Homeಕರ್ನಾಟಕವಿದ್ಯುತ್ ಮಸೂದೆ 2021; ಕೃಷಿಗೆ ಮತ್ತು ವಿದ್ಯುತ್ ವಲಯದ ಕಾರ್ಮಿಕರಿಗೆ ಮಾರಕ

ವಿದ್ಯುತ್ ಮಸೂದೆ 2021; ಕೃಷಿಗೆ ಮತ್ತು ವಿದ್ಯುತ್ ವಲಯದ ಕಾರ್ಮಿಕರಿಗೆ ಮಾರಕ

- Advertisement -
- Advertisement -

ಕೃಷಿ ಕಾಯ್ದೆಗಳನ್ನು ರದ್ದು ಮಾಡುವುದಕ್ಕೆ, ವಿದ್ಯುತ್ ಮಸೂದೆ ವಾಪಸ್ಸಾತಿ ಹಾಗೂ ರೈತರ ಉತ್ಪನ್ನಗಳಿಗೆ ಶಾಸನಬದ್ಧ ಕನಿಷ್ಠ ಬೆಂಬಲ ಬೆಲೆ ಬೇಡಿಕೆಗಳಿಗೆ ಆಗ್ರಹಿಸಿ ಕಳೆದ ಒಂಬತ್ತು ತಿಂಗಳಿಂದಲೂ ದೆಹಲಿ ಗಡಿಗಳಲ್ಲಿ ರೈತ ಹೋರಾಟ ನಡೆಯುತ್ತಿದ್ದರೂ, ಈ ಬಗ್ಗೆ ಸಂಸತ್ತಿನಲ್ಲಿ ಚರ್ಚೆಗೆ ಒಕ್ಕೂಟ ಸರ್ಕಾರ ನಿರಾಕರಿಸುತ್ತಾ ನಡೆದಿದ್ದರೆ, ಕೇಂದ್ರ ರೈತ ಕಲ್ಯಾಣ ಮತ್ತು ಕೃಷಿ ಸಚಿವೆ ಶೋಭಾ ಕರಂದ್ಲಾಜೆರವರು ಸ್ವತಃ ಗದ್ದೆಗಿಳಿದು ನಾಟಿ ಕೆಲಸದಲ್ಲಿ ಭಾಗಿಯಾಗಿ ಮಾಧ್ಯಮಗಳಿಗೆ ಪೋಟೋ ಪೋಸ್ ನೀಡಿದ್ದಾರೆ.

ಆದರೆ ತಾವು ಭಾಗಿಯಾಗಿರುವ ಸಂಪುಟ ಅನುಮೋದನೆ ನೀಡಿರುವ ವಿದ್ಯುತ್ ಮಸೂದೆ 2021ರ ಬಗ್ಗೆ ಅಪ್ಪಿತಪ್ಪಿಯೂ ಮಾತಾಡಿಲ್ಲ. ಈಗಷ್ಟೇ ಮೊಟುಕುಗೊಂಡು ಮುಕ್ತಾಯವಾದ ಸಂಸತ್ತಿನಲ್ಲಿ ಮಂಡನೆಯಾಗದೇ ಈ ಮಸೂದೆ ಉಳಿದುಕೊಂಡಿದೆ! ಈ ವಿದ್ಯುತ್ ಮಸೂದೆಯನ್ನು ವಾಪಸ್ಸು ಪಡೆಯುವುದಾಗಿ ಪ್ರತಿಭಟನಾ ರೈತರಿಗೆ ಇದೇ ಕೇಂದ್ರ ಸರ್ಕಾರ ವಾಗ್ದಾನ ಮಾಡಿತ್ತು. ಈ ಮಾತನ್ನೂ ಸಹ ಉಳಿಸಿಕೊಳ್ಳಲಿಲ್ಲ.

ಈ ವಿದ್ಯುತ್ ಮಸೂದೆ 2021 ಸಂಸತ್ತಿನಲ್ಲಿ ಮಂಡನೆಯಾಗುವ ದಿನ ಇಡೀ ದೇಶದಾದ್ಯಂತ ವಿದ್ಯುತ್ ಕಾರ್ಮಿಕರು ಮುಷ್ಕರಕ್ಕೆ ತಯಾರಿ ನಡೆಸಿದ್ದರು. ದೇಶದೆಲ್ಲೆಡೆ ರೈತರ ಆಕ್ರೋಶ ಭುಗಿಲೇಳುವ ಸ್ಪಷ್ಟ ಸೂಚನೆಯಿಂದಾಗಿ ಈ ಮಸೂದೆ ಮಂಡನೆಯ ಮುಂದೂಡಲ್ಪಟ್ಟಿದೆ.

