Homeಮುಖಪುಟಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಯ ಕಿಡಿ: ಶಹೀದ್ ಅಶ್ಫಾಖುಲ್ಲಾ ಖಾನ್

ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಯ ಕಿಡಿ: ಶಹೀದ್ ಅಶ್ಫಾಖುಲ್ಲಾ ಖಾನ್

- Advertisement -
- Advertisement -

“ವೋ ಜಿಸ್ಮ್ ಬೀ ಕ್ಯಾ ಜಿಸ್ಮ್ ಹೈ, ಜಿಸ್ಮೆ ನಾಹೋ ಖೂನ್-ಎ-ಜುನೂನ್, ಕ್ಯಾ ಲಡೇ ತೂಫಾನೋಂ ಸೆ, ಜೋ ಕಶ್ತಿ-ಎ-ಸಾಹಿಲ್ ಮೆ ಹೈ… ಸರ್ಫರೋಶಿ ಕಿ ತಮನ್ನಾ ಅಬ್ ಹಮಾರೆ ದಿಲ್ ಮೆ ಹೈ, ದೇಖ್ ನಾ ಹೈ ಝೋರ್ ಕಿತ್ನಾ ಬಾಝು-ಎ-ಖಾತಿಲ್ ಮೆ ಹೈ”….

ಜೈಲಿನ ಕೋಣೆಗಳಿಂದ ಕೇಳಿ ಬರುತ್ತಿದ್ದ ಈ ಕ್ರಾಂತಿ ಗೀತೆ ಬ್ರಿಟಿಷ್ ಪ್ರಭುತ್ವದ ಎದೆಯಲ್ಲಿ ಅದ್ಯಾವ ಪರಿ ಭಯ ಹುಟ್ಟಿಸಿತ್ತೆಂದರೆ ಜೀವದ ಗೆಳೆಯರಾಗಿದ್ದ ಆ ಇಬ್ಬರು ಕ್ರಾಂತಿಕಾರಿಗಳನ್ನು ದೂರದೂರದ ಸೆಲ್ ಗಳಿಗೆ ಹಾಕಿಬಿಟ್ಟರು. ಅವರೇ ಶಹೀದ್ ಅಶ್ಫಾಕುಲ್ಲಾಹ್ ಖಾನ್ ಮತ್ತು ಶಹೀದ್ ರಾಂ ಪ್ರಸಾದ್ ಬಿಸ್ಮಿಲ್.

ಅಶ್ಫಾಕುಲ್ಲಾಹ್ ಖಾನ್ ಹುಟ್ಟಿದ್ದು ಉತ್ತರ ಪ್ರದೇಶದ ಶಹಜಹಾನ್ ಪುರದ ಪ್ರತಿಷ್ಠಿತ ಶ್ರೀಮಂತ ಮನೆತನದಲ್ಲಿ. ತಂದೆಯ ಕಡೆಯವರು ಅಂತಹ ವಿದ್ಯಾವಂತರೇನಲ್ಲ. ತಾಯಿ ಮಝ್ ಹರುನ್ನೀಸಾರ ಕಡೆಯಲ್ಲಿ ಎಲ್ಲರೂ ಆ ಕಾಲಕ್ಕೆ ಉನ್ನತ ಶಿಕ್ಷಣ ಪಡೆದು ಉನ್ನತ ಹುದ್ದೆಗಳಲ್ಲಿದ್ದರು. ಅವರ ಕುಟುಂಬಿಕರಲ್ಲಿ ಮ್ಯಾಜಿಸ್ಟ್ರೇಟ್ ಗಳೂ ಇದ್ದರು. ಅವೆಲ್ಲವೂ ಬ್ರಿಟಿಷ್ ಸರಕಾರದ ಹುದ್ದೆಗಳಾಗಿದ್ದವು. ತಂದೆ ಶಫೀಕುರ್ರಹ್ಮಾನ್ ಪೋಲೀಸ್ ಇಲಾಖೆಯಲ್ಲಿದ್ದರು.

