Homeಮುಖಪುಟಇನ್ಸುಲಿನ್ ಎಂಬ ಹಾರ್ಮೋನ್‌ನ ಆವಿಷ್ಕಾರಕ್ಕೆ 100 ವರ್ಷ

ಇನ್ಸುಲಿನ್ ಎಂಬ ಹಾರ್ಮೋನ್‌ನ ಆವಿಷ್ಕಾರಕ್ಕೆ 100 ವರ್ಷ

- Advertisement -
- Advertisement -

ಸಾಂಕ್ರಾಮಿಕದ ನಡುವೆಯೂ 2021 ಜುಲೈ ಆರೋಗ್ಯ ಆವಿಷ್ಕಾರದ ಒಂದು ಸಂಭ್ರಮಾಚರಣೆಗೆ ಸಾಕ್ಷಿಯಾಗಿದೆ.
ಅಂದರೆ ಪ್ರಪಂಚದಾದ್ಯಂತ ಕೋಟ್ಯಾಂತರ ಜನರು ನರಳುತ್ತಿರುವ ಮಧುಮೇಹ, ಅದರಲ್ಲೂ ಮಕ್ಕಳಿಗೆ ತಗಲುವ ಟೈಪ್ 1 ಮಧುಮೇಹ ಕಾಯಿಲೆಯ ಉಪಶಮನಕ್ಕೆ ದಾರಿ ಮಾಡಿಕೊಟ್ಟ ಇನ್ಸುಲಿನ್ ಎಂಬ ಹಾರ್ಮೋನಿನ ಅವಿಷ್ಕಾರವಾದ ನೂರನೇ ವರ್ಷ ಇದು. ಈ ಅವಿಷ್ಕಾರ ಸಂಭವಿಸಿದ್ದು 1921ನೇ ಇಸವಿಯಲ್ಲಿ ಮತ್ತು ಟೊರೆಂಟೊ ವಿಶ್ವವಿದ್ಯಾಲಯದಲ್ಲಿ.

ಈ ಅವಿಷ್ಕಾರದ ಪ್ರಕ್ರಿಯೆ ಎಷ್ಟೊಂದು ರಂಜನೀಯವಾದದ್ದು ಹಾಗೂ ಉತ್ತೇಜನಕಾರಿಯಾದದ್ದೆಂದರೆ, ಇದನ್ನಾಧರಿಸಿದ ಅನೇಕ ಚಲನಚಿತ್ರಗಳ ನಿರ್ಮಾಣವಾದವು. ಈ ಚಲನಚಿತ್ರಗಳ ಮುಖ್ಯ ಪಾತ್ರಧಾರಿಗಳಿಗೆ ಸ್ಫೂರ್ತಿ ವಿಜ್ಞಾನಿ ಮತ್ತು ಸಂಶೋಧಕ ಫ್ರೆಡ್ರಿಕ್ ಬ್ಯಾಂಟಿಂಗ್. ಅವರ ಹೆಸರು ಕೂಡ ಇನ್ಸುಲಿನ್ ಆವಿಷ್ಕಾರದ ಸಮಾನಾರ್ಥಕ. ಅವರ ಜನ್ಮ ದಿನವಾದ ನವಂಬರ್ ಹದಿನಾಲ್ಕರಂದು ವಿಶ್ವ ಮಧುಮೇಹದ ದಿನವೆಂದು ಆಚರಿಸಲಾಗುತ್ತಿದೆ.

