ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು ಸುಲಿಗೆಗಾಗಿ ಅಪಹರಿಸಲಾಗಿತ್ತು, ಒಂದು ಸೆಲ್ಫಿಯಿಂದಾಗಿ ಅವರ ಆಟವು ಹಾಳಾಯಿತು ಎಂದು ಮಹಾರಾಷ್ಟ್ರದ ಸಚಿವ ನವಾಬ್ ಮಲಿಕ್ ಹೇಳಿದ್ದಾರೆ.
ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಅಪಹರಣದ ಸಂಚಿನ ಭಾಗವಾಗಿದ್ದಾರೆ ಎಂದು ಮಲಿಕ್ ಆರೋಪಿಸಿದ್ದಾರೆ.
ಬಿಜೆಪಿ ನಾಯಕ ಮೋಹಿತ್ ಕಾಂಬೋಜ್ ಈ ಸಂಚನ್ನು ರೂಪಿಸಿದ್ದಾರೆ ಎಂದಿರುವ ಮಲಿಕ್, ಆರ್ಯನ್ ಖಾನ್ ಅಂಥವರನ್ನು ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿಸುವ ಸಂಚು ನಡೆದಿದೆ ಎಂದೂ ಆರೋಪಿಸಿದ್ದಾರೆ.
ಮುಂಬೈ ಕರಾವಳಿಯ ಕ್ರೂಸ್ ಹಡಗಿನ ಮೇಲೆ ಅಕ್ಟೋಬರ್ನಲ್ಲಿ ವಾಂಖೆಡೆ ನೇತೃತ್ವದಲ್ಲಿ ದಾಳಿ ನಡೆಸಿದ ನಂತರ ಆರ್ಯನ್ ಖಾನ್ ಅವರನ್ನು ಬಂಧಿಸಲಾಯಿತು. ದಾಳಿ ವೇಳೆ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಆದರೆ ಆರ್ಯನ್ ಖಾನ್ ಡ್ರಗ್ಸ್ ಸೇವಿಸಿಲ್ಲ ಎಂದು ದೃಢವಾಗಿದೆ. ಆರ್ಯನ್ ಅವರಿಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡಿದೆ.
“ಆರ್ಯನ್ ಖಾನ್ ಟಿಕೆಟ್ ಖರೀದಿಸಿ ವಿಲಾಸಕ್ಕೆಂದು ಹೋಗಿಲ್ಲ ಎಂದು ನ್ಯಾಯಾಲಯದಲ್ಲಿ ಹೇಳಲಾಗಿದೆ. ಪ್ರತೀಕ್ ಗಾಬಾ ಮತ್ತು ಅಮೀರ್ ಫರ್ನಿಚರ್ವಾಲಾ ಕಾರಣಕ್ಕಾಗಿ ಅವರು ಅಲ್ಲಿಗೆ ಹೋಗಿದ್ದಾರೆ. ನಾನು ನೇರವಾಗಿ ಹೇಳಲು ಬಯಸುತ್ತೇನೆ- ಅದು ಅಪಹರಣ ಮತ್ತು ಸುಲಿಗೆಯ ಪ್ರಕರಣವಾಗಿದೆ” ಎಂದು ಸಚಿವರು ದೂರಿದ್ದಾರೆ.
ಬಿಜೆಪಿ ನಾಯಕ ಮೋಹಿತ್ ಕಾಂಬೋಜ್ ಅವರ ಕಡೆಯಿಂದ ಅಪಹರಣ ನಡೆಸಲಾಗಿತ್ತು ಎಂದು ಮಲಿಕ್ ಆರೋಪಿಸಿದ್ದು, “ಆರ್ಯನ್ ಖಾನ್ ಅವರನ್ನು ಅಲ್ಲಿಗೆ ಕರೆದೊಯ್ದರು. 25 ಕೋಟಿ ರೂ. ಸುಲಿಗೆಯ ಆಟ ಪ್ರಾರಂಭವಾಯಿತು. 18 ಕೋಟಿ ರೂ.ಗೆ ಒಪ್ಪಂದವಾಯಿತು. ₹ 50 ಲಕ್ಷ ರೂ. ಪಾವತಿಸಲಾಯಿತು. ಆದರೆ ಒಂದು ಸೆಲ್ಫಿ ಅವರ ಆಟವನ್ನು ಹಾಳುಮಾಡಿದೆ ಮತ್ತು ಇದು ಸತ್ಯ” ಎಂದು ಅವರು ಪ್ರತಿಪಾದಿಸಿದ್ದಾರೆ.
ಮಲಿಕ್ ಅವರು ಯಾರನ್ನೂ ಹೆಸರಿಸದಿದ್ದರೂ, ಆರ್ಯನ್ ಖಾನ್ ಅವರೊಂದಿಗೆ ಖಾಸಗಿ ತನಿಖಾಧಿಕಾರಿ ಕೆ.ಪಿ.ಗೋಸಾವಿ ಅವರು ಇರುವ ಸೆಲ್ಫಿಯ ಕುರಿತೇ ಹೇಳುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಈ ಫೋಟೋವು ದಾಳಿಯ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಬಿಜೆಪಿ ಮುಖಂಡ ಮೋಹಿತ್ ಕಾಂಬೋಜ್ ಅವರನ್ನು ಪ್ರಕರಣದ ಮಾಸ್ಟರ್ ಮೈಂಡ್ ಎಂದು ನವಾಬ್ ಮಲ್ಲಿಕ್ ಹೇಳಿದ್ದಾರೆ. ಸುಲಿಗೆ ದಂಧೆಯಲ್ಲಿ ಡ್ರಗ್ಸ್ ವಿರೋಧಿ ಅಧಿಕಾರಿ ಸಮೀರ್ ವಾಂಖೆಡೆ ಅವರು ಪಾಲುದಾರರಾಗಿದ್ದಾರೆ ಎಂದಿದ್ದಾರೆ.
ರಾಜ್ಯ ಸಚಿವ ಅಸ್ಲಂ ಶೇಖ್ ಮತ್ತು ಹಲವಾರು ಸಚಿವರ ಮಕ್ಕಳನ್ನು ಕ್ರೂಸ್ಗೆ ಕರೆತರಲು ಕಾಶಿಫ್ ಖಾನ್ ಸೇರಿದಂತೆ ಸಂಘಟಕರು ಯೋಜಿಸಿದ್ದರು. ಮಹಾರಾಷ್ಟ್ರ ಸರ್ಕಾರವನ್ನು ದೂಷಿಸಲು ಯತ್ನಿಸಿದರು. ಆದರೆ ಅದು ಸಾಧ್ಯವಾಗಲಿಲ್ಲ ಎಂದು ಮಲಿಕ್ ತಿಳಿಸಿದ್ದಾರೆ.
ಎಲ್ಲಾ ಆರೋಪಗಳನ್ನು ನಿರಾಕರಿಸಿರುವ ಕಾಂಬೋಜ್, ಪ್ರಕರಣದ ಸುತ್ತ ಸುಳ್ಳುಗಳನ್ನು ಹಬ್ಬಿಸಲಾಗುತ್ತಿದೆ. ಮಹಾರಾಷ್ಟ್ರದ ಕೆಲವು ಸಚಿವರು ಶಾರುಖ್ ಖಾನ್ ಅವರಿಂದ ಹಣವನ್ನು ಸುಲಿಗೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿರಿ: ಕೊಳೆತು ನಾರುತ್ತಿರುವ ವ್ಯವಸ್ಥೆಯ ಕಥೆ ಹೇಳುವ ‘ಜೈ ಭೀಮ್’…