Homeಮುಖಪುಟಪ್ರೇಕ್ಷಕನ ವ್ಯಾಖ್ಯಾನದಿಂದಲೇ ಸೃಷ್ಟಿಯಾಗುವ ಆಂಡ್ರೆಯವರ ಅಮೂರ್ತ ಸಿನಿಮಾಗಳು

ಪ್ರೇಕ್ಷಕನ ವ್ಯಾಖ್ಯಾನದಿಂದಲೇ ಸೃಷ್ಟಿಯಾಗುವ ಆಂಡ್ರೆಯವರ ಅಮೂರ್ತ ಸಿನಿಮಾಗಳು

- Advertisement -
- Advertisement -

ಪಿಕೆ ಟಾಕೀಸ್ 16/ ಜಾಗತಿಕ ಸಿನಿಮಾ/ ಬೆಲ್ಜಿಯಂ/ ಆಂಡ್ರೆ ಡೆಲ್ವೋ (Andre Delvaux)

ದಿ ಮ್ಯಾನ್ ಹೂ ಹ್ಯಾಡ್ ಹಿಸ್ ಹೇರ್ ಕಟ್ ಶಾರ್ಟ್ (ಡಚ್, 1965, The Man Who Had His Hair Cut Short)

ಮದುವೆಯಾಗಿ ಹತ್ತು ವರ್ಷದ ಮಗಳಿರುವ ಗೊವರ್ಟ್ ನಲವತ್ತು ವಯಸ್ಸಿನ ಅಸುಪಾಸಿನ ಶಿಕ್ಷಕ. ಯಾವುದೇ ರೀತಿಯ ವಿಶಿಷ್ಟ ಆಕರ್ಷಣೆ ಹೊಂದಿರದ ಸೀದಾಸಾದ ಬದುಕಿನ ಈ ವ್ಯಕ್ತಿ ತಾನು ಕೆಲಸ ಮಾಡುತ್ತಿರುವ ಶಾಲೆಯಲ್ಲಿ ಕಲಿಯುತ್ತಿರುವ ಆಕರ್ಷಕ ಮತ್ತು ಮೋಹಕ ರೂಪವುಳ್ಳ ಹದಿಹರೆಯದ ಹುಡುಗಿ ಫ್ರಾನ್‌ಳ ಸೆಳೆತಕ್ಕೆ ಸಿಕ್ಕಿಕೊಂಡರೆ? ಗೊವರ್ಟ್‌ನಿಗೆ ತನ್ನ ಮನಸ್ಸಿನಲ್ಲಿರುವುದನ್ನು ವ್ಯಕ್ತಪಡಿಸಲು ಭಯವಾಗಿ, ಫ್ರಾನ್‌ಳನ್ನು ನೋಡಬೇಕೆಂಬ, ಮಾತಾಡಿಸಬೇಕೆಂಬ ಹಂಬಲ ಗೀಳಾಗಿಬಿಟ್ಟರೆ? ಇದೇ ಈ ಸಿನಿಮಾದ ಅತಿ ನವಿರಾದ ಕಥೆ.

ಸಿನಿಮಾದ ಮೊದಲ ಫ್ರೇಮ್‌ನಲ್ಲಿ ಗೊವರ್ಟ್ ತನ್ನ ಮನೆಯ ಸೋಫಾದಲ್ಲಿ ಕಣ್ಮುಚ್ಚಿ ಕನಸ್ಸು ಕಾಣುವಂತೆ ಮಲಗಿರುತ್ತಾನೆ. ಫ್ರೇಮ್‌ನ ಹೊರಗಿಂದ ಹೆಂಡತಿಯ ಧ್ವನಿ ಕೇಳಿ ಮೇಲೇಳುತ್ತಾನೆ. ಮಗಳು ತಂದು ಕೊಡುವ ಕಾಫಿ ಹೀರಿ, ಶಾಲೆಯಲ್ಲಿ ನಡೆಯಲಿರುವ ಪದವಿ ಪುರಸ್ಕೃತರ ಸಮಾರಂಭಕ್ಕೆ ತಯಾರಾಗಿ ಹೋಗುವ ಮೊದಲು, ತನ್ನ ಸಂಪೂರ್ಣ ದೇಹ ಕಾಣುವ ಆಳೆತ್ತರದ ಕನ್ನಡಿಯ ಮುಂದೆ ನಿಂತು, ಅಲ್ಲಿ ಹಣ್ಣಾಗಿ ಒಣಗಿ ಹೋಗುತ್ತಿರುವ ಬಾಳೆಹಣ್ಣುಗಳನ್ನು ನೋಡಿ, “ಇವುಗಳನ್ನು ಇಂದೇ ತಿನ್ನಬೇಕು, ನಾಳೆಗೆ ಇವು ಹಾಳಾಗುತ್ತವೆ” ಎನ್ನುತ್ತಾನೆ.