ಬ್ಯಾಂಟಿಂಗ್ ತನ್ನ ವೈದ್ಯಕೀಯ ಶಿಕ್ಷಣವನ್ನು ಡಿಸೆಂಬರ್ 1916ರಲ್ಲಿ ಟೊರೆಂಟೊ ವಿಶ್ವವಿದ್ಯಾಲಯದಲ್ಲಿ ಮುಗಿಸಿದರು. ಆದರೆ ಆ ಸಮಯದಲ್ಲಿ ಮೊದಲನೇ ಮಹಾಯುದ್ಧ ನಡೆಯುತ್ತಿದ್ದರಿಂದ ಅವರನ್ನು ತಕ್ಷಣ ಸೈನ್ಯದಲ್ಲಿನ ಸೇವೆಗೆ ನಿಯೋಜಿಸಲಾಯಿತು. 1918ರಲ್ಲಿ ಕಾಂಬ್ರಾಯ್ ಅನ್ನುವ ಸ್ಥಳದಲ್ಲಿ ನಡೆದ ಹೋರಾಟದಲ್ಲಿ ಅವರು ಗಾಯಗೊಂಡರು. ತಾವೇ ಗಾಯಗೊಂಡಿದ್ದರೂ ಸಹ ಇತರ ಗಾಯಗೊಂಡ ಸೈನಿಕರನ್ನು ಉಪಚರಿಸುವುದನ್ನು ಅವರು ನಿಲ್ಲಿಸಲಿಲ್ಲ. ಇದೇ ಕಾರಣಕ್ಕೆ ಅವರಿಗೆ ಮಿಲಿಟರಿ ಕ್ರಾಸ್ ಪ್ರಶಸ್ತಿಯನ್ನ ನೀಡಲಾಯಿತು. ಇದು ಅವರಲ್ಲಿದ್ದ ತಾತ್ವಿಕ ಮತ್ತು ಸೇವಾಮನೊಭಾವದ ಧೋರಣೆಯನ್ನ ಪ್ರತಿಬಿಂಬಿಸುತ್ತದೆ. ಈ ಮನೊಪ್ರವೃತ್ತಿ ಅವನ ಮುಂದಿನ ದಿನಗಳಲ್ಲಿ ಸಹಾಯಕ್ಕೆ ಬಂದಿತು. ಅವರು ಕೆನಡಾಗೆ ವಾಪಸ್ಸಾಗಿ ಮೂಳೆರೋಗದ ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ತರಬೇತು ಪಡೆದರು ಮತ್ತು ಖಾಸಗಿಯಾಗಿ ವೈದ್ಯಕೀಯ ವೃತ್ತಿಯನ್ನು ಪ್ರಾರಂಭಿಸಿದರು. ಆದರೆ ಅದು ಅಷ್ಟೊಂದು ಯಶಸ್ಸನ್ನು ಕಾಣಲಿಲ್ಲ. ನಂತರ ಪಶ್ಚಿಮ ಒಂಟಾರಿಯೊ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ವಿಧ್ಯಾರ್ಥಿಗಳಿಗೆ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು.

ಒಂದು ರಾತ್ರಿ ಬಹಳ ದಣಿದಿದ್ದರೂ, ಮಲಗುವ ಮುಂಚೆ ಪ್ಯಾನ್‌ಕ್ರಿಯಸ್ ಗ್ರಂಥಿಯ ಬಗ್ಗೆ ಲೇಖನವೊಂದನ್ನು ಓದಿ ಗಾಢವಾಗಿ ನಿದ್ರಿಸಿದರು. ಮಧ್ಯರಾತ್ರಿ ಎರಡು ಗಂಟೆಯ ವೇಳೆಗೆ ಕನಸೊಂದರ ಕಾರಣದಿಂದ ಎಚ್ಚರಗೊಂಡಾಗ ಅವರಿಗೆ ಹೊಸ ಹೊಳಪು ಮೂಡಿತ್ತು. ಪ್ಯಾನ್‌ಕ್ರಿಯಸ್ ಗ್ರಂಥಿಯ ನಾಳವನ್ನ ಬಿಗಿಯಾಗಿ ಕಟ್ಟಿದರೆ ಆ ಗ್ರಂಥಿಯಿಂದ ಆಹಾರ ಜೀರ್ಣವಾಗುವಂತೆ ಮಾಡುವ ಜೀವಕೋಶಗಳು ಅವನತಿಯಾಗುತ್ತಿದ್ದ ಲಕ್ಷಣಗಳು ಗೋಚರವಾದವೇ ಹೊರತು, ಐಲೆಟ್ಸ್ ಆಫ್ ಲಾಂಗರಾನ್ಸ್ (islets of Langerhans) ಎಂಬ, ಗ್ಲೂಕೋಸನ್ನು ದೇಹವನ್ನ ಚೇತೋಹಾರಿಯನ್ನಾಗಿಡುವ ಗ್ಲೈಕೋಜೆನ್ ಎಂಬ ವಸ್ತುವನ್ನಾಗಿ ಪರಿವರ್ತಿಸುವ ಜೀವಕೋಶಕ್ಕೆ ಯಾವುದೇ ಹಾನಿಯಾಗುತ್ತಿರಲಿಲ್ಲ ಎನ್ನುವುದನ್ನ ಅರಿತರು.