ಗಾಂಧೀಜಿ ಅಸಹಕಾರ ಚಳವಳಿಗೆ ಕರೆಕೊಟ್ಟಾಗ ಅಶ್ಫಾಕ್ ಇನ್ನೂ ವಿದ್ಯಾರ್ಥಿಯಾಗಿದ್ದರು. ಅದು ಅವರ ಮೇಲೆ ಗಾಢ ಪ್ರಭಾವ ಬೀರಿತು. ತನ್ನ ಕುಟುಂಬಿಕರು ಬ್ರಿಟಿಷ್ ಸರಕಾರದ ಹುದ್ದೆಗಳಲ್ಲಿರುವುದು ಅಶ್ಫಾಕ್ ರಿಗೆ ಒಂದು ಕಪ್ಪು ಚುಕ್ಕೆಯಂತೆ ಅನಿಸುತ್ತಿತ್ತು. ಸುಶಿಕ್ಷಿತ ಕುಟುಂಬದ ಹಿನ್ನೆಲೆಯವರಾದ ಅವರ ಹೆತ್ತವರು ತಮ್ಮ ಕಿರಿಯ ಮಗ ಅಶ್ಫಾಕ್ ನನ್ನು ಪ್ರತಿಷ್ಟಿತ ಕಾನ್ವೆಂಟ್ ಶಾಲೆಯೊಂದಕ್ಕೆ ಸೇರಿಸಿದ್ದರು. ಪ್ರೌಢಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಬ್ರಿಟಿಷ್ ಪ್ರಭುತ್ವದ ವಿರುದ್ಧ ಮಾತನಾಡುತ್ತಿದ್ದ ಅವರನ್ನು ‘ಮಕ್ಕಳ ತಲೆಯಲ್ಲಿ ಸರಕಾರದ ವಿರುದ್ಧ ಭಾವನೆಗಳನ್ನು ಬಿತ್ತುತ್ತಾನೆಂದು’ ಶಾಲೆಯಿಂದ ಹೊರಹಾಕಲಾಗಿತ್ತು. ಗಾಂಧೀಜಿ ಅಸಹಕಾರ ಚಳವಳಿಗೆ ಕರೆಕೊಟ್ಟಾಗ ಅಶ್ಫಾಕ್ ತನ್ನ ಸಹಪಾಠಿಗಳೊಂದಿಗೆ ಬೀದಿಗಿಳಿದು ಸಂಗ್ರಾಮದ ಕೆಲಸಗಳಲ್ಲಿ ಸಕ್ರಿಯರಾದರು.

ಅದಾಗಲೇ ಕ್ರಾಂತಿಕಾರಿ ಪುಸ್ತಕಗಳು ಅಶ್ಫಾಕ್ ರ ಸಂಗಾತಿಗಳಾಗಿದ್ದವು. ಉರ್ದು ಮತ್ತು ಸಂಸ್ಕೃತದಲ್ಲಿ ಒಳ್ಳೆಯ ಪಾಂಡಿತ್ಯ ಪಡೆದಿದ್ದ ಅಶ್ಫಾಕ್ ಉರ್ದುವಿನಲ್ಲಿ ಹಲವಾರು ಕವಿತೆಗಳನ್ನು ಬರೆಯುತ್ತಿದ್ದರು. ಅಸಹಕಾರ ಚಳವಳಿ ಚೌರಿ ಚೌರಾದಲ್ಲಿ ಹಿಂಸಾಚಾರಕ್ಕೆ ತಿರುಗಿದ್ದರಿಂದ ಗಾಂಧೀಜಿ ಅಸಹಕಾರ ಚಳವಳಿಯನ್ನು ಹಿಂದೆಗೆದರು. ಬಿಸಿರಕ್ತದ ತರುಣರಾದ ಅಶ್ಫಾಕ್ ಅದರಿಂದಾಗಿ ಕ್ರುದ್ಧರಾದರು. ಬ್ರಿಟಿಷ್ ಪ್ರಭುತ್ವದ ವಿರುದ್ಧ ಇನ್ನು ಸಶಸ್ತ್ರ ಹೋರಾಟವೇ ಸರಿಯಾದ ಮಾರ್ಗ ಎಂದು ನಿರ್ಧರಿಸಿ ಕ್ರಾಂತಿಕಾರಿ ತಂಡದ ತಲಾಶೆಯಲ್ಲಿದ್ದರು. ಅಶ್ಫಾಕರಿಗಿಂತ ಮೂರು ವರ್ಷ ಹಿರಿಯರಾದ ರಾಂ ಪ್ರಸಾದ್ ಬಿಸ್ಮಿಲ್ ಅದಾಗಲೇ ಬ್ರಿಟಿಷ್ ಪ್ರಭುತ್ವದ ವಿರುದ್ಧದ ಸಿಡಿದೆದ್ದು ಪ್ರಸಿದ್ಧರಾಗಿದ್ದರು. ಅವರು ಅಶ್ಫಾಕ್ ರ ಹುಟ್ಟೂರು ಶಹಜಹಾನ್ ಪುರದವರೇ ಆಗಿದ್ದರೂ ಆಗಾಗ ಭೂಗತರಾಗಬೇಕಾದ ಅನಿವಾರ್ಯತೆಯಿತ್ತು.

