Homeಅಂಕಣಗಳುಯುವ ಮತದಾರರಿಗೆ ಒಂದು ಕಿವಿಮಾತು

ಯುವ ಮತದಾರರಿಗೆ ಒಂದು ಕಿವಿಮಾತು

- Advertisement -
* ಎಚ್.ಎಸ್.ದೊರೆಸ್ವಾಮಿ |
ಈಗ 18 ತುಂಬಿ ಹೊಸದಾಗಿ ಮತದಾನದ ಹಕ್ಕನ್ನು ಪಡೆದಿರುವ ಯುವಕ ಯುವತಿಯರಿಗೆ ನನ್ನ ಅಭಿನಂದನೆಗಳು.
ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಇನ್ನೆರೆಡು ದಿನಗಳಲ್ಲಿ ನಡೆಯಲಿದೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳು ಪ್ರಧಾನವಾಗಿ ಈ ಚುನಾವಣೆಯಲ್ಲಿ ಭಾಗವಹಿಸುತ್ತಿವೆ. ನೀವು ಪತ್ರಿಕೆಗಳಲ್ಲಿ, ಟಿವಿಗಳಲ್ಲಿ ಇವರ ಪ್ರಚಾರದ ಅಬ್ಬರವನ್ನು ಒಂದೆರಡು ವಾರದಿಂದ ಕೇಳುತ್ತಾ ಬಂದಿದ್ದೀರಿ. ಈ ಅಬ್ಬರಕ್ಕೆ ಹೊಸದಾಗಿ ಮತದಾನ ಅರ್ಹತೆಯನ್ನು ಪಡೆದವರು ಗಾಬರಿಗೊಂಡಿರಬಹುದು, ಸಿಡಿಮಿಡಿಗೊಂಡಿರಬಹುದು.
ನೀವು ಗಮನಿಸಿರಬಹುದು, ಪ್ರಧಾನಮಂತ್ರಿ ಮೋದಿಯವರು, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಎದುರಾಳಿಗಳಾದ ಕಾಂಗ್ರೆಸ್ಸಿನ ಸಿದ್ದರಾಮಯ್ಯ ಹಾಗೂ ಜಾತ್ಯತೀತ ಜನತಾದಳದ ದೇವೇಗೌಡರನ್ನು ವೈಯಕ್ತಿಕವಾಗಿ ಟೀಕೆ ಮಾಡುತ್ತಿರುವುದನ್ನು ನೀವು ಗಮನಿಸಿರಬಹುದು. ಬಿಜೆಪಿಯ ಈ ಇಬ್ಬರು ಮಹನೀಯರು ಇಷ್ಟು ಕೆಟ್ಟದಾಗಿ ಮಾತಾಡಿದಾಗ, ಎದುರಾಳಿಗಳೂ ಇದಕ್ಕೆ ಉತ್ತರ ನೀಡಬೇಕಾದ್ದು ಅನಿವಾರ್ಯವಾಗುತ್ತದೆ. ಹೀಗಾಗಿ ಇಡೀ ಚುನಾವಣೆಯ ಸಂದರ್ಭದಲ್ಲಿ ಈ ದಾಳಿ ಮತ್ತು ಪ್ರತಿದಾಳಿ ಮತದಾರರ ತಿರಸ್ಕಾರಕ್ಕೆ ಒಳಗಾಗಿದೆ.
