ನೂತನವಾಗಿ ಆಯ್ಕೆಯಾಗಿರುವ ಆಮ್ ಆದ್ಮಿ ಪಕ್ಷದ ಶಾಸಕ ನರೇಶ್ ಯಾದವ್ ಮೇಲೆ ಗುಂಡು ಹಾರಿಸಿ, ಆಪ್ ಕಾರ್ಯಕರ್ತನ ಹತ್ಯೆಗೆ ಕಾರಣವಾಗಿದ್ದ ಪ್ರಮುಖ ಆರೋಪಿ ಧರ್ಮವೀರ್ ಅಲಿಯಾಸ್ ಕಾಳ ಎಂಬುವನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಧರ್ಮವೀರ್ ನಿಂದ ಒಂದು ನಾಡ ಪಿಸ್ತೂಲ್, ಎರಡು ಜೀವಂತ ಗುಂಡುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗುಂಡು ಹಾರಿಸಿದ ಪ್ರಕರಣದಲ್ಲಿ ರಾಜಕೀಯದ ಹಿನ್ನೆಲೆಯನ್ನು ಪೊಲೀಸರು ತಳ್ಳಿಹಾಕಿದ್ದಾರೆ.
ಇತ್ತೀಚೆಗೆ ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ನರೇಶ್ ಯಾದವ್ ಆಯ್ಕೆಯಾಗಿದ್ದರು. ಆನಂತರ ನೈರುತ್ಯ ದೆಹಲಿಯ ದೇವಾಲಯಕ್ಕೆ ಭೇಟಿ ಪೂಜೆ ಸಲ್ಲಿಸಿದ್ದರು. ಅಲ್ಲಿಂದ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ನರೇಶ್ ಯಾದವ್ ಮೇಲೆ ಆರೋಪಿ ಗುಂಡು ಹಾರಿಸಿ ಪರಾರಿಯಾಗಿದ್ದ. ಗುಂಡು ಹಾರಿಸಿದ್ದರಿಂದ ಆಪ್ ಕಾರ್ಯಕರ್ತನೊಬ್ಬ ಮೃತಪಟ್ಟಿದ್ದ.
ಈ ಹಿನ್ನೆಲೆಯಲ್ಲಿ ಆರೋಪಿ ಪತ್ತೆಗಾಗಿ ಬಲೆಬೀಸಿದ್ದ ದೆಹಲಿ ಪೊಲೀಸರು ಧರ್ಮವೀರ್ ನನ್ನು ಬಂಧಿಸಿದ್ದು ವಿಚಾರಣೆ ಮುಂದುವರಿಸಿದ್ದಾರೆ. ಪ್ರಕರಣ ಮತ್ತಿಬ್ಬರು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ದಿ ವೈರ್ ವರದಿ ಮಾಡಿದೆ.
ನೈರುತ್ಯ ದೆಹಲಿಯ ಡಿಸಿಪಿ ಇಂಗಿಟ್ ಪ್ರತಾಪ್ ಸಿಂಗ್ ಫೋರ್ಟೀಸ್ ಆಸ್ಪತ್ರೆ ಸಮೀಪದ ಅರುಣ ಆಸಿಸ್ ಅಲಿ ರಸ್ತೆಯಲ್ಲಿ ದಾಳಿ ನಡೆದಿತ್ತು. ಆರೋಪಿ ಧರ್ಮವೀರ್ ಮತ್ತು ಇತರ ಇಬ್ಬರ ನಡುವೆ ವೈಯಕ್ತಿಕ ವಿವಾದವಿತ್ತು. ಕಳೆದ ಹಲವು ದಿನಗಳ ಹಿಂದೆ ಈ ಗುಂಪಿನ ನಡುವೆ ಸಣ್ಣ ಜಗಳವೂ ನಡೆದಿತ್ತು. ವ್ಯವಹಾರದ ಹಿನ್ನೆಲೆಯಲ್ಲಿ ಈ ಜಗಳ ನಡೆದಿತ್ತು ಎಂದು ಹೇಳಿದ್ದಾರೆ.
ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುವ ಮೊದಲೇ ಕಾನೂನು ಸುವ್ಯವಸ್ಥೆ ಪ್ರಶ್ನೆ ಎದುರಾಗಿದೆ. ಈ ನಡುವೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಜನರ ಮತ್ತು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಆಪ್ ನಾಯಕ ಮನೀಶ್ ಸಿಸೋಡಿಯ ತಿಳಿಸಿದ್ದಾರೆ.