ಶಹಜಹಾನ್ ಪುರದಲ್ಲಿ ನಡೆಯಲಿರುವ ಗುಪ್ತ ಸಭೆಯೊಂದಕ್ಕೆ ಬಿಸ್ಮಿಲ್ ಬರುವ ವಿಚಾರ ಅಶ್ಫಾಕರಿಗೆ ತಿಳಿಯಿತು. ಅಂದಿನ ಆ ಗುಪ್ತ ಸಭೆಗೆ ಹೋಗಿ ರಾಂ ಪ್ರಸಾದ್ ಬಿಸ್ಮಿಲ್ ರ ಜೊತೆ ಅಶ್ಫಾಕ್ ಸೇರಿಕೊಂಡರು. ಅವರು ಮೊದಮೊದಲು ಒಂದು ವಿಧದಲ್ಲಿ ಗುರು ಶಿಷ್ಯರಂತಿದ್ದರು. ಆ ಬಳಿಕ ಅವರ ಸ್ನೇಹ ಗಾಢವಾಯಿತು. ಅದೆಷ್ಟು ಗಾಢವಾಯಿತೆಂದರೆ ಒಮ್ಮೆ ಅಶ್ಫಾಕ್ ವಿಪರೀತ ಜ್ವರದಿಂದ ಬಳಲುತ್ತಿದ್ದರು. ಆಗ ನಿದ್ದೆಯಲ್ಲಿ ‘ರಾಂ, ಮೇರೇ ಪ್ಯಾರೇ ರಾಂ’ ಎಂದು ನರಳುತ್ತಿದ್ದರಂತೆ. ಇದನ್ನು ಕೇಳಿಸಿಕೊಂಡ ಹೆತ್ತವರು ಪ್ರಶ್ನಿಸಿದಾಗ “ನಾನು ನನ್ನ ಪ್ರಾಣ ಸ್ನೇಹಿತ ರಾಂ ಪ್ರಸಾದನ ಹೆಸರು ಕರೆಯುತ್ತಿದ್ದೇನೆ” ಎಂದರು. ಕೂಡಲೇ ಅವರು ರಾಂ ಪ್ರಸಾದ್ ಬಿಸ್ಮಿಲ್ ರನ್ನು ಕರೆಸಿದರು. ರಾಂ ಪ್ರಸಾದ್ ಬಂದು ಅಶ್ಫಾಕರನ್ನು ಅಪ್ಪಿ ಹಿಡಿದು ಅತ್ತರಂತೆ.