ಸ್ಟಾನ್ಲಿ ಕ್ಯುಬ್ರಿಕ್‌ರ ಲೊಲಿತಾ(1962) ಸಿನಿಮಾದ ಗಾಢವಾದ ಛಾಯೆ ಇರುವ ಸಿನಿಮಾ ಇದು. ಲೊಲಿತಾ ವ್ಲಾಡಿಮಿರ್ ನಬಕೊವ್ ಅವರ ಅದೇ ಹೆಸರಿನ ಕಾದಂಬರಿಯಿಂದ ಪ್ರೇರೇಪಿತವಾಗಿತ್ತು. ದಿ ಮ್ಯಾನ್ ಹೂ ಹ್ಯಾಡ್ ಹಿಸ್ ಹೇರ್ ಕಟ್ ಶಾರ್ಟ್ ಸಿನಿಮಾ ಅದೇ ಹೆಸರಿನ 1947ರಲ್ಲಿ ಪ್ರಕಟವಾದ ಬೆಲ್ಜಿಯಂ ಕಾದಂಬರಿಯೊಂದನ್ನು ಆಧರಿಸಿದೆ. ನಡುವಯಸ್ಸಿನ ಗಂಡಸಿನ ಮನಸ್ಸಿನ ತಳಮಳಗಳನ್ನು ಅತಿ ಪ್ರಬಲವಾಗಿ ಹಿಡಿದಿಟ್ಟಿದೆ.

ಮುಂದುವರೆದು, ಗೊವರ್ಟ್ ಕೂದಲನ್ನು ಕ್ಷೌರಿಕ ಕತ್ತರಿಸುವ ದೃಶ್ಯವನ್ನು ತೋರಿಸಿರುವ ವಿಧಾನ ಗಮನಾರ್ಹವಾಗಿ ಚಿತ್ರಿತವಾಗಿದೆ. ಕ್ಷೌರಿಕನ ಮಾತಲ್ಲೇ ಹೇಳುವಂತೆ “ವೈದ್ಯರ ಮೇಲೆ ಗೌರವವಿದೆ, ಆದ್ರೂ ನನ್ ಕೆಲಸ ಯಾವುದೇ ಕಲೆಗಿಂತ ಕಮ್ಮಿಯಿಲ್ಲ ಎಂಬುದನ್ನು ಅಷ್ಟೇ ಚೆನ್ನಾಗಿ ಚಿತ್ರಿಸಲಾಗಿದೆ. ಹೀಗೆ ಸಿನಿಮಾದ ಮತ್ತೊಂದು ಭಾಗದಲ್ಲಿ ವೈದ್ಯನೊಬ್ಬ ಸತ್ತು ಕೊಳೆಯುವ ಸ್ಥಿತಿಯಲ್ಲಿರುವ ಶವವನ್ನು ಪರೀಕ್ಷೆ ಮಾಡುವಾಗ, ಶವವನ್ನು ತೋರಿಸದೆ ಬರೀ ಶಬ್ದ ವಿನ್ಯಾಸ ಮತ್ತು ಮುಖಾಭಿನಯದಲ್ಲೇ ದೃಶ್ಯವನ್ನು ಕಟ್ಟಿರುವುದು ಆಸಕ್ತಿದಾಯಕವಾಗಿದೆ.

