Homeಕರ್ನಾಟಕಶೀಘ್ರದಲ್ಲೇ ಗಂಗಾಮತಸ್ತ ಸಮುದಾಯ ಎಸ್‌ಟಿಗೆ ಸೇರ್ಪಡೆ: ಸಿಎಂ ಹೇಳಿಕೆ

ಶೀಘ್ರದಲ್ಲೇ ಗಂಗಾಮತಸ್ತ ಸಮುದಾಯ ಎಸ್‌ಟಿಗೆ ಸೇರ್ಪಡೆ: ಸಿಎಂ ಹೇಳಿಕೆ

- Advertisement -
- Advertisement -

ಹಾವೇರಿ: ಶೀಘ್ರಲ್ಲಿಯೇ ಗಂಗಾಮತಸ್ತ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ವತಿಯಿಂದ ಸುಕ್ಷೇತ್ರ ನರಸೀಪುರದ ಗುರುಪೀಠದಲ್ಲಿ ಆಯೋಜಿಸಿರುವ ನಿಜಶರಣ ಅಂಬಿಗರಚೌಡಯ್ಯನವರ 5ನೇ ಶರಣ ಸಂಸ್ಕೃತಿ ಉತ್ಸವ, ಅಂಬಿಗರ ಚೌಡಯ್ಯನವರ 903ನೇ ಜಯಂತ್ಯುತ್ಸವ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ್ದಾರೆ.

ಈಗಾಗಲೇ ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ ಬಳಿ ಎಸ್.ಟಿ.ಗೆ ಸೇರಿಸುವ ಕಡತವಿದ್ದು, ಕೇಂದ್ರ ಬುಡಕಟ್ಟು ಸಚಿವ ಅರ್ಜುನ್ ಮುಂಡ ಅವರನ್ನು ಭೇಟಿಯಾಗಿ ಚರ್ಚಿಸಿದ್ದು, ಅಂತಿಮ ಘಟ್ಟದಲ್ಲಿದೆ. ಸಚಿವ ಸಂಪುಟದಲ್ಲಿ ಅನುಮೋದಿಸಲಾಗುವುದು. ಅವರು ಕೇಳಿದ್ದ ಕೆಲವು ವಿವರಣೆಗಳನ್ನು ಕಳುಹಿಸಿಕೊಡಲಾಗಿದೆ. ಮಾತು ಕೊಟ್ಟಿದ್ದಂತೆ ಕೆಲಸ ಪ್ರಗತಿಯಲ್ಲಿದೆ. ಆದಷ್ಟು ಬೇಗನೆ ಅನುಮೋದನೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಒಗ್ಗಟ್ಟಿನಲ್ಲಿ ಬಲವಿದೆ. ಈ ಮಠದ ಬೆಳವಣಿಗೆ ಈ ಕುಲದ ಬೆಳವಣಿಗೆಯೊಂದಿಗೆ ಸೇರಿದೆ. ಈ ಮಠದಿಂದ ಸ್ಫೂರ್ತಿ ಪಡೆಯಬೇಕಿದ್ದು, ಇದಕ್ಕೆ ಶಕ್ತಿ ತುಂಬುವ ಕೆಲಸವನ್ನು ಮಾಡುತ್ತೇವೆ. ಗುರುಕುಲ ನಿರ್ಮಾಣವಾಗುತ್ತಿದ್ದು, ಮಠಕ್ಕೆ 5 ಕೋಟಿ ರೂ.ಗಳನ್ನು ಈಗಾಗಲೇ ಬಿಡುಗಡೆ ಮಾಡಿದೆ. 15 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಹಿಂದುಳಿದ ಮಠಗಳಿಗೆ ಅನುದಾನ ಬಿಡುಗಡೆ ಮಾಡಿದಾಗಲೂ 2 ಕೋಟಿ ರೂ.ಗಳ ಮಂಜೂರಾತಿ ಆಗಿದೆ. ಅದನ್ನೂ ಕೂಡ ಬೇಗ ಬಿಡುಗಡೆ ಮಾಡಲಾಗುವುದು.ಇಲ್ಲಿನ ಮಠ ಹಾಗೂ ವಿದ್ಯಾರ್ಥಿ ನಿಲಯವಾಗಬೇಕು, ಜ್ಞಾನಾರ್ಜನೆ ಅನ್ನದಾಸೋಹವಾಗಬೇಕು. ಇದು ನಮ್ಮ ಶರಣರ ಪರಂಪರೆ ನಿತ್ಯ ನಿರಂತರವಾಗಿ ಮಠದಿಂದ ಆಗಬೇಕು ಎಂದು ಆಶಿಸಿದ್ದಾರೆ.

