Homeಮುಖಪುಟಓಶೋ ಕಂಡಂತೆ ವಿವೇಕಾನಂದರು

ಓಶೋ ಕಂಡಂತೆ ವಿವೇಕಾನಂದರು

ಸ್ವಾಮಿ ವಿವೇಕಾನಂದರ ಜನ್ಮದಿನದ ಪ್ರಯುಕ್ತ ವಿಶೇಷ ಲೇಖನ

- Advertisement -
- Advertisement -

ಭಾರತದ ಚರಿತ್ರೆಯಲ್ಲಿ ಸ್ವಾಮಿ ವಿವೇಕಾನಂದರ ವಿಚಾರಧಾರೆಗಳು ಎಂದಿಗೂ ಚರ್ಚೆಯ ವಿಷಯವಾಗಿವೆ. ಸ್ವಾಮಿ ವಿವೇಕಾನಂದರ ಹೆಸರನ್ನು ಎಡ ಹಾಗೂ ಬಲ ಪಂಥದ ರಾಜಕಾರಣಗಳೆರಡೂ ಬಳಸುತ್ತವೆ. ವಿವೇಕಾನಂದರ ವಿಚಾರಧಾರೆಗಳು ಎಂದಿಗೂ ಜನಪರ, ಮತೀಯವಾದಿಗಳ ವಿರುದ್ಧವಿವೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ‌ಇದರಾಚೆಗೆ ಸ್ವಾಮಿ ವಿವೇಕಾನಂದರ ಅನುಭಾವದ ನೆಲೆಗಳು ಪ್ರಸ್ತುತ ಕಾಲಘಟ್ಟದಲ್ಲಿ ಚರ್ಚೆಯ ವಿಷಯವಾಗಿಲ್ಲ. ಅನುಭಾವಕ್ಕಿಂತ ರಾಜಕಾರಣವೇ ಮುಖ್ಯವಾಗಿರುವ ಕಾಲಘಟ್ಟದಲ್ಲಿ ನಾವು ಇರುವುದರಿಂದ ಇದೆಲ್ಲವೂ ಸಾಮಾನ್ಯವೂ ಇರಬಹುದು.

ಸ್ವಾಮಿ ವಿವೇಕಾನಂದರ ವೈಚಾರಿಕತೆಯ ಪ್ರಖರತೆಗೂ ಅನುಭಾವದ ವಿಚಾರಕ್ಕೂ ಇರುವ ಸಂಬಂಧಗಳನ್ನು ವಿವಾದಿತ ಅನುಭಾವಿಯೆಂದೇ ಗುರುತಿಸಲಾದ ಓಶೋ ರಜನೀಶರು ಮಾತನಾಡುತ್ತಾರೆ. ‘ಧ್ಯಾನಸಿದ್ಧ’ನಾಗಿಯೇ ಉಳಿದ ಸ್ವಾಮಿ ವಿವೇಕಾನಂದರು ಕೊನೆಯ ದಿನದವರೆಗೆ ಅನುಭಾವವನ್ನು ದಕ್ಕಿಸಿಕೊಳ್ಳಲಿಲ್ಲ ಎಂದು ಓಶೋ ಅಭಿಪ್ರಾಯಪಡುತ್ತಾರೆ.

ಬರಹಗಾರ ಡಾ.ಟಿ.ಎನ್‌.ವಾಸುದೇವ ಮೂರ್ತಿಯವರು ಸಂಗ್ರಹಿಸಿ ಅನುವಾದ ಮಾಡಿರುವ ‘ಅಧ್ಯಾತ್ಮದ ಮಧ್ಯೆ ಬಿಡುವು’ ಮತ್ತು ‘ಧ್ಯಾನಸಿದ್ಧ’ ಕೃತಿಗಳಲ್ಲಿ ಈ ವಿಚಾರಗಳು ಸಿಗುತ್ತವೆ. ರಾಮಕೃಷ್ಣ ಪರಮಹಂಸರ ಮುಖವಾಣಿಯಾಗಿ ವಿವೇಕಾನಂದರು ನುಡಿದರು ಎಂದು ಓಶೋ ಪ್ರತಿಪಾದಿಸುತ್ತಾರೆ.