ಬ್ಯಾಂಟಿಂಗ್ ಅವರಿಗೆ ಸ್ಪಷ್ಟವಾಗಿ ಖಾತ್ರಿಯಾಗಿದ್ದು ಈ ಐಲೆಟ್‌ಗಳಲ್ಲಿ ಸಕ್ಕರೆಯ ಪ್ರಮಾಣವನ್ನ ಕಡಿಮೆ ಮಾಡುವಂತಹ ಗುಣ ಇದೆ ಎಂಬುದು. ಹಾಗಾಗಿ ಅದರಿಂದ ಹಾರ್ಮೋನನ್ನು ಬೇರ್ಪಡಿಸಿ, ಸಂಗ್ರಹಿಸಿ ಮತ್ತು ಸಂಸ್ಕರಿಸಿ ಮಧುಮೇಹ ರೋಗದ ಚಿಕಿತ್ಸೆಗೋಸ್ಕರ ಉಪಯೋಗಿಸಬಹುದು ಎಂಬುದನ್ನು ತಿಳಿದರು. ಈ ಆಲೋಚನೆ ಅವರನ್ನು ಸಂಪೂರ್ಣವಾಗಿ ಆವರಿಸಿಕೊಂಡು ಅದರ ಬಗ್ಗೆಯ ಚಿಂತನೆ ಅವರಿಗೊಂದು ಗೀಳಾಗಿ ಪರಿಣಮಿಸಿಬಿಟ್ಟಿತು.

ಟೊರೆಂಟೊ ವಿಶ್ವವಿದ್ಯಾಲಯದಲ್ಲಿ ಫಿಸಿಯಾಲಜಿ ಪ್ರೊಫೆಸರ್ ಆಗಿದ್ದ ಜೆ.ಜೆ.ಆರ್. ಮಾಕ್ಲಿಯಾಡ್ ಅವರನ್ನು ಸಂಪರ್ಕಿಸಿ ಈ ಹಾರ್ಮೋನನ್ನು ಬೇರ್ಪಡಿಸಲು ಪ್ರಯೋಗಗಳನ್ನ ಮಾಡಲು, ಅವರ ಪ್ರಯೋಗಾಲಯದಲ್ಲಿ ಅವಕಾಶಮಾಡಿಕೊಡಬೇಕೆಂದು ಬ್ಯಾಂಟಿಂಗ್ ಕೇಳಿಕೊಂಡರು. ಮೊದಮೊದಲಿಗೆ ಮಾಕ್ಲಿಯಾಡ್ ಇದರ ಬಗ್ಗೆ ಉದಾಸೀನರಾಗಿದ್ದರು. ಇದಕ್ಕೆ ಕಾರಣ ಅನೇಕ ಪ್ರಖ್ಯಾತ ವಿಜ್ಞಾನಿಗಳಾದ ನೌನಿನ್, ಮಿಂಕೊವಿಸ್ಕಿ, ಮೆರಿಂಗ್, ಓಪಿ, ಮತ್ತು ಸ್ಚಾಫರ್, ನಿಖೊಲಾಸ್ ಪಾಲಿಸ್ಕೊ ಈ ದಿಶೆಯಲ್ಲಿ ಯಶಸ್ಸನ್ನ ಕಾಣದೇ ವಿಫಲರಾಗಿದ್ದು.

ಮಾಕ್ಲಿಯಾಡ್ ಕೊನೆಗೂ ಬ್ಯಾಂಟಿಂಗ್ ಅವರಿಗೆ ಪ್ರಯೋಗಾಲಯವನ್ನ ಉಪಯೋಗಿಸಿಕೊಳ್ಳಲು ಅವಕಾಶ ಮಾಡಿಕೊಟ್ಟರು. ಪ್ರಯೋಗಪ್ರಶುಗಳಾಗಿ ಕೆಲವು ನಾಯಿಗಳನ್ನೂ ಅವರಿಗೆ ಕೊಟ್ಟು, ಒಬ್ಬ ವಿದ್ಯಾರ್ಥಿ ಚಾರ್ಲ್ಸ್ ಬೆಸ್ಟ್ ಎನ್ನುವವರನ್ನ ಸಹಾಯಕನನ್ನಾಗಿ ಉಪಯೋಗಿಸಿಕೊಳ್ಳಲು ಅವಕಾಶ ಮಾಡಿಕೊಟ್ಟರು. ಕೆಲವು ವಾರಗಳಿಗೆ ಮಾತ್ರ ಪ್ರಯೋಗಾಲಯವನ್ನ ಬಿಟ್ಟುಕೊಟ್ಟು, ಆ ಸಮಯದಲ್ಲಿ ಮಾಕ್ಲಿಯಾಡ್ ಸ್ಕಾಟ್ಲಂಡಿಗೆ ವಿಹಾರಕ್ಕಾಗಿ ಹೊರಟುಹೋದರು.

