ಪ್ರಸ್ತುತ ಉತ್ತರ ಪ್ರದೇಶದ ನೋಯ್ಡಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿರುವ, ಕನ್ನಡಿಗ ಸುಹಾಸ್ ಲಲಿನಕೆರೆ ಯತಿರಾಜ್ ಅವರು, ಶನಿವಾರ ನಡೆದ ಟೋಕಿಯೊ ಪ್ಯಾರಾಲಿಂಪಿಕ್ಸ್ನ ಪ್ಯಾರಾ ಬ್ಯಾಡ್ಮಿಂಟನ್ ಆಟದಲ್ಲಿ ಫೈನಲ್ ತಲುಪಿದ್ದಾರೆ. ಹಾಸನ ಮೂಲದ ಸುಹಾಸ್ ಅವರು ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸಿದ ದೇಶದ ಮೊದಲ ನಾಗರಿಕ ಸೇವೆಯಲ್ಲಿರುವ ಅಧಿಕಾರಿಯಾಗಿದ್ದಾರೆ. ಚಿನ್ನದ ಬೇಟೆಗಾಗಿ ಅವರು ಭಾನುವಾರ ನಡೆಯಲಿರುವ ಪಂದ್ಯವನ್ನು ಗೆಲ್ಲಬೇಕಾಗಿದೆ.
‘ಪುರುಷರ ಸಿಂಗಲ್ಸ್ ಎಸ್ಎಲ್4’ ಸೆಮಿಫೈನಲ್ ಅನ್ನು ಸುಹಾಸ್ ಅವರು ಇಂಡೋನೇಷ್ಯಾದ ಫ್ರೆಡಿ ಸೆಟಿಯಾವಾನ್ ಅವರ ವಿರುದ್ದ ಆಡಿದ್ದರು. ಅವರು 21-9, 21-15 ಅಂತರದಿಂದ ಪ್ರತಿಸ್ಪರ್ಧಿಯನ್ನು ಸೋಲಿಸಿ ನೇರ ಸೆಟ್ಗಳಲ್ಲಿ ಪಂದ್ಯವನ್ನು ಗೆದ್ದಿದ್ದಾರೆ.
ಇದರ ನಡುವೆ ಹಾಲಿ ವಿಶ್ವ ಚಾಂಪಿಯನ್ ಪ್ರಮೋದ್ ಭಗತ್ ಅವರು ಶನಿವಾರ ನಡೆದ ಟೋಕಿಯೊ ಪ್ಯಾರಾಲಿಂಪಿಕ್ಸ್ನ ನೇರ ಪಂದ್ಯಗಳಲ್ಲಿ ಜಪಾನ್ನ ಡೈಸುಕೆ ಫುಜಿಹರಾ ಅವರನ್ನು ಸೋಲಿಸಿ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ಫೈನಲ್ಗೆ ಪ್ರವೇಶಿಸಿದ್ದಾರೆ.
ಇದನ್ನೂ ಓದಿ: ಪ್ಯಾರಾಲಿಂಪಿಕ್ಸ್: ಪದಕ ಬೇಟೆ ಮುಂದುವರೆಸಿರುವ ಭಾರತ; ಬೆಳ್ಳಿ ಗೆದ್ದ ಮರಿಯಪ್ಪನ್!
ವಿಶ್ವದ ನಂಬರ್ 1 ಮತ್ತು ಪ್ರಸ್ತುತ ಏಷ್ಯನ್ ಚಾಂಪಿಯನ್ ಆಗಿರುವ 33 ವರ್ಷದ ಭಗತ್ 36 ನಿಮಿಷಗಳ ಕಾಲ ನಡೆದ ‘ಪುರುಷರ ಸಿಂಗಲ್ಸ್ ಎಸ್ಎಲ್ 3’ ಸೆಮಿಫೈನಲ್ನಲ್ಲಿ ಫುಜಿಹರಾ ವಿರುದ್ಧ 21-11, 21-16 ಅಂತರದಲ್ಲಿ ಜಯ ಸಾಧಿಸಿದ್ದಾರೆ.
ತನ್ನ 5 ನೇ ವಯಸ್ಸಿನಲ್ಲಿ ಪೋಲಿಯೋಗೆ ತುತ್ತಾಗಿ ಎಡಗಾಲಿನ ಸ್ವಾಧೀನ ಕಳೆದುಕೊಂಡಿದ್ದ ಭಗತ್, ನಾಲ್ಕು ವಿಶ್ವ ಚಾಂಪಿಯನ್ಶಿಪ್ ಚಿನ್ನ ಸೇರಿದಂತೆ ಒಟ್ಟು 45 ಅಂತರಾಷ್ಟ್ರೀಯ ಪದಕಗಳನ್ನು ಗೆದ್ದಿದ್ದಾರೆ.
ಈ ಮಧ್ಯೆ, ಶಟ್ಲರ್ ಮನೋಜ್ ಸರ್ಕಾರ್ ಶನಿವಾರ ನಡೆದ ‘ಪುರುಷರ ಸಿಂಗಲ್ಸ್ ಎಸ್ಎಲ್3’ ಸೆಮಿಫೈನಲ್ ಪಂದ್ಯದಲ್ಲಿ ನೇರ ಸೆಟ್ ಗಳಲ್ಲಿ ಸೋತಿದ್ದಾರೆ. ಅವರು ಕಂಚಿನ ಪದಕಕ್ಕಾಗಿ ಇಂದು ಮತ್ತೆ ಆಡಬೇಕಿದೆ.
ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತ ತಂಡ ಇದುವರೆಗೂ 3 ಚಿನ್ನ, 7 ಬೆಳ್ಳಿ ಮತ್ತು 5 ಕಂಚಿನ ಪದಕಗಳು ಸೇರಿ ಒಟ್ಟು 15 ಪದಕಗಳನ್ನು ಗೆದ್ದಿದೆ.
ಇದನ್ನೂ ಓದಿ: ಚಿನ್ನ ಗೆದ್ದ ಶೂಟರ್ ಅವನಿ ಲೇಖರಾ: ಪ್ಯಾರಾಲಿಂಪಿಕ್ಸ್ನ ಮೊದಲ ಭಾರತೀಯ ಮಹಿಳೆಯೆಂಬ ಹೆಗ್ಗಳಿಕೆ