Homeಮುಖಪುಟ3 ದಶಕದಿಂದ ಗುಹೆಯಲ್ಲಿ ವಾಸಿಸುತ್ತಿರುವ ಕುಟುಂಬಕ್ಕೊಂದು ಸೂರು ಕೊಡಿ..

3 ದಶಕದಿಂದ ಗುಹೆಯಲ್ಲಿ ವಾಸಿಸುತ್ತಿರುವ ಕುಟುಂಬಕ್ಕೊಂದು ಸೂರು ಕೊಡಿ..

- Advertisement -
- Advertisement -

ಮನೆಯಿಲ್ಲದ ಬಹುತೇಕ ಕುಟುಂಬಗಳು ಮರದ ಕೆಳಗೆ, ಬಯಲಲ್ಲಿ ಜೋಪಡಿ ಹಾಕಿಕೊಂಡು ಜೀವನ ನಡೆಸುವುದು ಸಾಮಾನ್ಯ ಸಂಗತಿ. ಮೋರಿ ಮತ್ತ ಚರಂಡಿ ಬಳಿ ವಾಸಿಸುವುದೂ ಉಂಟು. ಸ್ಲಂಗಳಲ್ಲಿ ಅರೆಬರೆ ಸೌಲಭ್ಯ ಪಡೆದು ವಾಸ ಮಾಡುವುದನ್ನೂ ನೋಡಿದ್ದೇವೆ. ಹಂದಿಗೂಡಿನಲ್ಲೂ ಇರುವ ಉದಾಹರಣೆಗಳಿವೆ. ಪೆಟ್ಟಿಗೆ ಅಂಗಡಿಯಲ್ಲಿ ಬದುಕು ದೂಡಿದವರೂ ಇದ್ದಾರೆ. ಅಂದರೆ ಮನೆ-ಭೂಮಿ ಇಲ್ಲದವರ ಪಾಡು ಇದು. ಇದೆಲ್ಲವಕ್ಕೂ ಭಿನ್ನ ಎಂದರೆ ಆದಿಮಾನವನಂತೆ ಆಧುನಿಕ ಯುಗದಲ್ಲೂ ಗುಹೆಯೊಳಗೆ ಕುಟುಂಬ ವಾಸಿಸುತ್ತಿರುವುದು ನೋಡಿದ್ದೀರಾ! ಅದೂ 35 ವರ್ಷಗಳಿಂದ… ಅದು ಈಗಲೂ ಕೂಡ. ಹೌದು, ಇದು ಸೂರ್ಯನಷ್ಟೇ ಸತ್ಯ.

ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಕಂಭತ್ತಹಳ್ಳಿಯ ಬೆಟ್ಟದ ಗುಹೆಯಲ್ಲಿ ಈ ಕುಟುಂಬ ಈಗಲೂ ವಾಸಿಸುತ್ತಿದೆ. ಕಳೆದ ಮೂರು ತಿಂಗಳಿಂದ ಬೆಟ್ಟದ ಗುಹೆಯಲ್ಲೊಂದು ಕುಟುಂಬ ವಾಸಿಸುತ್ತಿದೆ. ಆ ಕುಟುಂಬ ಅಕ್ಷರಶಃ ಆದಿಮಾನವನಂತಹ ಸ್ಥಿತಿಯಲ್ಲಿ ಬದುಕುತ್ತಿದೆ ಎಂಬ ಮನವಿ ಸಲ್ಲಿಸಿದರೂ ಹಿಂದೆ ಇದ್ದ ತಹಶೀಲ್ದಾರ ನಂದೀಶ್ ಕಿವಿಗೆ ಹಾಕಿಕೊಳ್ಳಲಿಲ್ಲ. ಈ ವಿಷಯಕ್ಕೂ ತಮಗೆ ಯಾವುದೇ ಸಂಬಂಧವಿಲ್ಲ ಎಂದು ಸಂಪೂರ್ಣವಾಗಿ ನಿರ್ಲಕ್ಷಿಸಿಬಿಟ್ಟರು. ಆಗ ಕೆಲ ಮಾಧ್ಯಮಗಳು ವಸ್ತುಸ್ಥಿತಿಯ ಬಗ್ಗೆ ಬೆಳಕು ಚೆಲ್ಲಿದವು. ಇದರಿಂದ ಎಚ್ಚೆತ್ತುಕೊಂಡ ಮಧುಗಿರಿ ತಾಲೂಕಿನ ಈಗಿನ ಆಡಳಿತ ವಸತಿ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದೆ.