ಆ ಬೇಸಿಗೆಯಲ್ಲಿನ ಯಶಸ್ಸು

ಬ್ಯಾಂಟಿಂಗ್ ಮತ್ತು ಬೆಸ್ಟ್ 1921ರ ಮೇ ತಿಂಗಳ ಘೋರವಾದ ಶೆಖೆಯಲ್ಲಿ, ಅದೂ ಹವಾನಿಯಂತ್ರಣದ ಸೌಲಭ್ಯವಿಲ್ಲದ ಕಾಲದಲ್ಲಿ, ಅಪಕ್ವ ಪ್ರಯೋಗಗಳನ್ನು ಮಾಡುತ್ತಾ ಯಶಸ್ಸನ್ನು ಹೇಗೆ ಕಂಡುಕೊಂಡರು ಅನ್ನುವುದೊಂದು ಸ್ವಾರಸ್ಯಕರವಾದ ಕತೆ. ಪ್ರಯೋಗಗಳ ನಂತರ ಪ್ರಯೋಗಗಳು ವಿಫಲವಾಗತೊಡಗಿದವು. ನಾಯಿಗಳು ಸಾಯುತ್ತಲೇಹೋದವು. ಬ್ಯಾಂಟಿಂಗ್ ಈಗಕದ್ದು ಮುಚ್ಚಿ ಬೀದಿನಾಯಿಗಳನ್ನು ಹಿಡಿದು ತರುತ್ತಿದ್ದರು. ಶಸ್ತ್ರವೈದ್ಯರಾಗಿದ್ದರಿಂದ ಅವರು ನಾಯಿಗಳನ್ನ ತಮ್ಮ ಪ್ರಯೋಗಕ್ಕಾಗಿ ಛೇದಿಸುತ್ತಿದ್ದರೆ, ಜತೆಜತೆಯಲ್ಲೇ ಬೆಸ್ಟ್, ನಾಯಿಗಳ ರಕ್ತದಲ್ಲಿನ ಗ್ಲೂಕೋಸ್ ಅಂಶದ ಮಟ್ಟವನ್ನ ಅಳೆಯುತ್ತಿದ್ದರು.

ಪ್ಯಾನ್‌ಕ್ರಿಯಸ್‌ಅನ್ನು ನಾಯಿಗಳ ದೇಹದಿಂದ ತೆಗೆದುಬಿಟ್ಟಾಗ ನಾಯಿಗಳು ತೀವ್ರ ಮಧುಮೇಹಕ್ಕೆ ತುತ್ತಾಗುತ್ತಿದ್ದವು. ಪ್ಯಾನ್‌ಕ್ರಿಯಸ್‌ನಿಂದ ಬ್ಯಾಂಟಿಂಗ್ ಮತ್ತು ಬೆಸ್ಟ್ ಆ ನಿಗೂಢವಾದ ಗ್ರಂಥಿರಸವನ್ನ ಬೇರ್ಪಡಿಸಲು ಪ್ರಯತ್ನಿಸಿ ಅದನ್ನು ಮಧುಮೇಹದ ನಾಯಿಗಳಿಗೆ ಇಂಜೆಕ್ಟ್ ಮಾಡಿ ಆ ನಾಯಿಗಳ ಗ್ಲೂಕೋಸ್ ಮಟ್ಟ ಕಡಿಮೆಯಾಗುತ್ತದೆಯೇ ಎಂದು ನೋಡಿದರು. ನಿರಂತರ ವೈಫಲ್ಯಗಳ ನಂತರ ಜುಲೈ 1921ರ ಒಂದು ದಿನ ಚರಿತ್ರಾರ್ಹವಾಗಿ ಒಂದು ನಾಯಿಯ ರಕ್ತದ ಗ್ಲೂಕೋಸಿನ ಮಟ್ಟ ಕಡಿಮೆಯಾಗುತ್ತಾ ಬಂದಿತು.

ಮಾಕ್ಲಿಯಾಡ್ ತನ್ನ ರಜೆಯಿಂದ ಹಿಂದಿರುಗಿ ತಕ್ಷಣದಲ್ಲಿ ಈ ಫಲಿತಾಂಶಗಳನ್ನು ನಂಬಲಿಲ್ಲ. ಅವನಿಗೆ ನಂತರದಲ್ಲಿ ಇದರ ಬಗ್ಗೆ ವಿಶ್ವಾಸ ಮೂಡಿತು, ಮತ್ತು ಖಂಡಿತವಾಗಿ ಲಾಂಗರ್‌ಹಾನ್ಸ್‌ನ ಐಲೆಟ್‌ನಲ್ಲಿರುವ (islets of Langerhans) ಹಾರ್ಮೋನ್ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನ ಕಮ್ಮಿ ಮಾಡುತ್ತದೆ ಎನ್ನುವುದು ಸಾಬೀತಾಯಿತು.

