Homeಮುಖಪುಟಮುಕ್ತಿಯಾರ್ ಅಲಿ ಗಾಯನ: ರಹಮತ್ ತರೀಕೆರೆಯವರ ಒಂದು ಆಪ್ತ ಬರಹ

ಮುಕ್ತಿಯಾರ್ ಅಲಿ ಗಾಯನ: ರಹಮತ್ ತರೀಕೆರೆಯವರ ಒಂದು ಆಪ್ತ ಬರಹ

- Advertisement -
- Advertisement -

| ರಹಮತ್ ತರೀಕೆರೆ |

ಇದೇ ಮೇ ನಾಲ್ಕರಂದು ಗದಗದಲ್ಲಿ ಮೇ ಸಾಹಿತ್ಯ ಸಮ್ಮೇಳನ ನಡೆಯಿತು. ಅದರಲ್ಲಿ ರಾಜಸ್ಥಾನದ ಕಲಾವಿದ ಮುಖ್ತಿಯಾರ್ ಅಲಿಯವರ ಸೂಫಿ ಗಾಯನವಿತ್ತು. ಅವರಂತಹ ಬಹುತ್ವದ ಹಿನ್ನೆಲೆಯ ಗಾಯಕ ಗದಗಕ್ಕೆ ಬರುವುದು ಅರ್ಥಪೂರ್ಣವಾಗಿತ್ತು. ಯಾಕೆಂದರೆ ಗದಗವು ಗೋವಿಂದ ಭಟ್ಟರ ಶಿಷ್ಯನಾದ ಶಿಶುನಾಳ ಶರೀಫರ ನೆಲ; ಹಿಂದೂಗಳು ಮುಸ್ಲಿಮರೂ ಒಟ್ಟಿಗೇ ನಡೆದುಕೊಳ್ಳುವ ಯಮನೂರಿನ ರಾಜಬಾಗಸವಾರನ ಸೀಮೆ; ಬಸವತತ್ವದ ಜತೆಗೆ ಸೂಫಿ ಚಿಂತನೆಗಳನ್ನು ಕೂಡಿಸಿ ನೋಡುತ್ತಿದ್ದ ತೋಂಟದಾರ್ಯ ಸ್ವಾಮಿಗಳ ಊರು; ಮಹಾಭಾರತದಂತಹ ಸಂಸ್ಕೃತ ಕ್ಲಾಸಿಕಲ್ ಕಾವ್ಯವನ್ನು ಕನ್ನಡದ ಷಟ್ಪದಿಯಲ್ಲಿ ಕಟ್ಟಿ ಜನಪದೀಕರಣಗೊಳಿಸಿದ ಕುಮಾರವ್ಯಾಸನ ಭೂಮಿಕೆ. ಈ ಸಂತ, ಕವಿ, ಗುರುಗಳಲ್ಲಿರುವ ಹಲವು ಲಕ್ಷಣಗಳು ಅವರ ಹಾಡುವ ಸೂಫಿ ಸಂಗೀತದಲ್ಲಿವೆ.

