Homeಮುಖಪುಟ‘ಮೂಕನಾಯಕ - 100’ : ತಮ್ಮ ಪತ್ರಿಕೆಗೆ ಬಾಬಾ ಸಾಹೇಬರು ಬರೆದ ಮೊದಲ ಸಂಪಾದಕೀಯ..

‘ಮೂಕನಾಯಕ – 100’ : ತಮ್ಮ ಪತ್ರಿಕೆಗೆ ಬಾಬಾ ಸಾಹೇಬರು ಬರೆದ ಮೊದಲ ಸಂಪಾದಕೀಯ..

1920ರಲ್ಲಿ ತಮ್ಮ ಮೊದಲ ಪತ್ರಿಕಾ ಪ್ರಯೋಗವಾಗಿ ಅಂಬೇಡ್ಕರ್‌ ಅವರು ಆರಂಭಿಸಿದ್ದ ’ಮೂಕನಾಯಕ’ ಪತ್ರಿಕೆಗೆ ಇಲ್ಲಿಗೆ ನೂರು ವರ್ಷ ತುಂಬಿದೆ. ಆ ನೆನಪಿನಲ್ಲಿ...

- Advertisement -
- Advertisement -

ಡಾ ಅಂಬೇಡ್ಕರ್ ಅವರು 100 ವರ್ಷಗಳ ಹಿಂದೆ ಆರಂಭಿಸಿದ್ದ ‘ಮೂಕನಾಯಕ’ ಮರಾಠಿ ಪತ್ರಿಕೆಯ ಶತಮಾನೋತ್ಸವದ ಸಂದರ್ಭದಲ್ಲಿ, ಅದರ ಉದ್ಘಾಟನಾ ಸಂಚಿಕೆಯಲ್ಲಿ ಡಾ. ಅಂಬೇಡ್ಕರ್ ಅವರು ಬರೆದಿದ್ದ ಲೇಖನದ ಸಂಕ್ಷಿಪ್ತ ಅನುವಾದ ಇಲ್ಲಿದೆ. ಈ ಬರಹದಲ್ಲಿ, ಬಾಬಾಸಾಹೇಬರು ಜಾತಿ ತಾರತಮ್ಯದ ವಿರುದ್ಧ ನೇರವಾಗಿ ದಾಳಿ ನಡೆಸಿದ್ದಾರೆ.

‘ಮೂಕನಾಯಕ’ ವು ಬಾಬಾಸಾಹೇಬ್ ಅಂಬೇಡ್ಕರ್ ಅವರ ಮೊದಲ ಪತ್ರಿಕಾ ಪ್ರಯೋಗ. ಈ ಪಾಕ್ಷಿಕ ಪತ್ರಿಕೆಯನ್ನು ಅವರು ತಮ್ಮ ಮಾರ್ಗದರ್ಶಕರಾದ ಶಾಹೂಜಿ ಮಹಾರಾಜ್ ಅವರ ನೆರವಿನಿಂದ 1920ರಲ್ಲಿ ಆರಂಭಿಸಿದರು. ಇದನ್ನು ಆರಂಭಿಸುವುದರ ಹಿಂದೆ ಅಂಬೇಡ್ಕರ್ ಅವರಿಗಿದ್ದ ಉದ್ದೇಶ, ಈವರೆಗೆ ಮುಖ್ಯವಾಹಿನಿಯ ಹಿಂದಿ ಪತ್ರಿಕೆಗಳಲ್ಲಿ ಸೂಕ್ತ ಪ್ರಾತಿನಿಧ್ಯ ಪಡೆಯದಿದ್ದ ತನ್ನ ಅನಿಸಿಕೆಗಳನ್ನು ಮುಂದಿಡುವುದಾಗಿತ್ತು. ಈ ಅನಿಸಿಕೆಗಳು ಸ್ವರಾಜ್ಯ, ‘ಅಸ್ಪೃಶ್ಯ’ರ ಶಿಕ್ಷಣ, ಅಸ್ಪೃಶ್ಯತೆಯ ಕೇಡು- ಇವೇ ಮೊದಲಾದ ವಿಷಯಗಳಿಗೆ ಸಂಬಂಧಿಸಿದವುಗಳಾಗಿದ್ದವು.

