Homeಪುಸ್ತಕ ವಿಮರ್ಶೆತಿರುಚಿದ ಟಿಪ್ಪು ಇತಿಹಾಸವನ್ನು ’ಫ್ಯಾಕ್ಟ್‌ಚೆಕ್' ಮಾಡುವ ಕೃತಿ ’ಟಿಪ್ಪು ಸುಲ್ತಾನ- ಹಿಂದೂ, ಕ್ರೈಸ್ತ ವಿರೋಧಿಯೇ?’

ತಿರುಚಿದ ಟಿಪ್ಪು ಇತಿಹಾಸವನ್ನು ’ಫ್ಯಾಕ್ಟ್‌ಚೆಕ್’ ಮಾಡುವ ಕೃತಿ ’ಟಿಪ್ಪು ಸುಲ್ತಾನ- ಹಿಂದೂ, ಕ್ರೈಸ್ತ ವಿರೋಧಿಯೇ?’

- Advertisement -
- Advertisement -

ಬಹುಸಂಖ್ಯಾತ ಧಾರ್ಮಿಕತೆಯನ್ನು ಬಂಡವಾಳವಾಗಿಸಿಕೊಂಡು, ಕಾರ್ಪೊರೆಟ್ ಶಕ್ತಿಯ ಬೆಂಬಲದಿಂದ ಬೆಳೆಯುವ ಬಲಪಂಥೀಯ ರಾಜಕಾರಣದ ಯೋಜನೆಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ, ಅದು ಸೃಷ್ಟಿಸುವ ಸುಳ್ಳು ಮತ್ತು ಗೊಂದಲಗಳನ್ನು ಎದುರಿಸುವುದು ಹೇಗೆ ಎಂಬುದೂ ಸ್ಪಷ್ಟವಾಗುತ್ತದೆ. ಸುಳ್ಳುಗಳಿಗೆ ಸತ್ಯವೇ ಉತ್ತರ. ಹೀಗಾಗಿ ಸುಳ್ಳಿನ ಸಿದ್ಧಾಂತವನ್ನು ಸಂಘಟಿತವಾಗಿ ಸತ್ಯದ ಮೂಲಕವೇ
ಎದುರಿಸಬೇಕಿದೆ.

ಅಸಮಾನ ಸಮಾಜದ-ಶ್ರೇಣೀಕರಣದ ಯಥಾಸ್ಥಿತಿಯನ್ನು ಉಳಿಸುವ ತನ್ನ ಉದ್ದೇಶವನ್ನು ಸದಾ ಕಾಯ್ದುಕೊಳ್ಳುವ, ಕೋಮು ಧ್ರುವೀಕರಣಕ್ಕೆ ಸದಾ ಮುಂದಾಗುವ ಬಲಪಂಥೀಯ ಪಾಪ್ಯುಲಿಸ್ಟ್ ರಾಜಕಾರಣ ಕಾಲಕಾಲಕ್ಕೆ ಹೊಸಹೊಸ ಪ್ರಯೋಗಗಳನ್ನು ಮಾಡುತ್ತಾ ಹೋಗುತ್ತದೆ. ಜರ್ಮನಿಯ ನಾಜಿ ಪ್ರಪೊಗಾಂಡ ಮಂತ್ರಿಯಾಗಿದ್ದ ಗೊಬೆಲ್ಸ್ ಥಿಯರಿಯನ್ನು ನಂಬಿ ಆಚರಿಸುವವರಿಗೆ ದಿಟವನ್ನು ಸೋಲಿಸಲು ತವಕ ಯಾವಾಗಲೂ. ಹೀಗಾಗಿ ಒಂದು ಸುಳ್ಳನ್ನು ನೂರು ಬಾರಿ ಹೇಳಿ ಅದನ್ನೇ ಸತ್ಯವೆಂದು ಬಿಂಬಿಸಿ ನಂಬಿಸುವ ಪ್ರಯತ್ನವನ್ನು ಆ ರಾಜಕಾರಣ ಎಂದಿಗೂ ಜಾರಿಯಲ್ಲಿಟ್ಟಿರುತ್ತದೆ. ಈಗ ಸತ್ಯವನ್ನು ನೂರು ಬಾರಿ ಹೇಳಬೇಕಾದ ತುರ್ತಿನಲ್ಲಿ ನಾವಿದ್ದೇವೆ.

