ಪ್ರೇಮ ಪ್ರಸ್ತಾಪಗಳನ್ನು ತಿರಸ್ಕರಿಸಿದ ಮಹಿಳೆಯರ ಮೇಲೆ ದೌರ್ಜನ್ಯ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬುಧವಾರ ಎಚ್ಚರಿಕೆ ನೀಡಿದ್ದಾರೆ. ಮಹಿಳೆಯರಿಗೆ ಕಿರುಕುಳ ನೀಡುವ ಮತ್ತು ಫಾಲೋ ಮಾಡುವ ಜನರ ಮೇಲೆ ಪೊಲೀಸರು ನಿಗಾ ಇಡುತ್ತಾರೆ. ಪ್ರೇಮ ನಿವೇದನೆಯನ್ನು ತಿರಸ್ಕರಿಸಿದ್ದಕ್ಕಾಗಿ ಮಹಿಳೆಯರಿಗೆ ತೊಂದರೆ ಮಾಡುವ ಏನನ್ನೂ ಯೋಜಿಸುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳಲು ಅಂತವರ ಮೇಲೆ ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುವುದಾಗಿ ಅವರು ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ವರದಿಯಾದ, ಪ್ರೇಮಿಗಳು ಅಥವಾ ಅವರ ಪ್ರೇಮ ನಿವೇದನೆಗಳನ್ನು ತಿರಸ್ಕರಿಸಿದ ಯುವತಿಯರ ಸರಣಿ ಕೊಲೆಗಳ ಹಿನ್ನೆಲೆಯಲ್ಲಿ, ರಾಜ್ಯ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ನೀಡಿದ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಇದನ್ನೂ ಓದಿ: ಕೇರಳ: ಲಸಿಕೆ ಪಡೆದಿದ್ದ 40,000 ಕ್ಕೂ ಹೆಚ್ಚು ಜನರಿಗೆ ಕೊರೊನಾ ಸೋಂಕು
ಇತ್ತೀಚಿಗೆ 24 ವರ್ಷದ ಡೆಂಟಲ್ ಕಾಲೇಜು ವಿದ್ಯಾರ್ಥಿನಿಯನ್ನು ಎರ್ನಾಕುಲಂ ಜಿಲ್ಲೆಯ ಕೋತಮಂಗಲಂನಲ್ಲಿ, ಯುವತಿಯ ಸಾಮಾಜಿಕ ಜಾಲತಾಣದ ಸ್ನೇಹಿತನಾಗಿದ್ದ ವ್ಯಕ್ತಿಯೊಬ್ಬ ಗುಂಡು ಹಾರಿಸಿ ಕೊಂದಿದ್ದ. ಜುಲೈ 30 ರಂದು ಹಾಡ ಹಗಲಿನಲ್ಲಿ ಈ ಘಟನೆ ನಡೆದಿತ್ತು. ಯುವತಿ ತಂಗಿದ್ದ ಮನೆಗೆ ನುಗ್ಗಿದ ದುಷ್ಕರ್ಮಿ ಗುಂಡು ಹಾರಿಸಿದ್ದ.
ಈ ಘಟನೆಯನ್ನು ಸದನದ ಗಮನಕ್ಕೆ ತಂದ, ತೃಕ್ಕಾಕರ ಶಾಸಕ ಪಿ ಟಿ ಥಾಮಸ್ (ಕಾಂಗ್ರೆಸ್) ಸಮಾಜದಲ್ಲಿ ಯುವತಿಯರು ಮತ್ತು ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಪೊಲೀಸರ ಗುಪ್ತಚರ ವಿಭಾಗವು ಹೆಚ್ಚು ಜಾಗರೂಕರಾಗಿರಬೇಕು ಎಂದು ಹೇಳಿದ್ದಾರೆ.
ಪ್ರೀತಿಯ ಹೆಸರಿನಲ್ಲಿ ಮಹಿಳೆಯರಿಗೆ ಕಿರುಕುಳ ನೀಡುವವರ ವಿರುದ್ಧ ಪೊಲೀಸರು ಯಾವುದೇ ಮೃದು ನಿಲುವು ತಾಳುವುದಿಲ್ಲ ಎಂದು ಪಿಣರಾಯಿ ಸದನಕ್ಕೆ ಭರವಸೆ ನೀಡಿದ್ದಾರೆ. “ಪ್ರೇಮ ನಿವೇದನೆಗಳನ್ನು ನಿರಾಕರಿಸಿದ ಮಹಿಳೆಯರಿಗೆ ಕಿರುಕುಳ ನೀಡುವವರಿಗೆ ಕಠಿಣ ಶಿಕ್ಷೆಯನ್ನು ಖಾತ್ರಿಪಡಿಸಿಕೊಳ್ಳಲು ಪೊಲೀಸರು ಈಗಾಗಲೇ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ವರದಕ್ಷಿಣೆ ಕಿರುಕುಳ ಪರಿಶೀಲನೆಗೆ ಕರಡು ಮಸೂದೆ ಸಲ್ಲಿಸಿದ ಕೇರಳ ಮಹಿಳಾ ಆಯೋಗ