ಮೂಕನಾಯಕ ಪತ್ರಿಕೆ ಮೂರು ವರ್ಷ ಚಾಲ್ತಿಯಲ್ಲಿತ್ತು. ಈ ಬರಹವು, 1920ರ ಜನವರಿ 31ರಂದು ಪ್ರಕಟವಾದ ಮೂಕನಾಯಕದ ಮೊಟ್ಟಮೊದಲ ಸಂಚಿಕೆಯ ಸಂಪಾದಕೀಯದ ಸಂಕ್ಷಿಪ್ತ ಅನುವಾದ.

ನಮ್ಮ ದೇಶವನ್ನು ರೂಪಿಸಿರುವ ಎಲ್ಲ ಅಂಶಗಳ-ಮನುಷ್ಯ ಮೂಲದ್ದು ಮತ್ತು ಮನುಷ್ಯೇತರ ಮೂಲದ್ದು, ಎಲ್ಲದರ-ಒಟ್ಟು ಮೊತ್ತವನ್ನು ಯಾರಾದರೂ ಲೆಕ್ಕ ಹಾಕಿದ್ದೇ ಆದರೆ, ಯಾವುದೇ ಅನುಮಾನಕ್ಕೆಡೆಯಿಲ್ಲದಂತೆ ಕಂಡುಬರುವುದೇನೆಂದರೆ, ಭಾರತದ ರಚನೆಯನ್ನು ರೂಪಿಸುವ ಅನೇಕ ಬಗೆಯ ಅಸಮಾನತೆಗಳಿಂದಲೇ ಅದು ಗುರುತಿಸಲ್ಪಡುತ್ತದೆ ಎಂಬುದು. ಅಂತಹ ಎಲ್ಲ ಅಸಮಾನತೆಗಳಲ್ಲಿ, ಬದುಕಿನ ಭೌತಿಕ ಮಟ್ಟದಲ್ಲೇ ಕಂಡುಬರುವ ತೀವ್ರರೂಪದ ಅಸಮಾನತೆಯು ಅತ್ಯಂತ ನಾಚಿಕೆಗೇಡಿನದ್ದು.

ಭಾರತೀಯರು ಹಲವು ಬಗೆಯ ಭೇಧಗಳಿಂದಾಗಿ ವಿಭಾಗಿಸಲ್ಪಟ್ಟಿದ್ದರೂ, ಧಾರ್ಮಿಕ ಸಹಭಾಗಿತ್ವದ ಕಾರಣಕ್ಕೆ ಉಂಟಾಗುವ ವಿಭಜನೆಯು ಅವುಗಳಲ್ಲೆಲ್ಲ ಅತ್ಯಂತ ಅಪಾಯಕರ ಸ್ವರೂಪದ್ದು. ಇದು ದೈಹಿಕ ಅಥವಾ ಬೌದ್ಧಿಕ ಕಾರಣಗಳಿಂದ ಉಂಟಾಗುವ ಬೇಧಗಳಿಗಿಂತ ಅತಿಹೆಚ್ಚು ಅಪಾಯಕರ. ಅನೇಕ ಸಲ, ಈ ಧಾರ್ಮಿಕ ನೆಲೆಯಿಂದುಂಟಾಗುವ ಬೇಧಗಳು ಎಂತಹ ವಿಪರೀತದ ವರ್ತನೆಯ ಅಭಿವ್ಯಕ್ತಿಯನ್ನು ಕಂಡುಕೊಳ್ಳುತ್ತವೆಂದರೆ, ಅವೇ ರಕ್ತಪಾತದ ಮೂಲಗಳಾಗಿರುತ್ತವೆ. ಹಿಂದೂಗಳು, ಪಾರ್ಸಿಗಳು, ಯಹೂದೀಯರು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು- ಇವರುಗಳ ನಡುವೆ ಹಾಗೂ ಇನ್ನೂ ಅನೇಕ ಧಾರ್ಮಿಕ ಪಂಥಗಳ ನಡುವೆ ಇರುವ ಭಿನ್ನತೆಗಳು ಹಲವು ರೂಪಗಳನ್ನು ಪಡೆದುಕೊಂಡಿವೆ. ಆದರೆ, ಹಿಂದೂಗಳಲ್ಲೇ ಇರುವ ಬೇರೆ ಬೇರೆ ಸ್ತರಗಳನ್ನು ಹತ್ತಿರದಿಂದ ಪರಿಶೀಲಿಸಿದಾಗ ಕಂಡುಬರುವ ಸಂಪೂರ್ಣ ಪ್ರತ್ಯೇಕತೆ ನಿಜಕ್ಕೂ ಖಂಡನೀಯ ಮತ್ತು ನಂಬಲಸಾಧ್ಯ!