‘ಅಧ್ಯಾತ್ಮದ ಮಧ್ಯೆ ಬಿಡುವು’ ಕೃತಿಯ ‘ಸ್ವಾಮಿ ವಿವೇಕಾನಂದ’ ಅಧ್ಯಾಯ ಬಹುವಾಗಿ ಸೆಳೆಯುತ್ತದೆ. ಇಲ್ಲಿ ದಾಖಲಾಗಿರುವ ಓಶೋ ಅವರ ಕೆಲವು ಮಾತುಗಳನ್ನು ಆಯ್ದು ಇಲ್ಲಿ ನೀಡಲಾಗಿದೆ.

‘‘ವಿವೇಕಾನಂದರು, ಮೂಲತಃ ಅನುಭಾವಿಯಲ್ಲ. ಅವರ ಮಾತುಗಳಲ್ಲಿ ದಿಟ್ಟತನವಿದೆ. ಅವರಿಗೆ ಆತ್ಮಜ್ಞಾನ ಲಭಿಸಲಿಲ್ಲ. ರಾಮಕೃಷ್ಣ ಪರಮಹಂಸರಿಗೆ ಆತ್ಮಜ್ಞಾನ ಲಭಿಸಿತ್ತು. ಒಮ್ಮೆ ಸಮಾಧಿ ಸ್ಥಿತಿಗೆ ಹೋದಮೇಲೆ ಅವರಿಗೆ ಮಾತಾಡಲು ಆಗುತ್ತಿರಲಿಲ್ಲ. ಆದರೆ ತಮಗೆ ಉಂಟಾದ ಅನುಭವವನ್ನು ಇಡೀ ಜಗತ್ತಿಗೆ ತಿಳಿಸುವ ಇಚ್ಛೆಯಿತ್ತು. ತಿಳಿಸುವ ವಾಕ್ಚಾತುರ್ಯವಿರಲಿಲ್ಲ. ಹೀಗಾಗಿ ಅವರಿಗೊಂದು ಮುಖವಾಣಿ ಬೇಕಾಗಿತ್ತು. ವಿವೇಕಾನಂದರು ಆ ಕೆಲಸವನ್ನು ಮಾಡಿದರು. ವಿವೇಕಾನಂದರು ತಮ್ಮ ಕೊನೆಯ ದಿನಗಳ ಕೆಲವು ಪತ್ರಗಳಲ್ಲಿ, ‘ನಾನು ಇಲ್ಲಿಯವರೆಗೂ ಬೇರೆಯವರ ಅನುಭವಗಳನ್ನೇ ಹೇಳುತ್ತಿರುವೆ’ ಎಂದು ಬರೆದುಕೊಂಡಿದ್ದಾರೆ. ಆತ್ಮಾನುಭವ ದೊರಕದೆ ಕೊನೆವರೆಗೂ ಸಂಕಟಪಡುತ್ತಾರೆ.’’