ಚಿತ್ರಕಥೆಗೆ ಬಂದರೆ, ಶಾಲೆಯಿಂದ ಹೊರಹೋಗುತ್ತಿರುವ ಫ್ರಾನ್‌ಳಿಗೆ ಗೊವರ್ಟ್ ತನ್ನ ಮನಸ್ಸಿನಲ್ಲಿರುವುದನ್ನು ಹೇಳಬೇಕೆಂದು ಪ್ರಯತ್ನಿಸಿ ಸೋಲುತ್ತಾನೆ. ಹೀಗೆ ಕೆಲವು ವರ್ಷಗಳು ಕಳೆದ ನಂತರ ನ್ಯಾಯಾಲಯದ ಕಾರಕೂನನಾಗಿ ಕೆಲಸ ಮಾಡುತ್ತಿರುವಾಗ, ಶವಪರೀಕ್ಷೆಗೆಂದು ವೈದ್ಯನ ಜೊತೆ ಬಂದು ಹೋಟೆಲಿನಲ್ಲಿ ತಂಗಿದ್ದಾಗ, ಫ್ರಾನ್ ಅಲ್ಲಿ ಮತ್ತೆ ಕಾಣಿಸಿಕೊಳ್ಳುತ್ತಾಳೆ. ಆಗ ಗೊವರ್ಟ್ ತನ್ನಲ್ಲಿ ಉಳಿದುಕೊಂಡಿದ್ದ ಭಾವನೆಯನ್ನು ನಿವೇದಿಸಿಕೊಂಡಾಗ, ಫ್ರಾನ್ ಬೇರೊಬ್ಬ ಶಿಕ್ಷಕನನ್ನು ಪ್ರೀತಿಸುತ್ತಿದ್ದ ವಿಷಯವನ್ನು ತಿಳಿಸುತ್ತಾಳೆ. ಅದನ್ನು ಅರಗಿಸಿಕೊಳ್ಳಲಾಗದೆ ಗೊವರ್ಟ್ ರಿವಾಲ್ವಾರ್‌ನಿಂದ ಆಕೆಯ ಮೇಲೆ ಗುಂಡು ಹಾರಿಸುತ್ತಾನೆ. ಶಬ್ದ ಕೇಳಿ ವೈದ್ಯ ರೂಮಿಗೆ ಬಂದಾಗ, ಗೊವರ್ಟ್ “ದಯವಿಟ್ಟು ಇವಳ ದೇಹವನ್ನು ಕತ್ತರಿಸಬೇಡಿ” ಎಂದು ಪರಿಪರಿಯಾಗಿ ವೈದ್ಯನನ್ನು ಬೇಡಿಕೊಳ್ಳುತ್ತಾನೆ.

ಹತ್ತು ವರ್ಷಗಳ ಕಾಲ ಜೈಲುವಾಸಕ್ಕೆ ತುತ್ತಾಗುವ ಗೊವರ್ಟ್ ಒಂದು ದಿನ ನ್ಯೂಸ್ ರೀಲ್‌ನಲ್ಲಿ ಫ್ರಾನ್‌ಳನ್ನು ನೋಡಿ ಮೊದಲಿಗೆ ಅಘಾತಕ್ಕೊಳಗಾಗುತ್ತಾನೆ. ಅಲ್ಲಿರುವ ವಾರ್ಡನ್ ಬಳಿ ಫ್ರಾನ್ ಬದುಕುಳಿದಿರುವ ವಿಷಯವನ್ನು ಕೇಳಿ, ನಿರಾಳಗೊಂಡು ನಿಟ್ಟುಸಿರುಬಿಡುವ ಮೂಲಕ ಸಿನಿಮಾ ಮುಗಿಯುತ್ತದೆ.

ರಾಂಡೆವೂ ಅಟ್ ಬ್ರೇ (ಫ್ರೆಂಚ್ 1971, Rendezvous at Bray)