ಮೋದಿ ಸರ್ಕಾರ ಅಂಗೀಕರಿಸಿರುವ ಕೃಷಿ ಕಾಯ್ದೆಗಳಿಂದ ವಿದ್ಯುತ್ ಮಸೂದೆ 2021ಅನ್ನು ಬೇರ್ಪಡಿಸಿ ನೋಡಲು ಸಾಧ್ಯವಿಲ್ಲ. ಇವೆರಡೂ ಒಂದೇ ನಾಣ್ಯದ ಎರಡು ಮುಖಗಳು. ದೇಶದ ರೈತರಲ್ಲಿ ಶೇ.70ಕ್ಕೂ ಹೆಚ್ಚು ಇರುವ ಸಣ್ಣ ಮತ್ತು ಅತಿಸಣ್ಣ ಹಿಡುವಳಿದಾರರನ್ನು ಕೃಷಿ ರಂಗದಿಂದಲೇ ಒಕ್ಕಲೆಬ್ಬಿಸುವ ಉದ್ದೇಶದ ಕೃಷಿ ಕಾಯ್ದೆಗಳ ವೇಗವರ್ಧಕವಾಗಿ ಈ ಪ್ರಸ್ತಾಪಿತ ವಿದ್ಯುತ್ ಕಾಯ್ದೆ ಕೆಲಸ ಮಾಡಲಿದೆ.

ನವ ಉದಾರೀಕರಣ ಆರ್ಥಿಕ ನೀತಿಗಳು ಜಾರಿಗೆ ಬಂದನಂತರ ದೇಶದ ಪ್ರತಿಯೊಂದು ರಂಗವನ್ನು ಖಾಸಗಿ ಕಾರ್ಪೊರೆಟ್ ದೈತ್ಯರಿಗೆ ವಹಿಸಲು ಮತ್ತು ಅವರಿಗಷ್ಟೇ ಅನುಕೂಲ ಕಲ್ಪಿಸಲು ಕಾಯ್ದೆಗಳು ರೂಪುಗೊಂಡಿವೆ. ವಿದ್ಯುತ್ ರಂಗದ ಇಂತಹ ಒಂದು ಕಾಯ್ದೆಯಾಗಿ ವಿದ್ಯುತ್ ಕಾಯ್ದೆ 2003 ಜಾರಿಗೆ ಬಂತು. ಈ ಕಾಯ್ದೆಯ ಮುಂದಿನ ಅವತರಣಿಕೆಯೇ ವಿದ್ಯುತ್ ಮಸೂದೆ 2021 ಆಗಿದೆ.

ಹಲವಾರು ದಶಕಗಳಿಂದ ರಾಜ್ಯ ಸರ್ಕಾರಗಳಿಂದ ಸ್ಥಾಪಿಸಲ್ಪಟ್ಟು ಅವುಗಳ ಮಾಲೀಕತ್ವದಲ್ಲಿರುವ ವಿದ್ಯುಚ್ಛಕ್ತಿ ಸರಬರಾಜು ಜಾಲವನ್ನು ಖಾಸಗೀಕರಣಗೊಳಿಸುವುದೇ ಈ ಕಾಯ್ದೆಯ ಗುರಿಯಾಗಿದೆ. ಇದನ್ನು ಈ ಮಸೂದೆ ಬಹಳ ಸ್ಪಷ್ಟವಾಗಿ ಹೇಳುತ್ತಿದೆ.

ವಿದ್ಯುಚ್ಛಕ್ತಿಯು ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿ ಇರುವುದನ್ನು ನಿರ್ಲಕ್ಷಿಸಿ, ಹಲವಾರು ವಿಷಯಗಳ ಮೇಲೆ ರಾಜ್ಯಕ್ಕೆ ಇರುವ ಹಕ್ಕುಗಳನ್ನು ಈ ಮಸೂದೆ ಸಂಪೂರ್ಣವಾಗಿ ನಿರಾಕರಿಸುತ್ತದೆ. ಆದರೆ ವಿದ್ಯುಚ್ಛಕ್ತಿ ದರ ಹೆಚ್ಚಳದ ಅಪಘಾತದಿಂದ ಜನತೆಯನ್ನು ಪಾರುಮಾಡಲು ಇರುವ ಸಬ್ಸಿಡಿಯನ್ನು ನೀಡಲು ಬೇಕಾದ ಹಣಕಾಸಿನ ಭಾರವನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ರಾಜ್ಯಗಳ ಮೇಲೆ ಹಾಕಿದೆ.

ರಾಜ್ಯ ನಿಗಮಗಳಿಗೆ ಅಧ್ಯಕ್ಷರನ್ನು ಮತ್ತು ಸದಸ್ಯರನ್ನು ನೇಮಕ ಮಾಡುವ ಅಧಿಕಾರವನ್ನು ಈ ಮಸೂದೆ ಕೇಂದ್ರ ಸರ್ಕಾರಕ್ಕೆ ನೀಡುತ್ತದೆ. ಇಂತಹ ಕ್ರೂರ ಪ್ರಸ್ತಾವನೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರಗಳ ಮೇಲೆ ದಬ್ಬಾಳಿಕೆ ನಡೆಸಲು ಅನುವು ಮಾಡಿಕೊಡುತ್ತದೆ. ಇದು ದೇಶದ ಒಕ್ಕೂಟ ವ್ಯವಸ್ಥೆಯ ಮೇಲೆ ಮಾಡುವ ಸರ್ವಾಧಿಕಾರದ ದಾಳಿಯಲ್ಲದೇ ಬೇರೇನಲ್ಲ.

