ಬೀದಿಬದಿಯ ಮಾಂಸಾಹಾರ ಮಳಿಗೆಗಳ ತೆರವು ಕಾರ್ಯಾಚರಣೆಯಿಂದಾಗಿ ಗುಜರಾತ್ ರಾಜ್ಯದಲ್ಲಿ ಮಾಂಸಾಹಾರ ಮಾರಾಟವನ್ನೇ ನಂಬಿಕೊಂಡಿದ್ದ ಬಡಪಾಯಿ ಕುಟುಂಬಗಳು ಆತಂಕಕ್ಕೆ ಒಳಗಾಗಿವೆ.
ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು, ಹಲವು ಸ್ಥಳೀಯ ಸಂಸ್ಥೆಗಳು ಬೀದಿಬದಿ ಮಾಂಸಾಹಾರ ಮಾರಾಟಕ್ಕೆ ಕಡಿವಾಣ ಹಾಕಲು ಮುಂದಾಗಿವೆ. ಅಲಹಾಬಾದ್ದಂತಹ ಪ್ರಮುಖ ನಗರಗಳಲ್ಲಿ ಮಳಿಗೆಗಳ ತೆರವು ಕಾರ್ಯಾಚರಣೆ ಆರಂಭವಾಗಿದ್ದು, ಮಾಂಸಾಹಾರ ಮಳಿಗೆಗಳನ್ನೇ ನಂಬಿಕೊಂಡು ಬದುಕುತ್ತಿದ್ದ ಜನರ ಬದುಕು ಬೀದಿಗೆ ಬೀಳುವ ಆತಂಕ ಎದುರಾಗಿದೆ.
ರಾಮ್ ಉದ್ಗರ್ ಗೋಸಾಯ್ ಎಂಬ ವ್ಯಾಪಾರಿಯನ್ನೇ ನೋಡಿ. ಅಂಗಡಿಯನ್ನು ಎಲ್ಲಿ ಇಡಬೇಕೆಂದು ಗೊತ್ತಾಗದೆ ತನ್ನ ಸ್ಕೂಟರ್ನಲ್ಲಿ ಅಹಮದಾಬಾದ್ ನಗರದ ಬೀದಿಬೀದಿಗಳನ್ನು ಮಂಗಳವಾರ ಸುತ್ತಾಡಿ ಸುಸ್ತಾದರು. ತನ್ನ ಮೊಟ್ಟೆ ಮಳಿಗೆಯನ್ನು ಹೊಟ್ಟೆಪಾಡಿಗಾಗಿ ಎಲ್ಲಿ ಇಡಬೇಕೆಂದು ತಿಳಿಯದೆ ಕಂಗಾಲಾದರು.
ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ನ ಎಸ್ಟೇಟ್ ಮತ್ತು ಪಟ್ಟಣ ಅಭಿವೃದ್ಧಿ ವಿಭಾಗವು ಅಹಮದಾಬಾದ್ ನಗರದ ಪ್ರದೇಶಗಳಾದ ಜೋಧ್ಪುರ, ಮಣಿನಗರ, ವಸ್ತ್ರಾಪುರ, ಆಶ್ರಮ ರಸ್ತೆ ಮತ್ತು ಬೆಹ್ರಾಂಪುರದಲ್ಲಿ ಸುಮಾರು 50 ಮಳಿಗೆಗಳನ್ನು ಮಂಗಳವಾರ ಸಂಜೆ ವೇಳೆಗೆ ಎತ್ತಂಗಡಿ ಮಾಡಿತ್ತು.