ನೀವು ಹೊಸದಾಗಿ ಮತ ಹಾಕಲು ಬಂದವರು ಇದಕ್ಕೆಲ್ಲ ತಲೆಕೆಡಿಸಿಕೊಳ್ಳಬೇಡಿ. ಮೋದಿ ಕರ್ನಾಟಕವನ್ನು ಕಬ್ಜಾ ಮಾಡಲು, ಕಾಂಗ್ರೆಸ್ಸನ್ನು ನಾಮಾವಶೇಷ ಮಾಡಲು ಹೊರಟಿರುವುದಾಗಿ ಘೋಷಣೆ ಮಾಡಿದ್ದಾರೆ. ಆದರೆ ಈ ರೀತಿ ಮೂದಲಿಕೆ ಮಾಡುವ ಮೋದಿ ತನ್ನ ಈ 4 ವರ್ಷಗಳ ಆಡಳಿತದ ಅವಧಿಯಲ್ಲಿ ಏನು ಸಾಧಿಸಿದ್ದಾರೆ ಎಂಬುದನ್ನು ಹೊಸ ಮತದಾರರಾದ ನೀವು ಅರಿಯಬೇಕು. ಈಗಾಗಲೇ ಈ ವಿಷಯ ಕುರಿತು ಅನೇಕರು ಮಾತನಾಡಿದ್ದಾರೆ. ನೀವೂ ಗಮನಿಸಿರಬಹುದು. ಇದನ್ನು ಗಮನಿಸದವರ ಗಮನ ಸೆಳೆಯಲು ಮೋದಿಯವರ ವೈಫಲ್ಯದ ಪ್ರಮುಖ ಪ್ರಕರಣಗಳನ್ನು ನಿಮ್ಮ ಗಮನಕ್ಕೆ ತರ ಬಯಸುತ್ತೇನೆ.
1. ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ 100 ದಿನಗಳ ಒಳಗಾಗಿ ಸ್ವಿಸ್ ಬ್ಯಾಂಕ್‍ನಲ್ಲಿರುವ ಭಾರತೀಯರ ಎಲ್ಲಾ ಕಪ್ಪು ಹಣವನ್ನೂ ಒಳಗೊಂಡಂತೆ ಭಾರತದಲ್ಲೇ ಅಡಗಿಸಿಟ್ಟಿರುವ ಹಣವನ್ನೂ ಹೊರತೆಗೆಸಿ ಪ್ರತಿಯೊಬ್ಬರ ಖಾತೆಗೆ ತಲಾ 15 ಲಕ್ಷ ರೂಪಾಯಿ ಹಾಕುವುದಾಗಿ 2014ರ ಲೋಕಸಭೆಯ ಚುನಾವಣಾ ವೇಳೆಯಲ್ಲಿ ಮೋದಿಯವರು ಘೋಷಣೆ ಮಾಡಿದ್ದರು. ಆದರೆ ನಯಾ ಪೈಸೆಯೂ ಬರಲಿಲ್ಲ. ಜನರ ಖಾತೆಗಳಿಗೆ ತಲಾ 15 ಲಕ್ಷ ಹಾಕುವ ಬೊಗಳೆ ಮಾತು ಹುಸಿಯಾಯಿತು. ಇದರಿಂದ ಬಡಜನರಿಗೆ ನಿರಾಸೆಯೂ ಆಯಿತು.
2. ತಾವು ಅಧಿಕಾರಕ್ಕೆ ಬಂದನಂತರ ಪ್ರತಿ ವರ್ಷ 1 ಕೋಟಿ ಉದ್ಯೋಗ ಸೃಷ್ಟಿಸಿ, ನಿರುದ್ಯೋಗ ಸಮಸ್ಯೆ ಬಗೆಹರಿಸುವುದಾಗಿ ಬೂಸಿ ಬಿಟ್ಟರು. ಹೊಸ ಉದ್ಯೋಗ ಸೃಷ್ಟಿ ಮಾಡುವುದಿರಲಿ, ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಅಪಾರ ಸಂಖ್ಯೆಯಲ್ಲಿ ಹುದ್ದೆಗಳು ಖಾಲಿಯಿದ್ದು ಅವುಗಳನ್ನೆಲ್ಲ ಭರ್ತಿ ಮಾಡುವ ಮೂಲಕ ಲಕ್ಷಾಂತರ ವಿದ್ಯಾವಂತರಿಗೆ ಉದ್ಯೋಗ ಒದಗಿಸಬಹುದಾಗಿತ್ತು. ಭಾರತ ಸರ್ಕಾರ ನೀಡಿರುವ ಅಂಕಿಅಂಶಗಳ ಪ್ರಕಾರ. ಕೇಂದ್ರ ಸಚಿವಾಲಯದಲ್ಲೇ 60,235 ಹುದ್ದೆಗಳು ಖಾಲಿಯಿವೆ. ರೈಲ್ವೆ ಇಲಾಖೆಯಲ್ಲಿ 2.35 ಲಕ್ಷ ಹುದ್ದೆಗಳಿವೆ. ಸಶಸ್ತ್ರ ಪೊಲೀಸ್ ಪಡೆಯಲ್ಲಿ 65,709 ಹುದ್ದೆಗಳು ಖಾಲಿಯಿವೆ. ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಿ ನಿರುದ್ಯೋಗ ಸಮಸ್ಯೆ ಬಗೆಹರಿಸುವ ಕೆಲಸವಂತೂ ಮಾಡುತ್ತಿಲ್ಲ. ಬದಲಿಗೆ ಶ್ರೀಮಂತ ಉದ್ದಿಮೆಪತಿಗಳ ಪರವಾಗಿ hiಡಿe ಚಿಟಿಜ ಜಿiಡಿe ನೀತಿಯನ್ನು ಜಾರಿಗೆ ತಂದು, ಕಾಯಂ ಉದ್ಯೋಗಗಳೇ ಇಲ್ಲದಂತೆ ಮಾಡಲು ಹೊರಟಿದ್ದಾರೆ.
