ವಿವಾದಿತ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ರೈತರು ದೆಹಲಿಯ ಜಂತರ್ ಮಂತರ್ನಲ್ಲಿ ಕಿಸಾನ್ ಸಂಸತ್ ನಡೆಸುತ್ತಾ ತಮ್ಮ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರಿಗೆ ಬೆಂಬಲ ವ್ಯಕ್ತಪಡಿಸಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೋಮವಾರ ಟ್ಯ್ರಾಕ್ಟರ್ ಚಲಾಯಿಸಿಕೊಂಡು ಸಂಸತ್ ಅಧಿವೇಶನಕ್ಕೆ ಬಂದಿದ್ದಾರೆ.
ವಿವಾದಿತ ಮೂರು ಕೃಷಿ ಕಾನೂನುಗಳ ವಿರುದ್ಧ ತಮ್ಮ ಪ್ರತಿಭಟನೆಯನ್ನು ನಡೆಸಿರುವ ರಾಹುಲ್ ಗಾಂಧಿ ಕಾಯ್ದೆಗಳನ್ನು ರದ್ದುಗೊಳಿಸಿ, ರೈತರ ಬೇಡಿಕೆಗಳನ್ನು ಈಡೇರಿಸಿ ಎಂಬ ಭಿತ್ತಿಫಲಕಗಳ ಜೊತೆಗೆ ಟ್ಯ್ರಾಕ್ಟರ್ ಚಲಾಯಿಸಿ ರೈತರಿಗೆ ಬೆಂಬಲ ನೀಡಿದ್ದಾರೆ.
“ನಾನು ರೈತರ ಸಂದೇಶವನ್ನು ಸಂಸತ್ತಿಗೆ ತಂದಿದ್ದೇನೆ. ಸರ್ಕಾರ ರೈತರ ಧ್ವನಿಯನ್ನು ನಿಗ್ರಹಿಸಲು ಪ್ರಯತ್ನಿಸುತ್ತಿದ್ದಾರೆ. ಕೃಷಿ ಕಾನೂನುಗಳ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಯಲು ಬಿಡುತ್ತಿಲ್ಲ. ಅವರು ಈ ಕರಾಳ ಕಾನೂನುಗಳನ್ನು ರದ್ದುಗೊಳಿಸಬೇಕಾಗುತ್ತದೆ. ಈ ಕಾನೂನುಗಳು 2- 3 ದೊಡ್ಡ ಉದ್ಯಮಿಗಳ ಪರವಾಗಿರುತ್ತದೆ ಎಂದು ಇಡೀ ದೇಶಕ್ಕೆ ತಿಳಿದಿದೆ” ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.
“ರೈತರು ತಮ್ಮ ಭೂಮಿಯನ್ನು ಮಾರಾಟ ಮಾಡುವಂತೆ ಒತ್ತಾಯಿಸಿದರೆ, ಸಂಸತ್ತಿನಲ್ಲಿ ಟ್ರಾಕ್ಟರುಗಳು ಓಡಾಡುತ್ತವೆ” ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ರೈತ ಹೋರಾಟದ ಸಾವುಗಳ ಬಗ್ಗೆ ಮಾಹಿತಿ ಇಲ್ಲ ಎಂದ ಕೇಂದ್ರ: ಪಂಜಾಬ್ ಅಂಕಿ-ಅಂಶ ತಿಳಿಸಿದ್ದೇ ಬೇರೆ!
अगर खेत बेचने पर मजबूर करोगे, तो ट्रैक्टर संसद में चलेगा- सत्य की फ़सल उगाकर रहेंगे!
कृषि-विरोधी क़ानून वापस लो।#FarmersProtest pic.twitter.com/19PnIRet4U
— Rahul Gandhi (@RahulGandhi) July 26, 2021
“ಸರ್ಕಾರದ ಪ್ರಕಾರ, ಈ ಕಾನೂನುಗಳಿಂದ ರೈತರು ತುಂಬಾ ಸಂತೋಷವಾಗಿದ್ದಾರೆ. ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರು ಭಯೋತ್ಪಾದಕರು. ಆದರೆ ವಾಸ್ತವದಲ್ಲಿ, ಸರ್ಕಾರ ರೈತರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ” ಎಂದು ರಾಹುಲ್ ಹೇಳಿದ್ದಾರೆ.
ಆದರೆ, ರೈತರನ್ನು ರಾಜಕೀಯ ಸಾಧನವಾಗಿ ಪ್ರತಿಪಕ್ಷಗಳು ಬಳಸುತ್ತಿವೆ ಎಂದು ಬಿಜೆಪಿ ಹೇಳಿಕೊಂಡಿದೆ. “ರಾಹುಲ್ ಗಾಂಧಿ ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ರೈತರನ್ನು ರಾಜಕೀಯ ಸಾಧನವಾಗಿ ಬಳಸಲಾಗುತ್ತಿದೆ. ಕಾನೂನುಗಳಲ್ಲಿ ಸಮಸ್ಯೆಗಳಿದ್ದರೆ ಅವುಗಳನ್ನು ತಿದ್ದುಪಡಿ ಮಾಡಲು ಒಕ್ಕೂಟ ಸರ್ಕಾರ ಸಿದ್ಧವಾಗಿದೆ. ರೈತರು ಕೂಡ ಮಾತುಕತೆಗೆ ಸಿದ್ಧರಾಗಿದ್ದಾರೆ” ಎಂದು ಬಿಜೆಪಿ ಸಂಸದ ವಿನಯ್ ಸಹಸ್ರಬುದ್ಧೆ ಹೇಳಿದ್ದಾರೆ.
ಮಾನ್ಸೂನ್ ಅಧಿವೇಶನ ಪ್ರಾರಂಭವಾದಾಗಿನಿಂದ, ಕೃಷಿ ಕಾನೂನುಗಳ ಕುರಿತ ಚರ್ಚೆ ವಿಷಯವಾಗಿ ಸಂಸತ್ತನ್ನು ಹಲವಾರು ಬಾರಿ ಮುಂದೂಡಲಾಗಿದೆ. ಕೆಲವು ಕಾಂಗ್ರೆಸ್ ಸಂಸದರು ಈ ವಿಷಯ ಬಗೆಹರಿಯುವವರೆಗೂ ಸದನವನ್ನು ಕಾರ್ಯನಿರ್ವಹಿಸಲು ಬಿಡುವುದಿಲ್ಲ ಎಂದಿದ್ದರು. ಇನ್ನು ಶಿರೋಮಣಿ ಅಕಾಲಿ ದಳವೂ ಸಂಸತ್ತಿನ ಹೊರಗಡೆ ಪ್ರತಿಭಟನೆ ನಡೆಸಿದೆ.
ಇದನ್ನೂ ಓದಿ: ರೈತ ಹೋರಾಟ: ಯುವಕರನ್ನು ಸೆಳೆಯುತ್ತಿರುವ ಮಿನಿ ಕಿಸಾನ್ ಸಂಸತ್ಗಳು