ಕೋಮು ಧ್ರುವೀಕರಣ ರಾಜಕಾರಣ ಸುಳ್ಳುಗಳನ್ನು ಅಥವಾ ಅರ್ಧ ಸತ್ಯಗಳನ್ನು ಹೇಳುತ್ತಾ, ಕೋಮುದ್ವೇಷವನ್ನು ಬಿತ್ತುವ ಪರಿಯನ್ನು ಹೇಗೆ ಮಣಿಸಬಹುದು ಎಂಬುದಕ್ಕೆ ಕೆಲವಾದರೂ ಉದಾಹರಣೆಗಳಿವೆ. ಸ್ವಾಮಿ ವಿವೇಕಾನಂದರನ್ನು ಹಿಂದುತ್ವದ ಐಕಾನ್ ಆಗಿ ಬಿಂಬಿಸುತ್ತಾ ಅದರ ಫಲವನ್ನು ಸಂಘಪರಿವಾರ ದೀರ್ಘಕಾಲ ಅನುಭವಿಸಿತು. ಅದರ ಮೂಲಕ ಯುವಕರನ್ನು ತನ್ನತ್ತ ಸೆಳೆದುಕೊಂಡಿತು. “ವಿವೇಕಾನಂದರು ಇಡೀ ಜಗತ್ತಿಗೆ ಹಿಂದೂಧರ್ಮದ ಶ್ರೇಷ್ಠತೆಯನ್ನು ಪಸರಿಸಿದರು. ಶಿಕಾಗೋ ಸರ್ವಧರ್ಮ ಸಮ್ಮೇಳನದಲ್ಲಿ ಅವರು ಮಾಡಿದ ಭಾಷಣ ಹಿಂದೂ ಧರ್ಮದ ಮಹತ್ವವನ್ನು ಎತ್ತಿಹಿಡಿಯಿತು”- ಹೀಗೆ ಪ್ರಚಾರ ಮಾಡುತ್ತಾ ಬರಲಾಯಿತು. ಆದರೆ ಸ್ವಾಮಿ ವಿವೇಕಾನಂದರು ಹಿಂದೂ ಧರ್ಮವನ್ನು ನೋಡಿದ ಕ್ರಮವೇ ಬೇರೆಯಾಗಿತ್ತು. ಹಿಂದೂ ಎಂಬುದನ್ನು ಒಂದು ಪ್ರದೇಶದ ಹಿನ್ನೆಲೆಯಲ್ಲಿ ಅವರು ಗ್ರಹಿಸಿದ್ದರು. ವಿವೇಕಾನಂದರ ’ಹಿಂದೂ’ ಪರಿಕಲ್ಪನೆ ಧಾರ್ಮಿಕ ನೆಲೆಯದ್ದಾಗಿರಲಿಲ್ಲ. ಇಲ್ಲಿನ ಅಸ್ಪೃಶ್ಯತೆ, ಅಸಮಾನತೆ, ಜಾತಿ ವ್ಯವಸ್ಥೆಯನ್ನು ಕಂಡು ಸ್ವಾಮೀಜಿ ಖುದ್ದು ಹೋಗಿದ್ದರು. ಅಷ್ಟೇ ಅಲ್ಲದೇ ವಿವೇಕಾನಂದರು ನಮ್ಮ-ನಿಮ್ಮಂತೆ ಸಾಮಾನ್ಯರಲ್ಲಿ ಸಾಮಾನ್ಯರಂತೆ ಇದ್ದವರು. ಇದನ್ನೆಲ್ಲ ಹಿಂದುತ್ವ ರಾಜಕಾರಣ ಮುಚ್ಚಿಹಾಕಿತ್ತು. ಕೇಸರಿ ವಸ್ತ್ರಧಾರಿಯಾದ, ಬಲಿಷ್ಠ ಮೈಕಟ್ಟಿನ ವಿವೇಕಾನಂದರ ರೂಪವಷ್ಟೇ ಸಂಘಪರಿವಾರಕ್ಕೆ ಬೇಕಿತ್ತು. ಇಂತಹ ಸಂದರ್ಭದಲ್ಲಿ ಸ್ವಾಮೀಜಿಯವರ ನೈಜ ಆಶಯಗಳ ಕುರಿತು ದಿಟ್ಟವಾಗಿ ಮಾತನಾಡುವವರ ಸಂಖ್ಯೆ ಹೆಚ್ಚಾಗುವುದು ಅಗತ್ಯವಿತ್ತು. ಅದು ಕಾಲಾನಂತರದಲ್ಲಿ ಘಟಿಸಿತೂ ಕೂಡ. ವಿವೇಕಾನಂದರ ಹೆಸರನ್ನು ಬಳಸಿಕೊಳ್ಳಲು ಯತ್ನಿಸಿದ ಗೊಬೆಲ್ಸ್ ಸಿದ್ಧಾಂತವಾದಿಗಳಿಗೆ ಒಂದು ಸಣ್ಣ ಮಟ್ಟದಲ್ಲಾದರೂ ಆಘಾತವಾಯಿತು. ಈಗ ವಿವೇಕಾನಂದರ ಹೆಸರು ಹಿಂದುತ್ವ ರಾಜಕಾರಣದಿಂದ ನೇಪಥ್ಯಕ್ಕೆ ಸರಿಯುತ್ತಿರುವ ಸೂಚನೆಗಳು ಕಂಡುಬರುತ್ತಿವೆ.

ಭಗತ್‌ಸಿಂಗ್ ಅವರ ವಿಚಾರದಲ್ಲಿಯೂ ಹೀಗೆ ಆಯಿತು. ಭಗತ್‌ಸಿಂಗ್ ಅವರಲ್ಲಿದ್ದ ವಿಚಾರವಂತ ಕೋಮುಶಕ್ತಿಗಳಿಗೆ ಬೇಕಿರಲಿಲ್ಲ. ಆತನ ಬಾಹ್ಯ ಚಹರೆಗಳಷ್ಟೇ ಬೇಕಿತ್ತು. ಆದರೆ ಭಗತ್ ಒಬ್ಬ ನಾಸ್ತಿಕ, ಎಡಪಂಥೀಯ ಎಂಬುದು ಚರ್ಚೆಯ ಮುಖ್ಯವಿಷಯವಾದಾಗ ಭಗತ್ ಅವರಿಗೆ ಅಪಥ್ಯವಾಗುತ್ತಾನೆ. ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಒಂದು ಕಾಲದಲ್ಲಿ ಅತಿಯಾಗಿ ದ್ವೇಷಿಸುತ್ತಿದ್ದ ಪರಿವಾರ, ಈಗ ಅಂಬೇಡ್ಕರ್ ವಿಚಾರಗಳನ್ನು ತಿರುಚಲು ಹೊರಟಿದೆ. ಅಂಬೇಡ್ಕರ್ ಅವರ ನೈಜ ವಿಚಾರಧಾರೆಗಳನ್ನು ಹೆಚ್ಚುಹೆಚ್ಚು ಪ್ರಚಾರ ಮಾಡಿದಷ್ಟೂ ಅಂಬೇಡ್ಕರ್ ಕುರಿತು ಮಾತನಾಡುವುದನ್ನು ಅವರು ನಿಲ್ಲಿಸುತ್ತಾರೆ.

ಇತ್ತೀಚಿನ ದಿನಗಳಲ್ಲಿ ಬಲಪಂಥ ರಾಜಕಾರಣದ ನಿಜದ ಪ್ರತಿನಿಧಿಯಾದ ಗೋಡ್ಸೆಯನ್ನು ನೇರವಾಗಿ ಅಖಾಡಕ್ಕಿಳಿಸಲಾಗಿದೆ. ಅವನ ಸಿದ್ಧಾಂತ ಇನ್ನೂ ಉಗ್ರರೂಪದಲ್ಲಿ ತಾಂಡವವಾಡುತ್ತಿದೆ. ’ಹಿಂದೂ’ ನಟಿಯೊಬ್ಬರು ಕ್ರಿಸ್ಮಸ್ ಆಚರಿಸಿದರೆ ಇವರಿಗೆ ಅಪಥ್ಯವಾಗುತ್ತದೆ. ಮುಸ್ಲಿಂ ಎಂಬ ಕಾರಣಕ್ಕೆ ಹಾಸ್ಯ ಕಲಾವಿದ ಮುನಾವರ್ ಫರೂಕಿಯ ಮೇಲೆ ಪೂರ್ವಯೋಜಿತ ದಬ್ಬಾಳಿಕೆ ನಡೆಯುತ್ತದೆ. ವ್ಯಕ್ತಿಯ ಧಾರ್ಮಿಕ ಹಿನ್ನೆಲೆಯನ್ನು ನೋಡಿ ಸುಳ್ಳುಗಳನ್ನು ಹಬ್ಬಿಸುವ, ದ್ವೇಷವನ್ನು ಹರಡುವ ರಾಜಕಾರಣ ಬಲವಾಗಿ ಕೆಲಸ ಮಾಡುತ್ತಿದೆ. ಇದರ ಭಾಗವಾಗಿಯೇ, ಇತಿಹಾಸವನ್ನು ತಿರುಚಿ, ಇತಿಹಾಸದ ಮಹಾಪುರುಷರನ್ನು, ಕಣ್ಮಣಿಗಳನ್ನು ಕೋಮುವಾದದ ವಧಾ ಸ್ಥಾನಕ್ಕೆ ತಂದು ನಿಲ್ಲಿಸಲಾಗುತ್ತದೆ. ಕಳೆದೊಂದು ದಶಕದಿಂದ ಕೋಮುವಾದದ ವಧಾ ಸ್ಥಾನದಲ್ಲಿ ನಿಂತಿರುವ ಹೆಸರು ’ಟಿಪ್ಪು ಸುಲ್ತಾನ್’.