ಬ್ರಿಟಿಷ್ ಪ್ರಭುತ್ವದ ವಿರುದ್ಧ ಇನ್ನು ಸಶಸ್ತ್ರ ಹೋರಾಟವೇ ಸರಿಯಾದ ಮಾರ್ಗವೆಂದು ನಿರ್ಧರಿಸಿದ್ದ ಅಶ್ಫಾಕ್, ಬಿಸ್ಮಿಲ್ ಮತ್ತವರ ಸಂಗಡಿಗರ ಕೈಯಲ್ಲಿ ಶಸ್ತ್ರಾಸ್ತ್ರ ಖರೀದಿಸಲು ಕಾಸಿರಲಿಲ್ಲ. ಹೀಗಿರಲು ದುಡ್ಡು ಸಂಗ್ರಹಿಸಲು ಏನು ಮಾಡುವುದಪ್ಪಾ ಎಂಬ ಚಿಂತೆಯಲ್ಲಿದ್ದಾಗ ಅವರಿಗೆ ಲಕ್ನೋದಿಂದ ಲಾಹೋರ್ ಗೆ ಹೋಗುವ ರೈಲಿನಲ್ಲಿ ಬ್ರಿಟಿಷ್ ಪ್ರಭುತ್ವ ದುಡ್ಡು ಸಾಗಿಸುತ್ತದೆಯೆಂಬ ಮಾಹಿತಿ ಸಿಕ್ಕಿತ್ತು. ಅವರು ಆ ರೈಲನ್ನು ದರೋಡೆ ಮಾಡುವುದೆಂದು ತೀರ್ಮಾನಿಸಿದರು. ಆದರೆ ಧರ್ಮನಿಷ್ಠ ಕುಟುಂಬದ ಹಿನ್ನೆಲೆಯವರಾದ ಅಶ್ಫಾಕ್ ರಿಗೆ ದರೋಡೆಯ ವಿಚಾರದಲ್ಲಿ ಮೊದಲು ಸಹಮತವಿರಲಿಲ್ಲ.

1925ರ ಅಗಸ್ಟ್ ಎಂಟರಂದು ಬಿಸ್ಮಿಲ್, ಅಶ್ಫಾಕ್ ನೇತೃತ್ವದ ತಂಡ ಗುಪ್ತ ಸಭೆ ಸೇರಿದಾಗ ಅಶ್ಫಾಕ್ ಮೊದಲು ದರೋಡೆಯ ವಿಚಾರದಲ್ಲಿ ಸಹಮತ ತೋರಲಿಲ್ಲ. ಆಗ ಅವರ ತಂಡದಲ್ಲಿದ್ದ ಇತರರು ನಾವು ಈ ಮುಸಲ್ಮಾನನನ್ನು ನಮ್ಮ ತಂಡದಲ್ಲಿ ಸೇರಿಸಿದ್ದೇ ತಪ್ಪಾಯಿತು ಎಂದು ಅಸಹನೆ ವ್ಯಕ್ತಪಡಿಸಿದರು. ಆ ರೀತಿ ಅಸಹನೆ ತೋರಿದವರ ಮೇಲೆ ರಾಂ ಪ್ರಸಾದ್ ಗರಂ ಆದರು.

ಆ ಬಳಿಕ ಬಿಸ್ಮಿಲ್ ತನ್ನ ಪ್ರಾಣ ಸ್ನೇಹಿತನಿಗೆ ಮನವರಿಕೆ ಮಾಡುತ್ತಾರೆ… “ಅಶ್ಫಾಕ್… ನಾವು ಲೂಟಿ ಬಯಸಿರುವುದು ಬ್ರಿಟಿಷರ ವಶದಲ್ಲಿರುವ ನಮ್ಮದೇ ನೆಲದ ಸೊತ್ತನ್ನು.. ಅವರು ನಮ್ಮಿಂದ ಕೊಳ್ಳೆ ಹೊಡೆದುದರ ಒಂದು ಅತೀ ಸಣ್ಣ ಅಂಶವೊಂದನ್ನು ಮಾತ್ರ.. ಅದೂ ಯಾಕಾಗಿ.. ನಮ್ಮ ಸ್ವಂತ ಲಾಭಕ್ಕಾಗಿಯೇ..? ನಮ್ಮ ಮಾತೃಭೂಮಿಯನ್ನು ಅವರ ಕೈಯಿಂದ ವಿಮೋಚನೆಗೊಳಿಸುವ ಏಕೈಕ ಉದ್ದೇಶಕ್ಕಾಗಿ.. ಇದರಲ್ಲಿ ಪುಣ್ಯವಲ್ಲದೇ ಅಪರಾಧವೇನಿದೆ..?”…