ರಾಜ್ಯಗಳಿಗೆ ತಮ್ಮದೇ ಆದ ಅಭಿವೃದ್ಧಿ ಕಣ್ಣೋಟವನ್ನು ಯೋಜಿಸಲು, ಅಂದಾಜಿಸಲು ಹಾಗೂ ಜಾರಿ ಮಾಡಲು ಅಧಿಕಾರವಿದೆ. ಆದರೆ ಈ ಕಾಯ್ದೆ ಇಂತಹ ಅಧಿಕಾರವನ್ನು ಕಿತ್ತುಕೊಳ್ಳುತ್ತದೆ. ಇದರಿಂದ ಪೂರ್ತಿಯಾಗಿ ರಾಜ್ಯಗಳ ಅಧಿಕಾರ ನಾಶವಾಗಲಿದೆ. ಈ ಕಾಯ್ದೆ ಸಂಪೂರ್ಣವಾಗಿ ಸಂವಿಧಾನದ ಮೂಲಭೂತ ತತ್ವ ಫೆಡರಿಲಿಸಂಗೆ (ಒಕ್ಕೂಟ ವಾದ) ವಿರುದ್ಧವಾಗಿದೆ.

ಈ ಕಾಯ್ದೆಯು ವಿದ್ಯುತ್ ವ್ಯಾಪಾರದ ರಾಷ್ಟ್ರೀಯ ಗಡಿಗಳನ್ನು ಕೂಡ ತೆಗೆದುಹಾಕುತ್ತದೆ. ಅಂದರೆ ಖಾಸಗಿ ವಲಯವು ಮುಕ್ತವಾಗಿ ಯಾವುದೇ ಗಡಿಗಳ ಹಂಗಿಲ್ಲದೇ ಯಾವುದೇ ದೇಶಕ್ಕಾದರೂ ವಿದ್ಯುತ್ ಪೂರೈಸಬಹುದು. ಇದು ದೇಶದ ಭದ್ರತೆಗೆ ಭಾರೀ ಅಪಾಯವನ್ನು ತಂದೊಡ್ಡುವ ಕ್ರಮ ಕೂಡ ಆಗಬಲ್ಲದು.

ಈ ಕಾಯ್ದೆಯ ಕಾರಣದಿಂದ ವಿದ್ಯುತ್ ಬೇಡಿಕೆ ಹಾಗೂ ಪೂರೈಕೆಗಳ ನಡುವಿನ ಸಮನ್ವಯ ಹಾಗೂ ನಿಯಂತ್ರಣ ವ್ಯವಸ್ಥೆ ಸಂಪೂರ್ಣವಾಗಿ  ಧ್ವಂಸವಾಗುತ್ತದೆ. ಖಾಸಗಿ ಕಂಪನಿಗಳ ಲಾಭಕೋರತನ ಮತ್ತು ವ್ಯಾಪಕವಾದ ಭ್ರಷ್ಟಾಚಾರಕ್ಕೂ ದೊಡ್ಡ ಪ್ರಮಾಣದಲ್ಲಿ ಅವಕಾಶವನ್ನು ಮಾಡಿಕೊಡಲಿದೆ. ವಿದ್ಯುತ್ ರಂಗದಲ್ಲಿ ಖಾಸಗೀಕರಣಕ್ಕೆ ಅವಕಾಶ ಮಾಡಿಕೊಟ್ಟ ವಿದ್ಯುತ್ ಕಾಯ್ದೆ 2003ರ ನಂತರವೇ ವಿದ್ಯುತ್ ಖರೀದಿ ಹಗರಣಗಳು ನಡೆದಿರುವುದನ್ನು ನಾವು ಗಮನಿಸಬಹುದು.

ಉತ್ಪಾದನಾ ಸಾಮರ್ಥ್ಯವನ್ನು ದಕ್ಷವಾಗಿ, ಪರಿಸರ ಸ್ನೇಹಿಯಾಗಿ ಬಳಸಿಕೊಳ್ಳುವುದಕ್ಕೆ ಕೂಡ ಈ ಕಾಯ್ದೆ ಅಡ್ಡಿಯಾಗುತ್ತದೆ. ಖಾಸಗಿ ಕಂಪನಿಗಳಿಗೆ ಲಾಭ ಮಾತ್ರವೇ ಮುಖ್ಯವಾಗುವುದರಿಂದ ಈ ಕಾಯ್ದೆಯಿಂದ ಪರಿಸರ ನಾಶಕ್ಕೆ ಅತಿ ಹೆಚ್ಚಿನ ಉತ್ತೇಜನ ಸಿಗಲಿದೆ.

ವಿದ್ಯುತ್ ದರ ಏರಿಕೆಯ ಪ್ರಸ್ತಾಪಕ್ಕೆ ಸಾರ್ವಜನಿಕ ಅಹವಾಲು ಆಲಿಸಿ, ಪರಿಣಾಮಗಳನ್ನು ಅಂದಾಜಿಸುವ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದಂತಹ (KERC) ನಿಯಂತ್ರಕ ವ್ಯವಸ್ಥೆ ರದ್ದಾಗಿ ಕೃಷಿಕರು, ನೇಕಾರರು, ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳ ಅಹವಾಲಿಗೆ ಈ ಕಾಯ್ದೆಯಿಂದ ಅವಕಾಶವೇ ಇರುವುದಿಲ್ಲ.