ಹಾಗೆ ಕಂಡರೆ, ಸೂಫಿಸಂಗೀತದ ಮಾತೃಕೆಯಾದ ಹಿಂದೂಸ್ತಾನಿ ಸಂಗೀತವು ಶುರುವಾಗುವುದೇ ಸಂಕರದಿಂದ; ಕ್ಲಾಸಿಕಲ್ ಪರಂಪರೆಯನ್ನು ಜನಪದದ ಜತೆ ಬೆಸೆಯುವುದರಿಂದ. ಪಂಪ ಹೇಳುವಂತೆ `ದೇಸಿಯೊಲ್ ಪೊಕ್ಕು ಮಾರ್ಗದೊಳೆ ತಳ್ವು’ವುದರಿಂದ. ಈ ಕಾರ್ಯವನ್ನು ಎಂಟು ನೂರುವರ್ಷಗಳ ಹಿಂದೆ ಅಮೀರ್‍ಖುಸ್ರೂ ಮಾಡಿದನು. ದೆಹಲಿಯ ನಿಜಾಮುದ್ದೀನ್ ಚಿಸ್ತಿಯವರ ಶಿಷ್ಯನಾದ ಈತನ ಹುಟ್ಟಿನಲ್ಲೇ ಸಂಕರವಿತ್ತು. ಈತನ ತಂದೆ ಟರ್ಕಿಮೂಲದವನು. ತಾಯಿ ಸ್ಥಳೀಯ ಬ್ರಾಹ್ಮಣ ಮಹಿಳೆ. ಖುಸ್ರೂ ಭಾರತದ ಎಲ್ಲ ಪ್ರದೇಶಗಳ ಸಂಗೀತ ಪರಂಪರೆಗಳನ್ನು ಅಧ್ಯಯನ ಮಾಡಿ ಬೆರೆಸಿ ಹೊಸ ಸಂಗೀತ ಪದ್ಧತಿಯನ್ನು ಆರಂಭಿಸಿದನು. ಸೂಫಿ ಸಂಗೀತವು ಇದರ ಒಂದು ಭಾಗ. ಈ ಸಂಗೀತವು ಅರಬ್‍ದೇಶಗಳಲ್ಲಿ ಇಲ್ಲ. ಭಾರತ ಬಾಂಗ್ಲಾ ಪಾಕಿಸ್ತಾನಗಳಲ್ಲಿ ಮಾತ್ರ ಇದೆ. ಸಾಂಪ್ರದಾಯಿಕ ಇಸ್ಲಾಂ ಸಂಗೀತವನ್ನು ನಿಷೇಧಿಸುತ್ತದೆ. ಆದರೆ ಕಳೆದ ಎಂಟುನೂರು ವರ್ಷಗಳಿಂದ ಸಹಸ್ರಾರು ಖಾನರೂ ಉಸ್ತಾದರೂ ಹಿಂದೂಸ್ತಾನಿ ಸಂಗೀತವನ್ನು ಹಾಡುತ್ತ ಬಂದಿದ್ದಾರೆ. ಆದ್ದರಿಂದ ಈ ಸಂಗೀತಕ್ಕೆ ಸಂಪ್ರದಾಯದ ವಿರುದ್ಧ ನಿಂತ ಬಂಡುಕೋರ ಗುಣವೂ ಇದೆ.

ಸೂಫಿ ಸಂಗೀತದಲ್ಲಿ ಹಲವು ಧಾರೆಗಳಿವೆ. ಖ್ಯಾಲ್ ಠುಮ್ರಿ ದಾದ್ರಾ ದ್ರುಪದ್ ಪ್ರಕಾರಗಳಿಂದ ಕೂಡಿರುವ ಹಿಂದೂಸ್ತಾನಿ ಸಂಗೀತವು ಮಾರ್ಗ ಪರಂಪರೆಯಾದರೆ; ಇದರ ಗರ್ಭದೊಳಗಿಂದಲೇ ಈ ಹಲವು ಧಾರೆಗಳು ಹುಟ್ಟಿವೆ. ಅವೆಂದರೆ, 1. ದರ್ಗಾಗಳಲ್ಲಿ ಸೂಫಿಗುರುಗಳ ಸಮ್ಮುಖದಲ್ಲಿ ಸಾಧಕರು ಸೇರುವ ಮೆಹಫಿಲ್‍ಗಳಲ್ಲಿ ಹಾಡಲಾಗುವ `ಸಮಾ’. ಇದನ್ನು ಹಾಡುವವರು ದರ್ಗಾದಲ್ಲೇ ಪಾರಂಪರಿಕವಾಗಿ ಇರುವ ಖವಾಲರ ಮನೆತನದವರೇ ಹಾಡುವರು. 