ಮೈಸೂರು ರಾಜ್ಯವನ್ನು ಆಳಿದ ’ಟಿಪ್ಪು’, ಮತಾಂಧ, ಹಿಂದೂಗಳ ವಿರೋಧಿ, ನರಮೇಧ ನಡೆಸಿದವನು, ಅಸಂಖ್ಯಾತ ಹಿಂದೂಗಳನ್ನು ಇಸ್ಲಾಂಗೆ ಮತಾಂತರ ಮಾಡಿದವನು, ದೇವಾಲಯಗಳನ್ನು ಧ್ವಂಸ ಮಾಡಿದವನು- ಇತ್ಯಾದಿ ಸುಳ್ಳುಗಳನ್ನು ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಪ್ರಚಾರ ಮಾಡಲಾಗುತ್ತಿದೆ. ಟಿಪ್ಪುವಿನ ಕುರಿತು ಹಬ್ಬಿಸಲಾದ ಇಂತಹ ಸುಳ್ಳುಗಳ ಕುರಿತು ಇತಿಹಾಸಕಾರರು, ವಿಚಾರವಂತರು ಸಾಕಷ್ಟು ಚರ್ಚೆ ಮಾಡಿದ್ದಾರೆ. ಅದರ ಮುಂದುವರಿದ ಭಾಗವಾಗಿ ಇಸ್ಮತ್ ಪಜೀರ್ ಅವರು ಬರೆದಿರುವ ’ಟಿಪ್ಪು ಸುಲ್ತಾನ- ಹಿಂದೂ, ಕ್ರೈಸ್ತ ವಿರೋಧಿಯೇ?’ ಕೃತಿ ಹೊರಬಂದಿದೆ.

ಟಿಪ್ಪುವಿನ ಕುರಿತು ಹಬ್ಬಿಸಲಾಗಿರುವ ಸುಳ್ಳುಗಳನ್ನು, ’ಫ್ಯಾಕ್ಟ್‌ಚೆಕ್’ ಮಾದರಿಯಲ್ಲಿ ಚರ್ಚಿಸುತ್ತಾ ಒಂದೊಂದೇ ಪ್ರಶ್ನೆಗಳಿಗೆ ಉತ್ತರವನ್ನು ನೀಡುವ ಪ್ರಯತ್ನವನ್ನು ಇಸ್ಮತ್ ಪಜೀರ್ ಮಾಡಿದ್ದಾರೆ. ಒಟ್ಟು 14 ಪುಟ್ಟ ಅಧ್ಯಾಯಗಳನ್ನು ಹೊಂದಿರುವ ಈ ಕೃತಿ ಟಿಪ್ಪುವಿನ ಧಾರ್ಮಿಕ ಸಹಿಷ್ಣುತೆ, ಪ್ರಗತಿಪರತೆ, ನ್ಯಾಯದಾನ ವ್ಯವಸ್ಥೆ, ಮಾನವೀಯ ಗುಣಗಳು, ರಾಜಕೀಯ ನಿಲುವುಗಳು ಸೇರಿದಂತೆ ಇತ್ಯಾದಿ ಸಂಗತಿಗಳ ಕುರಿತು ಚರ್ಚಿಸುತ್ತದೆ.

ಟಿಪ್ಪು ದ್ವೇಷಿ ವಸಾಹತು ಇತಿಹಾಸಕಾರರು

’ಟಿಪ್ಪು ಚರಿತ್ರೆ: ಭಿನ್ನ ಹೆಜ್ಜೆ’ ಅಧ್ಯಾಯದಲ್ಲಿ ಟಿಪ್ಪುವಿನ ಕುರಿತು ಕೆಲವು ವಸಾಹತುಶಾಹಿ
ಚರಿತ್ರಕಾರರು ಎಸಗಿರುವ ದ್ರೋಹ ಮತ್ತು ಅವುಗಳನ್ನೇ ನಿಜವೆಂದು ಪ್ರತಿಪಾದಿಸುವ ಬಲಪಂಥೀಯ ರಾಜಕಾರಣದ ಕುರಿತು ಇಸ್ಮತ್ ಮಾತನಾಡಿದ್ದಾರೆ. ಬ್ರಿಟಿಷ್ ಸಾಮ್ರಾಜ್ಯಕ್ಕೆ ಸಿಂಹಸ್ವಪ್ನವಾಗಿದ್ದ ಟಿಪ್ಪುವಿನ ಚಾರಿತ್ರ್ಯವನ್ನು ಹಾಳುಮಾಡುವುದೇ ವಸಾಹತುಶಾಹಿ ಇತಿಹಾಸಕಾರರ ಉದ್ದೇಶವಾಗಿತ್ತು. ಬ್ರಿಟಿಷ್ ವಿದೇಶಾಂಗ ಸಚಿವ ಉಡ್ ಬರೆದ ಪತ್ರವೊಂದು ಹೀಗೆ ಹೇಳುತ್ತದೆ: “ಒಂದು ಕೋಮಿನ ವಿರುದ್ಧ ಇನ್ನೊಂದು ಕೋಮುವನ್ನು ಎತ್ತಿ ಕಟ್ಟುವುದರ ಮೂಲಕ ನಾವು ಭಾರತದಲ್ಲಿ ನಮ್ಮ ಆಳ್ವಿಕೆಯನ್ನು ಬಲಪಡಿಸಿದ್ದು, ಇದೇ ರೀತಿ ಮುಂದುವರಿಯತಕ್ಕದ್ದು. ಭಾರತೀಯರು ತಾವೆಲ್ಲ ಒಂದೇ ಎಂಬ ಭಾವನೆ ಅವರಲ್ಲಿ ಮೂಡದಂತೆ ಮಾಡಲು ಸಾಧ್ಯವಾದ ಎಲ್ಲ ವಿಧದ ಪ್ರಯತ್ನಗಳನ್ನು ಮಾಡಬೇಕು”.

