ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರನ್ನು ನೀವೇಕೆ ಇಷ್ಟೊಂದು ದ್ವೇಷಿಸುತ್ತೀರಿ ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ.
ಶಿಕ್ಷಣ ಸಚಿವಾಲಯದ ಮಂಡಳಿ ಹೊರತಂದಿರುವ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪೋಸ್ಟರ್ನಲ್ಲಿ ಮಾಜಿ ಪ್ರಧಾನಿ ನೆಹರೂ ಅವರ ಭಾವಚಿತ್ರವನ್ನು ಕೈಬಿಟ್ಟಿರುವುದನ್ನು ಪ್ರಶ್ನಿಸಿರುವ ಸಂಜಯ್ ರಾವತ್, “ಇದು ಬಿಜೆಪಿಯ ಸಂಕುಚಿತ ಮನಸ್ಥಿತಿ” ಎಂದು ಟೀಕಿಸಿದ್ದಾರೆ.
ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ಸಂಜಯ್ ಅವರು ಬರೆಯುವ ’ರಾಖ್ತಾಕ್’ ಅಂಕಣದಲ್ಲಿ ಈ ಕುರಿತು ಪ್ರಸ್ತಾಪಿಸಿದ್ದು, “ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿಯು ಕೇಂದ್ರ ಶಿಕ್ಷಣ ಸಚಿವಾಲಯದ ಭಾಗವಾಗಿದೆ. ಮಂಡಳಿಯು ಹೊರತಂದಿರುವ ಸ್ವಾತಂತ್ರ್ಯ ಅಮೃತಮಹೋತ್ಸವದ ಪೋಸ್ಟರ್ನಲ್ಲಿ ನೆಹರೂ ಹಾಗೂ ಒಕ್ಕೂಟ ಸರ್ಕಾರದ ಮೊದಲ ಶಿಕ್ಷಣ ಸಚಿವ, ಸ್ವಾತಂತ್ರ್ಯ ಹೋರಾಟಗಾರ ಮೌಲಾನಾ ಅಬ್ದುಲ್ ಕಲಾಂ ಆಜಾದ್ ಅವರ ಭಾವಚಿತ್ರವನ್ನು ಕೈಬಿಡಲಾಗಿದೆ. ಇದು ಬಿಜೆಪಿಯ ರಾಜಕೀಯ ಪ್ರತೀಕಾರ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಸ್ವಾತಂತ್ರ್ಯ ಹೋರಾಟ ಮಾಡದ ಒಬ್ಬರನ್ನು ಪೋಸ್ಟರ್ನಲ್ಲಿ ಸೇರಿಸಲಾಗಿದೆ. ನಿಜವಾದ ಹೋರಾಟಗಾರರನ್ನು ಹೊರಗೆ ಇಡಲಾಗಿದೆ. ಇದು ರಾಜಕೀಯ ಪ್ರತಿಕಾರವಾಗಿದೆ. ಇದು ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ಅವಮಾನ ಎಂದು ತಮ್ಮ ಅಂಕಣದಲ್ಲಿ ಬರೆದಿದ್ದಾರೆ.
ಇದನ್ನೂ ಓದಿ: ಫಾದರ್ ಸ್ಟಾನ್ ಸ್ವಾಮಿಯವರನ್ನು ಕೊಲ್ಲಲಾಗಿದೆ: ಶಿವಸೇನೆ ಸಂಸದ ಸಂಜಯ್ ರಾವತ್ ಆರೋಪ
ಸ್ವಾತಂತ್ರ್ಯ ನಂತರದಲ್ಲಿ ನೆಹರೂ ಅವರು ಕೈಗೊಂಡ ಕಾರ್ಯಕ್ರಮಗಳ ಕುರಿತು ಭಿನ್ನಾಪ್ರಾಯಗಳಿರಬಹುದು. ಆದರೆ ಸ್ವಾತಂತ್ರ್ಯ ಹೋರಾಟಕ್ಕೆ ಅವರು ನೀಡಿದ ಕೊಡುಗೆಗಳನ್ನು ಯಾರೂ ಅಲ್ಲಗೆಳೆಯಲಾರರು. ಇಷ್ಟೊಂದು ದ್ವೇಷಿಸಲು ನೆಹರೂ ಏನು ಮಾಡಿದ್ದಾರೆ? ಹೇಳಬೇಕೆಂದರೆ, ಆರ್ಥಿಕತೆಯನ್ನು ಮುಂದುವರಿಸಲೆಂದು ನೆಹರೂ ಅವರು ಕಟ್ಟಿದ ಸಂಸ್ಥೆಗಳನ್ನು ಮಾರಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಇತ್ತೀಚೆಗೆ ಪ್ರಸ್ತಾಪಿಸಿರುವ ರಾಷ್ಟ್ರೀಯ ನಗದೀಕರಣ ಯೋಜನೆ ಕುರಿತು ಪ್ರಸ್ತಾಪಿಸುತ್ತಾ, “ನೆಹರೂ ಅವರ ದೂರದೃಷ್ಟಿಯಿಂದಾಗಿ ದೇಶ ಆರ್ಥಿಕ ದಿವಾಳಿತನದಿಂದ ಪಾರಾಗಿತ್ತು” ಎಂದಿದ್ದಾರೆ.
ತಮಿಳುನಾಡು ಸರ್ಕಾರ ಶಾಲಾ ಮಕ್ಕಳಿಗೆ ವಿತರಿಸುವ ಬ್ಯಾಗ್ಗಳ ಮೇಲೆ ಈವರೆಗೆ ಮುದ್ರಿಸಲಾಗುತ್ತಿದ್ದ ಮಾಜಿ ಮುಖ್ಯಮಂತ್ರಿ ಜಯಲಲಿತಾ ಹಾಗೂ ಪಳನಿಸ್ವಾಮಿಯವರ ಭಾವಚಿತ್ರವನ್ನು ಯಥಾಸ್ಥಿತಿ ಮುಂದುವರಿಸುವಂತೆ ಆದೇಶಿಸಿರುವ ಹಾಲಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ನಿರ್ಧಾರವನ್ನು ಸಂಜಯ್ ರಾವತ್ ಮೆಚ್ಚಿಕೊಂಡಿದ್ದಾರೆ.
ಇದನ್ನೂ ಓದಿ: ಪೆಗಾಸಸ್ ಹಗರಣ: ಒಕ್ಕೂಟ ಸರ್ಕಾರದ ವಿರುದ್ಧ ಟಿಎಂಸಿ, ಶಿವಸೇನೆ ವಾಗ್ದಾಳಿ