2. ಉರುಸು ಮತ್ತು ಸಾರ್ವಜನಿಕ ಆಚರಣೆಯಾಗಿರುವ ಖವಾಲಿ. ಸಾಬ್ರಿ ಬ್ರದರ್ಸ್, ನುಸ್ರತ್‍ಫತೆ ಅಲಿಖಾನ್ ಈ ಪ್ರಕಾರವನ್ನು ಎತ್ತರಕ್ಕೆ ಒಯ್ದು ಮುಟ್ಟಿಸಿದರು. 3. ಪಶ್ಚಿಮದ ಸಂಗೀತದ ಜತೆ ಖವ್ವಾಲಿಯನ್ನು ಬೆಸೆದವರು. ಇದನ್ನು ನುಸ್ರತ್ ಫತೇಯಲಿಖಾನ್ ಮಾಡಿದ್ದರು. ಅವರ ಮಗ ರಾಹತ್ ಫತೇಅಲಿ ಇದನ್ನು ಮುಂದುವರೆಸುತ್ತಿದ್ದಾರೆ. 4. ಬೀದಿಗಳಲ್ಲಿ ಮದುವೆ ಸಮಾರಂಭಗಳಲ್ಲಿ ಜನ ಕರೆದಲ್ಲಿ ಹೋಗಿ ಹಾಡುವ ಸೂಫಿ ರಾಕ್ ಸಂಗೀತ. ಇದರಲ್ಲಿ ಕುಣಿತವೂ ಇದೆ. ಪಾಕಿಸ್ತಾನದ ಜುನೂನ್ ತಂಡ ಇದಕ್ಕಾಗಿ ಖ್ಯಾತವಾಗಿದೆ. 5. ದರ್ಗಾಗಳಲ್ಲಿ ಜಾತ್ರೆಗಳಲ್ಲಿ ಗುಡಿಗಳಲ್ಲಿ ಹಾಡುವ ಅಲೆಮಾರಿ ಜನಪದ ಸೂಫಿ ಖವಾಲಿ ಗಾಯಕರು. ರೇಶ್ಮಾ, ಪ್ರಹ್ಲಾದ್ ಟಿಪಾನಿಯ, ಅಬಿದಾ ಪರ್ವೀನ್, ಮುಕ್ತಿಯಾರ್ ಅಲಿ ಈ ಧಾರೆಯ ಗಾಯಕರು.

ಮುಖ್ತಿಯಾರ್ ಅಲಿ, ಮಿರಾಶಿ ಎಂಬ ಅಲೆಮಾರಿ ಗಾಯಕ ಸಮುದಾಯಕ್ಕೆ ಸೇರಿದವರು. ಬಿಕನೇರ್ ಜಿಲ್ಲೆಯ ಪೂಗಲ್ ಊರಿನವರು. ಅವರದೇ ಸಮುದಾಯಕ್ಕೆ ಮತ್ತು ಸೀಮೆಗೆ ಸೇರಿದ ಪ್ರಸಿದ್ಧ ಗಾಯಕಿ ರೇಷ್ಮಾ. ಈ ಗಾಯಕ ಸಮುದಾಯ ಶತಮಾನಗಳ ಕಾಲದಿಂದ ಸಿಂದ್ ಕರಾಚಿ ಲಾಹೋರ್ ಪಂಚಾಬ್ ರಾಜಸ್ಥಾನ್ ಮಧ್ಯಪ್ರದೇಶ ಒಳಗೊಂಡ ದೊಡ್ಡ ಸಾಂಸ್ಕೃತಿಕ ವಲಯದಲ್ಲಿ ಅಲೆಯುತ್ತ ಹಾಡುತ್ತಿತ್ತು. ಈ ವಲಯದಲ್ಲಿ ಅಜ್ಮೀರ್ ಸೆಹ್ವಾನ್ ಲಾಹೋರ್‍ನಂತಹ ಪ್ರಸಿದ್ಧ ದರ್ಗಾಗಳು ಬರುತ್ತವೆ. ಪಂಜಾಬಿ ಗುಜರಾತಿ ಪೂರ್ವಿ ಪರ್ಶಿಯನ್ ಉರ್ದು ಸಿಂಧಿ ಅರಬ್ಬಿ ಭಾಷೆಗಳಿರುವ ಈ ವಲಯದಲ್ಲಿ, ಈ ಗಾಯಕರು ಈ ಎಲ್ಲ ಭಾಷೆಯ ರಚನೆಗಳನ್ನು ಹಾಡುವವರು. ಈ ರಚನೆಗಳನ್ನು ದಾರ್ಶನಿಕ ಕವಿಗಳಾದ ಬುಲ್ಲೇಶಾ, ಕಬೀರ್, ಮೀರಾ, ಅಚಲರಾಮ್ ಮೊಯಿನುದ್ದೀನ್ ಚಿಸ್ತಿ, ಅಮೀರಖುಸ್ರೊ ರಚಿಸಿರುವರು. ಈ ಬಹುಭಾಷಿಕ ಬಹುಧಾರ್ಮಿಕ ಬಹುಸಾಂಸ್ಕೃತಿಕ ಬಹುಪ್ರಾಂತೀಯ ಹಾಡು ಪರಂಪರೆಯನ್ನು 1947ರ ದೇಶವಿಭನೆ ನಿರ್ದಯವಾಗಿ ಕತ್ತರಿಸಿ ಹಾಕಿತು. ಮಾತ್ರವಲ್ಲ, ಸಿಕ್ಖರ ಯಾತ್ರೆ, ವ್ಯಾಪಾರಿಗಳ ಕಾರವಾನು, ಲೇಖಕರ ಕೊಡುಕೊಳೆಗಳನ್ನು ಸಹ ತುಂಡರಿತು. ಬಿಕನೇರಿನ ಪಕ್ಕದ ಪಾಕಿಸ್ತಾನದ ಜಿಲ್ಲೆಯಲ್ಲಿ ಮುಕ್ತಿಯಾರರ ಬಂಧುಗಳಿದ್ದಾರೆ; ಆದರೆ ಅವರನ್ನು ಭೇಟಿಯಾಗಲು ಇವರಿಗೆ ಸಾಧ್ಯವಾಗುತ್ತಿಲ್ಲ.

ಹೀಗೆ ದೇಶ ವಿಭಜನೆಯ ಬಲಿಪಶುಗಳಾದ ಈ ಸಮುದಾಯ, ಅಗಲಿದ ಪ್ರೇಮಿಗಳನ್ನು, ಗುರುಶಿಷ್ಯರನ್ನು, ಜೀವಾತ್ಮ ಪರಮಾತ್ಮಗಳನ್ನು ಕುರಿತ ವಿರಹ-ಮಿಲನದ ಹಾಡುಗಳನ್ನು ಹಾಡುತ್ತದೆ. ಈ ಅಗಲಿಕೆಯ ನೋವಿನಲ್ಲಿ ತಮ್ಮ ಸಮುದಾಯ ಛಿದ್ರವಾಗಿರುವ ನೋವೂ ಇದೆ. ಮುಕ್ತಿಯಾರ ಹಾಡುವ `ಕೇಸರಿಯಾ ಬದಾರಿಯೋ ಹಮಾರ ದೇಶ್” ರಚನೆ ಇಂತಹುದು. ಈ ಗಾಯಕ ಪರಂಪರೆಯು ಭೂಪ್ರದೇಶ ಕೇಂದ್ರಿತ ರಾಷ್ಟ್ರೀಯತೆಗೆ ವಿರುದ್ಧವಾದುದು. ಕರಾಚಿಯ ಪ್ರಸಿದ್ಧ ಖವಾಲ್ ಫರೀದುದ್ದೀನ್ ಈಗಲೂ ತಮ್ಮನ್ನು ದೆಹಲಿ ಘರಾಣದವರು ಎಂದು ಹೇಳಿಕೊಳ್ಳುವರು.

