Homeಅಂಕಣಗಳುಬಹುಜನ ಭಾರತ; ಸ್ವತಂತ್ರ ಅಸ್ಮಿತೆಯಲ್ಲಿ ಅರಳಿದ ಶಿವರಾಣಿ ದೇವಿ

ಬಹುಜನ ಭಾರತ; ಸ್ವತಂತ್ರ ಅಸ್ಮಿತೆಯಲ್ಲಿ ಅರಳಿದ ಶಿವರಾಣಿ ದೇವಿ

- Advertisement -
- Advertisement -

ಪ್ರಚಂಡ ಪ್ರಸಿದ್ಧ ಜೀವನ ಸಂಗಾತಿಯ ನೆರಳಿನಲ್ಲಿ ಕಳೆದೇ ಹೋದ ಪತ್ನಿಯರು, ಪತಿಯರಿಗೆ ಲೆಕ್ಕವಿಲ್ಲ.

ಆದರೆ ಹಿಂದೀ ಉರ್ದುವಿನಲ್ಲಿ ಬರೆದ ಮಾನವತಾವಾದಿ ಲೇಖಕ ಮುನ್ಷಿ ಪ್ರೇಮ್ ಚಂದ್ ಅವರ ಪತ್ನಿ ಶಿವರಾಣಿ ದೇವಿ, ಪತಿಯ ಪ್ರಕಾಶಮಯ ಪ್ರಭಾವಳಿಯಲ್ಲೂ ಕಳೆದುಹೋಗದೆ ಹೊಳೆದವರು. ಸ್ವಂತ ಅಸ್ಮಿತೆ ಉಳಿಸಿಕೊಂಡವರು.

’ನಮ್ಮ ಕನಸಿನ ರಾಷ್ಟ್ರೀಯತೆಯಲ್ಲಿ ಜನ್ಮಜಾತ ವರ್ಣಗಳ ಗಂಧಗಾಳಿಗೂ ಅವಕಾಶ ಇರದು. ಅದು ಶ್ರಮಿಕರು ಮತ್ತು ರೈತರ ಸಾಮ್ರಾಜ್ಯ. ಬ್ರಾಹ್ಮಣ ಕಾಯಸ್ಥ ಕ್ಷತ್ರಿಯರು ಅಲ್ಲಿರುವುದಿಲ್ಲ. ಸಮಸ್ತರೂ ಭಾರತವಾಸಿಗಳು. ಈ ಎಲ್ಲ ಲಡಾಯಿ ಬೆರಳೆಣಿಕೆಯ ವ್ಯಕ್ತಿಗಳದು. ಇವರಿಂದ ದೂರವಿರುವ ರಾಷ್ಟ್ರದಲ್ಲಿ ಹಿಂದೂಗಳೂ ಇಲ್ಲ, ಮುಸಲ್ಮಾನರೂ ಇಲ್ಲ. ಅಲ್ಲಿರುವವರೆಲ್ಲ ಶ್ರಮಿಕರು ಮತ್ತು ರೈತರು. ಒಬ್ಬರಿಗಿಂತ ಮತ್ತೊಬ್ಬರು ದೀನ ದರಿದ್ರ ದಲಿತರು ಮತ್ತು ಶೋಷಣೆಯ ಗಾಣದಲ್ಲಿ ಅರೆಯಲ್ಪಟ್ಟವರು. ಆರತಿ ನಮಾಜು-ಹಿಂದೀ-ಉರ್ದು ಸಮಸ್ಯೆಗಳು ಇಲ್ಲಿ ಇರುವುದೇ ಇಲ್ಲ’ ಎಂದು 90 ವರ್ಷಗಳ ಹಿಂದೆಯೇ ಹೇಳಿದ್ದವರು ಪ್ರೇಮ್ ಚಂದ್.

ಪ್ರೇಮಚಂದ್ ಅವರ 141ನೆಯ ಜಯಂತಿ ಮೊನ್ನೆ ಜುಲೈ 31ರಂದು ಸರಿದುಹೋಯಿತು. ಪತ್ನಿ ಶಿವರಾಣಿ ದೇವಿಯವರ ಬರೆಹದ ಬದುಕಿಗೆ ನೀರೆರೆದು ಮನಸಾರೆ ಪ್ರೋತ್ಸಾಹಿಸಿದ ಪತಿಯಾಗಿದ್ದರು ಅವರು.