ಒಬ್ಬ ಯುರೋಪಿಯನನ್ನು ನೀನು ಯಾರೇಂದು ಪ್ರಶ್ನಿಸಿದರೆ, ತನ್ನ ರಾಷ್ಟ್ರೀಯತೆಯನ್ನು ಗುರುತಿಸಿ ಆತ ನೀಡುವ ಉತ್ತರ-ಇಂಗ್ಲೀಷ್, ಜರ್ಮನ್, ಫ್ರೆಂಚ್ ಅಥವಾ ಇಟಾಲಿಯನ್ ಎಂಬುದು-ಅದು ಯಾವುದೇ ಆಗಿದ್ದರೂ ಸಮಸ್ಯೆಯನ್ನು ಪರಿಹರಿಸಲು ಸಾಕಾಗುತ್ತದೆ. ಇದೇ ಸಂಗತಿಯನ್ನು ಹೀಗೆಯೇ ಹಿಂದೂ ಧರ್ಮದ ಬೇರೆ ಬೇರೆ ಸ್ತರಗಳಿಗೆ ಸೇರಿದ ಜನರ ಬಗ್ಗೆ ಹೇಳಲು ಸಾಧ್ಯವಿಲ್ಲ. ‘ನಾನೊಬ್ಬ ಹಿಂದೂ’ ಎಂಬ ಉತ್ತರದಿಂದ ಯಾರೋಬ್ಬರಿಗೂ ಸಮಾಧಾನ ದೊರೆಯಲಾರದು. ಒಬ್ಬ ಹಿಂದೂ ತನ್ನ ನಿರ್ದಿಷ್ಟ ಗುರುತನ್ನು ಹೇಳಿಕೊಳ್ಳಬೇಕಾದರೆ, ತನ್ನ ಜಾತಿಯನ್ನು ಗುರುತಿಸಿ ಹೇಳುವುದು ಅತ್ಯಗತ್ಯವಾಗಿರುತ್ತದೆ.

ಹಿಂದೂ ಎಂಬ ಈ ಧರ್ಮವನ್ನು ರೂಪಿಸುವ ಜಾತಿಗಳು ಏಣಿಶ್ರೇಣಿಯ ರೂಪದಲ್ಲಿ ಶ್ರೇಣೀಕೃತವಾಗಿ ಜೋಡಿಸಲ್ಪಟ್ಟಿವೆ. ಹಿಂದೂ ಸಮುದಾಯವೆಂಬುದು ಒಂದು ಗೋಪುರ ಇದ್ದಂತೆ-ಅದರಲ್ಲಿ ಪ್ರತಿಯೊಂದು ಜಾತಿಗೂ ಒಂದೊಂದು ಮಹಡಿಯನ್ನು ಕೊಡಲಾಗಿರುತ್ತದೆ. ಇಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕಾದ ಒಂದು ಮುಖ್ಯವಾದ ಅಂಶವೆಂದರೆ, ಈ ಗೋಪುರದ ಒಂದು ಮಹಡಿಯಿಂದ ಮತ್ತೊಂದು ಮಹಡಿಗೆ ಮೆಟ್ಟಿಲುಗಳಿರುವುದಿಲ್ಲ ಅಥವಾ ಏಣಿ ಇರುವುದಿಲ್ಲ, ಆದ್ದರಿಂದ ಒಂದು ಮಹಡಿಯಲ್ಲಿರುವ ಯಾರೂ ಕೂಡಾ ಮೇಲಿನ ಮಹಡಿಗೆ ಹತ್ತುವ ಅಥವಾ ಕೆಳಗಿನ ಮಹಡಿಗೆ ಇಳಿಯುವ ಸಾಧ್ಯತೆ ಇರುವುದಿಲ್ಲ. ಯಾವ ಮಹಡಿಯಲ್ಲಿ ಯಾರು ಹುಟ್ಟಿದ್ದಾರೋ, ಅವರು ಅಲ್ಲಿಯೇ ಸಾಯುತ್ತಾರೆ. ಕೆಳಗಿನ ಮಹಡಿಯಲ್ಲಿ ಹುಟ್ಟಿರುವ ಒಬ್ಬ ವ್ಯಕ್ತಿ ಎಷ್ಟೇ ಪ್ರತಿಭಾಶಾಲಿಯಾಗಿದ್ದರೂ, ಆತ ಮೇಲಿನ ಮಹಡಿಗೆ ಹತ್ತುವ ಯಾವುದೇ ಮಾರ್ಗ ಇರುವುದಿಲ್ಲ. ಅದೇ ರೀತಿ, ಒಬ್ಬ ವ್ಯಕ್ತಿ ಯಾವುದೇ ಬಗೆಯ ಪ್ರತಿಭೆ ಅಥವಾ ಜ್ಞಾನವನ್ನೂ ಹೊಂದಿದವನಲ್ಲದಿದ್ದರೂ, ತಾನು ಹುಟ್ಟಿರುವ ಮತ್ತು ತನಗೆ ವಹಿಸಲ್ಪಟ್ಟಿರುವ ಮಹಡಿಯಿಂದ ಕೆಳಗಿನ ಮಹಡಿಗೆ ಆತನನ್ನು ಇಳಿಸುವ ಯಾವ ಸಾಧ್ಯತೆಯೂ ಇರುವುದಿಲ್ಲ.

