ರಾಷ್ಟ್ರಗೀತೆ ಹಾಡುತ್ತಿರುವ ಸಮಯದಲ್ಲಿ ಎದ್ದು ನಿಲ್ಲದಿರುವುದು ಅಥವಾ ಹಾಡದಿರುವುದು, ಅಗೌರವ ಮತ್ತು ಮೂಲಭೂತ ಕರ್ತವ್ಯಗಳನ್ನು ಪಾಲಿಸುವಲ್ಲಿನ ವಿಫಲತೆ ಆಗಿದೆ ಹೊರತು, ಅದು ಅಪರಾಧವಲ್ಲ ಎಂದು ಜಮ್ಮು ಕಾಶ್ಮೀರ ಹೈಕೋರ್ಟ್ ಶುಕ್ರವಾರ ತೀರ್ಪು ನೀಡಿದೆ.
“ಭಾರತೀಯ ರಾಷ್ಟ್ರಗೀತೆಗೆ ಅಗೌರವ ತೋರುವುದು ಅಪರಾಧವಲ್ಲ. ಒಬ್ಬ ವ್ಯಕ್ತಿಯ ನಡವಳಿಕೆಯಿಂದ ಭಾರತೀಯ ರಾಷ್ಟ್ರಗೀತೆಯ ಹಾಡಿಗೆ ತಡೆಯಾದರೆ ಅಥವಾ ಗಾಯನದಲ್ಲಿ ತೊಡಗಿರುವ ಯಾವುದೇ ಸಭೆಗೆ ತೊಂದರೆಯಾಗುವುದಾದರೆ, ಅದು ‘ರಾಷ್ಟ್ರೀಯ ಗೌರವಕ್ಕೆ ಅಪಮಾನ ತಡೆ ಕಾಯ್ದೆಯ ಸೆಕ್ಷನ್ 3’ ರ ಪ್ರಕಾರ ದಂಡನೀಯವಾಗಿದೆ” ಜಮ್ಮುಕಾಶ್ಮೀರ ಹೈಕೋರ್ಟ್ ನ್ಯಾಯಮೂರ್ತಿ ಸಂಜೀವ್ ಕುಮಾರ್ ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ರಾಷ್ಟ್ರಗೀತೆ ಹಾಡುವಂತೆ ಪೊಲೀಸರ ಸಮ್ಮುಖದಲ್ಲೇ ಹಿಂಸೆಗೊಳಗಾದ ವ್ಯಕ್ತಿ ಸಾವು
ನ್ಯಾಯಾಲಯವು, “ರಾಷ್ಟ್ರಗೀತೆ ಹಾಡುತ್ತಿರುವಾಗ ಎದ್ದು ನಿಲ್ಲದಿರುವುದು ಅಥವಾ ಎದ್ದುನಿಂತರೂ ರಾಷ್ಟ್ರಗೀತೆ ಹಾಡುತ್ತಿರುವವ ಜೊತೆಗೂಡಿ ಹಾಡದಿರುವುದು ರಾಷ್ಟ್ರಗೀತೆಗೆ ಮಾಡುತ್ತಿರುವ ಅಗೌರವ ಮತ್ತು ಭಾರತದ ಸಂವಿಧಾನದ ಭಾಗ 4ಎ ಯಲ್ಲಿ ಹೇಳಲಾದ ಮೂಲಭೂತ ಕರ್ತವ್ಯ ಪಾಲಿಸುವಲ್ಲಿನ ವಿಫಲತೆಯಾಗಬಹುದೆ ವಿನಃ ಸೆಕ್ಷನ್ 3 ರ ಅಡಿಯಲ್ಲಿ ವ್ಯಾಖ್ಯಾನಿಸಲಾದ ಅಪರಾಧವಲ್ಲ” ಎಂದು ಹೇಳಿದೆ.
ಜಮ್ಮುವಿನ ಬಾನಿಯಲ್ಲಿರುವ ಸರ್ಕಾರಿ ಪದವಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದ ತೌಸೀಫ್ ಅಹ್ಮದ್ ಭಟ್ ಅವರ ವಿರುದ್ದ ರಾಷ್ಟ್ರಗೀತೆಗೆ ಅವಮಾನಿಸಿದ ಆರೋಪದ ಮೇಲೆ ಪೊಲೀಸರು 2018 ರ ಸೆಪ್ಟೆಂಬರ್ನಲ್ಲಿ ಪ್ರಕರಣ ದಾಖಲಿಸಿದ್ದರು. ‘ರಾಷ್ಟ್ರೀಯ ಗೌರವಕ್ಕೆ ಅಪಮಾನ ತಡೆ ಕಾಯ್ದೆಯ ಸೆಕ್ಷನ್ 3’ ರ ಅಡಿಯಲ್ಲಿ ತನ್ನ ವಿರುದ್ಧ ದಾಖಲಾಗಿದ್ದ ಎಫ್ಐಆರ್ ಅನ್ನು ಪ್ರಶ್ನಿಸಿ, ಭಟ್ ಸಲ್ಲಿಸಿದ್ದ ರಿಟ್ ಅರ್ಜಿಯ ಕುರಿತು ಹೈಕೋರ್ಟ್ ಈ ತೀರ್ಪು ನೀಡಿದೆ.
ಭಟ್, ತಾನು ರಾಷ್ಟ್ರಗೀತೆ ಹಾಡುವುದನ್ನು ತಡೆಯುವುದೋ ಅಥವಾ ಗಾಯನದಲ್ಲಿ ತೊಡಗಿರುವ ಸಭೆಗೆ ತೊಂದರೆ ಉಂಟುಮಾಡಿದ್ದೇನೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಆದ್ದರಿಂದ ತಾನು ಕಾಯಿದೆಯ ಸೆಕ್ಷನ್ 3 ರ ಅಡಿಯಲ್ಲಿ ಯಾವುದೆ ಅಪರಾಧವನ್ನು ಮಾಡಿಲ್ಲ ಎಂದು ವಾದಿಸಿದ್ದಾರೆ.
ಇದನ್ನೂ ಓದಿ: ಬಿಹಾರ: ರಾಷ್ಟ್ರಗೀತೆ ಹೇಳಲು ಹೆಣಗಾಡಿದ ನೂತನ ಶಿಕ್ಷಣ ಸಚಿವನ ವಿಡಿಯೋ ವೈರಲ್