ಉತ್ತರ ಪ್ರದೇಶದ ಉನ್ನಾವೊದಲ್ಲಿ ಅಧಿಕೃತ ಕಾರ್ಯಕ್ರಮವೊಂದರಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಬಹಿರಂಗವಾಗಿಯೇ ಲಂಚಕ್ಕೆ ಉತ್ತೇಜಿಸಿದ್ದ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ’ಪೊಲೀಸ್ ಅಧಿಕಾರಿಗಳು ಹಣ ತೆಗೆದುಕೊಂಡರೆ ಕೆಲಸ ಮಾಡುತ್ತಾರೆ ಎಂದು ಆಘಾತಕಾರಿ ಹೇಳಿಕೆ ನೀಡಿದ್ದರು.
ಬಿಘಾಪುರ ಕೊತ್ವಾಲಿಯ ಸಬ್ ಇನ್ಸ್ಪೆಕ್ಟರ್ ಉಮೇಶ್ ತ್ರಿಪಾಠಿ ನೀಡಿದ್ದ ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು.
ಉತ್ತರ ಪ್ರದೇಶದ ಬಿಘಾಪುರ ಪಟ್ಟಣದ ಲಕ್ಷ್ಮೀ ನಾರಾಯಣ ಇಂಟರ್ ಕಾಲೇಜಿನಲ್ಲಿ ಆಯೋಜಿಸಿದ್ದ “ಪೊಲೀಸ್ ಕಿ ಪಾಠಶಾಲಾ” ಕಾರ್ಯಕ್ರಮದಲ್ಲಿ ಸಬ್ ಇನ್ಸ್ಪೆಕ್ಟರ್ ಉಮೇಶ್ ತ್ರಿಪಾಠಿ ಸಭಿಕರನ್ನು ಉದ್ದೇಶಿಸಿ ಮಾತನಾಡಿದ್ದರು. “ಪೊಲೀಸ್ ಅಧಿಕಾರಿಗಳು ಅತ್ಯಂತ ಪ್ರಾಮಾಣಿಕರು. ಪೊಲೀಸರು ನಿಮ್ಮಿಂದ ಹಣ ಪಡೆದು ನಿಮ್ಮ ಕೆಲಸ ಮಾಡಿಸಿಕೊಡುತ್ತೇವೆ ಎಂದು ಹೇಳಿದರೆ ನಿಮ್ಮ ಕೆಲಸವನ್ನು ಅವರು ಮಾಡುತ್ತಾರೆ” ಎಂದು ತ್ರಿಪಾಠಿ ಹೇಳಿದ್ದರು.
ಇದನ್ನೂ ಓದಿ: ಲಿಂಗ ತಾರತಮ್ಯ ಹೋಗಲಾಡಿಸುವ ಕ್ರಮ: ಸರ್, ಮೇಡಂ ಸಂಬೋಧನೆ ಬಿಟ್ಟ ಕೇರಳದ ಶಾಲೆ
ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಉನ್ನಾವೋ ಎಸ್ಪಿ ದಿನೇಶ್ ತ್ರಿಪಾಠಿ ಅವರು ಪ್ರಕರಣದ ತನಿಖೆಯನ್ನು ಸಿಒ ಬಿಘಾಪುರ್ ಅವರಿಗೆ ಹಸ್ತಾಂತರಿಸಲಾಗಿದೆ ಎಂದು ಹೇಳಿದ್ದಾರೆ. ವಿಚಾರಣೆ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು.
ಬಳಿಕ ಯುಪಿ ಪೊಲೀಸರು, ನವೆಂಬರ್ 26 ರಂದು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅವರ ಹೇಳಿಕೆಯ ವೀಡಿಯೊ ವೈರಲ್ ಆದ ನಂತರ ತ್ರಿಪಾಠಿ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಟ್ವಿಟರ್ನಲ್ಲಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆದರೆ, ಒಂದು ಶಾಲಾ ಕಾರ್ಯಕ್ರಮದಲ್ಲಿ ಬಹಿರಂಗವಾಗಿ ಪೊಲೀಸರು ಲಂಚ ತೆಗೆದುಕೊಳ್ಳೂವುದು ಕೆಲಸ ಮಾಡುವುದಕ್ಕಾಗಿ ಎಂದು ಪೊಲೀಸ್ ಅಧಿಕಾರಿಯೇ ಹೇಳಿಕೆ ನೀಡಿದ್ದಕ್ಕೆ ಸಾರ್ವಜನಿಕರು ಟೀಕಿಸಿದ್ದರು.