ಲಾಹೋರಿನಲ್ಲಿದ್ದ ರೇಶ್ಮಾ ನಾನು ರಾಜಸ್ಥಾನದಲ್ಲಿ ಹುಟ್ಟಿದವಳು ಎಂದು ಹೇಳುತ್ತಿದ್ದರು. ರೇಶ್ಮಾ ತಮ್ಮದೊಂದು ಸಂದರ್ಶನದಲ್ಲಿ ನೀವು ಭಾರತದಲ್ಲಿ ಹುಟ್ಟಿದಿರಿ, ಪಾಕಿಸ್ತಾನದ ಪ್ರಜೆಯಾಗಿದ್ದೀರಿ. ಯಾವುದು ನಿಮಗೆ ಪ್ರಿಯ ಎಂದು ಕೇಳೀದಾಗ, ‘ನಾವು ಕಲಾವಿದರು. ನಮ್ಮ ಸಂಗೀತವನ್ನು ಕೇಳುವ ನಮಗೆ ಪ್ರೀತಿ ಕೊಡುವ ಎಲ್ಲರೂ ನಮ್ಮ ಜನರು. ಭೂಮಿಯ ಮೇಲಿನ ಎಲ್ಲ ಪ್ರದೇಶಗಳೂ ನಮ್ಮ ದೇಶಗಳೇ’ ಎಂದು ಉತ್ತರಿಸಿದರು. ರಾಜಕಾರಣಿಗಳು ಸೇನಾನಾಯಕರು ಯುದ್ಧದ ಪರಿಭಾಷೆಯಲ್ಲಿ ಮಾತಾಡುತ್ತಿರುವಾಗ, ಈ ಗಾಯಕರು ಪ್ರೇಮದ ಬೆಸೆಯುವ ಭಾಷೆಯಲ್ಲಿ ಮಾತಾಡುತ್ತಾರೆ. ಇದಕ್ಕೆ ಒಂದು ಕಾರಣ, ಸೂಫಿ ಹಾಡುಗಳಲ್ಲಿ ಪ್ರೇಮತತ್ವ ಇರುವುದು. ಈ ದೈವಿಕ ಪ್ರೇಮವು (ಇಶ್ಕೆ ಹಖೀಕಿ) ಮೂಲತಃ ಗಂಡುಹೆಣ್ಣಿನ ಸಂಬಂಧಗಳ (ಬಿಸಾಜಿ) ಹಾಗೂ ಲೌಕಿಕ ಆಸೆಗಳ (ದುನಿಯಾಯಿ) ಬುನಾದಿಯ ಮೇಲೇ ನಿಂತಿದೆ. ಶೃಂಗಾರ ಪರಿಭಾಷೆಯಲ್ಲೇ ಆನುಭಾವಿಕ ಅನುಭವವನ್ನು ಪ್ರಕಟಿಸುವ ಅಕ್ಕಮಹಾದೇವಿ, ಮೀರಾರನ್ನು ಬಲ್ಲವರಿಗೆ ಇದು ಹೊಸತಲ್ಲ.

ಏಶಿಯಾದ ದೇಶಗಳಲ್ಲಿ ಧರ್ಮ ರಾಷ್ಟ್ರೀಯತೆಗಳ ಹೆಸರಲ್ಲಿ ಪರಸ್ಪರ ಯುದ್ಧ ಮಾಡುವ ವಿಷ ಉಗುಳುವ ಸಂತಾನ ಸೃಷ್ಟಿಯಾಗಿದೆ. ಅದು ಗತಕಾಲದಲ್ಲಿ ರಾಜಕೀಯ ಪ್ರಭುತ್ವಗಳು ಮಾಡಿದ ಯುದ್ಧ, ಮತಾಂತರ, ಗುಡಿನಾಶಗಳ ಪಟ್ಟಿಯನ್ನು ಇಟ್ಟುಕೊಂಡು, ವರ್ತಮಾನವು ಅದರ ಬೆಲೆಯನ್ನು ತೆರಬೇಕು ಎನ್ನುತ್ತಿದೆ. ಕೇವಲ ಗಾಯಗಳನ್ನು ನೋಡುವವವರು ಈ ಉಪಖಂಡದಲ್ಲಿ ಧರ್ಮ ಭಾಷೆ ಪ್ರಾಂತ್ಯಗಳ ಭೇದಗಳಾಚೆ ಚಲಿಸಿ, ಸೂಫಿಗಳು ಸಂತರು ದೊರೆಗಳು ಕವಿಗಳು ಜನಸಮುದಾಯಗಳು ಮಾಡಿದ ಕೊಡುಕೊಳೆ ಮತ್ತು ಹೊಸಸೃಷ್ಟಿಗಳನ್ನು ಗಮನಿಸುವುದಿಲ್ಲ. ಉರ್ದುಭಾಷೆ, ಸೂಫಿಸಂಗೀತ, ಎರಡನೇ ಇಬ್ರಾಹಿಂ ರಚಿತ `ಕಿತಾಬೆ ನವರಸ್’ದಂತಹ ಕೃತಿಗಳನ್ನು, ಶಿಶುನಾಳ ಕಬೀರ ಬಂದೇನವಾಜರಂತಹ ಸಂತರನ್ನು ನೋಡುವುದಿಲ್ಲ. ಸೂಫಿಗಳಲ್ಲಿ ಎರಡು ಅಗಲಿದ ಸಂಗತಿಗಳು ಒಗ್ಗೂಡುವ ಅದ್ವೈತವಿದೆ. ಅವು ಬೇರೆಯಾಗಿಯೇ ಇಲ್ಲ. ಜತೆಯಲ್ಲಿಯೇ ಇವೆ. ಅವನ್ನು ನಾವು ಕಂಡುಕೊಳ್ಳಬೇಕಿದೆ ಎಂದು ಹೇಳುವ ಅದ್ವಯವಿದೆ. ಹೀಗಾಗಿ ಅದು ಎಲ್ಲ ವಿಭಜಕ ಸಿದ್ಧಾಂತಗಳನ್ನು ಆಳದಲ್ಲಿ ನಿರಾಕರಿಸುತ್ತದೆ. ಈ ಕಲಾವಿದರು ದೇಶವಿಭಜನೆಯ ರಾಜಕಾರಣದ ಟೀಕಾಕಾರರು. ಎರಡೂ ದೇಶದ ಸಮುದಾಯಗಳನ್ನು ಅಲ್ಲಿನ ಗುರುದ್ವಾರ ದರ್ಗಾ ಗುಡಿಗಳನ್ನು ಬೆಸೆಯುವಂತೆ ಹಾಡುವವರು.

ಈ ಹಿನ್ನೆಲೆಯಲ್ಲಿ ರೇಶ್ಮಾ ಮುಕ್ತಿಯಾರ್ ನುಸ್ರತ್‍ಫತೇಅಲಿ, ಮಹಮದ್ ರಫಿ, ಲತಾಮಂಗೇಶ್ಕರ್ ಕಬೀರ್, ಗುಲಾಮಲಿ, ಅಬಿದಾ ಪರ್ವೀನ್, ಫೈಜ್ ಅಹಮದ್ ಫೈಜ್ ಇವರೆಲ್ಲ ಗಡಿಗಳಾಚೆ ಸೀಮೋಲ್ಲಂಘನೆ ಮಾಡುವ ಕಲಾವಿದರು. ನುಸ್ರತ್‍ಫತೇ ಅಲಿ, ಅಬಿದಾ ಪರ್ವೀನ್, ಗುಲಾಮಲಿ ಅವರಿಗೆ ಭಾರತದಲ್ಲಿ; ಲತಾ ರಫಿ ಶಾರುಕ್‍ಖಾನ್‍ಗೆ ಪಾಕಿಸ್ತಾನದಲ್ಲಿ ಹೆಚ್ಚು ಅಭಿಮಾನಿಗಳಿದ್ದಾರೆ. ಹಿಂದೂಸ್ತಾನಿ ಸಂಗೀತವು ನಾದ, ದರ್ಶನ ಹಾಗೂ ಕಾವ್ಯಗಳ ಮುಪ್ಪುರಿತನ. ಕಾವ್ಯ ದರ್ಶನ ಸಂಗೀತ ವ್ಯಾಪಾರಗಳಿಗೆ ದೇಶಗಳಾಚೆ ಚಲಿಸುವ ಶಕ್ತಿಯಿದೆ. ಎಂತಲೇ ಕವಿಗಳು ದಾರ್ಶನಿಕರು ಸಂಗೀತಗಾರರು ವಣಿಕರು ಒಂದು ಬಗೆಯಲ್ಲಿ ಸೀಮಾತೀತರು. ಮುಕ್ತಿಯಾರ್ ಹಾಡುವ ಹಾಡುಗಳ ಭಾಷೆ ಪೂರ್ತಿ ತಿಳಿಯುವುದಿಲ್ಲ. ಆದರೆ ನಾದದ ಮೂಲಕ ವಿಶಿಷ್ಟ ಭಾವನೆ ಸಂವಹನವಾಗುತ್ತದೆ. ಭಾಷೆಗಿಲ್ಲದ ಚಲನಶೀಲ ಶಕ್ತಿ ನಾದಕ್ಕಿದೆ. ಸೂಫಿ ಗಾಯನ ಪರಂಪರೆಯು ವಿಶ್ವಮಾನವತಾವಾದಿ. ಎಂತಲೇ ಸೂಫಿ ಗಾಯನಕ್ಕೆ ಸಾಂಸ್ಕೃತಿಕ ಮಾತ್ರವಲ್ಲ, ರಾಜಕೀಯ ಮಹತ್ವವೂ ಇದೆ.