ಇಂತಹ ಕುತಂತ್ರಗಳ ಬೆಂಬಲಕ್ಕೆ ನಿಂತಿದ್ದ ಕೆಲವು ಬ್ರಿಟಿಷ್ ಇತಿಹಾಸಕಾರರು ಟಿಪ್ಪುವಿನ ಕುರಿತು ಸತ್ಯಕ್ಕೆ ದೂರವಾದ ಸಂಗತಿಗಳನ್ನು ಬರೆದರು ಎಂದು ಲೇಖಕರು ಹೇಳುತ್ತಾರೆ. ಈ ನಿಟ್ಟಿನಲ್ಲಿ ಟಿಪ್ಪುವಿನ ಕುರಿತು ಗಾಂಧೀಜಿಯವರು ಹೇಳುವ ಮಾತುಗಳನ್ನು ಲೇಖಕರು ದಾಖಲಿಸುತ್ತಾರೆ: “ಪಾಶ್ಚಾತ್ಯ ಇತಿಹಾಸಕಾರರ ಅಭಿಪ್ರಾಯದಲ್ಲಿ ಮೈಸೂರಿನ ಬಾದಶಹ ಫತೇ ಆಲಿ ಟಿಪ್ಪು ಓರ್ವ ಮೂಢ, ಮೂರ್ಖ ಮುಸ್ಲಿಂ. ಅವನು ತನ್ನ ಪ್ರಜೆಗಳಾದ ಹಿಂದೂಗಳನ್ನು ಹಿಡಿದು ಬಲವಂತವಾಗಿ ಇಸ್ಲಾಂ ಮತಕ್ಕೆ ಮತಾಂತರಿಸಿದ. ಆದರೆ ಇದೊಂದು ದೊಡ್ಡ ಸುಳ್ಳಿನ ಕಂತೆ. ಆಗ ಹಿಂದೂ ಮುಸ್ಲಿಮರ ಬಾಂಧವ್ಯ ಸ್ನೇಹಮಯವಾಗಿತ್ತು. ಇದು ಸತ್ಯಾಂಶ. ಟಿಪ್ಪುವಿನ ಜೀವನ ಕಾಲದಲ್ಲಿ ಅವನು ಸಾಧಿಸಿದ ಕೆಲಸವೇ ಸಾಕು, ಅದೊಂದು ಆನಂದ ಮೂಲ, ಸ್ಪೂರ್ತಿ ಮೂಲ….”.

ಹಿಂದೂ ಧಾರ್ಮಿಕ ಕ್ಷೇತ್ರಗಳಿಗೆ ಟಿಪ್ಪು ನೀಡಿದ ಕೊಡುಗೆಗಳನ್ನು ’ಹಿಂದೂ ದೇವಾಲಯಗಳು ಮತ್ತು ಟಿಪ್ಪು ನೀಡಿದ ಉಂಬಳಿಗಳು’ ಅಧ್ಯಾಯದಲ್ಲಿ ದಾಖಲಿಸಲಾಗಿದೆ. ಬ್ರಾಹ್ಮಣರಿಗೆ ಟಿಪ್ಪು ಭೂದಾನ ಮಾಡಿದ್ದಿದೆ. ತುಳುನಾಡಿನ ದೇವಾಲಯಳಿಗೆ, ಕೇರಳದ ಮಲಬಾರ್ ಪ್ರದೇಶಕ್ಕೆ ಟಿಪ್ಪು ಸಾಕಷ್ಟು ಕೊಡುಗೆಗಳನ್ನು ನೀಡಿರುತ್ತಾರೆ. ಟಿಪ್ಪು, ಅರ್ಹತೆ ಮತ್ತು ಸಾಮರ್ಥ್ಯದ ಆಧಾರದಲ್ಲಿ ಎಲ್ಲ ಧರ್ಮೀಯರಿಗೂ ತನ್ನ ಆಸ್ಥಾನದಲ್ಲಿ ಉನ್ನತ ಹುದ್ದೆಗಳನ್ನು ನೀಡಿದ್ದರು. ಟಿಪ್ಪುವಿನ ಆಡಳಿತದಲ್ಲಿ ಉತ್ನತ ಹುದ್ದೆಯಲ್ಲಿದ್ದ ಹಿಂದೂಗಳ ಹೆಸರುಗಳನ್ನು ’ಟಿಪ್ಪುವಿನ ಆಸ್ಥಾನದಲ್ಲಿ ಹಿಂದೂಗಳ ಸ್ಥಾನಮಾನ’ ಅಧ್ಯಾಯದಲ್ಲಿ ಪಟ್ಟಿ ಮಾಡಲಾಗಿದೆ.

ಶೃಂಗೇರಿ ಮಠದ ಸ್ವಾಮೀಜಿ ಮತ್ತು ಟಿಪ್ಪು

’ಟಿಪ್ಪು ಮತ್ತು ಶೃಂಗೇರಿ ಮಠ’ ಅಧ್ಯಾಯ ಈ ಕೃತಿಯ ಹೃದಯ ಭಾಗವೆಂದೇ ಹೇಳಬಹುದು. ಶೃಂಗೇರಿಯ ಮಠಾಧೀಶರಾಗಿದ್ದ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರಿಗೆ ಟಿಪ್ಪು ಬರೆದಿರುವ ಹಲವು ಪತ್ರಗಳೇ ಆತನ ಪರಧರ್ಮ ಸಹಿಷ್ಣುತೆಗೆ ಸಾಕ್ಷಿಯಾಗಿವೆ. ಸ್ವಾಮೀಜಿಯವರಿಗೆ ಟಿಪ್ಪು ಬರೆದಿರುವ ಪತ್ರಗಳು ಕನ್ನಡದಲ್ಲಿರುವುದು- ಟಿಪ್ಪು ಕನ್ನಡ ವಿರೋಧಿ ಎನ್ನುವವರಿಗೆ ಉತ್ತರವಾಗಿವೆ. ಮರಾಠರ ಸೇನೆ ಶೃಂಗೇರಿ ಮಠದ ಮೇಲೆ ದಾಳಿ ಮಾಡಿದಾಗ, ಟಿಪ್ಪು ಸ್ವಾಮೀಜಿಯವರಿಗೆ ಪತ್ರ ಬರೆದು ಸಂತೈಸಿದ್ದಾರೆ. ಮಠಕ್ಕೆ, ಧಾರ್ಮಿಕ ಆಚರಣೆಗಳಿಗೆ ಬೇಕಾದ ಎಲ್ಲ ಸಹಕಾರವನ್ನು ಟಿಪ್ಪು ನೀಡಿರುವುದು ಇಲ್ಲಿನ ಪತ್ರಗಳಿಂದ ಸ್ಪಷ್ಟವಾಗುತ್ತದೆ. ಅಲ್ಲದೇ ಸ್ವಾಮೀಜಿಯವರ ಕುರಿತು ಟಿಪ್ಪುವಿಗೆ ಇದ್ದ ಪ್ರೀತಿ, ಗೌರವ ಮಹತ್ವದ್ದು.