ಅದು 1917ನೇ ಇಸವಿ. ಮೊದಲ ವಿಶ್ವಯುದ್ಧ ಎಲ್ಲ ಕಡೆಗೂ ಹರಡುತ್ತಿರುವ ಸಮಯವದು. ಜೂಲಿಯನ್ ಪಿಯಾನೋ ಕಲಿಯುತ್ತಿರುವ ಯುವಕ. ಗೆಳೆಯನನ್ನು ಭೇಟಿಯಾಗಲೆಂದು ಬ್ರೇ ಎಂಬ ಊರಿಗೆ ಹೋಗುತ್ತಾನೆ. ಗೆಳೆಯನಿಗಾಗಿ ಕಾಯುವಿಕೆಯಲ್ಲಾಗುವ ಘಟನೆಗಳೇ ಸಿನಿಮಾದ ಕಥಾನಕ. ಜೂಲಿಯನ್ ರೈಲಿನಲ್ಲಿ ಬಂದಿಳಿದ ನಿಲ್ದಾಣ ನಿರ್ಜನವಾಗಿದೆ. ತನ್ನ ಗೆಳೆಯನ ವಿಳಾಸದ ಕುರಿತು ಯಾರನ್ನಾದರೂ ಕೇಳಲೆಂದು ಊರಿನೊಳಗೆ ನಡೆದುಹೋಗುವಾಗ ಇಡೀ ಊರೇ ಖಾಲಿಯಾಗಿದೆ. ದಾರಿಯಲ್ಲಿ ಆಟವಾಡುತ್ತಿರುವ ಮಕ್ಕಳಿಬ್ಬರನ್ನು ಕೇಳುತ್ತಾನೆ. ಅವರು ಸನ್ನೆಯಲ್ಲಿಯೇ ಮುಂದೆ ಹೋಗುವಂತೆ ಹೇಳುತ್ತಾರೆ. ಕೊನೆಗೆ ಬಂಗಲೆಯೊಂದರ ಗೇಟಿನ ಬಳಿಗೆ ಬರಲು, ಸುಂದರ ಯುವತಿಯೊಬ್ಬಳು (ಮನೆಯ ಕೆಲಸದಾಕೆ) ಅವನನ್ನು ಬರಮಾಡಿಕೊಳ್ಳುತ್ತಾಳೆ.

ರಾಂಡೆವೂ ಅಂದರೆ ಫ್ರೆಂಚ್ ಭಾಷೆಯಲ್ಲಿ ಭೇಟಿ ಎಂದರ್ಥ. ಗೆಳೆಯನ ಭೇಟಿಗೆಂದು ಬಂದ ಜೂಲಿಯಾನ್‌ನಿಗೆ ನಿರಾಸೆ ಕಾದಿರುತ್ತದೆ. ಬಂಗಲೆಯಲ್ಲಿ ಗೆಳೆಯನ ಸುಳಿವಿಲ್ಲ. ಗೆಳೆಯನೂ ಕೂಡ ಪಿಯಾನೋ ಕಲಿಯುತ್ತಿದ್ದವನು. ಮೊದಲ ವಿಶ್ವಯುದ್ದದಲ್ಲಿ ಯುದ್ಧ ವಿಮಾನದ ಪೈಲೆಟ್‌ಆಗಿ ಪಾಲ್ಲೊಂಡಿದ್ದ ಗೆಳೆಯ ತನ್ನ ಊರಿಗೆ ಹಿಂದಿರುಗುತ್ತಿರುವ ಸುದ್ದಿಯನ್ನು ಜೂಲಿಯಾನ್‌ನಿಗೆ ತಿಳಿಸಿರುತ್ತಾನೆ.

ಮನೆಯ ಕೆಲಸದಾಕೆ ಸುಂದರಿ. ಮಿತ ಭಾಷಿ. ಜೂಲಿಯಾನ್ ಅವಳನ್ನು ಪದೇಪದೇ ಮಾತಿಗಿಳಿಯುವಂತೆ ಪ್ರೇರೇಪಿಸಿದರೂ, ಅವಳು ಮಾತ್ರ ತನ್ನ ಕೆಲಸದಲ್ಲಿ ಮಗ್ನರಾಗಿರುತ್ತಾಳೆ.

ಸಿನಿಮಾದ ಮೊದಲ ಭಾಗದಲ್ಲಿ ಚಿತ್ರಿತವಾಗಿರುವ, ಪುಟ್ಟ ಹುಡುಗಿಯೊಬ್ಬಳು ಕುಂಟೆಬಿಲ್ಲೆ ಆಡುವಾಗ ಹಾಡುತ್ತಿದ್ದ ಹಾಡೊಂದು ಜೂಲಿಯಾನ್‌ನನ್ನು ಕಾಡುತ್ತಿರುತ್ತದೆ. ಅದೇ ಹಾಡನ್ನು ಗೆಳೆಯನ ಬಂಗಲೆಯಲ್ಲಿದ್ದ ಪಿಯಾನೋದಲ್ಲಿ ನುಡಿಸುತ್ತಾ, ಪ್ಲಾಷ್‌ಬ್ಯಾಕಿಗೆ ಹೋಗುತ್ತಾನೆ. ಅಲ್ಲಿ ತನ್ನ ಗೆಳೆಯನೊಂದಿಗೆ ಕಾರು ವಿಹಾರ, ಕಾಡಿನ ಸುತ್ತಾಟ ನೆನಪಿಸಿಕೊಳ್ಳುತ್ತಾನೆ.