ಪ್ರೇಮ್ ಚಂದ್ ಅವರ ಬದುಕು ಬರೆಹಗಳ ಬಿಡಿಸಲಾಗದ ಭಾಗವೇ ಆಗಿಹೋಗಿದ್ದರು ಪತ್ನಿ ಶಿವರಾಣಿದೇವಿ. ಪ್ರೇಮ್ ಚಂದ್ ಎರಡನೆಯ ಮದುವೆಯಲ್ಲಿ ಅವರ ಕೈಹಿಡಿದಾಗ ಶಿವರಾಣಿ ಹನ್ನೊಂದು ವರ್ಷ ವಯಸ್ಸಿನ ಬಾಲವಿಧವೆ. ’ಕಾಯಸ್ಥ ಬಾಲ ವಿಧವಾ ಉದ್ಧಾರಕ ಪುಸ್ತಿಕಾ’ದಲ್ಲಿ ಅಚ್ಚಾಗಿದ್ದ ಜಾಹೀರಾತನ್ನು ಓದಿ ಶಿವರಾಣಿದೇವಿಯವರ ತಂದೆಗೆ ಪತ್ರ ಬರೆದು ಆಕೆಯನ್ನು ವರಿಸಿದ್ದರು ಪ್ರೇಮ್ ಚಂದ್.

ಪತಿಯ ನಿಧನಾನಂತರ ನಲವತ್ತು ವರ್ಷಗಳ ಕಾಲ ಜೀವಿಸಿದ್ದವರು. ಬರವಣಿಗೆಯಲ್ಲಿ ತೊಡಗಿಕೊಂಡವರು. ಅಂದಿನ ಕಾಲಘಟ್ಟದ ಮಹತ್ವದ ಕತೆಗಾರ್ತಿಯಾಗಿದ್ದರು ಆಕೆ. ಸ್ತ್ರೀ ವಿಮುಕ್ತಿಯ ವಿಷಯದಲ್ಲಿ ಪತಿಗಿಂತ ಹೆಚ್ಚು ಮುಂದೆ ಸಾಗಿದ್ದ ಆಲೋಚನೆ ಅವರದಾಗಿತ್ತು.

ಆಕೆಯ ಕಥಾನಾಯಕಿಯರು ಅನ್ಯಾಯದ ವಿರುದ್ಧ ಸಿಡಿದೇಳುವವರು. ದಿಟ್ಟರೂ ಆತ್ಮವಿಶ್ವಾಸಭರಿತರೂ, ಉದ್ಧಟರೂ ಆಗಿರುತ್ತಿದ್ದರು. ಬಾಲವಿಧವೆ ಕಾಂತಿ ತನ್ನ ಗ್ರಾಮದ ಲಂಪಟ ಮೋಹನನ ಮೂಗನ್ನೇ ಕತ್ತರಿಸಿ ಶಿಕ್ಷಿಸುತ್ತಾಳೆ. ನಲವತ್ತರ ವಯಸ್ಸಿನ ನಾಲ್ಕು ಮಕ್ಕಳ ತಂದೆಯನ್ನು ಮದುವೆಯಾಗುವ ಅನಿವಾರ್ಯದ ಕತ್ತರಿಯಲ್ಲಿ ಸಿಕ್ಕಿಹಾಕಿಕೊಳ್ಳುವ ರಾಮ್ ಪ್ಯಾರಿ ಪತ್ರ ಬರೆದು ವರನಿಗೆ ಬುದ್ಧಿ ಹೇಳಲು ಪ್ರಯತ್ನಿಸುತ್ತಾಳೆ. ಅವನು ಲೆಕ್ಕಿಸುವುದಿಲ್ಲ. ಮದುವೆ ಮಂಟಪದಲ್ಲಿ ಘೂಂಘಟ್ ಕಿತ್ತೆಸೆದು ವರನನ್ನು ಚಪ್ಪಲಿಯಿಂದ ಬಾರಿಸುತ್ತಾಳೆ. ತಂದೆಯತ್ತ ಮತ್ತೊಂದು ಚಪ್ಪಲಿಯನ್ನು ಎಸೆದು ಹೊರನಡೆಯುತ್ತಾಳೆ. ಅವರ ಕತೆಗಳು ಎಂಬತ್ತು ವರ್ಷಗಳ ನಂತರ ಹಿಂದೀ ಓದುಗರಿಗೆ ಇದೀಗ ಲಭಿಸತೊಡಗಿವೆ.