ಈ ಸಮಾಜ ಬೇರೆ ವೃತ್ತಿಗಳನ್ನು ಮಾಡುತ್ತಿದೆ. ಒಳನಾಡು ಮೀನುಗಾರಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಮಾಡುತ್ತಿದೆ. ಕಾಲ ಬದಲಾಗಿದ್ದು, ನಾವೆಲ್ಲರೂ ಜ್ಞಾನಾರ್ಜನೆ ಮಾಡಿದಾಗ ಸಮಕಾಲೀನ ಸವಾಲುಗಳನ್ನು ಎದುರಿಸಬಹುದು. ಇತರೆ ವೃತ್ತಿಗಳನ್ನು ಮಾಡಿದಾಗ ಈ ಗಂಗಾಮತಸ್ತ ಕುಲ ಮುಂದುವರೆಯುತ್ತದೆ. ಮಕ್ಕಳಿಗೆ ವಿದ್ಯಾಭ್ಯಾಸ ಎಷ್ಟೇ ಕಷ್ಟವಿದ್ದರೂ ಓದಿಸಬೇಕು. ನಾವು ಗಂಗಾಮತಸ್ತ ಗುರುಗಳ ಭಕ್ತನಾಗಿ ಇಲ್ಲಿಗೆ ಬಂದಿದ್ದೇನೆ. ಸಮುದಾಯ ಭವನಕ್ಕೆ ಬರುವ ಬಜೆಟ್‌ನಲ್ಲಿ ಮೀಸಲಿಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ಅಂಬಿಗರ ಚೌಡಯ್ಯ ಕಟುಸತ್ಯವನ್ನು ನುಡಿಯುವ ಶರಣರು. ಪ್ರಿಯವಾದ ಸತ್ಯ ಮತ್ತು ಸುಳ್ಳುಗಳಿರುವ ವ್ಯಾಖ್ಯಾನಗಳಿವೆ. ಸತ್ಯವೆಂದರೆ ಕಠೋರ. ಅಂಬಿಗರ ಚೌಡಯ್ಯ ಸತ್ಯವನ್ನು ಕಠಿಣ ಶಬ್ಧಗಳಲ್ಲಿ ಹೇಳುವಂತಹವರು. ಬಸವಣ್ಣನವರು ಇವರನ್ನು ನಿಜಶರಣೆರೆಂದು ಕರೆದರು. ಕಲ್ಯಾಣದಲ್ಲಿ ವೈಚಾರಿಕ ಕ್ರಾಂತಿಯಾಗುತ್ತದೆ ಎಂದು ನುಡಿದಿದ್ದರು. ಆಗ ವಚನಗಳ ರಕ್ಷಣೆ ಮುಖ್ಯವಾಗುತ್ತದೆ ಎಂದು ಹೇಳಿದ್ದು ನಿಜವಾಗಿದ್ದದಕ್ಕೆ ಅಂಬಿಗರ ಚೌಡಯ್ಯರನ್ನು ನಿಜಶರಣರೆಂದು ಕರೆದರು. ವಚನಗಳು ಇಂದಿಗೂ ನಮ್ಮ ನಡುವೆ ಜೀವಂತವಾಗಿರಲು ಏಕೈಕ ಕಾರಣ ಅಂಬಿಗರ ಚೌಡಯ್ಯ ಎಂದು ಬಣ್ಣಿಸಿದರು.