3. 500 ಮತ್ತು 1000 ರೂಪಾಯಿ ನೋಟುಗಳನ್ನು ಅನಾಣ್ಯೀಕರಣ ಮಾಡಿದ ಮೋದಿಯವರು ಈ ಮೂಲಕ ಕಪ್ಪುಹಣವನ್ನು ನಿರ್ನಾಮ ಮಾಡುತ್ತೇವೆಂದು ಘೋಷಿಸಿದರು. ಆದರೆ ವಾಸ್ತವದಲ್ಲಿ ಏನಾಯಿತು? ತಮಗೆ ಬೇಕಾದ ಕಪ್ಪುಹಣದ ಕುಳಗಳು ಬ್ಯಾಂಕುಗಳನ್ನು ದುರ್ಬಳಕೆ ಮಾಡಿಕೊಂಡು ಕೋಟ್ಯಾಂತರ ರೂಪಾಯಿಗಳ ಕಪ್ಪು ಹಣವನ್ನು ಸಕ್ರಮ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟರು. ಈ ನೋಟುಗಳ ಅಪಮೌಲ್ಯೀಕರಣದಿಂದ ತೊಂದರೆಗೆ ಒಳಗಾದವರು ಶ್ರೀಮಂತರಲ್ಲ, ಕಾಳಧನ ಇಟ್ಟುಕೊಂಡವರಲ್ಲ; ಜನಸಾಮಾನ್ಯರು, ಮಧ್ಯಮವರ್ಗದವರು ಮತ್ತು ಸಣ್ಣ ವ್ಯಾಪಾರಿಗಳು. ಈ ದಿಢೀರ್ ಹೊಡೆತದಿಂದಾಗಿ ನೂರಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡರು. ಕೈಲಿದ್ದ ನೋಟುಗಳಿಗೆ ಬೆಲೆಯಿಲ್ಲದೆ, ಹೊಸದಾಗಿ ಪ್ರಿಂಟಾದ 500 ಮತ್ತು 2000 ನೋಟುಗಳು ಕೈಗೆ ಸಿಗದೆ ಅನೇಕ ಸಣ್ಣಪುಟ್ಟ ವ್ಯಾಪಾರಿಗಳು ಬೀದಿ ಪಾಲಾದರು. ದಿನನಿತ್ಯ ಕೂಲಿ ಮಾಡಿ ಹೊಟ್ಟೆತುಂಬಿಸಿಕೊಳ್ಳುತ್ತಿದ್ದ ಕೂಲಿಕಾರ್ಮಿಕರಿಗೆ ಕೆಲಸ ಸಿಗದೆ ಕಂಗಾಲಾದರು. ಇಷ್ಟೆಲ್ಲಾ ಅನಾಹುತಗಳಾಗಿ ಕಪ್ಪು ಹಣ ವಾಪಸ್ ಬಂತೇ ಎಂದರೆ ಅದೂ ಇಲ್ಲ. ಎಷ್ಟು ನೋಟುಗಳು ಬ್ಯಾಂಕಿಗೆ ಜಮೆಯಾಗಿದೆಯೆಂಬ ಲೆಕ್ಕವನ್ನೇ ರಿಸರ್ವ್ ಬ್ಯಾಂಕ್ ಇನ್ನೂ ಕೊಟ್ಟಿಲ್ಲ.