ಬಿಸ್ಮಿಲ್ಲ ಅವರ ಮಾತುಗಳು ನಿಧಾನಕ್ಕೆ ಅಶ್ಫಾಕ್ ರ ಹೃದಯಕ್ಕಿಳಿಯಿತು. ಆಗ ಅಶ್ಫಾಕ್ ತನ್ನ ವಿರುದ್ಧ ಮತ್ತು ತನ್ನ ಧರ್ಮದ ವಿರುದ್ಧ ಅಸಹನೆ ತೋರಿದ ಸಂಗಾತಿಗಳನ್ನುದ್ದೇಶಿಸಿ, “ಈ ದೇಶಕ್ಕಾಗಿ ನಮ್ಮ ತಂಡದ ಮೊದಲ ಹುತಾತ್ಮ ಮುಸಲ್ಮಾನ ಅಶ್ಫಾಕ್ ಆಗಲಿದ್ದಾನೆ.. ಇಂಶಾ ಅಲ್ಲಾಹ್” ಎಂದು ಶಪಥ ಮಾಡಿದರು.

1925ರ ಅಗಸ್ಟ್ ಒಂಬತ್ತರಂದು ಲಕ್ನೋದಿಂದ ಲಾಹೋರಿಗೆ ಹೊರಟ ರೈಲನ್ನು ಕಾಕೋರಿಯಲ್ಲಿ ದರೋಡೆ ಮಾಡಿದರು. ಈ ಘಟನೆ ಬ್ರಿಟಿಷ್ ಪ್ರಭುತ್ವದ ಎದೆ ನಡುಗಿಸಿತು. ಎಲ್ಲಾ ಕ್ರಾಂತಿಕಾರಿಗಳು ತಪ್ಪಿಸಿಕೊಂಡು ಭೂಗತರಾದರು. ಕೆಲವೇ ದಿನಗಳಲ್ಲಿ ಒಬ್ಬೊಬ್ಬರನ್ನೇ ಬ್ರಿಟಿಷ್ ಪ್ರಭುತ್ವ ಹಿಡಿದು ಕಂಬಿಯೊಳಗೆ ತಳ್ಳಿತು. ಅಶ್ಫಾಕ್ ಬಿಹಾರಕ್ಕೆ ಪರಾರಿಯಾದರು.

1925 ಡಿಸೆಂಬರ್ 24ರಂದು ಅಲ್ಲಿಂದ ದೆಹಲಿಗೆ ಹೋದರು. ಅಲ್ಲಿ ಸಹಾಯಕ್ಕಾಗಿ ಗೆಳೆಯನೊಬ್ಬನನ್ನು ಸಂಪರ್ಕಿಸಿದರು. ಅಶ್ಫಾಕ್ ವಿದೇಶಕ್ಕೆ ಪರಾರಿಯಾಗಿ ಅಲ್ಲಿ ಇಂಜಿನಿಯರಿಂಗ್ ಓದಿ ಶಸ್ತ್ರಾಸ್ತ್ರ ತಯಾರಿಕೆಯನ್ನು ಕಲಿಯಬೇಕೆಂದಿದ್ದರು. ಆದರೆ ಅಶ್ಫಾಕ್ ಸಹಾಯಕ್ಕೆಂದು ಯಾವ ಗೆಳೆಯನನ್ನು ಸಂಪರ್ಕಿಸಿದ್ದರೋ ಆತ ಬೆನ್ನಿಗೆ ಚೂರಿ ಇರಿಯುವ ಕೆಲಸ ಮಾಡಿದ. ಅಂದರೆ ಬ್ರಿಟಿಷ್ ಪ್ರಭುತ್ವ ಹುಡುಕುತ್ತಿದ್ದ “ಮೋಸ್ಟ್ ವಾಂಟೆಡ್” ಅಶ್ಫಾಕ್ ರನ್ನು ಹಿಡಿಸಿದ.