ಇದನ್ನೂ ಓದಿ: ನಿವೇಶನವಿಲ್ಲದೇ 30 ವರ್ಷದಿಂದ ಗುಹೆಯಲ್ಲಿಯೇ ವಾಸಿಸುತ್ತಿರುವ ಕುಟುಂಬ: ಮಧುಗಿರಿಯಲ್ಲೊಂದು ಅಮಾನವೀಯ ಪ್ರಕರಣ ಬೆಳಕಿಗೆ


ನಾಗಮ್ಮ-ತಿಮ್ಮಪ್ಪ ಮೂಲತಃ ಮಧುಗಿರಿ ತಾಲೂಕು ಮಿಡಿಗೇಶಿ ಹೋಬಳಿಯ ಜಿ.ಡಿ.ಪಾಳ್ಯದವರು. ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಬೇರೆಯವರ ಮನೆಯಲ್ಲಿ ಜೀತಕ್ಕಿದ್ದವರು. ಬೇರೆಯವರ ಮನೆಯಲ್ಲಿ ಎಷ್ಟು ದಿನ ಜೀತ ಮಾಡುವುದೆಂದು ಮತ್ತು ಜೀವನ ನಿರ್ವಹಣೆ ಕಷ್ಟ ಎಂದು ತಿಳಿದಾಗ ಬದುಕು ಅರಸಿ ಬಂದಿದ್ದು ಅದೇ ತಾಲೂಕಿನ ಕಂಭತ್ತನಹಳ್ಳಿಯ ಸಮೀಪದ ಗುಡ್ಡದ ಗುಹೆಗೆ. ಆಗ ಐದು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಕಟ್ಟಿಕೊಂಡು ಅಡವಿಯ ಗುಹೆಯೊಳಗೆ ವಾಸಿಸುತ್ತಾ ಬಂದರು. ಮಕ್ಕಳು ಕೂಡ ಬೆಳೆದು ದೊಡ್ಡವರಾಗಿದ್ದು ಕೂಡ ಇಲ್ಲಿಯೇ.

ನಾಗಮ್ಮ-ತಿಮ್ಮಪ್ಪ ದಂಪತಿ ಕೂಲಿ ನಾಲಿ ಮಾಡಿಕೊಂಡು ಬೇರೆಯವರ ಜಮೀನನ್ನು ಗುತ್ತಿಗೆ ಪಡೆದು ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡರು. ಕ್ಲಿಷ್ಟಕರ ಸ್ಥಿತಿ ಬಂದರೂ ಹೆದರದೆ ಕಷ್ಟಕ್ಕೆ ಎದೆಯೊಡ್ಡಿ ನಿಂತು ಬಂದ ಸವಾಲುಗಳನ್ನು ಧೈರ್ಯದಿಂದ ಏಕಾಂಗಿಯಾಗಿಯೇ ಎದುರಿಸಿದರು. ಒಂದು ಹಂತದಲ್ಲಿ ಇಬ್ಬರು ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಟ್ಟರು. ಆದರೆ ಇದ್ದ ಐದು ಗಂಡು ಮಕ್ಕಳಿಗೂ ಮದುವೆಯಾಗಿಲ್ಲ. ಹೆಣ್ಣು ಕೇಳಲು ಹೋದರೆ ಹೊಲ ಇಲ್ಲ-ಮನೆ ಇಲ್ಲ, ನಿಮ್ಮಂಥವರ ಮಕ್ಕಳಿಗೆ ಹೆಣ್ಣು ಕೊಡುವುದು ಹೇಗೆ? ಎಂಬ ಮಾತುಗಳು ಹೀನಾಯವಾಗಿ ಮುಖಕ್ಕೆ ಹೊಡೆದಂತೆ ಕೇಳಿಬರುತ್ತಿವೆ. ಇಂತಹ ಹಲವು ರೀತಿಯ ನೋವುಗಳನ್ನೇ ಉಂಡು ನೋವಿನಲ್ಲಿ ಬದುಕುತ್ತಿರುವ ಕುಟುಂಬ ಇದು. ಇಂದಿಗೂ ಐದು ಗಂಡು ಮಕ್ಕಳಿಗೆ ಮದುವೆಯಾಗಿಲ್ಲ. ಮೂವರು ವಲಸೆ ಹೋಗಿದ್ದಾರೆ. ಇಬ್ಬರು ಗಂಡು ಮಕ್ಕಳು ತಂದೆ-ತಾಯಿ ಜೊತೆಯಲ್ಲೇ ಇದ್ದಾರೆ.