‘‘ರಾಮಕೃಷ್ಣರಿಗೆ ತನ್ನಂತೆಯೇ ತನ್ನ ಶಿಷ್ಯ ಸಮಾಧಿ ಸ್ಥಿತಿಗೆ ಹೋದರೆ ಮೌನವಾಗುತ್ತಾನೆಂಬ ಭಯವಿತ್ತು. ಸಮಾಧಿ ಸ್ಥಿತಿಗೆ ಸಂದ ನಂತರವೂ ತಮ್ಮ ಕೆಲಸವನ್ನು ಮುಂದುವರೆಸಿರುವ ಜ್ಞಾನಿಗಳು ಲೋಕದಲ್ಲಿದ್ದರು ಎಂಬುದು ರಾಮಕೃಷ್ಣರಿಗೆ ತಿಳಿದಿರಲಿಲ್ಲವೆನಿಸುತ್ತದೆ. ಹೀಗಾಗಿಯೇ ವಿವೇಕಾನಂದರು ಸಮಾಧಿ ಸ್ಥಿತಿಗೆ ಹೋಗದಂತೆ ತಡೆದರು. ಜೀವಿತದ ಕೊನೆಯ ಮೂರು ದಿನಗಳಿರುವಾಗ ನನ್ನ ಬಳಿ ಇರುವ ಆತ್ಮಾನುಭವದ ಕೀಲಿಕೈ ದೊರಕುತ್ತದೆಂದು ನುಡಿದರು. ವಿವೇಕಾನಂದರು ಇಂತಹ ಯಾವುದೇ ದಿವ್ಯಾನುಭವವನ್ನು ಹೊಂದದೆ ನುಡಿಯುತ್ತಿದ್ದ ಕಾರಣ, ಅವರ ಮಾತುಗಳು ತರ್ಕಬದ್ಧವಾಗಿರುತ್ತಿದ್ದವು. ದಿಟ್ಟತನದಿಂದ ಕೂಡಿರುತ್ತಿತ್ತು. ಹೆಚ್ಚೆಂದರೆ ವಿವೇಕಾನಂದ ಒಬ್ಬ ಪ್ರವಾದಿ ಮಾತ್ರ. ರಾಮಕೃಷ್ಣರ ಸಂದೇಶವನ್ನು ಜಗತ್ತಿನ ಮೂಲೆಮೂಲೆಗೂ ಕೊಂಡೊಯ್ದ ಒಬ್ಬ ಅಂಚೆಯವನು ಮಾತ್ರ. ತನ್ನೊಳಗಿನ ಕೊರತೆಯನ್ನು ತುಂಬಿಕೊಳ್ಳಲು ತಮ್ಮ ಮಾತುಗಳಿಗೆ ದಿಟ್ಟತನದ ವೇಷ ತೊಡಿಸುತ್ತಿದ್ದರು. ವಿವೇಕಾನಂದರಂತೆ ಧೀರವಾಣಿಯನ್ನು ನುಡಿಯಲು ಬುದ್ಧನಂಥವನಿಗೆ ಎಂದಿಗೂ ಸಾಧ್ಯವಾಗುವುದಿಲ್ಲ.’’

ಸ್ವಾಮಿ ವಿವೇಕಾನಂದರ ಧರ್ಮ ಸಮನ್ವತೆಯ ಸಿದ್ಧಾಂತದ ಕುರಿತೂ ಓಶೋ ಟೀಕಾ ಪ್ರಹಾರ ಮಾಡಿದ್ದಾರೆ. ‘‘ವಿವೇಕಾನಂದ ಮಹಾ ಚಾಣಕ್ಷ. ಕ್ರಿಶ್ಚಿಯನ್ನರು ನೆರೆದಿರುತ್ತಿದ್ದ ಸಭೆಗಳಲ್ಲಿ ಆತ ಯೇಸುಕ್ರಿಸ್ತನನ್ನು ಕೊಂಡಾಡುತ್ತಿದ್ದ. ಕ್ರಿಸ್ತನನ್ನು ತೀಕ್ಷ್ಣವಾಗಿ ವಿಮರ್ಶೆ ಮಾಡುವ ಧೈರ್ಯ ಅವನಿಗಿರಲಿಲ್ಲ. ನನ್ನ ಕಣ್ಣಿಗೆ ಒಳಿತು ಕಂಡರೆ ಹೊಗಳುತ್ತೇನೆ. ಜತೆಗೆ ವಿಮರ್ಶೆ ಮಾಡುವ ಅಧಿಕಾರವನ್ನು ಎಂದೂ ಬಿಟ್ಟುಕೊಡುವುದಿಲ್ಲ. ಆತ ಬೌದ್ಧರ ಸಭೆಗಳಲ್ಲಿ ಮಾತಾನಾಡುವಾಗ ತಪ್ಪಿಯೂ ಬೌದ್ಧರನ್ನು ಮತ್ತು ಬೌದ್ಧರ ಗ್ರಂಥಗಳನ್ನು ಟೀಕಿಸುತ್ತಿರಲಿಲ್ಲ. ತಾನು ಸ್ಥಾಪಿಸಿದ ರಾಮಕೃಷ್ಣ ಮಠದಲ್ಲಿ ಎಲ್ಲಾ ಧರ್ಮಗಳ ಸಮನ್ವಯಕ್ಕೆ ಪ್ರಯತ್ನ ಮಾಡಿದ. ನಾನಾದರೂ ಧರ್ಮಗಳ ಸಮನ್ವಯವೆಂಬುದು ‘ಸುಳ್ಳುಗಳ ಸಮನ್ವಯ’ವೆಂದು ಲೇವಡಿ ಮಾಡಿದ್ದೇನೆ. ಇವನ್ನೆಲ್ಲಾ ಏತಕ್ಕಾಗಿ ಸಮನ್ವಯ ಮಾಡಬೇಕು? ಪರರನ್ನು ದ್ವೇಷಿಸದೆ, ಜೀವವಿರೋಧಿ ಧೋರಣೆಯನ್ನು ಬೆಳೆಸಿಕೊಳ್ಳದೆ ಬಾಳ್ವೆ ಮಾಡಿದರೆ ಸಾಲದೆ? ಇಂಥದೊಂದು ಮಾನವೀಯ ಬದುಕಿಗೆ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಇತ್ಯಾದಿ ಹಣೆಪಟ್ಟಿಗಳನ್ನು ನೀಡಬೇಕೆ? ಇಡೀ ಜಗತ್ತು ಇಂಥದೊಂದು ಬಾಳ್ವೆ ಮಾಡುವ ಗುಣ ಬೆಳೆಸಿಕೊಂಡು ಧಾರ್ಮಿಕವಾಗಬೇಕೇ ವಿನಃ ಈ ಹಣೆಪಟ್ಟಿಯ ಧರ್ಮಗಳು ಬೇಕಿಲ್ಲ. ಎಲ್ಲಾ ಧರ್ಮಗಳು ಅಳಿಸಿ ಹೋಗಬೇಕೆಂದು ನಾನು ಕರೆ ನೀಡಿದ್ದೇನೆ. ಹೀಗಾಗಿ ಯಾವ ಧರ್ಮಗಳಿಗೂ ನನ್ನನ್ನು ಕಂಡರಾಗುತ್ತಿಲ್ಲ’’ ಎಂದು ಓಶೋ ಹೇಳುತ್ತಾರೆ.