ಬ್ಯಾಂಟಿಂಗ್ ಈ ಗ್ರಂಥಿರಸಕ್ಕೆ ಐಲೆಟಿನ್ (Isletin) ಎಂಬ ಹೆಸರನ್ನ ಸೂಚಿಸಿದರು. ಆದರೆ ಮಾಕ್ಲಿಯಾಡ್ ಇನ್ಸುಲಿನ್ ಅನ್ನುವ ಹೆಸರು ಚೆನ್ನಾಗಿರುತ್ತದೆ ಎಂದು ಅವನಿಗೆ ಮನವರಿಕೆ ಮಾಡಿಕೊಟ್ಟರು. ಕಾರಣ ಅದು ಲ್ಯಾಟಿನ್ ಪದ ಇನುಲಿನ್ಂದ ಬರುತ್ತದೆ ಮತ್ತು ಇನ್ಸುಲ ಅಂದರೆ ದ್ವೀಪ ಎಂದು. ಈ ಹೆಸರನ್ನ ಶಾರ್ಪಿ ಶಾಫರ್ ಅನ್ನುವ ವಿಜ್ಞಾನಿ ಬಹಳ ವರ್ಷಗಳ ಹಿಂದೆಯೇ ಸೂಚಿಸಿದ್ದರು.

ಜನವರಿ 1922ರಲ್ಲಿ ಮಾನವನ ಮೇಲೆ ಇನ್ಸುಲಿನ್‌ಅನ್ನು ಪ್ರಯೋಗಿಸಲು ಶುರುಮಾಡಿದರು. ಲಿಯಾನಾರ್ಡ್ ಥಾಮ್ಸನ್ ಎನ್ನುವ ಅತೀವವಾಗಿ ಮಧುಮೇಹದಿಂದ ಬಳಲುತ್ತಿದ್ದ ಹದಿನಾಲ್ಕು ವರ್ಷದ ಬಾಲಕನ ಮೇಲೆ ಪ್ರಯೋಗಿಸಲಾಯಿತು. ಅತ್ಯಾಶ್ಚರ್ಯಕರ ರೀತಿಯಲ್ಲಿ ಅವನ ದೇಹ ಅದಕ್ಕೆ ಪ್ರತಿಕ್ರಿಯಿಸಿತು. ಆದರೂ, ಮೊದಲ ಹಂತದಲ್ಲಿ ಮಾನವನ ಮೇಲಿನ ಪ್ರಯೋಗಗಳು ಅಷ್ಟೊಂದು ಪರಿಣಾಮಕಾರಿಯಾಗಲಿಲ್ಲ. ಕಾರಣ ಬ್ಯಾಂಟಿಂಗ್ ಮತ್ತು ಬೆಸ್ಟ್ ಅಪಕ್ವ ರೀತಿಯಲ್ಲಿ ಇನ್ಸುಲಿನ್‌ಅನ್ನು ಹೊರತೆಗೆಯುತ್ತಿದ್ದುದು ಎನ್ನುವುದು ಅವರಿಗೆ ಮನದಟ್ಟಾಯಿತು.

ಎಡ್ಮಂಟೊನ್ ಎಂಬ ಊರಿನವರಾದ ಜೇಮ್ಸ್ ಕಾಲಿಪ್ ಎಂಬ ಬಯೊಕೆಮಿಸ್ಟ್ ಒಬ್ಬರನ್ನು ಈ ಸಂಶೋಧನೆಗೆ ಸೇರಿಸಿಕೊಳ್ಳಲಾಯಿತು. ಅವರು ಹೊರತೆಗೆದ ಇನ್ಸುಲಿನ್‌ಅನ್ನು ಶುದ್ಧೀಕರಿಸಿ ಸಂಸ್ಕರಿಸಲು ಸಹಾಯ ಮಾಡಿದರು. ಇದರಿಂದ ಪ್ರತಿಕೂಲವಾದ ಪರಿಣಾಮಗಳನ್ನು, ಅಂದರೆ ಜ್ವರ, ಮತ್ತು ಇಂಜೆಕ್ಷನ್ ಚುಚ್ಚಿದ ಜಾಗದಲ್ಲಿ ಬಾವು ಆಗುವುದನ್ನ ತಡೆಯಲಾಯಿತು. ನಂತರ ಬಾಲ್ಯ ಮಧುಮೇಹದಿಂದ ಅಂದರೆ
ಟೈಪ್ 1 ಡಯಾಬಿಟಿಸ್‌ನಿಂದ ನರಳುತ್ತಿದ್ದ ಹಲವಾರು ಮಕ್ಕಳ ಜೀವವನ್ನ ಉಳಿಸುವಲ್ಲಿ ಈ ಆವಿಷ್ಕಾರ ಪರಿಣಾಮಕಾರಿಯಾಯಿತು. ಆಧುನಿಕ ಔಷಧಿಗಳ ಆವಿಷ್ಕಾರಗಳಲ್ಲಿ ಇದು ಅತ್ಯದ್ಭುತವಾದ ಮೈಲಿಗಲ್ಲಾಯಿತು.