ಈ ಕುಟುಂಬಕ್ಕೆ 1990ರಲ್ಲಿ ನಿವೇಶನದ ಹಕ್ಕುಪತ್ರ ನೀಡಿದರು. ಆದರೆ ಜಾಗ ಯಾವುದು ಎಂಬುದನ್ನು ನಾಗಮ್ಮ-ತಿಮ್ಮಪ್ಪ ಕುಟುಂಬಕ್ಕೆ ತೋರಿಸಿಯೇ ಇರಲಿಲ್ಲ. ಆದರೂ ಎದೆಗುಂದದೆ ಕಾಲ ದೂಡುತ್ತ ಬಂದರು. ಕಳೆದ ಮೂರು ತಿಂಗಳಿಂದ ಮಾಧ್ಯಮಗಳು ಪ್ರಕರಣದ ಬಗ್ಗೆ ಅಧಿಕಾರಿಗಳ ಗಮನ ಸೆಳೆಯುವಂತಹ ಕೆಲಸ ಮಾಡಿದಾಗ ಲೋಕಾಯುಕ್ತ  ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಆ ಕುಟುಂಬಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ತಾಲೂಕು ಆಡಳಿತಕ್ಕೆ ಸೂಚನೆ ನೀಡಿತು. ಇದರ ನಡುವೆ ಸಾಮಾಜಿಕ ಹೋರಾಟಗಾರ ಹಂದ್ರಾಳ್ ನಾಗಭೂಷಣ್ ಮತ್ತು ವಿ.ವಿ.ಸಾಗರ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಕಸವರಹಳ್ಳಿ ರಮೇಶ್ ಆ ಕುಟುಂಬದ ಬೆಂಬಲಕ್ಕೆ ನಿಂತರು. ಹಲವು ಸುತ್ತಿನ ಮಾತುಕತೆ ನಡೆಸಿದರು.ತಾಲೂಕು ಆಡಳಿತದ ಗಮನವನ್ನೂ ಸೆಳೆದರು. ಅದರ ಫಲವಾಗಿ ತಹಶೀಲ್ದಾರ್ ರಿಂದ ಮನೆಯ ಭರವಸೆ ಸಿಕ್ಕಿದೆ.

ದೂರವಾಣಿಯಲ್ಲಿ ನಾನುಗೌರಿ.ಕಾಂ ಜೊತೆ ಮಾತನಾಡಿದ ಸಾಮಾಜಿಕ ಹೋರಾಟಗಾರ ನಾಗಭೂಷಣ್, ತಹಶೀಲ್ದಾರ್ ಗುಹೆಗೆ ಭೇಟಿ ಮನೆ ನೀಡುವ ಭರವಸೆ ನೀಡಿದ್ದಾರೆ. ಕಂಭತ್ತನಹಳ್ಳಿ ಗ್ರಾಮದ ಸರ್ವೇ ನಂಬರ್ 56ರಲ್ಲಿ 3 ಎಕರೆ 12 ಗುಂಟೆ ಜಾಗದಲ್ಲಿ ಇರಲು ಅವಕಾಶ ಕಲ್ಪಿಸಲಾಗಿದೆ. ಆದರೆ ಈಗಾಗಲೇ ಅಲ್ಲಿ ವಾಸ ಇರುವವರು ಅಲ್ಲಿಗೆ ಇವರನ್ನು ಬಿಟ್ಟುಕೊಳ್ಳುತ್ತಿಲ್ಲ. ಈ ಕುಟುಂಬ ಹೈನುಗಾರಿಕೆ, ಜಮೀನು ಗುತ್ತಿಗೆ ಮಾಡಿ ಸ್ವಾವಲಂಬಿ ಜೀವನ ನಡೆಸುತ್ತಿದೆ. ಮನೆಯೂ ಇಲ್ಲದ, ಭೂಮಿಯೂ ಇಲ್ಲದ ಗುಹೆಯಲ್ಲಿ ವಾಸಿಸುತ್ತಿರುವ ಈ ಕುಟುಂಬಕ್ಕೆ ಸೂರೊಂದು ಮಾಡಿಕೊಟ್ಟರೆ ಹೆಚ್ಚಿನ ಅನುಕೂಲವಾಗುತ್ತದೆ. ತಹಶೀಲ್ದಾರ್ ಮಾತಿಗೂ ಬೆಲೆ ಕೊಡುತ್ತೇವೆ. ವಸತಿ ವ್ಯವಸ್ಥೆ ಕಲ್ಪಿಸದಿದ್ದರೆ ಹೋರಾಟ ರೂಪಿಸಲಾಗುವುದು ಎಂದು ತಿಳಿಸಿದರು.

ಕಳೆದ 35 ವರ್ಷಗಳಲ್ಲಿ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ, ಇತರೆ ಇಲಾಖೆಗಳ ಸಚಿವರಾಗಿ ಕೆಲಸ ಮಾಡಿದವರು ಹಲವರು. ಅವರ್ಯಾರ ಕಣ್ಣಿಗೂ ಈ ಕುಟುಂಬ ಬೀಳಲೇ ಇಲ್ಲ. ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಶಿರಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಟಿ.ಬಿ.ಜಯಚಂದ್ರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಮಧುಗಿರಿಯಿಂದ ಆಯ್ಕೆಯಾಗಿದ್ದ ಡಾ.ಜಿ.ಪರಮೇಶ್ವರ್ ರೇಷ್ಮೆ ನಂತರ ಉನ್ನತ ಶಿಕ್ಷಣ ಸಚಿವರಾಗಿ, ಜಿಲ್ಲಾ ಉಸ್ತುವಾರಿ ಸಚಿವರಾದರು. ಎಚ್.ಡಿ.ಕುಮಾರಸ್ವಾಮಿ ಸರ್ಕಾರದಲ್ಲಿ ಚನ್ನಿಗಪ್ಪ, ಯಡಿಯೂರಪ್ಪ ಸಿಎಂ ಆದ ಸಂದರ್ಭದಲ್ಲಿ ಎಸ್.ಸುರೇಶ್ ಕುಮಾರ್ ಹೀಗೆ ಹಲವು ಮಂದಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಿದರೂ ಈ ಕುಟುಂಬ ಕಣ್ಣಿಗೆ ಬೀಳಲೇ ಇರುವುದು ದರುಂತವಾಗಿದೆ.

ಮಧುಗಿರಿ ತಾಲೂಕು ಪ್ರತಿನಿಧಿಸಿದ್ದ ಡಾ.ಜಿ.ಪರಮೇಶ್ವರ್ ತಮ್ಮ ಕ್ಷೇತ್ರದಲ್ಲೇ ಇಂತಹದ್ದೊಂದು ಕುಟುಂಬ ಇದ್ದರೂ ಗಮನಹರಿಸಿಲ್ಲ. ಇದುವರೆಗೆ ಮಧುಗಿರಿ ಕ್ಷೇತ್ರದಲ್ಲಿ ಆಯ್ಕೆಯಾದ ಶಾಸಕರೂ ಇತ್ತ ತಿರುಗಿಯೂ ನೋಡಿಲ್ಲ. ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗುತ್ತಿದ್ದರೂ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ನಿರ್ದಯವಾಗಿ ನಡೆದುಕೊಂಡಿದೆ. ಏಕೆಂದರೆ 35 ವರ್ಷಗಳು ಗುಹೆಯಲ್ಲೇ ಜೀವನ ದೂಡಬೇಕಾಗಿ ಬಂದಿದೆ ಎಂದರೆ ಬಡವರ, ನಿರ್ಗತಿಕರ ನೋವನ್ನು ಕೇಳುವವರೇ ಇಲ್ಲವೇ? ಪ್ರತಿಕ್ಷೇತ್ರಕ್ಕೂ ನೂರಾರು ಮನೆಗಳು ಬರುತ್ತವೆ. ಭೂಮಿ ನಿವೇಶನ ಇಲ್ಲದ ಇಂಥ ಕುಟುಂಬಕ್ಕೆ ಒಂದು ಮನೆಯನ್ನು ಕಟ್ಟಿಸಿಕೊಡಬೇಕೆಂಬ ಮನಸ್ಸು ಯಾರಿಗೂ ಬರಲಿಲ್ಲವೇ? ಸರ್ಕಾರದ ಸೌಲಭ್ಯಗಳು ಯಾವುದೂ ಇಲ್ಲದೆ ಬದುಕುತ್ತಿರುವ ಈ ಕುಟುಂಬಕ್ಕೆ ನಾಗರಿಕ ಸಮಾಜ ಮತ್ತು ನಾಗರಿಕ ಆಡಳಿತ ಕೂಡಲೇ ಸ್ಪಂದಿಸಬೇಕಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...