ಅನುಭಾವಿಯಲ್ಲಿ ವೀರಾವೇಶದ ಮಾತುಗಳು ಬರುವುದಿಲ್ಲ ಎಂಬುದು ಓಶೋ ವಾದ. ವೀರಾವೇಶದ ಮಾತುಗಳನ್ನಾಡುವವರು ಯುವಜನತೆಗೆ ಐಕಾನ್ ಆಗುವುದು ಸಾಮಾನ್ಯ. ಹೀಗಾಗಿಯೇ ವಿಭಿನ್ನ ರಾಜಕೀಯ ಧುರೀಣರಿಗೆ ವಿವೇಕಾನಂದರು ಓಟ್‌ಬ್ಯಾಂಕ್‌ಗೆ ಅಸ್ತ್ರವಾಗುತ್ತಾರೆ. ಇಡೀ ಭಾರತದ ಇತಿಹಾಸದಲ್ಲಿ ರಾಜಕೀಯ ಮಟ್ಟದಲ್ಲಿ ಅತಿಹೆಚ್ಚು ಚರ್ಚೆಯಾಗುವ ಅಧ್ಯಾತ್ಮಿಕ ವ್ಯಕ್ತಿಯೆಂದರೆ ಸ್ವಾಮಿವಿವೇಕಾನಂದರು.

‘ಧ್ಯಾನಸಿದ್ಧ’ ಕೃತಿಯಲ್ಲಿ ದಾಖಲಾಗಿರುವ ಪ್ರಶ್ನೋತ್ತರವೊಂದು ಹೀಗಿದೆ:

ಪ್ರಶ್ನೆ: ಹಾಗಿದ್ದರೆ ರಾಮಕೃಷ್ಣರು ವಿವೇಕಾನಂದರನ್ನು ತನ್ನ ಉದ್ದೇಶಕ್ಕಾಗಿ ಬಳಸಿಕೊಂಡರು ಎನ್ನಬಹುದೇ?