ಕಾಕೋರಿ ದರೋಡೆಯ ಎಲ್ಲಾ ಆರೋಪಿಗಳೂ ಜೈಲು ಪಾಲಾದರು. ಅದರಲ್ಲಿ ಅಶ್ಫಾಕ್ ರನ್ನು ಪ್ರಮುಖ ಆರೋಪಿಯಾಗಿಸಲಾಯಿತು. ಅಶ್ಫಾಕ್ ರ ಸಹೋದರ ಅಡ್ವಕೇಟ್ ರಿಯಾಸತುಲ್ಲಾ ಖಾನ್ ಕ್ರಾಂತಿಕಾರಿಗಳ ಪರವಾಗಿ ನ್ಯಾಯಾಲಯಗಳಲ್ಲಿ ವಾದಿಸಿದರು. ಆದರೆ ಬ್ರಿಟಿಷ್ ಪ್ರಭುತ್ವ ಅದಾಗಲೇ ಅಶ್ಫಾಕ್, ಬಿಸ್ಮಿಲ್ ಮತ್ತಿತರರನ್ನು ಗಲ್ಲಿಗೇರಿಸುವ ತೀರ್ಮಾನ ಮಾಡಿಯಾಗಿತ್ತು. ಆದರೂ ಬಿಡುಗಡೆಗೊಳಿಸುವ ಪ್ರಯತ್ನ ಭರದಿಂದ ಸಾಗಿತ್ತು. ತನ್ನ ಕಿರಿಯ ಮಗನಿಗೆ ಗಲ್ಲಾಗುತ್ತದೆಂದು ತಾಯಿ ಮಝ್ ಹರುನ್ನಿಸಾ ತೀವ್ರ ಚಿಂತಿತರಾದರು.

ಅಶ್ಫಾಕ್ ಜೈಲಿನಿಂದ ಅಮ್ಮನಿಗೆ ಬರೆದ ಪತ್ರದಲ್ಲೂ ಸಾವಿನ ಬಗ್ಗೆ ನಿರ್ಭೀತರಾಗಿ ಬರೆದಿದ್ದರು ಮತ್ತು ತನಗಾಗಿ ದುಆ ಮಾಡುವಂತೆ ತಾಯಿಗೆ ಕೋರಿದ್ದರು. ಅಶ್ಫಾಕ್ ರ ಕುಟುಂಬಿಕರು ಮತ್ತಿತರ ಹಿರಿಯ ಹೋರಾಟಗಾರರು ಬ್ರಿಟಿಷ್ ಪ್ರಭುತ್ವಕ್ಕೆ ಪರಿ ಪರಿಯಾಗಿ ಬೇಡಿಕೊಂಡರು. ಕೊನೆಯಲ್ಲಿ ಅಶ್ಫಾಕ್ ಕುಟುಂಬ ಸ್ನೇಹಿತ ವಕೀಲರೊಬ್ಬರು ಜೈಲಿನಲ್ಲಿ ಅವರನ್ನು ಭೇಟಿಯಾಗಿ ಮಾಫಿನಾಮಾ ಬರೆಯುವಂತೆ ಕೋರಿದರು. ಕ್ರುದ್ಧರಾದ ಅಶ್ಫಾಕ್ “ನಾನು ಬ್ರಿಟಿಷ್ ಪ್ರಭುತ್ವದೊಂದಿಗೆ ಕ್ಷಮೆ ಯಾಚಿಸಬೇಕೇ…?, ಕ್ಷಮೆಯಾಚಿಸುವುದರ ಅರ್ಥವೇನು..?, ನಾನು ತಪ್ಪು ಮಾಡಿದ್ದೇನೆಂದಲ್ಲವೇ…?, ನನ್ನ ಮಾತೃಭೂಮಿಯ ವಿಮೋಚನೆಗಾಗಿ ನಾನು ಮತ್ತು ನನ್ನ ಸ್ನೇಹಿತರು ಮಾಡಿದ ಕೆಲಸ ಅಪರಾಧವೇ…?, ಅವರೊಂದಿಗೆ ಮಾಫಿ ಕೇಳಿ ಪ್ರಾಣಬಿಕ್ಷೆ ಪಡೆಯುವುದಕ್ಕಿಂತ ಓರ್ವ ಕ್ರಾಂತಿಕಾರಿಗೆ ವೀರ ಮರಣವೇ ಲೇಸು…” ಎಂದು ಅವರನ್ನು ಅಲ್ಲಿಂದ ವಾಪಾಸು ಕಳುಹಿಸಿದರು.