ಜಾತಿಗಳ ನಡುವಿನ ಅಂತರ್ ಸಂಬಂಧವು, ಮನುಷ್ಯನ ನಿಜವಾದ ಅರ್ಹತೆ ಅಥವಾ ಸತ್ವದೊಂದಿಗೆ ಯಾವುದೇ ತಾರ್ಕಿಕ ಸಂಬಂಧ ಹೊಂದಿರುವುದಿಲ್ಲ. ಒಬ್ಬ ಮೇಲ್ಜಾತಿಯ ವ್ಯಕ್ತಿಯು ಎಷ್ಟೇ ಅನರ್ಹನೂ ನಿಷ್ಪ್ರಯೋಜಕನೂ ಆದರೂ, ಆತ ಹುಟ್ಟಿದ ಜಾತಿಯು ಏಣಿಶ್ರೇಣಿಯಲ್ಲಿ ಮೇಲುಗಡೆಯಿರುವುದೇ ಆದಲ್ಲಿ, ಆತನ ಸಾಮಾಜಿಕ ಸ್ಥಾನಮಾನ ಯಾವಾಗಲೂ ಮೇಲಿನದ್ದಾಗಿಯೇ ಇರುತ್ತದೆ. ಅದೇ ರೀತಿ, ಒಬ್ಬ ಅರ್ಹನಾದ ಕೆಳಜಾತಿಯ ವ್ಯಕ್ತಿಯು ತನ್ನ ‘ಕೆಳ’ತನವನ್ನು ಕಳೆದುಕೊಳ್ಳಲು ಸಾಧ್ಯವಿರುವುದಿಲ್ಲ. ಕೆಳಜಾತಿ ಮತ್ತು ಮೇಲುಜಾತಿಯ ಜನರ ನಡುವೆ ಸಹಭೋಜನ ಮತ್ತು ಅಂತರ್‌ಜಾತಿ ವಿವಾಹಗಳ ಮೇಲೆ ವಿಧಿಸಲಾಗಿರುವ ಅತ್ಯಂತ ಕಟ್ಟುನಿಟ್ಟಿನ ನಿಷೇಧಗಳ ಕಾರಣಕ್ಕೆ, ಈ ಜಾತಿ ಸಂರಚನೆಗಳು ಸದಾ ಇತರ ಜಾತಿಗಳಿಂದ ಪ್ರತ್ಯೇಕಿತವಾಗಿಯೇ ಇರುತ್ತವೆ. ಒಂದು ವೇಳೆ ಆತ್ಮೀಯತೆಯ ಕೆಲವು ಸಂಬಂಧಗಳು, ಜಾತಿಯ ಪರಿಗಣನೆ ಅಥವಾ ಚೌಕಟ್ಟಿನ್ನು ಹೊರಗಡೆ ಇಟ್ಟು, ಅವುಗಳಿಂದ ಮುಕ್ತವಾಗಿ ರೂಪುಗೊಂಡಿದ್ದರೂ, ಆ ಸಂಬಂಧಗಳ ಮೇಲೆ ಕಠಿಣ ನಿಗರಾನಿ ಇಟ್ಟಿರಲಾಗುತ್ತದೆ. ಆ ಸಂಬಂಧಗಳು ಎಲ್ಲೂ ಜಾತಿಯ ಕಟ್ಟಳೆಗಳನ್ನು ಮುರಿದು ಮುಂದುವರೆಯದಂತೆ ಗಮನಿಸಲಾಗುತ್ತದೆ. ಕೆಲವೊಮ್ಮೆ, ಕೆಲವು ಜಾತಿಗಳಿಗೆ, ಈ ಜಾತಿ ಶ್ರೇಣೀಕರಣದ ಚೌಕಟ್ಟಿನೊಳಗಡೆಯೇ ಒಂದು ಸೀಮಿತವಾದ ‘ಚಲನೆ’ಗೆ ಅವಕಾಶ ನೀಡಲಾಗಿರಬಹುದು. ಆದರೆ, ‘ಅಪವಿತ್ರ’ ಎಂದು ಹಣೆಪಟ್ಟಿ ಕಟ್ಟಲಾದ ಅನೇಕ ಜಾತಿಗಳಿಗೆ, ಆ ಸಣ್ಣ ಪ್ರಮಾಣದ ಚಲನೆಯ ಸ್ವಾತಂತ್ರ್ಯವೂ ಇಲ್ಲದೆ, ಅವೆಲ್ಲವನ್ನೂ ಕಟ್ಟುನಿಟ್ಟಾಗಿ ನಿರಾಕರಿಸಲಾಗಿರುತ್ತದೆ. ಇವುಗಳು ‘ಅಸ್ಪೃಶ್ಯ’ ಜಾತಿಗಳು; ಇವುಗಳ ಜೊತೆಗಿನ ಸಂಪರ್ಕ ‘ಜಾತಿ ಹಿಂದೂಗಳ’ನ್ನು ಅಪವಿತ್ರಗೊಳಿಸುವ ಆತಂಕ ಉಂಟು ಮಾಡುವಂಥದ್ದಾಗಿರುತ್ತದೆ.

