನ್ನು ಕೆಡವುವ ಯಾವ ಪ್ರಯತ್ನಕ್ಕೂ ಮುಂದಾಗುವುದಿಲ್ಲ. ಶಿವಸೇನೆ, ಸರ್ಕಾರದ ಭಾಗವಾದ ಕಾಂಗ್ರೆಸ್ ಪಕ್ಷವನ್ನು ಗೌರವಿಸುವ ಮೂಲಕ ಮೈತ್ರಿಧರ್ಮವನ್ನು ಪಾಲಿಸಬೇಕು ಎಂದು ಹೇಳುವ ಮೂಲಕ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲಿ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಚರ್ಚೆಗಳಿಗೆ ಇನ್ನಷ್ಟು ಪುಷ್ಠಿ ನೀಡಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಬೃಹನ್ ಮುಂಬೈ ಕಾರ್ಪೋರೇಷನ್ (BMC) ಚುನಾವಣೆ ಮತ್ತು ಮುಂದಿನ ಮಹರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಹೇಳುವ ಮೂಲಕ ಕಾಂಗ್ರೆಸ್-ಶಿವಸೇನೆ ಮೈತ್ರಿ ಕೇವಲ 5 ವರ್ಷದ ಅವಧಿಯದು ಎಂಬುದನ್ನು ನಾನಾ ಪಟೋಲಿ ಪರೋಕ್ಷವಾಗಿ ತಿಳಿಸಿದ್ದರು.
ಇನ್ನು ಕಾಂಗ್ರೆಸ್ ಮುಖಂಡ, ಮಾಜಿ ಸಿಎಂ ಪೃಥ್ವಿರಾಜ್ ಚೌಹಾಣ್ “ಮುಂದಿನ ಮೈತ್ರಿಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರೊಬ್ಬರು ಮುಖ್ಯಮಂತ್ರಿಯಾಗಲಿದ್ದಾರೆ. ಅಂದರೆ ಕಾಂಗ್ರೆಸ್ ಮೈತ್ರಿಯ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ” ಎಂದು ಹೇಳಿಕೆ ನೀಡಿದ್ದಾರೆ.
ಇದಕ್ಕೆ ಭಿನ್ನವಾದ ಪ್ರತಿಕ್ರಿಯೆನ್ನು ಶಿವಸೇನಾ ಸಂಸದ ಸಂಜಯ್ ರಾವತ್ ವ್ಯಕ್ತಪಡಿಸಿದ್ದಾರೆ. “ಮೈತ್ರಿಯಲ್ಲಿ ಬಿರುಕು ಮೂಡಿಸಲು ಕೆಲವರು ಪ್ರಯತ್ನಿಸುತ್ತಿದ್ದು, ಅದು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ಶಿವಸೇನೆ, ಕಾಂಗ್ರೆಸ್ ಮತ್ತು ಎನ್ಸಿಪಿ ಒಗ್ಗಟ್ಟಾಗಿದ್ದೇವೆ ಮತ್ತು ಒಗ್ಗಟ್ಟಾಗಿಯೇ 5 ವರ್ಷ ಪೂರೈಸುತ್ತೇವೆ. ಸರ್ಕಾರ ರಚಿಸಲು ಪ್ರಯತ್ನಿಸಿ ವಿಫಲರಾದ, ಅಧಿಕಾರ ಕಳೆದುಕೊಂಡ ಕೆಲ ಹೊರಗಿನ ಶಕ್ತಿಗಳು ಊಹಾಪೋಹಗಳನ್ನು ಹರಿಯಬಿಡುತ್ತಿವೆ. ಆದರೆ ಅದು ಯಶಸ್ವಿಯಾಗುವುದಿಲ್ಲ” ಎಂದು ಅವರು ಮೈತ್ರಿ ಸರ್ಕಾರದ ಪರ ನಿಂತಿದ್ದಾರೆ.
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಾನಾ ಪಟೋಲಿ ಹೇಳಿಕೆಗೆ ಪರೊಕ್ಷವಾಗಿ ಪ್ರತಿಕ್ರಿಯಿಸಿ ರಾಜಕೀಯ ಪಕ್ಷಗಳು ಬೇರೆ ಎಲ್ಲಾ ವಿಷಯಗಳನ್ನು ಬದಿಗೊತ್ತಿ ಸದ್ಯ ಮಹರಾಷ್ಟ್ರದ ಅಭಿವೃದ್ದಿ ಮತ್ತು ರಾಜ್ಯದ ಆರ್ಥಿಕ ಚೇತರಿಕೆಯ ಕಡೆ ಗಮನಕೊಡಬೇಕು ಎಂದಿದ್ದರು.
ಒಟ್ಟಿನಲ್ಲಿ ಎರಡು ವಿರುದ್ಧ ಸಿದ್ಧಾಂತಗಳ ಪಕ್ಷಗಳಾದ ಕಾಂಗ್ರೆಸ್ ಮತ್ತು ಶಿವಸೇನೆ ಎಷ್ಟುದಿನ ಹೊಂದಾಣಿಕೆಯಿಂದ ಅಡಳಿತ ನಡೆಸಬಲ್ಲವು ಎಂದು ಹಲವರು ಮೈತ್ರಿಯ ಅರಂಭದಲ್ಲಿಯೇ ಅನುಮಾನವನ್ನು ವ್ಯಕ್ತಪಡಿಸಿದ್ದರು. ಈಗ ನಿಧಾನಕ್ಕೆ ಮಹಾರಾಷ್ಟ್ರ ಸರ್ಕಾರದಲ್ಲಿ ಅಸಮಾಧಾನದ ಅಲೆಗಳು ಏಳತೊಡಗಿವೆ.
ಇದನ್ನು ಓದಿ : ದೆಹಲಿ ಗಲಭೆ ಪ್ರಕರಣ: CAA ವಿರೋಧಿ ಹೋರಾಟಗಾರರ ಬಿಡುಗಡೆಯ ನಿರೀಕ್ಷೆಗಳಿಗೆ ಸುಪ್ರೀಂ ಕೋರ್ಟ್ ತಡೆಗೋಡೆ