ಸ್ವಾಮೀಜಿಯವರು ಪುಣೆಗೆ ಹೋಗಿ ಹಲವು ದಿನಗಳಾದರೂ ವಾಪಸ್ ಬರದಿದ್ದಾಗ ಟಿಪ್ಪು ಪತ್ರ ಬರೆದು, “ಶ್ರೀ ಸ್ವಾಮೀಜಿಯವರಿಗೆ ಟಿಪ್ಪು ಸುಲ್ತಾನ್ ಬಾದಶಹರವರ ಸಲಾಮು…. ತಮ್ಮಂಥಾ ದೊಡ್ಡವರು ಯಾವ ದೇಶದಲ್ಲಿ ಇದ್ದರೂ ಆ ದೇಶಕ್ಕೆ ಮಳೆ, ಬೆಳೆ ಸಕಲವೂ ಆಗಿ ಸುಭಿಕ್ಷೆಯೂ ಆಗಿ ಇರತಕ್ಕದ್ದರಿಂದ ಪರಸ್ಥಳದಲ್ಲಿ ಬಹಳ ದಿವಸ ತಾವು ಯಾತಕ್ಕೆ ಇರಬೇಕು? ಹೋದ ಕೆಲಸವನ್ನು ಕ್ಷಿಪ್ರದಲ್ಲಿ ಅನುಕೂಲ ಮಾಡಿಸಿಕೊಂಡು ಸ್ಥಳಕ್ಕೆ ಸಾಗಿಬರುವಂತೆ ಮಾಡಿಸುವುದು…” ಎಂದು ಭಿನ್ನವಿಸಿಕೊಳ್ಳುವುದು ಹೃದಯಸ್ಪರ್ಶಿಯಾಗಿದೆ. ಟಿಪ್ಪು ಅನ್ಯಧರ್ಮ ಸಹಿಷ್ಣುವಾಗಿದ್ದನ್ನು ಇಡೀ ಕೃತಿಯುದ್ದಕ್ಕೂ ತೆರೆದಿಡಲಾಗಿದೆ. ಟಿಪ್ಪುವಿಗೆ ಇಸ್ಲಾಮೀ ಶಿಕ್ಷಣವನ್ನು ಮೌಲವಿ ಉಬೇದುಲ್ಲಾಹ್ ನೀಡಿದರೆ, ಹಿಂದೂ ಧಾರ್ಮಿಕ ಶಿಕ್ಷಣವನ್ನು ಗೋವರ್ಧನ ಪಂಡಿತರು ನೀಡಿದ್ದರು.

ರಾಜ್ಯದ್ರೋಹಿಗಳಿಗೆ ಶಿಕ್ಷೆ

ಟಿಪ್ಪು ಸುಲ್ತಾನ್ ಕ್ರೈಸ್ತರ ವಿರೋಧಿ ಎಂಬ ಹಣೆಪಟ್ಟಿ ಕಟ್ಟಲಾಗಿದೆ. ’ಟಿಪ್ಪು ಮತ್ತು ಕ್ರೈಸ್ತರು’ ಅಧ್ಯಾಯದಲ್ಲಿ ಲೇಖಕರು ಇದನ್ನು ಚರ್ಚಿಸಿದ್ದಾರೆ. ಬ್ರಿಟಿಷರೊಂದಿಗೆ ಕೈಜೋಡಿಸಿದ ರಾಜ್ಯದ್ರೋಹಿಗಳೊಂದಿಗೆ ಟಿಪ್ಪು ಕಟುವಾಗಿ ನಡೆದುಕೊಂಡನೇ ಹೊರತು, ಧರ್ಮಾಧಾರಿತವಾಗಿಯಲ್ಲ. ಮಂಗಳೂರು ಭಾಗದ ಕ್ರೈಸ್ತರು ಬ್ರಿಟಿಷರೊಂದಿಗೆ ಕೈಜೋಡಿಸಿದ್ದನ್ನು ಟಿಪ್ಪು ಸಹಿಸಲಿಲ್ಲ. ಮುಸ್ಲಿಮರು ರಾಜ್ಯದ್ರೋಹ ಮಾಡಿದಾಗಲೂ ಟಿಪ್ಪು ವಿನಾಯಿತಿ ನೀಡಲಿಲ್ಲ. ಮಲಬಾರಿನ ನಾಯಕರುಗಳು, ಮಂಗಳೂರಿನ ಕ್ರೈಸ್ತರು, ಕೊಡವರು ಮುಂತಾದವರ ಜೊತೆ ಕ್ರೂರವಾಗಿ ವರ್ತಿಸಿದ್ದಕ್ಕೆ ರಾಜ್ಯದ್ರೋಹವೇ ಕಾರಣವಾಗಿತ್ತು. ಅದು ಅಂದಿನ ಆಡಳಿತದ ಪರಿಯಾಗಿತ್ತು ಎಂಬುದನ್ನು ಲೇಖಕರು ವಿವೇಚಿಸುತ್ತಾರೆ.

ಟಿಪ್ಪು ಕ್ರೈಸ್ತ ವಿರೋಧಿಯಾಗಿರಲಿಲ್ಲ ಎಂಬುದಕ್ಕೆ ನೇತ್ರಾವತಿ ನದಿ ತಟದಲ್ಲಿನ ಮಾತೆ ಮೇರಿಯ ಗೋಪುರ ಉದಾಹರಣೆಯಾಗಿ ನಿಲ್ಲುತ್ತದೆ. ಆ ಗೋಪುರದಲ್ಲಿ, “ಮೇರಿಯ ಈ ಮೂರ್ತಿಯ ತಳಭಾಗದಲ್ಲಿ ಹೈದರ್ ಆಲಿ ಮತ್ತು ಟಿಪ್ಪುವಿನ ಸೈನಿಕರು ಮೋಂಬತ್ತಿ ಬೆಳಗಿಸುತ್ತಿದ್ದರು” ಎಂದಿದೆ. ಅಲ್ಲದೆ ಟಿಪ್ಪು ಸೈನ್ಯದಲ್ಲಿ ಕ್ರೈಸ್ತರು ಧಾರಾಳವಾಗಿ ಇದ್ದರು.

