’ಪವಿತ್ರ ಮರ’ ಕಡಿಯುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ವ್ಯಕ್ತಿಯೊಬ್ಬರನ್ನು ಗುಂಪೊಂದು ಹತ್ಯೆ ಮಾಡಿರುವ ಘಟನೆ ಮಂಗಳವಾರ ಜಾರ್ಖಂಡ್ನ ಸಿಮ್ಡೆಗಾದಲ್ಲಿ ನಡೆದಿದೆ.
ಮಂಗಳವಾರ ಮಧ್ಯಾಹ್ನ ಕೊಲೆಬೀರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತ ಸಂತ್ರಸ್ತರನ್ನು ಸಂಜು ಪ್ರಧಾನ್ ಎಂದು ಗುರುತಿಸಲಾಗಿದೆ.
ಪವಿತ್ರ ಮರ ಎಂದು ಕರೆಯಲಾಗುವ ಮರದ ಭಾಗಗಳನ್ನು ಕತ್ತರಿಸಿ ಮಾರಾಟ ಮಾಡುವ ಮೂಲಕ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ ಎಂದು ಆರೋಪಿಸಿದ ಸುಮಾರು 100 ರಿಂದ 150 ಜನರ ಗುಂಪೊಂದು ಸಂಜು ಪ್ರಧಾನ್ ಅವರನ್ನು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಮೂಲದ ಯುವಕನ ಬಂಧನ: ಏನಿದು ಬುಲ್ಲಿ ಬಾಯ್ ಪ್ರಕರಣ?
“ಈ ಮರವು ಮುಂಡಾ ಸಮುದಾಯದ ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿದ್ದು, ಅವರು ಅದರ ಬಗ್ಗೆ ತುಂಬಾ ಭಾವುಕರಾಗಿದ್ದಾರೆ. ಮೃತ ವ್ಯಕ್ತಿ ಅಕ್ಟೋಬರ್ 2021 ರಲ್ಲಿ ಈ ಮರಗಳನ್ನು ಕತ್ತರಿಸಿದ್ದರು. ಇದು ಅವರ ಭಾವನೆಗಳಿಗೆ ಧಕ್ಕೆ ತಂದಿದೆ. ಇಂದು ಹೆಚ್ಚಿನ ಸಂಖ್ಯೆಯ ಜನರು ಸಭೆ ನಡೆಸಿ ಅವರನ್ನು ಹೊಡೆಯಲು ನಿರ್ಧರಿಸಿದ್ದರು ಇದು ಅವರ ಸಾವಿಗೆ ಕಾರಣವಾಗಿದೆ” ಎಂದು ಸಿಮ್ಡೆಗಾ ಪೊಲೀಸರು ಹೇಳಿದ್ದಾರೆ.
ಈ ಜನರ ಗುಂಪು ಮೊದಲು ಮೃತರನ್ನು ದೊಣ್ಣೆ ಮತ್ತು ಇಟ್ಟಿಗೆಗಳಿಂದ ಹೊಡೆದಿದೆ. ಅವರು ಸತ್ತ ಬಳಿಕ ಬೆಂಕಿಗೆ ಎಸೆದಿದ್ದಾರೆ ಎಂದು ಸಂತ್ರಸ್ತೆಯ ಕುಟುಂಬದವರು ಪೊಲೀಸರಿಗೆ ತಿಳಿಸಿದ್ದಾರೆ.
“ಮೃತದೇಹವನ್ನು ಪೋಸ್ಟ್ಮಾರ್ಟಮ್ಗೆ ಕಳುಹಿಸಲಾಗಿದೆ. ಅವರು ಹೊಡೆದಿದ್ದರಿಂದ ಅಥವಾ ಬೆಂಕಿಗೆ ಹಾಕಿದ್ದರಿಂದ ಸಾವನ್ನಪ್ಪಿದ್ದಾರೆಯೇ ಎಂಬುದು ವರದಿ ಬಂದ ನಂತರ ತಿಳಿಯಲಿದೆ. ಎಫ್ಐಆರ್ ಅನ್ನು ಸೂಕ್ತ ವಿಭಾಗಗಳೊಂದಿಗೆ ದಾಖಲಿಸಲಾಗುತ್ತಿದೆ. ಆರೋಪಿಯ ಗುರುತು ಪತ್ತೆ ಕಾರ್ಯ ನಡೆಯುತ್ತಿದೆ” ಎಂದು ಸಿಮ್ಡೆಗಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶಮ್ಸ್ ತಬ್ರೇಜ್ ಹೇಳಿದ್ದಾರೆ.
ಗಮನಾರ್ಹ ವಿಷಯವೆಂದರೆ ಜಾರ್ಖಂಡ್ ವಿಧಾನಸಭೆ ಕಳೆದ ವರ್ಷ ಡಿಸೆಂಬರ್ನಲ್ಲಿ ಗುಂಪು ಹಿಂಸಾಚಾರ ಮತ್ತು ಗುಂಪು ಹತ್ಯೆ ತಡೆ ಮಸೂದೆ 2021 ಅನ್ನು ಅಂಗೀಕರಿಸಿದೆ.