4. ಬಿಜೆಪಿ ಪಕ್ಷ ಮತ್ತು ಅದಕ್ಕೆ ಸಂಬಂಧಿತ ಸಂಘಟನೆಗಳು ಸಂಸ್ಕøತಿ ರಕ್ಷಕರ ಹೆಸರಿನಲ್ಲಿ ಯುವಕ-ಯುವತಿಯರ ಮೇಲೆ ಹಲ್ಲೆ ಮಾಡುತ್ತಿರುವ ದಾರುಣ ಘಟನೆಗಳು ದೇಶಾದ್ಯಂತ ನಡೆಯುತ್ತಿವೆ. ಈ ಸಂಘಟನೆಗಳು ಸಕ್ರಿಯವಾಗಿರುವ ಕಡೆಗಳಲ್ಲಿ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು ತಮ್ಮ ಸಹಪಾಠಿಗಳ ಜೊತೆ ಮಾತಾಡಲಿಕ್ಕೂ ಭಯ ಬೀಳಬೇಕಾದ ವಾತಾವರಣ ಸೃಷ್ಟಿಯಾಗಿದೆ.
5. ನಮ್ಮ ಬ್ಯಾಂಕುಗಳ ಲಕ್ಷಾಂತರ ಕೋಟಿ ಹಣವನ್ನು ತಮ್ಮ ನೆಚ್ಚಿನ ಉದ್ಯಮಿಗಳ ಒಡಲಿಗೆ ಹಾಕಿ, ಅವರು ಅಸಲು ಬಡ್ಡಿ ಯಾವುದೂ ಕಟ್ಟದೆ ನಮ್ಮ ಬ್ಯಾಂಕುಗಳಿಗೆ ಪಂಗನಾಮ ಹಾಕಿ ಓಡಿಹೋಗಿದ್ದಾರೆ. ವಿಜಯ ಮಲ್ಯ, ಲಲಿತ್ ಮೋದಿ, ನೀರವ್ ಮೋದಿ, ಮೆಹುಲ್ ಚೋಕ್ಸಿ, ಜತಿನ್ ಮೆಹ್ತಾ ಮುಂತಾದ ಖದೀಮರು ದೇಶ ಬಿಟ್ಟು ವಿದೇಶಕ್ಕೆ ಹಾರಿಹೋಗಲು ಅವಕಾಶ ಮಾಡಿಕೊಟ್ಟು ನಂತರ ನೋಟಿಸ್ ಕೊಡುವ, ಕೇಸು ಹಾಕುವ ನಾಟಕವಾಡುತ್ತಿರುವುದು ನಮ್ಮ ಕಣ್ಣೆದುರಿಗಿದೆ.
6. ಅತ್ಯಾಚಾರ, ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟುತ್ತೇವೆಂದು ಉದ್ದುದ್ದ ಭಾಷಣ ಮಾಡಿ ಅಧಿಕಾರಕ್ಕೆ ಬಂದ ಈ ಪಕ್ಷದ ಶಾಸಕರು, ಸಚಿವರು ಹಾಗೂ ಕಾರ್ಯಕರ್ತರು ವಿವಿಧ ರಾಜ್ಯಗಳಲ್ಲಿ ಹೆಣ್ಣುಮಕ್ಕಳ ಪಾಲಿಗೆ ಕಂಟಕಪ್ರಾಯರಾಗಿದ್ದಾರೆ. ಅತ್ಯಾಚಾರದ ಆರೋಪದಲ್ಲಿ, ಇತರೆ ಕ್ರಿಮಿನಲ್ ಕೇಸುಗಳಲ್ಲಿ ಜೈಲು ಸೇರಿದವರಲ್ಲಿ ಹೆಚ್ಚಿನವರು ಮೋದಿಯ ಪಕ್ಷದವರೇ.