ಇದನ್ನೂ ಓದಿರಿ: ಗುಜರಾತ್: ಮಾಂಸಾಹಾರ ಮಳಿಗೆಗಳಿಗೆ ನಿರ್ಬಂಧ; ಬಿಜೆಪಿ ನಾಯಕರಲ್ಲಿ ಭಿನ್ನಮತ
“ಸಾಮಾನ್ಯವಾಗಿ ಈ ವೇಳೆಗೆ ಇಲ್ಲಿ ಸುಮಾರು ಹತ್ತರಿಂದ ಹನ್ನೆರಡು ಮೊಟ್ಟೆಯ ಮಳಿಗೆಗಳು ಇರುತ್ತಿದ್ದವು. ಇವತ್ತು ಯಾರೂ ಬಂದಿಲ್ಲ. ಎಲ್ಲರೂ ಹೆದರುತ್ತಿದ್ದಾರೆ. ಅಧಿಕಾರಿಗಳು ಇಂದು ಮಧ್ಯಾಹ್ನ ವಸ್ತ್ರಾಪುರದಲ್ಲಿ 11 ಗಾಡಿಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ನಮಗೆ ತಿಳಿಯಿತು” ಎಂದು ಬಿಹಾರದ ಮಧುಬನಿಯಿಂದ ವಲಸೆ ಬಂದ ವ್ಯಾಪಾರಿ ಅಳಲು ತೋಡಿಕೊಂಡರೆಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಸುಮಾರು 20 ವರ್ಷಗಳ ಹಿಂದೆ ಅಹಮದಾಬಾದ್ಗೆ ವಲಸೆ ಬಂದ ಈ ವ್ಯಾಪಾರಿ, ತಾಲ್ಜೇಜ್ ಪ್ರದೇಶದಲ್ಲಿ ತನ್ನ ಮೊಟ್ಟೆ ಮಳಿಗೆಯನ್ನು ಇಟ್ಟುಕೊಂಡು ತರಹೇವಾರಿ ತಿನಿಸುಗಳನ್ನು ಮಾರುತ್ತಿದ್ದರು. ಬೀದಿಬದಿ ಆಹಾರವನ್ನೇ ಅವಲಂಬಿಸಿದ್ದವರು ಬಂದು ಸವಿಯುತ್ತಿದ್ದರು. ಮುಖ್ಯವಾಗಿ ಈ ವ್ಯಾಪಾರಿ ಮೂವರು ಯುವಕರಿಗೆ ಕೆಲಸ ಕೊಟ್ಟಿದ್ದರು.
ಇಲ್ಲಿನ ಸ್ಥಳೀಯ ಸಂಸ್ಥೆ ಮಾಂಸಾಹಾರಿ ಬಂಡಿಗಳ ತೆರವು ಕಾರ್ಯಾಚರಣೆಯನ್ನು ಸೋಮವಾರದಿಂದ ಆರಂಭಿಸಿದೆ. ಈ ಧಮನಕಾರಿ ಪ್ರವೃತ್ತಿಗೆ “ಅತಿಕ್ರಮಣ ವಿರೋಧಿ ಕಾರ್ಯಾಚರಣೆ” ಎಂದು ಚೆಂದದ ಹೆಸರಿಟ್ಟಿದ್ದು, ಬಡವ್ಯಾಪಾರಿಗಳ ಬಂಡಿಗಳು, ಕುರ್ಚಿಗಳು ಮತ್ತು ಇತರ ಸಾಮಗ್ರಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗುತ್ತಿದೆ.
ವಾರಣಾಸಿಯಿಂದ ವಲಸೆ ಬಂದ ಮತ್ತೊಬ್ಬ ಯುವ ವ್ಯಾಪಾರಿ ನಗರದ ಮತ್ತೊಂದು ಭಾಗದಲ್ಲಿ ಆಸೆಗಣ್ಣಿನಿಂದ ಕಾಯುತ್ತ ಮೊಟ್ಟೆ ಅಂಗಡಿಯನ್ನು ತೆರೆಯಲು ಅನುಮತಿಯನ್ನು ನಿರೀಕ್ಷಿಸುತ್ತಿದ್ದರು. ಸುಮಾರು 15 ವರ್ಷಗಳಿಂದ ಅಹಮದಾಬಾದ್ನಲ್ಲಿರುವ ತನ್ನ ಚಿಕ್ಕಪ್ಪನ ಬೆನ್ನು ಹತ್ತಿ, ಕಾಲೇಜು ಬಿಟ್ಟು ಬಂದ ಈ ಯುವಕ ಎರಡು ತಿಂಗಳಿಂದ ಇಲ್ಲಿನ ಸ್ಟಾಲ್ನಲ್ಲಿ ಕೆಲಸ ಮಾಡುತ್ತಿದ್ದನು. “ಈಗ ಕೆಲಸ ಕಳೆದುಕೊಂಡರೆ ಮುಂದೇನು ಮಾಡಬೇಕೆಂದು ತಿಳಿಯುತ್ತಿಲ್ಲ” ಎಂದು ಕಂಗಾಲಾಗಿದ್ದಾನೆ.