ಗೋಡೆಯ ಮೇಲಿದ್ದ ಚಿತ್ರಕಲೆಯನ್ನು ನೋಡಿ ತನ್ನ ಭವಿಷ್ಯದ ಕುರಿತು ಕನಸೊಂದನ್ನು ಕಾಣುತ್ತಾನೆ. ಆ ಕನಸಿನಲ್ಲಿ, ಅತಿ ಶ್ರೀಮಂತರು ಮತ್ತು ಗಣ್ಯರ ಮಧ್ಯೆ ಜೂಲಿಯಾನ್ ಪಿಯಾನೋ ನುಡಿಸುತ್ತಿದ್ದಂತೆ, ಗಣ್ಯರೊಬ್ಬರ ಪತ್ನಿ ಜೂಲಿಯಾನ್‌ನಿಗೆ ಆರ್ಕಷಿತಗೊಂಡ ಅವನಿಗೆ ಮುತ್ತಿಡುತ್ತಾಳೆ. ಅವಳ ಪತಿ ಜೂಲಿಯಾನ್‌ನ ಪಿಯಾನೋ ವಾದನೆಗೆ ಮನಸೋತು ಸಾವಿರ ಫ್ರಾಂಕ್ಸ್ ಕೊಡಲು ಬಂದಾಗ, ಜೂಲಿಯಾನ್ ಅದನ್ನು ತೆಗೆದುಕೊಂಡು ಬಿಸಾಕುತ್ತಾನೆ.

ಹೀಗೆ ಹಲವು ಬಾರಿ ಕನಸುಗಳನ್ನು ಕಾಣುತ್ತಾ ಮತ್ತು ಹಳೆಯ ನೆನಪುಗಳನ್ನು ನೆನಪಿಸಿಕೊಳ್ಳುತ್ತಾ ಗೆಳೆಯನಾಗಿ ಕಾಯುತ್ತಾ, ಪದೇಪದೇ ಸುಂದರಿ ಕೆಲಸದಾಕೆಯ ಗಮನ ಸೆಳೆಯಲು ಪ್ರಯತ್ನಿಸುತ್ತಾನೆ. ಆ ಹಳೆಯ ನೆನಪಿನ ಭಾಗವಾಗಿ ಮೂಕಿ ಸಿನಿಮಾವೊಂದಕ್ಕೆ ಲೈವ್ ಸಂಗೀತವನ್ನು ಪಿಯಾನೋದಲ್ಲಿ ನುಡಿಸುತ್ತಾನೆ. ಆ ಸಮಯದಲ್ಲಿ ಪ್ರೇಕ್ಷಕನಿಗೆ ಸಿನಿಮಾದೊಳಗೆ ಮತ್ತೊಂದು ಸಿನಿಮಾದ ವಿಶೇಷ ಅನುಭವ ನೀಡುತ್ತದೆ

ಕಾಯುವಿಕೆಯಲ್ಲಿ ತಿಂಡಿ, ಕಾಫಿ, ವೈನ್, ವಿಸ್ಕಿ, ಊಟವೆಲ್ಲ ಮುಗಿಯುತ್ತದೆ. ದಿನಕ್ಕೊಂದೆ ಬರುವ ರೈಲು ಕೂಡ ಹೊರಟುಹೋದ ಕಾರಣ ಅಂದು ರಾತ್ರಿ ಅಲ್ಲೇ ಉಳಿದುಕೊಳ್ಳದೆ ಬೇರೆ ದಾರಿ ಇಲ್ಲ. ಜೂಲಿಯಾನ್ ಊಟದ ನಂತರ ಮಲಗುವಾಗ ಕೆಲಸದಾಕೆಯೊಂದಿಗೆ ಸಂಭೋಗಿಸುತ್ತಾನೆ.