ವಾಸ್ತವ ಸತ್ಯಗಳು ಹೀಗಿವೆ. ಮೋದಿಯವರು ತಮ್ಮ ಎಲೆಯಲ್ಲಿ ಕತ್ತೆ ಸತ್ತು ಬಿದ್ದಿರುವುದನ್ನು ಮರೆಮಾಚಿ, ಬೇರೆಯವರ ಎಲೆಯಲ್ಲಿ ನೊಣ ಸತ್ತು ಬಿದ್ದಿರುವುದನ್ನು ದೊಡ್ಡದು ಮಾಡಿ ಕೂಗು ಹಾಕುತ್ತಿದ್ದಾರೆ. ತಮ್ಮ ವಾಕ್ಚಾತುರ್ಯದಿಂದ ದೇಶವನ್ನು ಮರುಳು ಮಾಡಿಬಿಡಬಹುದು ಎಂದುಕೊಂಡಿದ್ದಾರೆ. ಇದನ್ನು ಹೊಸ ಮತದಾರರಾದ ಯುವಕ ಯುವತಿಯರು ಗಮನಿಸಬೇಕು. ಮೋದಿ ಮತ್ತು ಅಮಿತ್ ಶಾ ಅವರ ಪೊಳ್ಳು ಆರ್ಭಟಕ್ಕೆ ಸೊಪ್ಪು ಹಾಕಬೇಡಿ.
ಭಾರತ ದೇಶದಲ್ಲಿ ಸಾವಿರಾರು ವರ್ಷಗಳಿಂದ ಕ್ರಿಶ್ಚಿಯನ್ನರು, ಮುಸ್ಲಿಮರು, ಸಿಖ್ಖರು, ಪಾರ್ಸಿಗಳು ನೆಲೆಸಿದ್ದಾರೆ. ನಮ್ಮ ಈ ಎಲ್ಲ ಪೂರ್ವಿಕರು ದೇಶ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಆರೆಸ್ಸೆಸ್, ವಿಶ್ವಹಿಂದೂ ಪರಿಷತ್, ಭಜರಂಗದಳ ಮುಂತಾದ ಹಿಂದೂತ್ವ ಮತಾಂಧ ಸಂಸ್ಥೆಗಳು ಎಲ್ಲೆಡೆ ವಿಜೃಂಭಿಸುತ್ತಿದ್ದು, ತಮ್ಮ ಮತೀಯವಾದಿ agendaಗಳಿಗೆ ಪೂರಕವಾಗಿ ಸಂವಿಧಾನವನ್ನು ತಿದ್ದಬೇಕೆಂದು ಬೊಬ್ಬೆ ಎಬ್ಬಿಸಿದ್ದಾರೆ. ಇದೇನಾದರು ಕಾರ್ಯಗತವಾದರೆ, ಭಾರತದಲ್ಲಿ ಶಾಂತಿ, ಸೌಹಾರ್ದತೆ, ಭ್ರಾತೃತ್ವ ಯಾವುದೂ ಉಳಿಯುವ ಸಂಭವವಿಲ್ಲ. ಭಾರತ ದೇಶ ಆಫ್ಘಾನಿಸ್ತಾನದಂತೆ ಈ ಹಿಂದೂ ತಾಲಿಬಾನಿಗಳ ತಾಣವಾಗಲಿದೆ.
ನಿಮ್ಮಲ್ಲಿ ನನ್ನ ವಿನಂತಿ ಇಷ್ಟೆ. ಬಿಜೆಪಿಯ ನಿಜವಾದ hidden agendaವನ್ನು ಅಧ್ಯಯನ ಮಾಡಿ. ಪ್ರಜಾಪ್ರಭುತ್ವವನ್ನು ಮತ್ತು ಸಂವಿಧಾನವನ್ನು ಭಾರತೀಯ ಜನತಾ ಪಕ್ಷದ ಹೆಸರಿನಲ್ಲಿ ಮೋದಿ ಧೂಳೀಪಟ ಮಾಡಲು ಬಿಡಬೇಡಿ. ಈ ಬಾರಿಯ ವಿಧಾನಸಭಾ ಚುನಾವಣೆ ಮೋದಿ ವರ್ಸಸ್ ಕರ್ನಾಟಕದ ಮಧ್ಯೆ ನಡೆಯುತ್ತಿದೆ. ನಿಮ್ಮ ಮತವನ್ನು ವಿವೇಕದಿಂದ ಚಲಾಯಿಸಿ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...