ಶಿವರಾಣಿಯವರ ಕತೆಗಳನ್ನು ಪ್ರೇಮ್ ಚಂದ್ ಬರೆದುಕೊಡುತಿದ್ದರು ಎಂಬ ಓದುಗರ ಸಂದೇಹ ಕಾಲಕ್ರಮೇಣ ನಿವಾರಣೆಯಾಗುತ್ತದೆ. ಅದನ್ನು ನಿವಾರಿಸಲು ಖುದ್ದು ಪ್ರೇಮ್ ಚಂದ್ ಹೆಣಗುತ್ತಾರೆ. ತಮ್ಮ ಕತೆಗಳು ಪತಿಯ ಕತೆಗಳ ಅನುಕರಣೆ ಆಗದಂತೆ ಪ್ರಜ್ಞಾಪೂರ್ವಕವಾಗಿ ಎಚ್ಚರ ವಹಿಸುತ್ತಾರೆ ಶಿವರಾಣಿ.

1956ರಲ್ಲಿ ಪ್ರಕಟವಾದ ಅವರ ’ಪ್ರೇಮ್ ಚಂದ್ ಘರ್ ಮೇಂ’ (ಮನೆಯೊಳಗೆ ಪ್ರೇಮ್ ಚಂದ್) ಎಂಬ ಅವರ ಕೃತಿ, ಸಾಹಿತ್ಯ ಇತಿಹಾಸಕಾರರ ಪಾಲಿನ ಅಮೂಲ್ಯ ನಿಧಿ. ಪ್ರೇಮ್ ಚಂದ್ ಮತ್ತು ಶಿವರಾಣಿಯವರ ಸುತ್ತ ಸುತ್ತುವ ಈ ಕೃತಿ ಅಲ್ಲಲ್ಲಿ ಶಿವರಾಣಿಯವರ ಸಾಹಿತ್ಯಾಸಕ್ತಿ ಮತ್ತು ಅಂದಿನ ರಾಜಕೀಯ ವಾತಾವರಣ ಕುರಿತು ಬೆಳಕು ಚೆಲ್ಲುತ್ತದೆ. ಪ್ರೇಮ್ ಚಂದ್ ಕುರಿತ ಅವರ ಕೃತಿಯಲ್ಲಿ ಅವರ ಮನಸ್ಸಾಕ್ಷಿ ಮಾತಾಡುತ್ತದೆ. ಜಗತ್ತಿನ ಕಣ್ಣಿಗೆ ಕಾಣದಿರುವ ಪ್ರೇಮ್ ಚಂದ್ ಅವರಿಗೆ ಮಡದಿಯ ಕಣ್ಣಿನ ಕನ್ನಡಿಯನ್ನು ಹಿಡಿಯುತ್ತದೆ. ಈ ಕೃತಿಯು ಸ್ತ್ರೀವಾದಿ ಕಣ್ಣೋಟವನ್ನು ಕಟ್ಟಿಕೊಡುವ ದಸ್ತಾವೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಹೊತ್ತಗೆಯು ಕೇವಲ ಪ್ರೇಮ್ ಚಂದ್ ಅವರ ಜೀವನ ಚರಿತ್ರೆಯಲ್ಲ, ಶಿವರಾಣಿಯವರ ಆತ್ಮಕತೆಯೂ ಹೌದು ಎಂಬ ನಿಷ್ಕರ್ಷೆಗೆ ಬರಲಾಗಿದೆ. ಮೇಲ್ನೋಟಕ್ಕೆ ಈ ಪುಸ್ತಕ ಮನೆವಾರ್ತೆಯ ನೆನಪುಗಳನ್ನು ಆಧರಿಸಿದ್ದೆಂದು ತೋರಬಹುದು. ಆದರೆ ಪ್ರೇಮ್ ಚಂದ್ ಅವರ ಒಳ-ಹೊರಗುಗಳನ್ನು ಇಣುಕಿ ನೋಡಿ ಅರ್ಥ ಮಾಡಿಕೊಳ್ಳಲು ಅನುವಾಗುವ ಪ್ರಾಮಾಣಿಕ ಕಿಟಕಿಯಿದು. ಅವರ ಸಾಹಿತ್ಯಕ ಮತ್ತು ಮಾನವೀಯ ಗುಣಗಳ ಮೇಲೆ ಬೆಳಕು ಚೆಲ್ಲುವ ಕಿಟಕಿ. ಪ್ರೇಮ್ ಚಂದ್ ಅವರ ಸಾಹಿತ್ಯವನ್ನು ಅರ್ಥಮಾಡಿಕೊಳ್ಳುವಲ್ಲಿ ನೆರವಾಗುವ ಬರೆಹವಿದು. ಇಲ್ಲಿನ ಪ್ರತಿಯೊಂದು ಪದ ಪದದ ಮೇಲೂ ಅವರ ವ್ಯಕ್ತಿತ್ವದ ಛಾಪು ಮೂಡಿದೆ ಎಂದು ವಿಮರ್ಶಕರು ಹೇಳಿದ್ದಾರೆ.