ಈ ಜಾತಿ ಶ್ರೇಣೀಕರಣದ ತುತ್ತ ತುದಿಯಲ್ಲಿ ಬ್ರಾಹ್ಮಣ ಜಾತಿಗಳವರಿದ್ದಾರೆ. ಅವರು ತಮ್ಮನ್ನು ತಾವು ಭೂಲೋಕದ ಮೇಲಿನ ದೇವರುಗಳೆಂದು ಪರಿಗಣಿಸಿಕೊಳ್ಳುತ್ತಾರೆ. ಇನ್ನಿತರ ಎಲ್ಲ ಗಂಡು ಹೆಣ್ಣುಗಳೂ ಅವರ ಸೇವೆ ಮಾಡಲು ಹುಟ್ಟಿದವರಾಗಿದ್ದಾರೆ; ಅಥವಾ ಹಾಗೆಂದು ಬ್ರಾಹ್ಮಣರು ನಂಬುತ್ತಾರೆ. ಆದ್ದರಿಂದ ಅವರು, ಈ ತಮ್ಮ ‘ಸೇವಕ’ರ ಸಂಪೂರ್ಣ ಭಕ್ತಿ ಮತ್ತು ನಿಷ್ಠೆಯನ್ನು ಪಡೆದುಕೊಳ್ಳುವ ಹಕ್ಕನ್ನು ಹೊಂದಿದ್ದೇವೆಂದು ಭಾವಿಸಿಕೊಂಡಿದ್ದಾರೆ. ತಾವು ಈ ಎಲ್ಲ ಸವಲತ್ತುಗಳನ್ನು ಪಡೆದುಕೊಳ್ಳಲು ಹಿಂದೂ ಧರ್ಮಗ್ರಂಥಗಳನ್ನು ರಚಿಸಿರುವ ತಮ್ಮ ಶ್ರೇಷ್ಠತೆ ಕಾರಣವೆಂದು ಬ್ರಾಹ್ಮಣರು ನಂಬಿದ್ದಾರೆ-ಆ ಪವಿತ್ರ ಹಿಂದೂ ಧರ್ಮಗ್ರಂಥಗಳು ಎಂತಹ ಕಟ್ಟುನಿಟ್ಟಿನ ಪಾಠಗಳನ್ನು ಬೋಧಿಸಿದರೂ ಕೂಡಾ.