ಈ ಕಾಯ್ದೆಯಿಂದ ನಿಗಮಗಳ ನಡುವೆ ಅಂದರೆ ನಗರ ಪ್ರದೇಶದ ವಿದ್ಯುತ್ ನಿಗಮಗಳು ಹಾಗೂ ಗ್ರಾಮೀಣ ಪ್ರದೇಶದ ನಿಗಮಗಳ ನಡುವೆ ಇದ್ದ ಕ್ರಾಸ್ ಸಬ್ಸಿಡಿ ಮತ್ತು ಗೃಹ ಬಳಕೆ ಹಾಗೂ ವಾಣಿಜ್ಯ ಬಳಕೆ ಗ್ರಾಹಕರುಗಳ ನಡುವೆ ಇದ್ದ ಕ್ರಾಸ್ ಸಬ್ಸಿಡಿಗಳು ರದ್ದಾಗಲಿವೆ. ಇದರಿಂದಾಗಿ ನಿರುದ್ಯೋಗ ಬಹಳಷ್ಟು ಹೆಚ್ಚಲಿದೆ. ನೀರಾವರಿ ಪಂಪ್‌ಸೆಟ್‌ಗಾಗಲಿ, ಕುಟೀರ ಜ್ಯೋತಿ-ಭಾಗ್ಯಜ್ಯೋತಿ ಬಳಕೆದಾರರಿಗಾಗಲಿ ರಿಯಾಯಿತಿ ವಿದ್ಯುತ್ ಸೌಲಭ್ಯ ವಿದ್ಯುತ್ ಕಂಪನಿಗಳಿಂದ ಸಿಗುವುದಿಲ್ಲ. ವಿದ್ಯುತ್ ವಿತರಣೆಯಲ್ಲಿ ಪ್ರಾಂಚೈಸಿಗಳು, ಗುತ್ತಿಗೆ, ಹೊರಗುತ್ತಿಗೆ, ಏಜೆಂಟ್-ದಲ್ಲಾಳಿಗಳ ವ್ಯವಸ್ಥೆ ಜಾರಿಗೆ ಈ ಕಾಯ್ದೆ ಅವಕಾಶ ಮಾಡಿ ಕೊಡಲಿದೆ.

ಚಿಲ್ಲರೆ ವಹಿವಾಟಿನ ಮೇಲೆ ನಿಯಂತ್ರಣ ಮತ್ತು ಏಕಸ್ವಾಮ್ಯ ಸಾಧಿಸಲು ಅಂಬಾನಿ ಕಾರ್ಪೊರೆಟ್ ಸಂಸ್ಥೆಯ ಹಿತಾಸಕ್ತಿ ಹೇಗೆ ಕೃಷಿ ಕಾನೂನುಗಳ ಜಾರಿಯ ಹಿಂದೆ ಕೆಲಸ ಮಾಡಿದೆಯೋ ಅದೇ ರೀತಿ ವಿದ್ಯುತ್ ರಂಗದ ಮೇಲೆ ನಿಯಂತ್ರಣ ಮತ್ತು ಏಕಸ್ವಾಮ್ಯ ಸಾಧಿಸುವ ಅದಾನಿಯ ಹಿತಾಸಕ್ತಿ ಈ ಪ್ರಸ್ತಾಪಿತ ಕಾಯ್ದೆಯ ಹಿಂದೆ ಅಡಗಿದೆ. ವಿದ್ಯುತ್ ಆಟೋಮೊಬೈಲ್ ಇಂಡಸ್ಟ್ರಿಯ ವಹಿವಾಟಿನ ಮೇಲೆ ಏಕಸ್ವಾಮ್ಯ ಸಾಧಿಸಲು ವಿದ್ಯುತ್ ಉತ್ಪಾದನೆ, ಸರಬರಾಜು, ವಿತರಣೆ ಮೇಲೆ ಏಕಸ್ವಾಮ್ಯ ಸಾಧಿಸಲು ಅದಾನಿಯಂತಹ ಕಾರ್ಪೊರೇಟ್ ದೈತ್ಯರಿಗೆ ನೆರವಾಗುವುದು ಈ ಮಸೂದೆಯ ಗುಪ್ತ ಕಾರ್ಯಸೂಚಿಯಾಗಿದೆ.

ಕೃಷಿ ಅರ್ಥಿಕತೆ ಮೇಲೆ ಈ ಕಾಯ್ದೆ ಅತ್ಯಂತ ಕೆಟ್ಟ ಪರಿಣಾಮಗಳನ್ನು ಉಂಟುಮಾಡುತ್ತದೆ. ರಾಜ್ಯದಲ್ಲಿ ಸುಮಾರು 25 ಲಕ್ಷ ಸಕ್ರಮ ಪಂಪ್ ಸೆಟ್‌ಗಳು ಸೇರಿ ಸುಮಾರು 40 ಲಕ್ಷ ನೀರಾವರಿ ಪಂಪ್‌ಸೆಟ್‌ಗಳು ಇವೆ. ದುಬಾರಿ ವಿದ್ಯುತ್ ದರಗಳಿಂದಾಗಿ ದೇಶದೆಲ್ಲೆಡೆ ಕೋಟ್ಯಂತರ ಕೃಷಿಕರು ದಿವಾಳಿಯಾಗಲಿದ್ದಾರೆ. ಇದರಿಂದ ಆಹಾರದ ಬೆಲೆಗಳ ತೀವ್ರ ಏರಿಕೆ ಜೊತೆಗೆ ದೇಶದ ಆಹಾರ ಭದ್ರತೆಗೆ ಭಾರೀ ದೊಡ್ಡ ಅಪತ್ತು ಬರಲಿದೆ.