ದಿನನಿತ್ಯದ ಬದುಕು ಬಾಳುವೆಯ ಸಹಜ ಸರಳ ಮಾತುಕತೆಗಳಲ್ಲೇ ಪ್ರೇಮ್ ಚಂದ್ ಅವರನ್ನು ಶಿವರಾಣಿ ಸಾಕಾರಗೊಳಿಸಿದ್ದಾರೆ. ’ಅವರು ಉಳಿದೆಲ್ಲರಿಗೂ ಮಹಾನ್ ಆಗಿದ್ದಿರಬಹುದು ಆದರೆ ನನ್ನ ಪಾಲಿಗೆ ನನ್ನವರಾಗಿದ್ದರು, ನಾನು ಅವರವಳಾಗಿದ್ದೆ. ನಮ್ಮಿಬ್ಬರ ನಡುವೆ ಮಹಾನತೆಗೆ ಜಾಗವೆಲ್ಲಿಯದು?’ ಎಂಬ ಅವರ ಮಾತುಗಳು ಅರ್ಥಪೂರ್ಣ.

ಪತಿಯ ಮಾನವೀಯತೆಯನ್ನು ಮೆಚ್ಚುತ್ತಲೇ ಕಟಕಟೆಯಲ್ಲಿ ನಿಲ್ಲಿಸಿ ಆತನ ವಿವಾಹೇತರ ಪ್ರೇಮ ಪ್ರಸಂಗವನ್ನು ಪ್ರಶ್ನಿಸಿದ್ದಾರೆ.

ಮೊದಲ ಪತ್ನಿ ಇದ್ದಾಗಲೇ ಮತ್ತೊಬ್ಬ ಹೆಣ್ಣುಮಗಳ ಸಂಗ ಮಾಡಿದ್ದೆ. ನೀನು ಬಂದ ನಂತರವೂ ಈ ಸಂಬಂಧ ಮುಂದುವರೆದಿತ್ತು ಎಂದು ಶಿವರಾಣಿಯವರ ಮುಂದೆ ಪ್ರೇಮ್ ಚಂದ್ ತಪ್ಪೊಪ್ಪಿಕೊಂಡಿದ್ದರು. ಆದರೆ ತಾವು ಪ್ರೇಮ್‌ಚಂದ್ ಬದುಕಿನಲ್ಲಿ ಕಾಲಿಟ್ಟ ನಂತರವೂ ಆತ ಮತ್ತೊಬ್ಬ ಹೆಣ್ಣುಮಗಳ ಸಂಗ ಮುಂದುವರೆಸಿದ್ದ ಶಿವರಾಣಿಯವರಿಗೆ ತಿಳಿದಿತ್ತು. ಆದರೆ ಪತಿಯ ಮುಂದೆ ಆ ಬಗ್ಗೆ ಬಾಯಿ ಬಿಡಲಿಲ್ಲ. ಈ ವಿಷಯ ಪ್ರೇಮ್ ಚಂದ್ ಅವರಿಗೆ ಗೊತ್ತಾಯಿತು. ಹೃದಯವಂತಿಕೆಯಲ್ಲಿ ನೀನು ನನಗಿಂತ ದೊಡ್ಡವಳು ಎಂದು ಪ್ರತಿಕ್ರಿಯಿಸುತ್ತಾರೆ.