ಕೊಡಗಿನಲ್ಲಿ 70,000 ಹಿಂದೂಗಳನ್ನು ಟಿಪ್ಪು ಮತಾಂತರ ಮಾಡಿದ ಎನ್ನುತ್ತಾರೆ. ಆದರೆ ಟಿಪ್ಪು ನಿಧನದ 37 ವರ್ಷಗಳ ನಂತರದ ಜನಗಣತಿಯಲ್ಲಿ ಕೊಡಗಿನ ಜನಸಂಖ್ಯೆ 65,437 ಇರುವುದು ವಾಸ್ತವ. ಈ ಅಂಕಿಸಂಖ್ಯೆಗಳೇ ಈ ಮತಾಂತರದ ಸುಳ್ಳಿನ ಕಥೆಗೆ ಉತ್ತರ ಹೇಳುತ್ತವೆ. ಕ್ರೈಸ್ತರನ್ನು ಮತಾಂತರ ಮಾಡಲಾಯಿತು, 7,900 ದೇವಾಲಯಗಳನ್ನು ಧ್ವಂಸ ಮಾಡಲಾಯಿತು ಎಂಬುದೂ ಇಂತಹದ್ದೇ ಕಟ್ಟುಕತೆಗಳು. ಬಲವಂತದ ಮತಾಂತರ ಎಂಬುದು ಆಧಾರರಹಿತವಾಗಿದೆ ಎಂಬುದನ್ನು ಲೇಖಕರು ನಿರೂಪಿಸಿದ್ದಾರೆ.

ಟಿಪ್ಪು ಜಾರಿಗೆ ತಂದ ಸುಧಾರಣೆಗಳು

ಟಿಪ್ಪುವಿನ ನ್ಯಾಯದಾನ ವ್ಯವಸ್ಥೆಯೂ ಮಾನವೀಯವಾಗಿತ್ತು. ತಿರುವಾಂಕೂರಿನ ನಂಬೂದಿರಿ ಜಾತಿಯ ಅರಸರು ಕೇರಳದಲ್ಲಿ ’ಮುಲಕ್ಕರ’ (ಸ್ತನ ತೆರಿಗೆ) ಎಂಬ ಅಮಾನವೀಯ ತೆರಿಗೆಯನ್ನು ಅಲ್ಲಿನ ಕೆಳವರ್ಗದ ಮಹಿಳೆಯರಿಗೆ ವಿಧಿಸುತ್ತಿದ್ದರು. ಋತುಮತಿಯಾದ ಕೆಳವರ್ಗದ ಮಹಿಳೆಯರು ಮೇಲ್ವಸ್ತ್ರ ಧರಿಸದೇ
ತಮ್ಮ ಸ್ತನಗಳು ಕಾಣುವಂತೆ ಅವರು ನಡೆದಾಡಬೇಕಿತ್ತು. ಒಂದು ವೇಳೆ ಯಾರಾದರೂ ಸ್ತನ ಮುಚ್ಚುವ ಮೇಲ್ವಸ್ತ್ರ ಧರಿಸಿದರೆ ಅದಕ್ಕಾಗಿ ತೆರಿಗೆ ಕಟ್ಟಬೇಕಾಗಿತ್ತು. ಇಂತಹ ಅಮಾನವೀಯ ಪದ್ಧತಿಯ ವಿರುದ್ಧ ಮೊಟ್ಟಮೊದಲು ಕಾನೂನು ಜಾರಿಗೆ ತಂದು ಕೆಳವರ್ಗದ ಮಹಿಳೆಯರಿಗೆ ಗೌರವ ಕೊಟ್ಟ ಅರಸ ಟಿಪ್ಪು ಸುಲ್ತಾನ್. ಭೂಮಿ ಇಲ್ಲದವರು ಭೂಮಿ ಹೊಂದಲು ಅವಕಾಶ ನೀಡಿದರು. ರೈತರ ಮೇಲಿನ ತೆರಿಗೆ ಭಾರ ಕಡಿಮೆ ಮಾಡಿದರು. ಕೃಷಿ ಪರಿಕರಗಳನ್ನು ಖರೀದಿಸಲು ಮುಂಗಡ ಹಣ ನೀಡುವ ಪದ್ಧತಿ ಶುರುಮಾಡಿದರು. ಕೆ.ಆರ್.ಎಸ್. ಅಣೆಕಟ್ಟೆಗೆ ಅಡಿಗಲ್ಲು ಹಾಕಿದರು. ಕಾರ್ಮಿಕರ ಘನತೆಯನ್ನು ಎತ್ತಿ ಹಿಡಿದರು – ಇಂತಹ ಹಲವು ಸುಧಾರಣೆಗಳತ್ತ ಗಮನ ಹರಿಸಿದ ಟಿಪ್ಪು, ಮೂವರು ಶತ್ರುಗಳನ್ನು (ಬ್ರಿಟಿಷರು, ಮರಾಠರು, ನಿಜಾಮರು) ಸದಾ ಎದುರಿಸಬೇಕಾಯಿತು.

ಟಿಪ್ಪು ಸುಲ್ತಾನ ಸ್ವಾತಂತ್ರ್ಯ ಹೋರಾಟಗಾರನಲ್ಲ ಎಂದು ವಾದಿಸುವ ಇತಿಹಾಸಕಾರರ ದ್ವಿಮುಖ ನೀತಿಯನ್ನು ಇಸ್ಮತ್ ಪ್ರಶ್ನಿಸುತ್ತಾರೆ. “15-16ನೇ ಶತಮಾನದ ನಮ್ಮದೇ ಉಳ್ಳಾಲದ ರಾಣಿ (ಒಂದು ಪುಟ್ಟ ಊರಿನ ರಾಣಿ) ಅಬ್ಬಕ್ಕಳನ್ನು ಭಾರತದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ಎನ್ನಲಾಗುತ್ತದೆ. ಅಬ್ಬಕ್ಕ ಹೋರಾಡಿದ್ದು ಒಂದು ಅಪ್ಪಟ ವ್ಯಾಪಾರಿ ಉದ್ದೇಶದ ವಿದೇಶಿ ಗುಂಪಾದ ಪೋರ್ಚುಗೀಸರ ವಿರುದ್ಧ. ಪೋರ್ಚುಗೀಸರು ಆ ಕಾಲಕ್ಕೆ ಯಾವುದೇ ವಿಧದಲ್ಲೂ ಭಾರತದಲ್ಲಿ ತಮ್ಮ ಸಾಮ್ರಾಜ್ಯ ಸ್ಥಾಪನೆ ಮಾಡಿರಲಿಲ್ಲ. ಆದರೆ ಹೆಚ್ಚು ಕಡಿಮೆ ಭಾರತವನ್ನು ತಮ್ಮ ಕೈವಶ ಮಾಡಿಕೊಂಡಿದ್ದ, ಭಾರತೀಯ ರಾಜರುಗಳನ್ನು ತಮ್ಮ ಅಧೀನ ರಾಜರನ್ನಾಗಿ ಪರಿವರ್ತಿಸಿದ್ದ ಬ್ರಿಟಿಷರ ವಿರುದ್ಧ ಹೋರಾಡಿದ ಟಿಪ್ಪುವನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ಇತಿಹಾಸಕಾರರು ಒಪ್ಪಲು ತಯಾರಿಲ್ಲದಿರುವುದನ್ನು ಅವರ ಪಕ್ಷಪಾತಿ ನೀತಿಯನ್ನಬೇಕೇ ಅಥವಾ ದ್ವಿಮುಖ ನೀತಿ ಎನ್ನಬೇಕೆ?” ಎಂಬುದು ಲೇಖಕರ ಪ್ರಶ್ನೆ.