ಇನ್ನೊಂದೆಡೆ ಅಬ್ರಾಹ್ಮಣರು ಸಾಕಷ್ಟು ಪ್ರಮಾಣದ ಆಸ್ತಿ ಮತ್ತು ಶಿಕ್ಷಣದ ಮೇಲಿನ ಅಧಿಕಾರವಿಲ್ಲದ ಕಾರಣದಿಂದಾಗಿ ಹಿಂದುಳಿದವರಾಗಿಯೇ ಇದ್ದಾರೆ. ಅವರು ಹಿಂದುಳಿದಿದ್ದಾರೆ ಎಂಬುದು ನಿಜ. ಆದರೆ ಆ ಹಿಂದುಳಿದಿರುವಿಕೆಯು ಸಂಪೂರ್ಣ ಇಲ್ಲದಿರುವಿಕೆಯಿಂದ ಉಂಟಾಗುವಂತಹ ಸಂಕಟವನ್ನು ಉಂಟುಮಾಡಲೇಬೇಕೆಂದೇನಿಲ್ಲ. ಏಕೆಂದರೆ, ಹಿಂದೂ ಅಬ್ರಾಹ್ಮಣರಿಗೆ ಜೀವನೋಪಾಯದ ಮಾರ್ಗಗಳನ್ನು ಕಂಡುಕೊಳ್ಳುವುದಕ್ಕೆ ಯಾವುದೇ ಅಡ್ಡಿಯಿಲ್ಲ. ಕೃಷಿಯ ಉತ್ಪನ್ನಗಳು, ಕೈಗಾರಿಕೆಗಳ ಉದ್ಯೋಗಗಳು, ವ್ಯಾಪಾರ ಮತ್ತು ವಾಣಿಜ್ಯ, ಕುಲಕಸುಬುಗಳು ಇವೇ ಮೊದಲಾದ ಜೀವನೋಪಾಯದ ಮಾರ್ಗಗಳು ಅವರಿಗೆ ತೆರೆದಿರುತ್ತವೆ. ಎಲ್ಲಕ್ಕಿಂತ ಕೆಟ್ಟರೀತಿಯಲ್ಲಿ ಜಾತಿ ವ್ಯವಸ್ಥೆಗೆ ಬಲಿಪಶುಗಳಾಗಿರುವವರು ‘ಬಹಿಷ್ಕೃತ’ರು. ಅವರು ತಮ್ಮನ್ನು ತಾವು ಎಲ್ಲ ರೀತಿಯಲ್ಲೂ ದುರ್ಬಲ ಸ್ಥಾನಗಳಲ್ಲಿರುವಂತೆ ಅಂದುಕೊಳ್ಳುವಂತಹ ಸ್ಥಿತಿ ಇರುತ್ತದೆ-ಆತ್ಮಸಮ್ಮಾನ ಮತ್ತು ಭೌತಿಕ ಬದುಕಿನಲ್ಲಿ ಕೊರತೆಯುಳ್ಳವರಾಗಿ, ದುರ್ಬಲರಾಗಿ ಮತ್ತು ಕಡಿಮೆ ದರ್ಜೆಯವರಾಗಿ ಪಡಿಗಣಿಸಿಕೊಳ್ಳುತ್ತಾರೆ. ಅವರ ಈ ದುಸ್ಥಿತಿಯು ಪ್ರಜ್ಞಾಪೂರ್ವಕವಾಗಿ ಎತ್ತಿತೋರಿಸಲೇ ಬೇಕಾಗಿರುವಂಥದ್ದು. ಅವರ ಮುಕ್ತಿಯ ಏಕೈಕ ಸಾಧ್ಯತೆ ಇರುವುದು ಅವರ ಸ್ವಯಂ ಸಬಲೀಕರಣದಲ್ಲಿ. ಸಂತೋಷದ ಸಂಗತಿಯೆಂದರೆ, ಈ ಬೆಳವಣಿಗೆ ಈಗ ಆರಂಭವಾಗಿದೆ.