ಸಾರ್ವಜನಿಕ ತೆರಿಗೆ ಹಣದಿಂದ ನಿರ್ಮಿಸಿರುವ ಸರ್ಕಾರಿ ಪವರ್ ಗ್ರಿಡ್ ಮುಂತಾದ ಮೂಲ ಸೌಕರ್ಯಗಳು ಪೂರ್ತಿಯಾಗಿ ಖಾಸಗಿ ಕೈಗಳಿಗೆ ಹಸ್ತಾಂತರವಾಗುವುದರಿಂದ ಗ್ರಿಡ್ ಚಾನಲ್‌ಗಳನ್ನು ಮರು ಜೋಡಿಸಿಕೊಳ್ಳುತ್ತಾರೆ ಮತ್ತು ಪ್ರತ್ಯೇಕ ಗ್ರಿಡ್‌ಗಳನ್ನು ಸ್ಥಾಪಿಸಿಕೊಳ್ಳುತ್ತಾರೆ. ಇದರಿಂದ ಮೀಟರ್ ಕಿತ್ತು ಹಾಕಿದರೂ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆಯ ಜಾಲವೇ ಇಲ್ಲದಂತಾಗುತ್ತದೆ.

ಈಗ ಇರುವ ದುಬಾರಿ ವಿದ್ಯುತ್ ದರದಿಂದ ದೇಶದ ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳು ನರಳುತ್ತಿವೆ. ಖಾಸಗೀಕರಣಗೊಂಡ ಮೇಲೆ ಈ ವಿದ್ಯುತ್ ದರಗಳು ಮತ್ತಷ್ಟು ದುಬಾರಿಯಾಗುವುದರಿಂದ ಈ ಕ್ಷೇತ್ರಗಳ ಉತ್ಪಾದನೆ ಮತ್ತು ಉದ್ಯೋಗದ ಪರಿಸ್ಥಿತಿ ಸಂಪೂರ್ಣ ನಾಶವಾಗಲಿದೆ.

ಇತ್ತೀಚೆಗೆ ಕರ್ನಾಟಕದ ನೂತನ ವಿದ್ಯುತ್ ಮಂತ್ರಿ ಸುನಿಲ್ ಕುಮಾರ್, ಪಂಪ್‌ಸೆಟ್‌ಗಳಿಗೆ ವಿದ್ಯುತ್ ಮೀಟರ್ ಅಳವಡಿಸುವುದಿಲ್ಲ, ಇವೆಲ್ಲಾ ಊಹಾಪೋಹ ಎಂದು ಹೇಳಿಕೆ ನೀಡಿದ್ದಾರೆ. ಇದೇ ರೀತಿ ಕಳೆದ ವರ್ಷ ಕೂಡ ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ಎಪಿಎಂಸಿಗಳು ಮುಚ್ಚುವುದಿಲ್ಲ ಎಂದು ಸರ್ಕಾರ ಹೇಳಿತ್ತು. ಆದರೆ ಕೇವಲ ಒಂದೇ ವರ್ಷದಲ್ಲಿ ರಾಜ್ಯದ ಎಪಿಎಂಸಿಗಳು ಮುಚ್ಚುವ ಹಂತಕ್ಕೆ ಬಂದಿವೆ. ಪಂಪ್‌ಸೆಟ್‌ಗಳಿಗೆ ಮೀಟರ್
ಹಾಕಲಿಲ್ಲ ಅಂದರೆ ವಿದ್ಯುತ್ ಸಂಪರ್ಕವೇ ಇರುವುದಿಲ್ಲ!

ನೋಟು ರದ್ದತಿ (ಡಿಮಾನೆಟೈಸೇಶನ್), ಜಿಎಸ್‌ಟಿ ಮುಂತಾದ ಕ್ರಮಗಳಿಂದ ಈಗಾಗಲೇ ಭಾರೀ ಸಂಕಟದಲ್ಲಿರುವ ರೈತರು, ಸಣ್ಣ ಕೈಗಾರಿಕೆಗಳು ಈ ವಿದ್ಯುತ್ ಕಾಯ್ದೆಯಿಂದ ಮೇಲೆ ಏಳಲಾರದ ಹೊಡೆತ ಅನುಭವಿಸಲಿದ್ದಾರೆ.