ಹೀಗೆ ಟಿಪ್ಪುವಿನ ನಿಜ ಇತಿಹಾಸದ ಕುರಿತು ಇಸ್ಮತ್ ಪಜೀರ್ ಅವರ ಕೃತಿ ಬೆಳಕು ಚೆಲ್ಲುತ್ತದೆ. ಸುಳ್ಳುಗಳು ರಾರಾಜಿಸಿದಷ್ಟು ಸತ್ಯಗಳು ಹೆಚ್ಚಾಗಬೇಕು ಎಂಬುದು ಲೇಖಕರ ಆಶಯವೂ ಹೌದು. “ವಿರೋಧಿಗಳು ಟಿಪ್ಪುವನ್ನು ಎಷ್ಟು ಹಳಿಯುತ್ತಾರೋ, ಅಷ್ಟು ಟಿಪ್ಪುವಿನ ನಿಜ ವ್ಯಕ್ತಿತ್ವದ ಕುರಿತು ಅಧ್ಯಯನಗಳು ಆಗುತ್ತಲೇ ಇರುತ್ತವೆ” ಎನ್ನುತ್ತಾರೆ ಲೇಖಕರು.


ಇದನ್ನೂ ಓದಿ: ಕನ್ನಡ ರಾಷ್ಟ್ರೀಯತೆಯ ಕನಸುಗಾರ ಟಿಪ್ಪು ಸುಲ್ತಾನ್‌…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳೋಕೆ ಸಂಘ ಪರಿವಾರ ಮತ್ತು ಬಿಜೆಪಿ ಪಕ್ಷ ಹಲವಾರು ವರ್ಷಗಳಿಂದ ಇಂಥ ಸುಳ್ಳುಗಳ್ಳನ್ನು ಹೇಳಿಕೊಂಡು ಬರುತ್ತಿದೆ .ಟಿಪ್ಪು ನಾಡು ಕಂಡ ಸ್ವಾತಂತ್ರ ಹೋರಾಟಗಾರ ಟಿಪ್ಪು ಒಬ್ಬ ಮುಸ್ಲಿಮ ಎನ್ನುವುದು ಇವರಿಗೆ ಸಹಿಸೋಕೆ ಆಗ್ತಿಲ್ಲ.ಉತ್ತಮ ಕೃತಿ ಬರೆದ ಇಸ್ಮತ್ ಪಜೀರ್ ಸರ್ ಅವರಿಗೆ ಧನ್ಯವಾದಗಳು

LEAVE A REPLY

Please enter your comment!
Please enter your name here

- Advertisment -

ಕಾವೇರಿ: ರೈತರ ಹಿತ ಕಾಯುವುದು ನನ್ನ ಮೊದಲ ಕರ್ತವ್ಯ ಡಿ.ಕೆ.ಶಿವಕುಮಾರ್

ರಾಜ್ಯದ ಜಲಾಶಯಗಳಲ್ಲಿ ನೀರಿನ ಲಭ್ಯತೆ ಕಡಿಮೆಯಿರುವಾಗ ನಮ್ಮ ರೈತರನ್ನು ಬದುಕಿಸುವ ಸವಾಲಿನ ಜೊತೆಗೆ ಕಾನೂನನ್ನೂ ಕಾಪಾಡಬೇಕಾದ ಹೊಣೆಗಾರಿಕೆ ಇದೆ. ಕಾವೇರಿ ವಿಚಾರದಲ್ಲಿ ನಮ್ಮ ರೈತರ ಹಿತ ಕಾಯುವುದು ನನ್ನ ಮೊದಲ ಕರ್ತವ್ಯ ಎಂದು...

‘ಅಸ್ತಿತ್ವದ ಸಮಸ್ಯೆಯಲ್ಲ, ಹೊಣೆಗಾರಿಕೆಯೇ ಮುಖ್ಯ’: ಆರ್‌ಎಸ್‌ಎಸ್ ನೋಂದಣಿ ಕುರಿತು ಬಿ.ಎಲ್. ಸಂತೋಷ್ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ನೋಂದಣಿ ಹಾಗೂ ಅದರ ಕಾನೂನಾತ್ಮಕ ಅಸ್ತಿತ್ವಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸಂತೋಷ್ ಹಾಗೂ ಕರ್ನಾಟಕದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್...

ನಾನು ‘ದಿಮಾಗಿ ನಕ್ಸಲ್’ ಆಗಿದ್ದರೆ ಅದಕ್ಕೆ ಹೆಮ್ಮೆ ಇದೆ: ಮೋದಿ-ರಿಜಿಜು ವಿರುದ್ಧ ಚಿದಂಬರಂ ತಿರುಗೇಟು

ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಳಸಿದ್ದ ‘ದಿಮಾಗಿ ನಕ್ಸಲರು’ (ವೈಚಾರಿಕ ನಕ್ಸಲರು) ಎಂಬ ಪದ ಬಳಕೆ ದೇಶದ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಪ್ರಧಾನಿಯವರ ಈ...