ಓಶೋ: ಬಳಸಿಕೊಂಡಿದ್ದೇನೋ ನಿಜ, ಆದರೆ ‘ಬಳಸಿಕೊಂಡರು’ ಎಂಬ ಪದದಲ್ಲಿ ತುಂಬ ನೀಚಾರ್ಥದ ಧ್ವನಿಯಿದೆ. ಆ ಧ್ವನಿಯಲ್ಲಿ ಆ ಪ್ರಸಂಗವನ್ನು ಗ್ರಹಿಸಬಾರದು. ವಿವೇಕಾನಂದರ ಮೂಲಕ ಅನ್ಯರಿಗೆ ಶ್ರೇಯಸ್ಸಾಗಲಿ ಎಂಬುದು ಶ್ರೀರಾಮಕೃಷ್ಣರ ಆಶಯವಾಗಿತ್ತು. ತಮ್ಮ ಯಾವುದೋ ಸ್ವಾರ್ಥಕ್ಕಾಗಿ ಅವರು ವಿವೇಕಾನಂದರನ್ನು ಶೋಷಣೆ ಮಾಡಲಿಲ್ಲ. ಸದ್ಬಳಕೆಗೂ ಶೋಷಣೆಗೂ ವ್ಯತ್ಯಾಸವಿದೆ. ಅನ್ಯರನ್ನು ವ್ಯಕ್ತಿಗತ ಉದ್ದೇಶಕ್ಕಾಗಿ ಬಳಸುವುದನ್ನು ಶೋಷಣೆ ಎನ್ನಬಹುದು. ಆದರೆ ಶ್ರೀರಾಮಕೃಷ್ಣರ ಮಹಾ ಕರುಣೆಯನ್ನು ಶೋಷಣೆಯೆಂದು ಕರೆಯಲಾಗದು.

– ರಾಮಕೃಷ್ಣರು ಅವರಿಗೆ ಸಮಾಧಿಯ ಒಳನೋಟ ನೀಡಿ ಬಳಿಕ ಅದರ ಕೀಲಿಕೈಯನ್ನು ತನ್ನ ಬಳಿ ಇರಿಸಿಕೊಂಡರೇನೋ ಸರಿ. ಆದರೆ ಆ ಒಳನೋಟವನ್ನಾಗಲಿ ಅಥವಾ ಅದರ ಕೀಲಿಕೈಯನ್ನಾಗಲಿ ವಿವೇಕಾನಂದರಿಗೆ ನೀಡದೆ ಹೋಗಿದ್ದರೆ ಅವರು ನೇರವಾಗಿ ನಿರ್ವಿಕಲ್ಪ ಸಮಾಧಿಗೆ ಸಂದುಬಿಡುತ್ತಿದ್ದರು ಎಂದು ಖಾತರಿಯಾಗಿ ಹೇಳಲು ನಮ್ಮಿಂದಾಗುವುದೇ? ಒಬ್ಬ ಆತ್ಮಜ್ಞಾನಿ ಮಾತ್ರ ಅಂತಹ ಪ್ರಶ್ನೆಗಳಿಗೆ ಉತ್ತರಿಸಬಲ್ಲ. ನಾನೇನೋ ವಿವೇಕಾನಂದರಿಗೆ ಇನ್ನೂ ಬೇಗನೆ ಸಮಾಧಿ ಸಿದ್ದಿಸುತ್ತಿತ್ತು ಎನ್ನಬಹುದು ಆದರೆ ಅಂತಹ ಹೇಳಿಕೆಗಳಿಗೆ ಪುರಾವೆಗಳನ್ನು ಎಲ್ಲಿಂದ ತಂದು ತೋರಿಸಬಹುದು?

ಶ್ರೀರಾಮಕೃಷ್ಣರು ವಿವೇಕಾನಂದರಿಗೆ “ನೀನು ಸಾಯಲು ಮೂರು ದಿವಸಗಳಿವೆ ಎನ್ನುವಾಗ ನಾನು ಸಮಾಧಿಯ ಕೀಲಿಕೈಯನ್ನು ಹಿಂದಿರುಗಿಸುವೆನು” ಎಂದಿದ್ದರು. ಇದರರ್ಥ ವಿವೇಕಾನಂದರು ತಮ್ಮ ಆಯುಷ್ಯದ ಕೊನೆಯ ಹಂತದಲ್ಲಿ ಸಮಾಧಿ ಹೊಂದುವರು ಎಂಬುದು ರಾಮಕೃಷ್ಣರಿಗೆ ತಿಳಿದಿತ್ತು. ಇನ್ನು ಕೀಲಿಕೈಯನ್ನು ಹಿಂದಿರುಗಿಸುವ ವಿಚಾರಕ್ಕೆ ಬಂದರೆ ವಿವೇಕಾನಂದರಿಗೆ ಮರಣ ಸನ್ನಿಹಿತವಾದಾಗ ರಾಮಕೃಷ್ಣರು ಎಲ್ಲಿ ಬದುಕಿದ್ದರು? ಆದರೆ ಅವರು ಹೇಳಿದಂತೆ ಸಾಯಲು ಮೂರು ದಿವಸಗಳಿವೆ ಎನ್ನುವಾಗ ಅವರಿಗೆ ಕೀಲಿಕೈಯನ್ನು ಹಿಂದಿರುಗಿಸಲಾಯಿತು.