ಮರುದಿನ ಬೆಳಗಿನ ಸಮಯ ರೈಲಿನ ಶಬ್ದ ಕೇಳಿ ತನ್ನ ಬ್ಯಾಗನ್ನು ಹಿಡಿದು ವೇಗವಾಗಿ ನಿಲ್ದಾಣ ತಲುಪಿದರೆ, ಅಲ್ಲಿ ಸೈನಿಕರ ದಂಡೇ ತುಂಬಿರುತ್ತದೆ. ವಾರ್ತಾಪತ್ರಿಕೆಯಲ್ಲಿ ಯುದ್ಧ ತೀವ್ರವಾಗಿದ್ದು, ಪೈಲಟ್‌ಗಳು ಯುದ್ಧದಲ್ಲಿ ನಿರತರಾಗಿದ್ದಾರೆಂದು ಓದುತ್ತಾನೆ. ಅಷ್ಟರಲ್ಲಿ ನಿಂತಿದ್ದ ರೈಲು ನಿಲ್ದಾಣವನ್ನು ಬಿಟ್ಟು ಹೊರಟಿರುತ್ತದೆ. ಮತ್ತೆ ಜೂಲಿಯಾನ್‌ಗೆ ಎಲ್ಲಿಗೆ ಹೋಗಬೇಕೆಂಬ ಗೊಂದಲ ಮೂಡಿ ನಿಂತಲ್ಲೇ ನಿಂತಿರುತ್ತಾನೆ!

ಆಂಡ್ರೆ ಡೆಲ್ವೋ: ಆಂಡ್ರೆಯವರನ್ನು ಬೆಲ್ಜಿಯಂ ಸಿನಿಮಾದ ಗಾಡ್‌ಫಾದರ್ ಎನ್ನುತ್ತಾರೆ. ಇವರ ಸಿನಿಮಾಗಳಲ್ಲಿ ನಿರ್ದಿಷ್ಟ ಸ್ವರೂಪದ ಕಥೆಗಳು ಇರುವುದಿಲ್ಲ, ಬದಲಾಗಿ ಹಲವು ಸನ್ನಿವೇಶಗಳು ಮತ್ತು ಘಟನೆಗಳು ಇರುತ್ತದೆ. ಇವರ ಕಥಾವಿಷಯಗಳು ಕನಸ್ಸು, ಕಲ್ಪನೆ, ಫ್ಯಾಂಟಸಿ, ಒಂಟಿತನಗಳಿಂದ ಕೂಡಿರುವುದು ವಿಶೇಷ.

ಆಂಡ್ರೆರ ಸಿನಿಮಾ ಕಟ್ಟುವ ಶೈಲಿ ಅತಿ ವಿಭಿನ್ನ. ಸಿನಿಮಾವೆಂದರೆ ಕಥೆ ಇರಲೇಬೇಕು, ಅದರಲ್ಲಿ ಉಬ್ಬರ ಏರಿಳಿತಗಳಿಂದ ಪ್ರೇಕ್ಷಕ ಉಸಿರು ಬಿಗಿ ಹಿಡಿದು ನೋಡುವ ಸ್ಥಿತಿಗೆ ತಂದು ನಿಲ್ಲಸಬೇಕೆಂದುಕೊಳ್ಳದೆ, ಪ್ರೇಕ್ಷಕನನ್ನು ಸಿನಿಮಾದೊಳಗೆ ಎಳೆದು, ಅವನ ಬೌದ್ಧಿಕ ತಿಳಿವಳಿಕೆಗೆ ತಕ್ಕಂತೆ ಸಿನಿಮಾವನ್ನು ವ್ಯಾಖ್ಯನಿಸಲು ಬಿಡುವುದು ನಿರ್ದೇಶಕ ಆಂಡ್ರೆ ಅವರ ಸಾಹಸಮಯ ವಿಶಿಷ್ಟತೆ. ಯಾವುದನ್ನು ನಿರ್ದಿಷ್ಟವಾಗಿ ಮತ್ತು ನಿಖರವಾಗಿ ಹೇಳದೆ, ಎಲ್ಲವನ್ನೂ ಒಂದೇ ರೀತಿಯಲ್ಲಿ ತೂಗದೆ, ತರ್ಕ ಮತ್ತು ಅರ್ಥಗಳನ್ನು ಬಿಟ್ಟು ದೃಶ್ಯ ಮತ್ತು ಶಬ್ದಗಳಿಂದಲೇ ಅನುಭವಗಳನ್ನು ಕಟ್ಟುವ ಅವರ ತಂತ್ರ ಶ್ಲಾಘನೀಯ.