ಮುಕ್ತಿಯಾರ್ ಅವರದು 26ನೇ ತಲೆಮಾರು. ಶಬನಮ್ ವೀರಮಾನವಿಯವರು ಕಬೀರನ ಮೇಲೆ ಮಾಡಿದ `ಹದ್ ಅನಹದ್’ ಎಂಬ ಸುಪ್ರಸಿದ್ಧ ಡಾಕ್ಯುಮೆಂಟರಿಯ ಮೂಲಕ ಪ್ರಖ್ಯಾತರಾದರು. ಇವರು ಕರ್ನಾಟಕಕ್ಕೆ ಅನೇಕ ಸಲ ಬಂದಿದ್ದಾರೆ. ಗದಗಕ್ಕೆ ಪಂಚಾಕ್ಷರಿ ಗವಾಯಿಯವರ ಪುಣ್ಯತಿಥಿಗೊಮ್ಮೆ ಬಂದಿದ್ದೆ ಎಂದು ಹೇಳೀದರು. ಅವರಿಗೆ ರಾಮನಗರದ ಜಾನಪದ ಪರಿಷತ್ತಿನ ಎಚ್. ಎಲ್. ನಾಗೇಗೌಡ ಪ್ರಶಸ್ತಿ ಸಿಕ್ಕಿದೆ. ತಮಗೆ ಅತ್ಯಂತ ಪ್ರೀತಿಕೊಟ್ಟ ಶೋತೃಗಳು ಕರ್ನಾಟಕದವರು ಎಂದು ಹೇಳುತ್ತಾರೆ. ಅವರು ಪೊಲೆಂಡ್ ಫ್ರಾನ್ಸ್ ಬೆಲಜಿಯಂ ಸ್ವೀಡನ್ ಮೊರಾಕ್ಕೊ ಚೀನಾ ಕೆನಡರ ಸಿಂಗಪುರ ಮಲೇಶಿಯಾ ಶ್ರೀಲಂಕಾಗಳಲ್ಲಿ ಕಾರ್ಯಕ್ರಮ ಕೊಟ್ಟಿದ್ದಾರೆ. (ಮಧ್ಯ ಏಶಿಯಾದ ಇಸ್ಲಾಮಿಕ್ ದೇಶಗಳು ಅವರನ್ನು ಕರೆದಿಲ್ಲ ಎನ್ನುವುದು ಗಮನಾರ್ಹ.) ಇಂತಹ ಪರಂಪರೆಗೆ ಭಾರತದ ಇಸ್ಲಾಮಿಕ್ ಮೂಲಭೂತವಾದ ಹಾಗೂ ಕೋಮುವಾದಗಳು ಬೆದರಿಕೆಯಾಗಿವೆ. ಇವುಗಳ ನಡುವೆ ಇವರು ಈ ಪರಂಪರೆಯನ್ನು ರಕ್ಷಿಸಿಕೊಂಡು ಬಂದಿದ್ದಾರೆ.