ಎಷ್ಟೋ ಸಲ ನಮ್ಮ ಬಗ್ಗೆ ನಮಗೆ ತಿಳಿದಿರುವುದಿಲ್ಲ, ಆದರೆ ತನ್ನ ಅಂತರಾತ್ಮದೊಂದಿಗೆ ಒಂದಾದ ಒಬ್ಬ ಆತ್ಮಾನುಭವಿ ನಮ್ಮನ್ನು ಆಮೂಲಾಗ್ರವಾಗಿ ಅರಿತಿರಬಲ್ಲ. ನಮ್ಮ ಆಂತರ್ಯವೇನು, ನಮ್ಮ ಸಾಮರ್ಥ್ಯವೇನು ಎಂಬುದನ್ನು ಅವನು ತನ್ನ ಸ್ಪೋಪಜ್ಞತೆಯಿಂದಲೇ ಕಂಡುಕೊಳ್ಳಬಲ್ಲ. ನಮ್ಮ ಸಾಧನೆಯ ತೀವ್ರತೆಯನ್ನು ಅಂದಾಜಿಸಿ ನಾವು ಯಾವ ನಿರ್ದಿಷ್ಟ ಗಳಿಗೆಯಲ್ಲಿ ಆತ್ಮಾನುಭವ ಹೊಂದಬಲ್ಲೆವು ಎಂಬುದನ್ನೂ ಅವನು ಕರಾರುವಾಕ್ಕಾಗಿ ನುಡಿದುಬಿಡಬಲ್ಲ. ನೀವು ಪರ್ವತದ ತುದಿಯನ್ನು ತಲುಪಲು ಹೊರಟಿರುವಿರಿ ಎಂದಿಟ್ಟುಕೊಳ್ಳೋಣ. ಆ ಪರ್ವತ ಎಷ್ಟು ದೂರವಿದೆ, ಮಧ್ಯೆ ಏನೆಲ್ಲ ಅಡೆತಡೆಗಳಿವೆ ಎಂದು ತಿಳಿದಿರುವ ನಾನು ನಿಮ್ಮ ನಡಿಗೆಯ ವೇಗವನ್ನು ಅಂದಾಜಿಸಿ “ನೀನು ಮೂರು ತಿಂಗಳಲ್ಲಿ ಶಿಖರಾಗ್ರ ತಲುಪುವೆ” ಎಂದು ಭವಿಷ್ಯವಾಣಿ ನುಡಿಯಲು ಸಾಧ್ಯವಿದೆ. ಎತ್ತರದ ನನ್ನ ಹೆಗಲ ಮೇಲೆ ಕೂರಿಸಿಕೊಂಡು ಇಡೀ ಹಾದಿಯನ್ನು ಒಮ್ಮೆ ತೋರಿಸಿ ನನ್ನ ಭವಿಷ್ಯವಾಣಿಯನ್ನು ನಿಮಗೆ ಖಾತರಿಪಡಿಸಲೂ ಸಹ ಸಾಧ್ಯವಿದೆ. ಇದನ್ನೆಲ್ಲ ಬಳಕೆ, ಶೋಷಣೆ ಎಂಬ ಪರಿಭಾಷೆಯಲ್ಲಿ ಅರ್ಥೈಸಲು ಬರುವುದಿಲ್ಲ. ಇವೆಲ್ಲ ಹೊರಗಿನಿಂದ ಕಂಡರಿತು ತೀರ್ಮಾನಿಸುವಷ್ಟು ಸರಳವಾದ ವಿಷಯಗಳೂ ಅಲ್ಲ.