ಪ್ರೇಮ್ ಚಂದ್ ಅವರ ಮೇಲೆ ಆದ ಗಾಂಧೀ ಪ್ರಭಾವ ಶಿವರಾಣಿಯವರನ್ನೂ ತಾಗುತ್ತದೆ. ಗಾಂಧೀ ಆಂದೋಲನದಲ್ಲಿ ಭಾಗವಹಿಸುತ್ತಾರೆ. ಗೋರಖಪುರಕ್ಕೆ ಗಾಂಧೀ ಬಂದ ವರ್ಷ ಒಡವೆ ಧರಿಸುವುದಿಲ್ಲವೆಂದು ಮಾಡಿದ ಪ್ರತಿಜ್ಞೆಯನ್ನು ಆಕೆ ಕಡೆಯುಸಿರ ತನಕ ಪಾಲಿಸುತ್ತಾರೆ. 1930ರ ದಶಕದಲ್ಲಿ ಲಕ್ನೋದ ಮಹಿಳಾ ಆಶ್ರಮದ ಸಭೆಯೊಂದರಲ್ಲಿ 12 ಸಾವಿರ ಮಂದಿಯನ್ನು ಉದ್ದೇಶಿಸಿ ಸುಡುಗೆಂಡದ ಭಾಷಣ ಮಾಡುತ್ತಾರೆ. ವಿದೇಶೀ ವಸ್ತ್ರ ಸುಟ್ಟಿದ್ದಕ್ಕಾಗಿ ಬಂಧನಕ್ಕೆ ಒಳಗಾಗುತ್ತಾರೆ.

ಇಂತಹ ವಿಶಿಷ್ಟ ವ್ಯಕ್ತಿತ್ವದ ಶಿವರಾಣಿಯವರ ಹೂತು ಹೋಗಿದ್ದ ಕತೆಗಳು ಇದೀಗ ಬೆಳಕಿಗೆ ಬರತೊಡಗಿವೆ.


ಇದನ್ನೂ ಓದಿ: ಬಹುಜನ ಭಾರತ; ಫ್ಯಾಸಿಸ್ಟ್ ಕನ್ನಡಿಯನ್ನು ಒಡೆಯಿರೆಂಬ ಹರಾರಿ ಕಿವಿಮಾತು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಸ್ಸಾಂನ ನಾಲ್ವರು ಮುಸ್ಲಿಂ ಮಹಿಳೆಯರ ಗಡೀಪಾರು ಪ್ರಕ್ರಿಯೆಗೆ ಸುಪ್ರೀಂ ತಡೆ: ಕೇಂದ್ರ, ರಾಜ್ಯ ಸರ್ಕಾರಗಳಿಗೆ ನೋಟಿಸ್‌

ಅಸ್ಸಾಂನಲ್ಲಿ 'ವಿದೇಶಿಯರು' ಎಂದು ಘೋಷಿತರಾಗಿ ಗಡೀಪಾರು ಭೀತಿ ಎದುರಿಸುತ್ತಿದ್ದ ನಾಲ್ವರು ಮುಸ್ಲಿಂ ಮಹಿಳೆಯರ ವಿಚಾರದಲ್ಲಿ ಭಾರತದ ಸುಪ್ರೀಂ ಕೋರ್ಟ್ ಮಹತ್ವದ ಮಧ್ಯಪ್ರವೇಶ ಮಾಡಿದೆ. ಈ ಮಹಿಳೆಯರನ್ನು ದೇಶದಿಂದ ಹೊರಹಾಕುವ (ಗಡೀಪಾರು ಮಾಡುವ) ಪ್ರಕ್ರಿಯೆಗೆ...

