ಕರ್ನಾಲ್ ಲಾಠಿಚಾರ್ಜ್ ಪ್ರಕರಣದ ಕುರಿತು ಸಮಗ್ರ ತನಿಖೆ ಮಾಡುವುದಾಗಿ ಹರಿಯಾಣ ಸರ್ಕಾರ ಭರವಸೆ ನೀಡಿದ ಬಳಿಕ ಹರಿಯಾಣ ರೈತರು ಪ್ರತಿಭಟನೆಯನ್ನು ಹಿಂತೆಗೆದುಕೊಂಡಿದ್ದಾರೆ.
ಪೊಲೀಸ್ ಲಾಠಿಚಾರ್ಜ್ ವೇಳೆ ಸಾವಿಗೀಡಾದ ರೈತ ಸುಶೀಲ್ ಕಾಜಲ್ ಅವರ ಕುಟುಂಬದ ಇಬ್ಬರು ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡುವ ಭರವಸೆಯನ್ನು ಸರ್ಕಾರ ನೀಡಿದೆ.
ನಾಲ್ಕನೇ ಸುತ್ತಿನ ಸಭೆ ಶನಿವಾರ ನಡೆದಿದ್ದು, ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗುವುದು. ಆಗಸ್ಟ್ 28ರಂದು ನಡೆದ ಘಟನೆ ಮತ್ತು ಇದರಲ್ಲಿ ಐಎಎಸ್ ಅಧಿಕಾರಿ ಆಯುಷ್ ಸಿನ್ಹಾ ಅವರ ಪಾತ್ರದ ಕುರಿತು ತನಿಖೆ ನಡೆಸಲಾಗುವುದು ಎಂದು ಸರ್ಕಾರ ಹೇಳಿದೆ. ತನಿಖೆ ಮುಗಿಯುವವರೆಗೆ ಸಿನ್ಹಾ ಅವರಿಗೆ ರಜೆ ನೀಡಲಾಗುತ್ತಿದೆ.
ಸರ್ಕಾರ ಪ್ರತಿನಿಧಿಯಾಗಿ ಭಾಗವಹಿಸಿದ್ದ ಹಿರಿಯ ಐಎಎಸ್ ಅಧಿಕಾರಿ ದೇವೇಂದ್ರ ಸಿಂಗ್ ಹಾಗೂ ರೈತ ಒಕ್ಕೂಟದ ನಾಯಕ ಗುರ್ನಾಮ್ ಸಿಂಗ್ ಚಧುನಿ ಅವರ ನಡುವೆ ಸಭೆ ನಡೆದ ಬಳಿಕ ಇಬ್ಬರೂ ಜಂಟಿಯಾಗಿ ಪತ್ರಿಕಾಗೋಷ್ಠಿ ನಡೆಸಿದರು.
ಇದನ್ನೂ ಓದಿ: ಹರಿಯಾಣ: ಹಲ್ಲೆಯಲ್ಲಿ ಸಾವನ್ನಪ್ಪಿದ ರೈತರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಲು ಒತ್ತಾಯ
ಪ್ರತಿಭಟನಾ ನಿರತ ರೈತರ ತಲೆ ಒಡೆಯಿರಿ ಎಂದು ಐಎಎಸ್ ಅಧಿಕಾರಿ ಆಯುಷ್ ಸಿನ್ಹಾ ವಿವಾದಾತ್ಮಕ ಆದೇಶ ನೀಡಿದ್ದರು. ಶಾಂತಿಯುತ ಪ್ರತಿಭಟನೆಗೆ ಹಿಂಸಾಚಾರವನ್ನು ಎಳೆತರಲಾಗಿತ್ತು. ಸಿನ್ಹಾ ಆದೇಶಕ್ಕೆ ರಾಷ್ಟ್ರಮಟ್ಟದಲ್ಲಿ ಭಾರೀ ಟೀಕೆಗಳು ವ್ಯಕ್ತವಾಗಿದ್ದವು.