ಟೊರೆಂಟೊ ವಿಶ್ವವಿದ್ಯಾಲಯ ಅಮೆರಿಕದ ’ಎಲಿ ಲಿಲ್ಲಿ’ ಎಂಬ ಔಷಧಿ ತಯಾರಕರಿಗೆ ಇನ್ಸುಲಿನ್‌ಅನ್ನು ಬೃಹತ್ ಪ್ರಮಾಣದಲ್ಲಿ ತಯಾರಿಸಲು ಪರವಾನಗಿ ನೀಡಿತು. ಆ ಸಂಸ್ಥೆ ಒಂದು ವರ್ಷದಲ್ಲಿ ಇನ್ಸುಲಿನ್‌ಅನ್ನು ಜನಸಾಮಾನ್ಯರಿಗೆ ದೊರಕುವಂತೆ ಅನುಕೂಲ ಮಾಡಿಕೊಟ್ಟಿತು.

1921ರವರೆವಿಗೂ ಟೈಪ್ 1 ಮಧುಮೇಹ ತಗುಲಿದ ಮಕ್ಕಳ ಜೀವಾವಧಿ ಮೂರು ತಿಂಗಳಿಂದ ಹೆಚ್ಚೆಂದರೆ ಎರಡು-ಮೂರು ವರ್ಷದವರೆಗೆ ಮಾತ್ರ ಇರುತ್ತಿತ್ತು. ಅದು ಕೂಡ ಸಾಧ್ಯವಾಗುತ್ತಿದ್ದದ್ದು ಮಕ್ಕಳಿಗೆ ಅತೀವವಾದ ಹಸಿವಿನಲ್ಲೇ ಬಳಲುವಂತಹ ಆಹಾರವನ್ನ ಕೊಟ್ಟಾಗ ಮಾತ್ರ. ಆ ಮಕ್ಕಳು ಕೂಡ ಉಳಿಯುತ್ತಿದ್ದುದು ಡಯಾಬೆಟಿಕ್ ಕೋಮದಿಂದ ಅಸುನೀಗುವವರೆಗೂ. ಇನ್ಸುಲಿನ್ನಿನ ಅವಿಷ್ಕಾರದ ನಂತರ ಎಲ್ಲವೂ ಬದಲಾಯಿತು. ಟೈಪ್ 1 ಮಧುಮೇಹದಿಂದ ಬಳಲುತ್ತಿದ್ದ ಮಕ್ಕಳ ಜೀವಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಉಳಿಸಲು ಸಾಧ್ಯವಾಯಿತು.

ಇನ್ಸುಲಿನ್‌ನ ಆವಿಷ್ಕಾರಕ್ಕೆ ನೊಬೆಲ್ ಪ್ರಶಸ್ತಿಯನ್ನ 1923ರಲ್ಲಿ ನೀಡಲಾಯಿತು. ಮಾನವನ ಮೇಲೆ ಪ್ರಯೋಗಿಸಿದ ಒಂದು ವರ್ಷದಲ್ಲೇ, ಆವಿಷ್ಕಾರವೊಂದಕ್ಕೆ ನೊಬೆಲ್ ಪ್ರಶಸ್ತಿ ದೊರಕಿರುವುದು ಚರಿತ್ರೆಯಲ್ಲೇ ಗಮನಾರ್ಹವಾದ ದಾಖಲೆ. ಆದರೂ ಈ ಪ್ರಶಸ್ತಿಯ ಬಗ್ಗೆ ಒಂದು ವಿವಾದ ತಲೆದೋರಿತು. ನೊಬೆಲ್ ಸಮಿತಿ ಪ್ರಶಸ್ತಿಯನ್ನ ಬ್ಯಾಂಟಿಂಗ್ ಮತ್ತು ಮಾಕ್ಲಿಯಾಡ್ ಇಬ್ಬರಿಗೂ ಸೇರಿ ನೀಡಿತು. ಬ್ಯಾಂಟಿಂಗ್ ಆಪಾದಿಸಿದ್ದು ಮಾಕ್ಲಿಯಾಡ್‌ಗೂ ಈ ಆವಿಷ್ಕಾರಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು. ಅವರ ಬದಲಿಗೆ ಚಾರ್ಲ್ಸ್ ಬೆಸ್ಟ್‌ಗೆ ಅದು ನಿಜವಾಗಲೂ ಸಲ್ಲಬೇಕಾಗಿತ್ತು ಎಂದರು. ಅದೇ ಕಾರಣಕ್ಕೆ ತಮಗೆ ಬಂದ ಪ್ರಶಸ್ತಿಯ ಹಣವನ್ನ ಬೆಸ್ಟ್ ಜತೆ ಹಂಚಿಕೊಂಡರು. ಕಾಲಿಪ್ ಅವರ ಶುದ್ಧೀಕರಣದ ತಂತ್ರಜ್ಞಾನದಿಂದಲೇ ಇನ್ಸುಲಿನ್‌ಅನ್ನು ಬೃಹತ್ ಪ್ರಮಾಣದಲ್ಲಿ ಹೊರತರಲು ಸಾಧ್ಯವಾಗಿದ್ದು ಎಂದು ಆಗ್ರಹಿಸಿದ ಮಾಕ್ಲಿಯಾಡ್ ಕೂಡ ತಮಗೆ ಸಂದಾಯವಾದ ಪ್ರಶಸ್ತಿಯ ಹಣವನ್ನ ಕಾಲಿಪ್ ಜತೆ ಹಂಚಿಕೊಂಡರು. ಹೀಗಾಗಿ ಈ ಆವಿಷ್ಕಾರದ ಹಿರಿಮೆಗೆ ನಾಲ್ಕು ಜನರೂ ಪಾತ್ರರಾದರು.