CAA ವಿರೋಧಿ ಪ್ರತಿಭಟನೆಗೆ ಕಾರಣವಾಗಿದ್ದ ಪ್ರಶ್ನೆಗಳು ಮತ್ತೆ ಜನಗಣತಿಯಲ್ಲಿ-ವರದಿ

ಶೀಘ್ರದಲ್ಲೇ ಪ್ರಾರಂಭವಾಗಲಿರುವ ಜನಗಣತಿಯ ಜನಸಂಖ್ಯಾ ಎಣಿಕೆ ಹಂತವು, 2011ರ ಜನಗಣತಿಗೆ ಹೋಲಿಸಿದರೆ 14 ಹೊಸ ಅಥವಾ ಮಾರ್ಪಡಿಸಿದ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಈ ಪೈಕಿ ಹಲವು ಪ್ರಶ್ನೆಗಳು 2020ರಲ್ಲಿ ಅಧಿಸೂಚನೆ ಹೊರಡಿಸಲಾಗಿದ್ದ ರಾಷ್ಟ್ರೀಯ ಜನಸಂಖ್ಯಾ ನೋಂದಣಿ...

ಹಿಂಗೋಲಿ ಶಾಲೆಯಲ್ಲಿ ಪ್ರಾಂಶುಪಾಲರ ಮದ್ಯಪಾನ, ಶಿಕ್ಷಕರ ಅಭಾವ: ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆಯ ಎಚ್ಚರಿಕೆ ನೀಡಿದ ಅಭಿಜೀತ್ ದೀಪ್ಕೆ

ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಲಿಂಬಾಲಾ ಗ್ರಾಮದ ಸರ್ಕಾರಿ ಶಾಲೆಯೊಂದರಲ್ಲಿ ಶೈಕ್ಷಣಿಕ ವಾತಾವರಣ ಸಂಪೂರ್ಣವಾಗಿ ಕುಸಿದಿದ್ದು, ಶಾಲಾ ಪ್ರಾಂಶುಪಾಲರ ಹೊಣೆಗೇಡಿತನ ಮತ್ತು ಆಡಳಿತ ಮಂಡಳಿಯ ನಿರ್ಲಕ್ಷ್ಯದ ವಿರುದ್ಧ ಗ್ರಾಮಸ್ಥರ ಆಕ್ರೋಶ ಮುಗಿಲುಮುಟ್ಟಿದೆ. ಶಾಲೆಯ ಪ್ರಾಂಶುಪಾಲರು...

ರಾಜ್ಯಗಳಿಗೆ ನೀಡುವ ವಿಪತ್ತು ಪರಿಹಾರದಲ್ಲೂ ಕೇಂದ್ರದಿಂದ ವಂಚನೆ? CAG ವರದಿ

ದೇಶಾದ್ಯಂತ ನೆರೆ, ಬರ, ಭೂಕುಸಿತದಂತಹ ಭೀಕರ ಪ್ರಕೃತಿ ವಿಕೋಪಗಳಿಂದ ಕಂಗಾಲಾಗಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಸಿಗಬೇಕಾದ ವಿಪತ್ತು ಪರಿಹಾರ ಅನುದಾನದಲ್ಲಿ ಭಾರಿ ಪ್ರಮಾಣದ ಕಡಿತವಾಗುತ್ತಿರುವುದು ಈಗ ನಿರೂಪಿತವಾಗಿದೆ. ರಾಷ್ಟ್ರೀಯ ವಿಪತ್ತು ಸ್ಪಂದನಾ ನಿಧಿ...

EFLU ವಿದ್ಯಾರ್ಥಿ ಸಂಘದ ಮುಖಂಡರು, NSUI ಸದಸ್ಯರ ಮೇಲೆ ರಾಡ್ ಮತ್ತು ಬಿಯರ್ ಬಾಟಲಿಗಳಿಂದ ಹಲ್ಲೆ; ABVP ಸದಸ್ಯರ ವಿರುದ್ಧ ಪ್ರಕರಣ ದಾಖಲು

ಹೈದರಾಬಾದ್‌ನ ಪ್ರತಿಷ್ಠಿತ ಇಂಗ್ಲಿಷ್ ಮತ್ತು ವಿದೇಶಿ ಭಾಷಾ ವಿಶ್ವವಿದ್ಯಾಲಯ (ಇಎಫ್‌ಎಲ್‌ಯು - EFLU) ಕ್ಯಾಂಪಸ್‌ನಲ್ಲಿ ಭೀಕರ ಹಿಂಸಾಚಾರ ಸಂಭವಿಸಿದ್ದು, ವಿದ್ಯಾರ್ಥಿ ಸಂಘದ ಮುಖಂಡರು ಹಾಗೂ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (NSUI) ಸದಸ್ಯರ ಮೇಲೆ...

NALSAR ವಿವಾದ : ಕಾನೂನು ವಿದ್ಯಾರ್ಥಿಗಳಲ್ಲಿ ಕ್ಷಮೆಯಾಚಿಸಿದ ಬಿಸಿಐ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ

ನಲ್ಸಾರ್ (NALSAR) ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ವಿರುದ್ಧ ಹೊರಡಿಸಿದ್ದ ನಿರ್ದೇಶನಗಳ ಕುರಿತು ತೀವ್ರ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ, ಬಾರ್ ಕೌನ್ಸಿಲ್ ಆಫ್ ಇಂಡಿಯಾ (ಬಿಸಿಥ) ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಕ್ಷಮೆಯಾಚಿಸಿದ್ದಾರೆ. ಹೈದರಾಬಾದ್‌ನ ನಲ್ಸಾರ್...

ವಿಮಲ್ ‘ಏಲೈಚಿ’ ಜಾಹೀರಾತು ವಿವಾದ: ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್‌ಗೆ ಮಹಾರಾಷ್ಟ್ರ ಎಫ್‌ಡಿಎ ಶೋಕಾಸ್ ನೋಟಿಸ್

ಬಾಲಿವುಡ್‌ನ ಖ್ಯಾತ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರುಗಳು ಇದೀಗ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. 'ವಿಮಲ್ ಏಲೈಚಿ' ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ...

ಹನೂರು ಶೂಟೌಟ್ ಪ್ರಕರಣ: ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಎಫ್‌ಐಆರ್‌ ದಾಖಲು

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಶಾಗ್ಯ ಗ್ರಾಮ ಪಂಚಾಯತ್ ವಾಪ್ತಿಯ ಅರಣ್ಯ ಪ್ರದೇಶದಲ್ಲಿ ಮೂವರು ಗುಂಡೇಟಿಗೆ ಬಲಿಯಾದ ಪ್ರಕರಣ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಎಫ್​​​​ಐಆರ್ ದಾಖಲಾಗಿದೆ. ಅರಣ್ಯ ಸಿಬ್ಬಂದಿಯ ಗುಂಡೇಟಿಗೆ ಹನೂರು...