ಇದನ್ನೂ ಓದಿರಿ: ಕರ್ನಾಟಕದಲ್ಲಿ ಯಾವ ಯಾವ ಕೆಟಗರಿಯಲ್ಲಿ ಎಷ್ಟೆಷ್ಟು ಜಾತಿಗಳಿವೆ? ಮೀಸಲಾತಿಯ ಪಾಲೆಷ್ಟಿದೆ? – ಪೂರ್ಣ ವಿವರ ಇಲ್ಲಿದೆ

ಒಂದು ಕುಲ ಅಥವಾ ಸಮಾಜದವರು ತಮ್ಮ ಸಂಸ್ಕಾರ, ಸಂಸ್ಕೃತಿ, ಇತಿಹಾಸ ಪರಂಪರೆಗಳನ್ನು ತಿಳಿದುಕೊಳ್ಳುವುದರಿಂದ ನಮ್ಮ ಭವಿಷ್ಯವನ್ನು ನಿರ್ಮಿಸಿಕೊಳ್ಳಬಹುದು. ಇಂತಹ ಶಿವಶರಣರ ಕುಲಕ್ಕೆ ತಾವುಗಳು ಸೇರಿದ್ದೀರಿ. ಅಂಬಿಗರು ಒಂದೇ ಹುಟ್ಟಿನಲ್ಲಿ ದಡ ಪಾರು ಮಾಡಿಸುವ ಶಕ್ತಿಯುಳ್ಳವರು. ಕೇವಲ ದೋಣಿಗಳನ್ನು ನಡೆಸುವುದು ಕಸುಬಲ್ಲ. ಇಡೀ ಮಾನವಕುಲವನ್ನು ದಡ ಸೇರಿಸುವವರೇ ಅಂಬಿಗ ಚೌಡಯ್ಯ ಎಂದು ಬಣ್ಣಿಸಿದರು.

ತಾಯಿಯ ಆಶೀರ್ವಾದದಲ್ಲಿ ಸಾತ್ವಿಕ ಚಿಂತನೆಯಿದೆ. ಇದೇ ನಮ್ಮನ್ನು ಒಳ್ಳೆಯ ಹಾದಿಯಲ್ಲಿ ನಡೆಸುತ್ತಿದೆ. ಈ ಸಮಾಜ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಮುಂದೆ ಬರಬೇಕು. 21 ನೇ ಶತಮಾನದಲ್ಲಿ ಎಲ್ಲ ಸಮುದಾಯಗಳ ಆಶೋತ್ತರಗಳು ಹೆಚ್ಚಾಗಿದೆ. ತುಳಿತಕ್ಕೊಳಗಾದ ಸಮಾಜದವರು ಶಿಕ್ಷಣ ಪಡೆದು, ವಿವಿಧ ವೃತ್ತಿಯಲ್ಲಿ ದುಡಿದು ಸ್ವಾಭಿಮಾನದ ಬದುಕನ್ನು ಬದುಕುವಂತಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಣಿಪುರ ಹಿಂಸಾಚಾರಕ್ಕೆ ಬಲಿಯಾದವರ ಬಗ್ಗೆ ಮೋದಿ ಸರ್ಕಾರಕ್ಕೆ ಸ್ವಲ್ಪವೂ ಸಹಾನುಭೂತಿ ಇಲ್ಲ: ಮಲ್ಲಿಕಾರ್ಜುನ ಖರ್ಗೆ

0
ಮಣಿಪುರದ ಪರಿಸ್ಥಿತಿಯ ಬಗ್ಗೆ ಮೋದಿ ಸರಕಾರ ನಿರಾಸಕ್ತಿಯನ್ನು ಹೊಂದಿದ್ದು ಮತ್ತು ಪಶ್ಚಾತ್ತಾಪವಿಲ್ಲದಂತೆ ವರ್ತಿಸುತ್ತಿದೆ ಎಂದು ಕಾಂಗ್ರೆಸ್ ಶುಕ್ರವಾರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ನಡೆಸಿದೆ. ಈ ಕುರಿತು ಎಕ್ಸ್‌ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...