ನಂತರ ಇನ್ಸುಲಿನ್ ಎಲ್ಲಾ ದೇಶಗಳಲ್ಲೂ ವಾಣಿಜ್ಯಿಕವಾಗಿ ದೊರಕುವಂತಾಯಿತು. ಮೊದಲು ಇನ್ಸುಲಿನ್‌ಅನ್ನು ಬಳಸಲು ಶುರುಮಾಡಿದ ದೇಶಗಳು ಕೆನಡ, ಅಮೆರಿಕ ಮತ್ತು ಯೂರೋಪ್ ರಾಷ್ಟ್ರಗಳು. ಆ ಸಮಯದಲ್ಲಿ ಭಾರತ ಬ್ರಿಟಿಷ್ ಅಧಿಪತ್ಯದಲ್ಲಿ ಇದ್ದುದರಿಂದ, ಇನ್ಸುಲಿನ್ ಪಡೆಯುವಲ್ಲಿ ಸಫಲವಾಯಿತು. ಇಲ್ಲಿ ಎದ್ದ ದೊಡ್ಡ ಪ್ರಶ್ನೆಯೆಂದರೆ ಇನ್ಸುಲಿನ್ ಒಂದು ಪ್ರೋಟಿನ್ ರಾಸಾಯನಿಕ ಆಗಿದ್ದರಿಂದ ಉಷ್ಣವಲಯದ ದೇಶಗಳಲ್ಲಿ ಕೆಲಸ ಮಾಡುತ್ತದೆಯೊ ಇಲ್ಲವೋ ಎನ್ನುವುದು. ನಂತರ ಅನೇಕ ಸಂಶೋಧನಾ ಅಧ್ಯಯನಗಳು ಭಾರತದಿಂದ ಪ್ರಕಟಗೊಂಡವು. ರೆಫ್ರಿಜರೇಟರ್‌ನಲ್ಲಿ ಇಟ್ಟಾಗ ಇನ್ಸುಲಿನ್ ತನ್ನ ಸಾಮರ್ಥ್ಯವನ್ನು ಕಳೆದುಕೊಳ್ಳುವುದಿಲ್ಲ ಎನ್ನುವ ಅಂಶ ಕೂಡ ಸಾಬೀತಾಯಿತು.

ಇಂದು ಈ ಇನ್ಸುಲಿನ್‌ನ ಆವಿಷ್ಕಾರದ ನೂರು ವರ್ಷಗಳ ನಂತರ, ಟೈಪ್ 1 ಮಧುಮೇಹಕ್ಕೆ ತುತ್ತಾದ ಮಕ್ಕಳು ತೊಂಬತ್ತರಿಂದ ನೂರು ವರ್ಷಗಳವರೆಗೂ ಬದುಕುಳಿದಿರುವ ದಾಖಲೆಗಳಿವೆ. ಟೈಪ್ 1 ಮಧುಮೇಹದ ರೋಗಿಗಳಾಗಿರುವ ಮಕ್ಕಳಿಗೆ ಇನ್ಸುಲಿನ್ ಚಿಕಿತ್ಸೆಯಲ್ಲದೇ ಬೇರೆ ಯಾವುದೇ ವಿಧವಾದ ಚಿಕಿತ್ಸೆ ಇದುವರೆಗೂ ಆವಿಷ್ಕಾರಗೊಂಡಿಲ್ಲ.