ಆದರೆ ಅವರ ಸಮಸ್ಯೆಗಳು ಇನ್ನೂ ಸಾಕಷ್ಟಿವೆ. ದುರದೃಷ್ಟದ ಸಂಗತಿಯೆಂದರೆ, ಬಹಿಷ್ಕೃತರನ್ನು ಕಾಡುತ್ತಿರುವ ಅನೇಕಾನೇಕ ಸಮಸ್ಯೆಗಳನ್ನು ನೇರವಾಗಿ ಮತ್ತು ನಿರ್ಭೀತವಾಗಿ ಮುನ್ನೆಲೆಗೆ ತರಲು ಸಿದ್ಧವಾಗಿರುವ ಸಾಂಸ್ಥಿಕ ವೇದಿಕೆಗಳು ಅಥವಾ ಸಂವಹನ ಮಾಧ್ಯಮಗಳು ಇಲ್ಲವೇ ಇಲ್ಲವೆಂಬಷ್ಟು ಕಡಿಮೆ. ‘ಕೆಳಜಾತಿ’ಗಳೆಂದು ಕರೆಯಲ್ಪಟ್ಟಿರುವ ಸಮುದಾಯಗಳಿಗೆ ಸೇರಿದ ಜನರ ಸಮಸ್ಯೆಗಳನ್ನು ಪಡಿಹರಿಸಬೇಕಾದ ಅಗತ್ಯವನ್ನು ಒತ್ತಿಹೇಳುವಂತಹ ವಿಷಯಗಳಿಗೆ ಸಂಬಂಧಪಟ್ಟ ಸಂಗತಿಗಳನ್ನು ಬರೆಯುವ ಕೆಲವು ಪತ್ರಿಕೆಗಳು ಮತ್ತು ನಿಯತಕಾಲಿಕೆಗಳಿವೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಈ ಯಾವ ಪತ್ರಿಕೆಗಳು ಕೂಡಾ ‘ಅಸ್ಪೃಶ್ಯರ’ ಹಕ್ಕುಗಳಿಗೆ ಸಂಬಂದಿಸಿದ ವಿಚಾರಗಳಿಗೆ ಪ್ರತ್ಯೇಕವಾದ ಗಮನ ಕೊಡುವುದಿಲ್ಲ. ಈ ನಿರ್ವಾತವನ್ನು ತುಂಬಬೇಕೆಂಬ ಉದ್ದೇಶದಿಂದಲೇ, ‘ಮೂಕನಾಯಕ’ ಎಂಬ ನಿಯತಕಾಲಿಕವನ್ನು ಆರಂಭಿಸುವ ಯೋಜನೆ ರೂಪಿಸಲಾಯಿತು ಮತ್ತು ಪತ್ರಿಕೆಯ ವಿತರಣೆಗೆ ಚಾಲನೆ ನೀಡಲಾಯಿತು.

· ಮರಾಠಿಯಿಂದ ಹಿಂದಿ ಅನುವಾದ: ಪ್ರೊ.ಶಿಯೋರಾಜ್ ಸಿಂಗ್ ಬೇಚೈನ್, ಹಿಂದಿ ವಿಭಾಗ, ದೆಹಲಿ ವಿಶ್ವವಿದ್ಯಾಲಯ.

· ಹಿಂದಿಯಿಂದ ಇಂಗ್ಲೀಷಿಗೆ ಅನುವಾದ: ಪ್ರೊ. ತಪನ್ ಬಸು, ಇಂಗ್ಲೀಷ್ ವಿಭಾಗ ದೆಹಲಿ ವಿಶ್ವವಿದ್ಯಾಲಯ

· ಇಂಗ್ಲೀಷಿನಿಂದ ಕನ್ನಡಕ್ಕೆ ಅನುವಾದ: ಮಲ್ಲಿಗೆ ಸಿರಿಮನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...