ದೆಹಲಿಗೆ ಬಂದಿಳಿದ ಕಾಕ್ರೋಚ್ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆ : ಜಂತರ್‌ ಮಂತರ್‌ನಲ್ಲಿ ಪ್ರತಿಭಟಿಸಲು ಪೊಲೀಸರಿಂದ ಅನುಮತಿ

ಶನಿವಾರ (ಜೂ.6) ಬೆಳಿಗ್ಗೆ ದೆಹಲಿಗೆ ಆಗಮಿಸಿದ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ, ಪ್ರತಿಭಟನೆಗೆ ದೆಹಲಿ ಪೊಲೀಸರು ಅನುಮತಿ ನೀಡಿದ್ದಾರೆ ಎಂದು ತಿಳಿಸಿದ್ದು, ಯೋಜಿತ ಆಂದೋಲನಕ್ಕಾಗಿ ನೇರವಾಗಿ ಜಂತರ್ ಮಂತರ್‌ನಲ್ಲಿ...

ಜಾಗತಿಕವಾಗಿ ಮೂರು ವರ್ಷಗಳಲ್ಲಿ 600 ಪರಿಸರ ರಕ್ಷಕರ ಹತ್ಯೆ: ವಿಶ್ವಸಂಸ್ಥೆ ತೀವ್ರ ಕಳವಳ: ಜಾಗತಿಕ ತಾಪಮಾನಕ್ಕೆ ಸಾಕ್ಷಿಯಾಗುತ್ತಿರುವ ಭಾರತ

ಜೂನ್ 5 ವಿಶ್ವ ಪರಿಸರ ದಿನ. ಜಗತ್ತಿನಾದ್ಯಂತ ಗಿಡ ನೆಡುವ, ಹಸಿರು ಭಾಷಣ ಬಿಗಿಯುವ ಮತ್ತು ಪರಿಸರ ಕಾಳಜಿಯ ಸಡಗರದ ಆಚರಣೆಗಳು ಎಲ್ಲೆಡೆ ವಿಭಿನ್ನ ರೀತಿಗಳಲ್ಲಿ ವಿಜೃಂಭಿಸುತ್ತಿವೆ. ಆದರೆ, ಇದೇ ಹೊತ್ತಿನಲ್ಲಿ ವಿಶ್ವಸಂಸ್ಥೆಯು...

ಮಣಿಪುರ ಎಸ್‌ಐಆರ್ ವಿರೋಧಿಸಿದ ಕುಕಿ-ಝೋ ಗುಂಪುಗಳು

ಮಣಿಪುರ ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ವಿರುದ್ಧ ಪ್ರತಿಭಟನೆ ವ್ಯಕ್ತವಾಗಿದೆ. ಕುಕಿ-ಝೋ ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಗುಂಪಾದ ಕುಕಿ ಇನ್ಪಿ ಮಣಿಪುರ (ಕೆಐಎಂ) ಮತದಾರರ ಪಟ್ಟಿ...

ಹೇಗಿತ್ತು ‘ಕಾಕ್ರೋಚ್ ಜನತಾ ಪಕ್ಷ’ದ ಮೊದಲ ಸುದ್ದಿಗೋಷ್ಠಿ…? ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಕರೆ

ಜೂನ್ 6, 2026 ರಂದು ಜಂತರ್ ಮಂತರ್‌ನಲ್ಲಿ ನಡೆಯಲಿರುವ 'ಶಾಂತಿಯುತ ಪ್ರತಿಭಟನೆ'ಗೆ ಮುನ್ನ ಜಿರಳೆ ಜನತಾ ಪಕ್ಷ (ಸಿಜೆಪಿ) ತನ್ನ ಮೊದಲ ಪತ್ರಿಕಾಗೋಷ್ಠಿಯನ್ನು ನಡೆಸಿದೆ. ಬುಧವಾರ ಸಂಜೆ (ಜೂ.3) ಸಿಜೆಪಿಯ ಮೂವರು ವಕ್ತಾರರು...

