ಅಲೋಪತಿ ಚಿಕಿತ್ಸೆಯೊಂದು ಮೂರ್ಖತನ ಎಂದು ಹೇಳಿಕೆ ನೀಡಿದ್ದ ಯೋಗ ಗುರು ಬಾಬಾ ರಾಮ್ ದೇವ್ಗೆ ಹೊಸ ಕಂಟಕ ಎದುರಾಗಿದೆ. ಇಂದು ಸುಪ್ರೀಂ ಕೋರ್ಟ್ ಬಾಬಾ ರಾಮದೇವ ಅವರ ಹೇಳಿಕೆಯ ಮೂಲ ವಿಡಿಯೋವನ್ನು ಹಾಜರು ಪಡಿಸುವಂತೆ ರಾಮದೇವ್ ಪರ ವಕೀಲರಿಗೆ ಆದೇಶಿಸಿದೆ.
ರಾಮದೇವ್ ವಿರುದ್ಧ ದೇಶಾದ್ಯಂತ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಪ್ರಕರಣಗಳನ್ನು ದಾಖಲಿಸಿದೆ. ಬಿಹಾರ, ಛತ್ತಿಸ್ಗಢ, ಸೇರಿದಂತೆ ಹಲವು ರಾಜ್ಯಗಳಲ್ಲಿ ಬಾಬಾ ರಾಮದೇವ್ ವಿರುದ್ಧ ಎಫ್ಐಆರ್ಗಳು ದಾಖಲಾಗಿವೆ. ಇನ್ನು ಕೆಲವು ರಾಜ್ಯಗಳಲ್ಲಿ ರಾಮದೇವ್ ವಿರುದ್ಧ ವೈದ್ಯರು ವೈಯಕ್ತಿಕ ದೂರು ದಾಖಲಿಸಿದ್ದಾರೆ. ಬಂಧನ ಭೀತಿಯನ್ನು ಎದುರಿಸುತ್ತಿರುವ ಬಾಬಾ ರಾಮದೇವ್ ತಮ್ಮ ವಿರುದ್ಧದ ಎಲ್ಲಾ ಪ್ರಕರಣಗಳನ್ನು ಒಟ್ಟುಗೂಡಿಸಿ ವಿಚಾರಣೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ: ಅಲೋಪತಿ ವೈದ್ಯರ ವಿರುದ್ಧ ಅವಹೇಳನ: ವಿಚಾರಣೆಗೆ ತಡೆಯೊಡ್ಡಲು ಸುಪ್ರೀಂ ಮೊರೆ ಹೋದ ಬಾಬಾ ರಾಮ್ದೇವ್
ರಾಮದೇವ್ ಪರವಾಗಿ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಮುಕುಲ್ ರೋಹ್ಟಗಿ ನ್ಯಾಯಾಲಯದ ಮುಂದೆ ಬಾಬಾ ರಾಮ್ ದೇವ್ ಹೇಳಿಕೆಯ ವಿಡಿಯೋವನ್ನು ಹಾಜರುಪಡಿಸಿದರು. ವಿಡಿಯೋ ದಾಖಲೆಯಿಂದ ಸಂತುಷ್ಟಗೊಳ್ಳದ ಜಸ್ಟಿಸ್ ಎನ್.ವಿ.ರಮಣ, ಜಸ್ಟಿಸ್ ಎ.ಎಸ್.ಬೋಪಣ್ಣ, ಜಸ್ಟಿಸ್ ಹೃಷಿಕೇಶ್ ಅವರಿದ್ದ ಸುಪ್ರೀಂ ಕೋರ್ಟ್ ಪೀಠ ಹೇಳಿಕೆಯ ಸಂಪೂರ್ಣ ದಾಖಲೆ ಮತ್ತು ಟ್ರಾನ್ಸ್ಕ್ರಿಪ್ಟ್ ಅನ್ನು ಹಾಜರುಪಡಿಸುವಂತೆ ಹೇಳಿದೆ.
ರಾಮದೇವ್ ಇದು ತಮ್ಮ ಹೇಳಿಕೆ ಅಲ್ಲ. ವಾಟ್ಸಾಪ್ನಲ್ಲಿ ಬಂದ ಒಂದು ಸಂದೇಶವನ್ನು ತಾವು ಓದಿದ್ದು ಅದನ್ನು ತಪ್ಪಾಗಿ ಬಿತ್ತರಿಸಲಾಗಿದೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸುತ್ತಲೇ ಬಂದಿದ್ದರು. ಸುಪ್ರೀಂ ಕೋರ್ಟ್ ರಾಮದೇವ್ ಹೇಳಿದಂತೆ ಅವರ ಹೇಳಿಕೆಗೆ ಕಾರಣವಾದ ಸಂದೇಶವನ್ನು ಹಾಜರುಪಡಿಸಲು ಆದೇಶಿಸಿದೆ.
ರಾಮದೇವ್ ವಿರುದ್ಧ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ 1000 ಕೋಟಿ ರೂ. ಪರಿಹಾರ ಕೋರಿ ರಾಮದೇವ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದೆ. ಪ್ರತ್ಯೇಕ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ನಲ್ಲಿ ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ.
ಇದನ್ನೂ ಓದಿ : ಕೊರೊನಾದಿಂದ ಮೃತಪಟ್ಟ ಕುಟುಂಬಕ್ಕೆ ಪರಿಹಾರ: ಒಕ್ಕೂಟ ಸರ್ಕಾರಕ್ಕೆ 6 ವಾರಗಳ ಗಡುವು ನೀಡಿದ ಸುಪ್ರೀಂ