ವಿದ್ಯುತ್ ಕ್ಷೇತ್ರದ ಕಾರ್ಮಿಕರು ಅತ್ಯಂತ ಕೆಟ್ಟ ರೀತಿಯಲ್ಲಿ ಬಲಿಪಶುಗಳಾಗಲಿದ್ದಾರೆ. ಬಹುಸಂಖ್ಯಾತ ಕಾಯಂ ನೌಕರರು ಹಂಗಾಮಿ ನೌಕರರಾಗಿ ಪರಿವರ್ತಿತರಾಗಲಿದ್ದಾರೆ. ಹೊರಗುತ್ತಿಗೆ, ಗುತ್ತಿಗೆ ಆಧಾರದ ನೇಮಕಾತಿ ಹಾಗೂ ಫ್ರಾಂಚೈಸಿಗಳನ್ನು ತೊಡಗಿಸಿಕೊಳ್ಳುವುದು ಸರ್ವೇಸಾಮಾನ್ಯವಾಗಲಿದೆ. ವೇತನ, ಸಾಮಾಜಿಕ ಭದ್ರತೆಯೂ ಸೇರಿದಂತೆ ಎಲ್ಲಾ ಕಾನೂನಾತ್ಮಕ ಸೌಲಭ್ಯ ಮತ್ತು ಪರಿಹಾರ-ಸವಲತ್ತುಗಳಲ್ಲಿ ತೀವ್ರ ಕಡಿತ ಉಂಟಾಗುತ್ತದೆ. ಇದರಿಂದ ವಿದ್ಯುತ್ ರಂಗದ ಕಾರ್ಮಿಕರು ಬೀದಿಗೆ ಬೀಳುತ್ತಾರೆ.

ಇಂದಿನ ಆಧುನಿಕವಾದ ಪರಿಸ್ಥಿತಿಯಲ್ಲಿ ವಿದ್ಯುತ್ ಮತ್ತು ಸಾರಿಗೆ ಅತ್ಯಂತ ಆಯಕಟ್ಟಿನ ವಲಯಗಳಾಗಿವೆ. ಈ ಕ್ಷೇತ್ರಗಳ ಖಾಸಗೀಕರಣವು ಇಡೀ ದೇಶವನ್ನೇ ದಿವಾಳಿಯಂಚಿಗೆ ಕೊಂಡೊಯ್ಯಲಿದೆ. ಎನ್ರೋನ್‌ನಂತಹ ವಿದ್ಯುತ್ ಹಗರಣಗಳು ಇನ್ನು ಮುಂದೆ ಸರಣಿಯೋಪಾದಿಯಲ್ಲಿ ಬರಲಿವೆ. ಆದ್ದರಿಂದ ಈ ಕಾಯ್ದೆ ಕುರಿತು ಜಾಗೃತಿ ಬೆಳೆಸಿಕೊಂಡು ವಿದ್ಯುತ್ ಖಾಸಗೀಕರಣದ ವಿರುದ್ಧ ನಡೆಯುತ್ತಿರುವ ಪ್ರತಿರೋಧದಲ್ಲಿ ಎಲ್ಲರೂ ಧ್ವನಿ ಎತ್ತಬೇಕಿದೆ. ಬೆಂಬಲಕ್ಕೆ ನಿಲ್ಲಬೇಕಿದೆ.

ಟಿ. ಯಶವಂತ

ಟಿ. ಯಶವಂತ
ಮದ್ದೂರು ತಾಲೂಕಿನ ತೊರೆಶೆಟ್ಟಿಹಳ್ಳಿಯಲ್ಲಿ ವಾಸವಾಗಿರುವ ಯಶವಂತ್, ಹೊಸ ತಲೆಮಾರಿನ ಸಾಮಾಜಿಕ ಕಾರ್ಯಕರ್ತರು. ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಸಕ್ರಿಯವಾಗಿರುವ ಅವರು ಈ ಸದ್ಯ ಪ್ರಾಂತ ರೈತ ಸಂಘದ ಸಂಘಟಕರು.


ಇದನ್ನೂ ಓದಿ: ‘ವಿದ್ಯುತ್‌ ತಿದ್ದುಪಡಿ ಮಸೂದೆ-2021’: ರೈತರ ಕೃಷಿ ಪಂಪ್‌ಸೆಟ್‌ಗೂ ವಿದ್ಯುತ್ ಮೀಟರ್‌ ಅಳವಡಿಸುವತ್ತ ಸರ್ಕಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಬಂಗಾಳದ ಬಿಸಿಯೂಟ ಇಸ್ಕಾನ್‌ಗೆ ಹಸ್ತಾಂತರವಿಲ್ಲ: ಸರ್ಕಾರದ ಸ್ಪಷ್ಟನೆ, ಕಲ್ಕತ್ತಾ ಹೈಕೋರ್ಟ್‌ನಿಂದ ಅಫಿಡವಿಟ್‌ಗೆ ನಿರ್ದೇಶನ 

ಕೋಲ್ಕತ್ತಾ: ರಾಜ್ಯದ ಶಾಲೆಗಳಲ್ಲಿ ಜಾರಿಯಲ್ಲಿರುವ ಪಿಎಂ-ಪೋಷಣ್ (ಮಧ್ಯಾಹ್ನದ ಬಿಸಿಯೂಟ) ಯೋಜನೆಯ ನಿರ್ವಹಣೆಯನ್ನು ಇಸ್ಕಾನ್ ಸಂಸ್ಥೆಗೆ ಹಸ್ತಾಂತರಿಸುವ ಯಾವುದೇ ಅನುಮೋದಿತ ಪ್ರಸ್ತಾಪ ಸರ್ಕಾರಕ್ಕಿಲ್ಲ ಎಂದು ಪಶ್ಚಿಮ ಬಂಗಾಳ ಸರ್ಕಾರ ಸ್ಪಷ್ಟಪಡಿಸಿದೆ. ಈ ಕುರಿತು ಅಫಿಡವಿಟ್...