ಮೊನ್ನೆ ದಿವಸ ನಿರ್ಮಲಾ ಎಂಬ ನನ್ನ ಸನ್ಯಾಸಿನಿಗೆ ಯಾರೋ ಜ್ಯೋತಿಷಿ “ನಿನ್ನ ಆಯುಷ್ಯ ಐವತ್ತ ಮೂರನೆಯ ವಯಸ್ಸಿಗೆ ಮುಗಿಯುತ್ತದೆ” ಎಂದು ಭವಿಷ್ಯವಾಣಿ ನುಡಿದನಂತೆ. ನಾನು “ನೀನು ಐವತ್ತ ಮೂರಕ್ಕೆ ಖಂಡಿತ ಸಾಯುವುದಿಲ್ಲ” ಎಂದು ಅವಳಿಗೆ ಖಾತರಿಯಾಗಿ ಹೇಳಿದೆ. ಇದರರ್ಥ ನಾನು ಅವಳಿಗೆ ಆಯುಷ್ಯ ಅನುಗ್ರಹಿಸಿದೆ ಎಂದಲ್ಲ. ಐವತ್ತಮೂರು ತುಂಬಿದರೂ ಅವಳು ಗಟ್ಟಿಮುಟ್ಟಾಗೇ ಇರುವಳು ಎಂಬ ಖಾತರಿಯಂತೂ ನನಗಿದೆ. ನಾಳೆ ದಿನ ಅವಳಿಗೆ ಐವತ್ತಮೂರು ತುಂಬಿದಾಗ ಅವಳು ಎಲ್ಲ ನನ್ನ ಅನುಗ್ರಹ ಎಂದು ಹೇಳಿಕೊಂಡು ಓಡಾಡಬಹುದು. “ನನ್ನ ಸಾವಿಗೆ ಮೂರು ದಿವಸಗಳಿವೆ ಎನ್ನುವಾಗ ಅವರು ಸಮಾಧಿಯ ಕೀಲಿಕೈಯನ್ನು ನನಗೆ ಹಿಂದಿರುಗಿಸಿದರು” ಎಂದು ವಿವೇಕಾನಂದ ಹೇಳಿಕೊಂಡಿರಬಹುದು. ಆದರೆ ಕೀಲಿಕೈಯನ್ನು ಹಿಂದಿರುಗಿಸಲು ಅವರೆಲ್ಲಿ ಬದುಕುಳಿದಿದ್ದರು?

***

ಕೊನೆಯ ಮಾತು: ಟಿ.ಎನ್‌.ವಾಸುದೇವ ಮೂರ್ತಿಯವರು ಸಂಗ್ರಹಿಸಿರುವ ‘ಧ್ಯಾನಸಿದ್ಧ’ ಎಂಬ ಪುಟ್ಟ ಕೃತಿಯಲ್ಲಿ ಕೆಲವು ವಿಚಾರಗಳು ಪುನರಾವರ್ತನೆಯಾಗಿವೆ ಅನಿಸಿದರೂ ವಿವೇಕಾನಂದರ ಕುರಿತು ಬೇರೊಂದು ಒಳನೋಟವನ್ನು ನೀಡುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಓಶೋ ವಿಚಾರಗಳನ್ನು ಒಪ್ಪಲೇಬೇಕೆಂದೇನೂ ಇಲ್ಲ. ಓಶೋ ಅವರು ವಿವಾದಾತ್ಮಕ ಅನುಭಾವಿ ಎಂದು ಕರೆಸಿಕೊಂಡಿದ್ದಾರೆ. ಆದರೆ ಓಶೋ ವಿಚಾರಗಳನ್ನು ಅಷ್ಟು ಸುಲಭವಾಗಿ ಅಲ್ಲಗಳೆಯಲೂ ಸಾಧ್ಯವಿಲ್ಲ ಎಂಬುದೂ ಮುಖ್ಯವಾಗುತ್ತದೆ.


ಇದನ್ನೂ ಓದಿರಿ: ತಿರುಚಿದ ಟಿಪ್ಪು ಇತಿಹಾಸವನ್ನು ’ಫ್ಯಾಕ್ಟ್‌ಚೆಕ್’ ಮಾಡುವ ಕೃತಿ ’ಟಿಪ್ಪು ಸುಲ್ತಾನ- ಹಿಂದೂ, ಕ್ರೈಸ್ತ ವಿರೋಧಿಯೇ?’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...