ಇನ್ನೂ ಕೈಗೆಟುಕದ ಈ ಸಂಶೋಧನೆ

ಇಂದು ಇನ್ಸುಲಿನ್‌ಅನ್ನು ಕಂಡು ಹಿಡಿದಿದ್ದವರು ಬದುಕಿದ್ದಿದ್ದರೆ, ಅವರು ಬಹುಶಃ ಅಸಂತೋಷದಿಂದ ಇರುತ್ತಿದ್ದರು. ಅಂದರೆ ಅನೇಕ ಕಾರಣಗಳಿಗೆ ಟೈಪ್ 1 ಮಧುಮೇಹಕ್ಕೆ ತುತ್ತಾದ ಮಕ್ಕಳುಗಳು ಜೀವ ಕಳೆದುಕೊಳ್ಳುತ್ತಿವೆ.

ಅವುಗಳಲ್ಲಿ ಮೊದಲನೆಯದು, ಸಾಕಷ್ಟು ಇನ್ಸುಲಿನ್ ಪ್ರಪಂಚದಾದ್ಯಂತ ಸರಬರಾಜಾಗುತ್ತಿದ್ದರೂ ಕೂಡ, ಅದು ಅನೇಕ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಜನರಿಗೆ ಕೈಗೆಟುಕದಂತಾಗಿದೆ. ಎರಡನೆಯದಾಗಿ, ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲದೇ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲೂ ಕೂಡ ಅದರ ಅತಿಹೆಚ್ಚು ಬೆಲೆಯ ಕಾರಣದಿಂದು ಬಡವರ ಕೈಗೆಟುಕದಂತಾಗಿದೆ.

ನಾವು ಇನ್ಸುಲಿನ್‌ನ ಆವಿಷ್ಕಾರದ ನೂರನೇ ವರ್ಷವನ್ನ ಸಂಭ್ರಮಿಸುತ್ತಿರುವಾಗಲೇ, ಭಾರತದಲ್ಲಿನ ಟೈಪ್ 1 ಮಧುಮೇಹ ರೋಗ ತಗುಲಿದ 1.5 ಲಕ್ಷ ಮಕ್ಕಳಲ್ಲಿ ಒಂದು ಮಗುವೂ ಇನ್ಸುಲಿನ್ ಪಡೆಯಲು ಆರ್ಥಿಕವಾದ
ಅಸಮರ್ಥತೆಯ ಕಾರಣದಿಂದ ಸಾಯಬಾರದು ಎನ್ನುವ ಸಂಕಲ್ಪದ ಅಗತ್ಯವಿದೆ. ನಮ್ಮ ಆರೋಗ್ಯ ಇಲಾಖೆ ತಮ್ಮ ದೃಷ್ಟಿಯನ್ನು ಇದರ ಕಡೆಗೆ ಹರಿಸುವುದು ಅತ್ಯಗತ್ಯವಾಗಿದೆ.

ಖಂಡಿತವಾಗಿಯೂ ಇನ್ಸುಲಿನ್‌ಅನ್ನು ಆಹಾರದಂತೆಯೇ ಮೂಲಭೂತ ಹಕ್ಕನ್ನಾಗಿ ಪರಿಗಣಿಸಬೇಕು. ಈ ಸಂಕಲ್ಪವನ್ನ ನಮ್ಮ ಸರ್ಕಾರ ಮಾಡಿದರೆ ಇನ್ಸುಲಿನ್ ಆವಿಷ್ಕಾರದ ನೂರನೇ ವರ್ಷದ ಸಂಭ್ರಮವನ್ನ ವಿಜೃಂಭಣೆಯಿಂದ ಆಚರಿಸಿದಂತಾಗುತ್ತದೆ.

(JULY 04, 2021, ದ ಹಿಂದೂ ಪತ್ರಿಕೆಯ ಮ್ಯಾಗಜಿನ್‌ನಲ್ಲಿ ವಿ ಮೋಹನ್ ಅವರು ಬರೆದಿದ್ದ ’100 ಇಯರ್ಸ್ ಆಫ್ ಇನ್ಸುಲಿನ್ ಡಿಸ್ಕವರಿ’ ಲೇಖನವನ್ನು ಆಧರಿಸಿ ಕೆ ಶ್ರೀನಾಥ್ ಅವರು ಇದನ್ನು ಕನ್ನಡದಲ್ಲಿ ಸಿದ್ಧಪಡಿಸಿದ್ದಾರೆ)


ಇದನ್ನೂ ಓದಿ: ದೆಹಲಿ ಸೇರಿ 4 ರಾಜ್ಯಗಳಲ್ಲಿ ಲಸಿಕೆ ಕೊರತೆ: ವ್ಯಾಕ್ಸಿನೇಷನ್‌‌ ಕೇಂದ್ರಗಳಿಗೆ ಬಾಗಿಲು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...