ಬಿಜೆಪಿಯ ನಾಯಕರು ಮಾತ್ರ ವಿರೋಧಾಭಾಸಗಳ ಹೇಳಿಕೆ ನೀಡುತ್ತಾ, ವಾಸ್ತವದಲ್ಲಿ ಮಾಂಸಾಹಾರ ವಿರೋಧಿತನವನ್ನು ಕಾರ್ಯಗತಗೊಳಿಸುವ ಕೆಲಸ ಮಾಡುತ್ತಿದ್ದಾರೆ. ‘ಜನರು ಇಷ್ಟ ಬಂದಿದ್ದು ತಿನ್ನುತ್ತಾರೆ. ಅದನ್ನು ತಡೆಯಲು ಸಾಧ್ಯವಿಲ್ಲ’ ಎಂದು ಗುಜರಾತ್ ಬಿಜೆಪಿ ರಾಜ್ಯಾಧ್ಯಕ್ಷ ಸಿ.ಆರ್.ಪಾಟೀಲ್ ಹೇಳುತ್ತಾರೆ. ಆದರೆ ಬಡವರ ವಿರೋಧಿ ಕಾರ್ಯಾಚರಣೆ, ಬಡವರ ನಿರ್ಮೂಲನೆ ಕಾರ್ಯಾಚರಣೆ ಶುರುವಾಗಿದೆ.
“ಯಾರೂ ಮಾಂಸಾಹಾರ ಮಳಿಗೆ ತೆರವು ನಿರ್ಧಾರವನ್ನು ತೆಗೆದುಕೊಂಡಿಲ್ಲ. ವ್ಯಾಪಾರಿಗಳ ಮೇಲೆ ಯಾವುದೇ ಕಾನೂನಾತ್ಮಕ ನಿಷೇಧವಿಲ್ಲ. ದೇಶದಲ್ಲಿ ಎರಡು ರೀತಿಯ ಜನರಿದ್ದಾರೆ: ಸಸ್ಯಾಹಾರಿ ಆಹಾರವನ್ನು ತಿನ್ನುವವರು ಮತ್ತು ಮಾಂಸಾಹಾರಿ ಆಹಾರವನ್ನು ಸೇವಿಸುವವರು. ತಮಗೆ ಬೇಕಾದುದನ್ನು ತಿನ್ನುವುದು ಜನರ ಹಕ್ಕು. ಯಾರೂ ಅವರನ್ನು ತಡೆಯಲು ಸಾಧ್ಯವಿಲ್ಲ. ಅವರು (ಮಾಂಸಾಹಾರ ಮಳಿಗೆ ಮಾಲೀಕರು) ನೈರ್ಮಲ್ಯವನ್ನು ಕಾಪಾಡಿಕೊಳ್ಳದಿದ್ದರೆ, ಸೂಕ್ತ ಕ್ರಮವನ್ನು ಎದುರಿಸಬೇಕಾಗುತ್ತದೆ. ಆದರೆ ಅವರನ್ನು ನಿಲ್ಲಿಸುವ ಅಥವಾ ತೆಗೆದುಹಾಕುವ ಬಗ್ಗೆ ಬಿಜೆಪಿ ಎಂದಿಗೂ ಯೋಚಿಸುವುದಿಲ್ಲ. ಈ ಕೆಲಸಗಳನ್ನೇ ಅವಲಂಬಿಸಿರುವ ಬಡವರಿದ್ದಾರೆ. ಯಾರೇ ಆಗಿರಲಿ, ಏನು ಮಾರಾಟ ಮಾಡಿದರೂ ಸಹಕರಿಸುತ್ತೇವೆ” ಎಂದು ಪಾಟೀಲ್ ಉದ್ಗರಿಸಿದ್ದರು. ಆದರೆ ಈ ಹೇಳಿಕೆಗೂ ಕ್ರಿಯೆಯೂ ವ್ಯತ್ಯಾಸ ಕಂಡು ಬರುತ್ತಿದೆ. ಗುಜರಾತ್ನ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿಯೇ ಅಧಿಕಾರ ನಡೆಸುತ್ತಿರುವುದು ವಾಸ್ತವ.
ಇದನ್ನೂ ಓದಿರಿ: ಡ್ರಗ್ಸ್ ಹಬ್ ಆಗುತ್ತಿದೆಯೇ ಗುಜರಾತ್?; ಮತ್ತೆ 600 ಕೋಟಿ ರೂ. ಮೌಲ್ಯದ ಹೆರಾಯಿನ್ ವಶ