ಗಾಜಿಯಾಬಾದ್‌| ಗೋಮಾಂಸ ಸಾಗಾಣಿಕೆ ಆರೋಪ; ವ್ಯಕ್ತಿ ಮೇಲೆ ಗುಂಪಿನಿಂದ ಹಲ್ಲೆ

ಉತ್ತರ ಪ್ರದೇಶದ ಗಾಜಿಯಾಬಾದ್‌ ನಗರದ ಶಾಸ್ತ್ರಿ ನಗರದಲ್ಲಿ ಗೋಮಾಂಸ ಸಾಗಿಸುತ್ತಿದ್ದಾರೆ ಎಂಬ ಅನುಮಾನದ ಮೇಲೆ ಸಲೀಂ ಎಂದು ಗುರುತಿಸಲಾದ ವ್ಯಕ್ತಿಯ ಮೇಲೆ ನಕಲಿ ಗೋರಕ್ಷಕರ ಗುಂಪೊಂದು ಹಲ್ಲೆ ನಡೆಸಿದೆ. ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ...

ಬಾಂಗ್ಲಾ ಗಡಿಯಾಚೆಗೆ ತಳ್ಳಿದ್ದ ನಾಲ್ವರು ಭಾರತೀಯರನ್ನು ವಾಪಸ್ ಕರೆತಂದ ಕೇಂದ್ರ ಸರ್ಕಾರ

ವರ್ಷದ ಹಿಂದೆ, ಅಂದರೆ 2025ರ ಜೂನ್ ತಿಂಗಳಲ್ಲಿ ಬಾಂಗ್ಲಾದೇಶದ ಗಡಿಯಾಚೆಗೆ ತಳ್ಳಿದ್ದ ನಾಲ್ವರು ಭಾರತೀಯರು ಬುಧವಾರ (ಜು.8) ಪಶ್ಚಿಮ ಬಂಗಾಳದ ಬೀರ್‌ಭೂಮ್ ಜಿಲ್ಲೆಯ ತಮ್ಮ ಗ್ರಾಮಕ್ಕೆ ಹಿಂದಿರುಗಿದ್ದಾರೆ ಎಂದು ವರದಿಯಾಗಿದೆ. ಸುನಾಲಿ...

ಬೆಂಗಳೂರಿನ ಜ್ವಲಂತ ನಾಗರಿಕ ಸಮಸ್ಯೆಗಳ ವಿರುದ್ಧ ಜುಲೈ 12ಕ್ಕೆ ಬೃಹತ್ ‘ಜನಾಕ್ರೋಶ ಸಮಾವೇಶ

ಸಿಲಿಕಾನ್ ಸಿಟಿ ಬೆಂಗಳೂರಿನ ನಾಗರಿಕರು ಪ್ರತಿನಿತ್ಯ ಎದುರಿಸುತ್ತಿರುವ ನರಕಸದೃಶ ಸಮಸ್ಯೆಗಳ ವಿರುದ್ಧ ಮತ್ತು ಆಡಳಿತ ವ್ಯವಸ್ಥೆಯ ಭ್ರಷ್ಟಾಚಾರವನ್ನು ಖಂಡಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಬೃಹತ್ ‘ಜನಾಕ್ರೋಶ ಸಮಾವೇಶ’ವನ್ನು ಹಮ್ಮಿಕೊಂಡಿದೆ. ಈ ‘ಜನಾಕ್ರೋಶ...

ಭೀಕರ ಪ್ರವಾಹಕ್ಕೆ ಕೊಚ್ಚಿಹೋದ 3 ಸಾವಿರ LPG ಸಿಲಿಂಡರ್

ಮಹಾರಾಷ್ಟ್ರದಲ್ಲಿ ವಾರದಿಂದ ಸುರಿಯುತ್ತಿರುವ ಮಳೆ ಇಡೀ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ್ದು, ಪ್ರಕೃತಿಯ ವಿಕೋಪದ ನಡುವೆ ರಾಯಗಢ ಜಿಲ್ಲೆಯಿಂದ ಅತ್ಯಂತ ಆಘಾತಕಾರಿ ವಿಡಿಯೋವೊಂದು ವೈರಲ್ ಆಗಿದೆ. ಇಲ್ಲಿನ ಎಚ್‌ಪಿಸಿಎಲ್ (HPCL) ಪಾತಾಳಗಂಗಾ ಎಲ್‌ಪಿಜಿ ಬಾಟ್ಲಿಂಗ್...