ಮುಕ್ತಿಯಾರ್ ಜತೆ ಮಾತಾಡುತ್ತ ನಿಮಗೆ ಬಹಳ ತೃಪ್ತಿಕೊಟ್ಟ ಕಾರ್ಯಕ್ರಮ ಯಾವುದು ಎಂದು ಕೇಳಿದೆ. ಜರ್ಮನಿಯ ಕೋಲಿನ ನಗರದ ಚರ್ಚಿನಲ್ಲಿ ಹಾಡಿದ್ದು ಎಂದರು. ಮುಕ್ತಿಯಾರ್ ರಾಜಸ್ಥಾನದ ಹನುಮಾನ್ ಜಾಗರಣ ಕಾರ್ಯಕ್ರಮದಲ್ಲಿಯೂ ಹಾಡುವರು. ಅವರ ಹಾಡಿಕೆ ಶುರುವಾಗುವುದೇ ಖುಸ್ರೋ ಅವರ ಹರಿಓಂ ರಚನೆಯಿದೆ. ಅವರಿಗೆ `ನಿಮ್ಮ ಪ್ರಿಯ ಶಿಷ್ಯರು ಯಾರು ಎಂದು ಕೇಳಿದೆ. ಹಿಮಾಚಲ ಪ್ರದೇಶದ ಅನಾಹತಿ ಎಂಬ ಮಹಿಳೆ ಎಂದರು. ಅನಾಹತ ಎಂದರೆ ಯೋಗದ ತುರಿಯಾವಸ್ಥೆಯಲ್ಲಿ ಸಾಧಕನಿಗೆ ಕೇಳಿಬರುವ ಸಂಗೀತ ನಾದ. ಅನಾಹತನಾದ ಎಂದು ಅಲ್ಲಮ ಅದನ್ನು ಕರೆಯುತ್ತಾನೆ. ಈ ಅನಾಹತವು ಎಲ್ಲ ಹದ್ದುಗಳನ್ನು ಮೀರಿದಾಗ ಹುಟ್ಟುತ್ತದೆಯಂತೆ. ಎಂತಲೇ ಅದು ಅನಹದ್ ಅರ್ಥಾತ್ ಸೀಮಾತೀತ.

ಜಗತ್ತಿನ ಕಾರ್ಮಿಕರೇ ಒಂದಾಗಿ ಎಂದು ಹೇಳುವ ಮೇ ದಿನದ ನೆನಪಿನಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನದಲ್ಲಿ ಇಂತಹ ಸೂಫಿಗಾಯನ ನಡೆದಿದ್ದು ಅರ್ಥಪೂರ್ಣ. ಮುಕ್ತಿಯಾರ್ ಮೂರು ತಾಸು ಬಹಳ ಲವಲವಿಕೆಯಲ್ಲಿ ಹಾಡಿದರು. ಸಮ್ಮೇಳನಕ್ಕೆ ಬಂದಿದ್ದ ಜನ ನಾದದ ಹೊಳೆಯಲ್ಲಿ ಕೊಚ್ಚಿಹೋದಂತೆ ಆನಂದಿಸಿದರು. ನೋವಿನ ಚೀತ್ಕಾರದಂತಹ ವಿಲ್ಸನ್ ಬೆಜವಾಡರ ಭಾಷಣದಿಂದ ಆರಂಭವಾದ ಕಾರ್ಯಕ್ರಮ, ಸಂಜೆಗೆ ತಣ್ಣಗೆ ಎಲ್ಲರೂ ಕೂತು ತನ್ಮಯರಾಗಿ ಸಂಗೀತವನ್ನು ಆಲಿಸುವ ಮೂಲಕ ಮುಕ್ತಾಯವಾಯಿತು. ಬೆಳಗಿನ ಪ್ರಖರ ವಿಚಾರಗಳಿಗೆ ಸಂಜೆಯ ಸಂಗೀತ ವಿರುದ್ಧವಾಗಿರಲಿಲ್ಲ. ಯಾಕೆಂದರೆ ಎರಡೂ ತರತಮ ಭೇದದ ವಿರುದ್ಧವಾಗಿದ್ದವು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...