1927 ಡಿಸೆಂಬರ್ ಹತ್ತೊಂಬತ್ತರಂದು ಅಶ್ಫಾಕುಲ್ಲಾಹ್ ಖಾನ್, ರಾಂ ಪ್ರಸಾದ್ ಬಿಸ್ಮಿಲ್, ರಾಜೇಂದ್ರ ಲಾಹಿರಿ, ಠಾಕೂರ್ ರೋಶನ್ ಸಿಂಗರನ್ನು ಗಲ್ಲಿಗೇರಿಸಲಾಯಿತು. ಇತರ ಕ್ರಾಂತಿಕಾರಿಗಳಲ್ಲಿ ಕೆಲವರಿಗೆ ಕಾಲಾಪಾನಿ, ಮತ್ತೆ ಕೆಲವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು.
1925 ಆಗಸ್ಟ್ ಎಂಟರಂದು ಕ್ರಾಂತಿಕಾರಿಗಳ ಗುಪ್ತ ಸಭೆಯಲ್ಲಿ ಗರ್ಜಿಸಿದಂತೆ ಆ ತಂಡದ ಮೊದಲ ಹುತಾತ್ಮ ಅಶ್ಫಾಕುಲ್ಲಾಹ್ ಖಾನ್ ಅವರೇ ಆಗಿಬಿಟ್ಟರು.

ಗಲ್ಲಿಗೇರಿಸಲು ಕರೆತಂದು ಗಲ್ಲು ಪೀಠದಲ್ಲಿ ನಿಲ್ಲಿಸಿದಾಗ ಕೇವಲ ಇಪ್ಪತ್ತೇಳರ ಹರೆಯದ ಆ ಕ್ರಾಂತಿಕಾರಿ ಅಶ್ಪಾಕ್ ನಗು ನಗುತ್ತಾ ನೇಣಿನ ಹಗ್ಗವನ್ನು ಮುತ್ತಿಕ್ಕಿ ‘ಲಾ ಇಲಾಹ ಇಲ್ಲಲ್ಲಾಹ್.. ಮುಹಮ್ಮದುರ್ರಸೂಲುಲ್ಲಾಹ್ ಎಂದು ನೇಣುಗಂಬ ಏರಿದರು.
****

  • ಇಸ್ಮತ್ ಪಜೀರ್

(ಮಂಗಳೂರಿನ ಯುವ ಲೇಖಕರಾದ ಇಸ್ಮತ್ ಪಜೀರ್ ಬ್ಯಾರಿ ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರಾಗಿದ್ದರು. ಆದರೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟಗಾರರ ಮೇಲಿನ ಹಲ್ಲೆ ಖಂಡಿಸಿ ಅದಕ್ಕೆ ರಾಜೀನಾಮೆ ನೀಡಿ ಹೊರಬಂದವರು. ತಮ್ಮದೇ ಆದ ಪಾಲಿಕ್ಲಿನಿಕ್ ನಡೆಸುತ್ತಿದ್ದಾರೆ.)


ಇದನ್ನೂ ಓದಿ: ಸರ್ದಾರ್ ಉದಮ್: ಇದು ಶೂಜಿತ್ ನ ಗೆಲುವು ಮತ್ತು ಪ್ರಜಾಪ್ರಭುತ್ವದ ಗೆಲುವು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...