ಹೈದರಾಬಾದ್‌| ಪವನ್‌ ಕಲ್ಯಾಣ್‌ ಟೀಕಿಸಿದ ಯೂಟ್ಯೂಬರ್ ರಾವಣ್ ಮೇಲೆ ಯುಎಪಿಎ ಕೇಸ್; ನಿವಾಸದಲ್ಲಿ ಪೊಲೀಸರ ಶೋಧ

ತೆಲುಗು ಯೂಟ್ಯೂಬರ್, ಸಾಮಾಜಿಕ ಕಾರ್ಯಕರ್ತ ರಾವಣ್‌ (ಬಚಲಕೂರಿ ಜೋಸೆಫ್) ಅವರನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಬಂಧಿಸಿದ್ದು, ಆಂಧ್ರಪ್ರದೇಶ ಪೊಲೀಸರು ಹೈದರಾಬಾದ್‌ನಲ್ಲಿರುವ ಯೂಟ್ಯೂಬರ್ ರಾವಣ್ ನಿವಾಸದಲ್ಲಿ...

ಬೀದಿಬದಿ ವ್ಯಾಪಾರಿಗಳ ಒಕ್ಕಲೆಬ್ಬಿಸುವಿಕೆ ಖಂಡಿಸಿ ಸರ್ಕಾರದ ವಿರುದ್ದ ಬೃಹತ್ ಪ್ರತಿಭಟನೆ

ಬೆಂಗಳೂರು ನಗರದಲ್ಲಿ ಫುಟ್‌ಪಾತ್ ಒತ್ತುವರಿ ತೆರವಿನ ಹೆಸರಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ನಡೆಸುತ್ತಿರುವ ಏಕಪಕ್ಷೀಯ ಕಾರ್ಯಾಚರಣೆ ಬಡ ಬೀದಿಬದಿ ವ್ಯಾಪಾರಿಗಳ ಬದುಕನ್ನು ಬೀದಿಗೆ ತಳ್ಳಿದೆ. ಪ್ರಾಧಿಕಾರದ ಈ ಜನವಿರೋಧಿ ‘ಆಪರೇಷನ್’ ಖಂಡಿಸಿ,...

ಬಿಹಾರ| ಹಿಜಾಬ್ ತೆಗೆದು ಹಣೆಗೆ ಸಿಂಧೂರ ಇಟ್ಟುಕೊಳ್ಳುವಂತೆ ಮುಸ್ಲಿಂ ಮಹಿಳೆಗೆ ಒತ್ತಾಯಿಸಿದ ಗುಂಪು

ಪುರುಷರ ಗುಂಪೊಂದು ದಾರಿಯಲ್ಲಿ ಹೋಗುತ್ತಿದ್ದ ಮುಸ್ಲಿಂ ಮಹಿಳೆಯನ್ನು ತಡೆದು ದೌರ್ಜನ್ಯ ಎಸಗಿದ್ದು, ಆಕೆ ಧರಿಸಿದ್ದ ಹಿಜಾಬ್ ತಗೆದು ಹಣೆಗೆ ಸಿಂಧೂರ ಇಟ್ಟುಕೊಳ್ಳುವಂತೆ ಹಿಂದುತ್ವ ಕಿಡಿಗೇಡಿಗಳು ಒತ್ತಾಯಿಸಿರುವ ವಿಡಿಯೊ ವೈರಲ್ ಆಗಿದೆ. ಜುಲೈ 8 ರ...

ಕೃಷಿ ಭೂಮಿ ಉಳಿಸಲು ರೈತ ಸಂಘಟನೆಗಳಿಂದ ಜುಲೈ 11ಕ್ಕೆ ‘ಬಿಡದಿ ಚಲೋ’

ಬಿಡದಿ ಉಪನಗರ (ಟೌನ್‌ಶಿಪ್) ಯೋಜನೆಗಾಗಿ ರೈತರ ಫಲವತ್ತಾದ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರದ ಜನವಿರೋಧಿ ಧೋರಣೆಯನ್ನು ಖಂಡಿಸಿ, ಜುಲೈ 11 ರಂದು ಬೃಹತ್ ‘ಬಿಡದಿ ಚಲೋ’ ಹಸಿರು ಹೆದ್ದಾರಿ ಪ್ರತಿಭಟನೆಯನ್ನು...

ಅಮೆರಿಕ-ಇರಾನ್ ನಡುವೆ ಮತ್ತೆ ಕಾಳಗ : ಕದನ ವಿರಾಮ ಮುಕ್ತಾಯಗೊಂಡಿದೆ ಎಂದ ಟ್ರಂಪ್

ಮಂಗಳವಾರ ರಾತ್ರಿಯಿಂದ (ಭಾರತೀಯ ಕಾಲಮಾನ) ಅಮೆರಿಕ-ಇರಾನ್ ನಡುವೆ ಮತ್ತೆ ಕಾಳಗ ಶುರುವಾಗಿದ್ದು, ಕದನ ವಿರಾಮ ಮುಕ್ತಾಯಗೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಟರ್ಕಿಯಲ್ಲಿ ನಡೆದ ನ್ಯಾಟೋ ಶೃಂಗಸಭೆಯಲ್ಲಿ ಮಾತನಾಡಿದ ಟ್ರಂಪ್...