ಆಂಡ್ರೆ ಸಿನಿಮಾಗಳಲ್ಲಿ ಕಟ್ಟಿಕೊಡುವ ಪಾತ್ರಗಳ ಮೂಡ್/ಮನಸ್ಥಿತಿಯೇ ಮುಖ್ಯಪಾತ್ರ ವಹಿಸುತ್ತವೆ. ಪದೇಪದೇ ದೃಶ್ಯವನ್ನು ತುಂಡರಿಸದೆ, ಸುದೀರ್ಘವಾದ ದೃಶ್ಯಗಳನ್ನು ಸೃಷ್ಟಿಸಿ, ಪಾತ್ರಗಳನ್ನು ಸದಾ ಹಿಂಬಾಲಿಸುತ್ತಾ ಅವರ ಮನಸ್ಸುಗಳಿಗೆ ಕನ್ನಡಿಯಾಗಿಸುತ್ತಾರೆ.

ದಿ ಮ್ಯಾನ್ ಹೂ ಹ್ಯಾಡ್ ಹಿಸ್ ಹೇರ್ ಕಟ್ ಶಾರ್ಟ್(1965) ಫ್ರೇಮಿಂಗ್ ವಿನ್ಯಾಸದಲ್ಲೇ ಪಾತ್ರಗಳು ಮತ್ತು ಅವರ ನಡುವಿನ ಸಂಬಂಧಗಳನ್ನು ಒಂದೂ ಡೈಲಾಗ್ ಇಲ್ಲದೇ ಕಟ್ಟಿದ್ದಾರೆ. ಇದಕ್ಕೆ ಹಲವು ಉದಾಹರಣೆಗಳನ್ನು ನೆನಪಿಗೆ ಬರುತ್ತವೆ. ಬಸ್ಸಿನಲ್ಲಿ ಗೊವರ್ಟ್ ಪ್ರಯಾಣಿಸುವಾಗ ಕಿಟಿಕಿಯಿಂದ ಕಾಣುವ ಆತ ಕುಳಿತಿರುವ ಒಂದೇ ಸೀಟು, ಅವನ ಒಂಟಿತನವನ್ನು ಹಿಡಿದಿಡುತ್ತದೆ.

ಸಿನಿಮಾದ ಸಾಧನಗಳಾದ ಹಿನ್ನೆಲೆ ಸಂಗೀತ, ಪಾತ್ರಗಳ ಸ್ವಗತಗಳನ್ನು ಬಳಸಿಕೊಳ್ಳುವ ಬಗೆಯನ್ನು ಆಂಡ್ರೆರ ಸಿನಿಮಾಗಳನ್ನು ನೋಡಿಯೇ ಅನುಭವಿಸಬೇಕು. ಒಂದು ಸಿನಿಮಾದಲ್ಲಿ ಅಂತರ್ಮುಖಿ ಪಾತ್ರವೊಂದು ಸ್ವಗತದಲ್ಲಿ ತನ್ನ ಪ್ರೀತಿಯ ನಿವೇದನೆ ಮಾಡಿದರೆ, ಇನ್ನೊಂದು ಸಿನಿಮಾದಲ್ಲಿ ಪಿಯಾನೋ ವಿದ್ಯಾರ್ಥಿಯ ಪಾತ್ರದ ದೆಸೆಯಿಂದ ಸಿನಿಮಾದೂದ್ದಕ್ಕೂ ಪಿಯಾನೋದ ಸಂಗೀತದಿಂದಲೇ ಆವರಿಸಿಕೊಳ್ಳುವಂತೆ ಮಾಡುವುದು ಆಂಡ್ರೆಯವರ ಸಿನಿಮಾ ಸಾಧನೆಯನ್ನು ಎತ್ತಿಹಿಡಿಯುತ್ತದೆ.


ಇದನ್ನೂ ಓದಿ: ಪಿಕೆ ಟಾಕೀಸ್; ಮುಂದುವರೆದ ದೇಶದ ಸಾಮಾಜಿಕ, ಆರ್ಥಿಕ, ಧಾರ್ಮಿಕ ಸಂಕೋಲೆಗಳಲ್ಲಿ ಸಿಕ್ಕಿಕೊಂಡವರ ಕಥೆಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...