‘ಇದು ಆತ್ಮಹತ್ಯೆಯಲ್ಲ, ಮೋದಿ ಸರ್ಕಾರದ ಭ್ರಷ್ಟ ವ್ಯವಸ್ಥೆ ಮಾಡಿದ ಕೊಲೆ’: ನೀಟ್ ಆಕಾಂಕ್ಷಿಯ ಸಾವಿಗೆ ರಾಹುಲ್ ಗಾಂಧಿ ಆಕ್ರೋಶ

ದೇಶದ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ‘ನೀಟ್-ಯುಜಿ’ (NEET-UG) ವಿವಾದ ಮತ್ತು ವಿದ್ಯಾರ್ಥಿಗಳ ಸಾವುಗಳು ಭಾರತದ ಒಟ್ಟಾರೆ ಶಿಕ್ಷಣ ವ್ಯವಸ್ಥೆಯ ದಯನೀಯ ಸ್ಥಿತಿಗೆ ಕನ್ನಡಿ ಹಿಡಿದಿವೆ. ಪರೀಕ್ಷಾ ಅಕ್ರಮಗಳು, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು...

ತಕ್ಷಣವೇ ‘SIR ಹೆಲ್ಪ್‌ ಡೆಸ್ಕ್‌’ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ

ರಾಜ್ಯದಲ್ಲಿ ಭಾರತೀಯ ಚುನಾವಣಾ ಆಯೋಗದಿಂದ ನಡೆಯುತ್ತಿರುವ ಎಸ್‌ಐಆರ್ (Special Electoral Roll Purification) ಪ್ರಕ್ರಿಯೆ ಸಂದರ್ಭದಲ್ಲಿ ರಾಜ್ಯದ ಯಾವುದೇ ಪ್ರಜೆಯೂ ತನ್ನ ಅತ್ಯಮೂಲ್ಯವಾದ ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ವಿಷಾಹಾರಕ್ಕೆ ಜಾಗತಿಕವಾಗಿ ವರ್ಷಕ್ಕೆ 15 ಲಕ್ಷ ಜನರು ಬಲಿ: ಮಕ್ಕಳಿಗೆ ಹೆಚ್ಚಿನ ಅಪಾಯ: ಭಾರತದ ಸ್ಥಿತಿಯೂ ಆತಂಕಕಾರಿ! 

ನಾವು ದಿನನಿತ್ಯ ಸೇವಿಸುವ ಆಹಾರವೇ ನಮ್ಮ ಜೀವಕ್ಕೆ ಕಂಟಕವಾಗುತ್ತಿದೆಯೇ? ಹೌದು ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆಯ (WHO) ಇತ್ತೀಚಿನ ಆಘಾತಕಾರಿ ವರದಿ. ಜಾಗತಿಕವಾಗಿ ಅಸುರಕ್ಷಿತ ಮತ್ತು ಕಲುಷಿತ ಆಹಾರದ ಸೇವನೆಯಿಂದಾಗಿ ಪ್ರತಿ ವರ್ಷ...

ಡಿಕೆಶಿ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಸಿಗುತ್ತಾ ಸೂಕ್ತ ಪ್ರಾತಿನಿಧ್ಯ?

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ, ಡಿ.ಕೆ ಶಿವಕುಮಾರ್ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿದೆ. ಈ ಮೂಲಕ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಸಿಎಂ ಬದಲಾವಣೆಯ...

‘ಕರ್ನಾಟಕದಲ್ಲಿ SIR’ ಮತ ಉಳಿಸಿಕೊಳ್ಳುವಂತೆ ಕಾರ್ಯಕರ್ತರಿಗೆ CM ಡಿ.ಕೆ ಶಿವಕುಮಾರ್ ಕರೆ!

ಕರ್ನಾಟಕ ರಾಜಕಾರಣದಲ್ಲಿ ಹೊಸ ಯುಗ ಆರಂಭವಾಗಿದೆ. ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಕೆಲಸ ಮಾಡದಿರುವ ಸಚಿವ ಮತ್ತು ಶಾಸಕರನ್ನು ಸುಮ್ಮನೆ ಬಿಡುವುದಿಲ್ಲ ಎಂದು...