Homeಕರ್ನಾಟಕಭೂ ಸುಧಾರಣಾ ಕಾನೂನಿನ ತಿದ್ದುಪಡಿ ಮತ್ತು ಅದರ ಪರಿಣಾಮಗಳು - ಡಾ.ಎ.ಆರ್ ವಾಸವಿ

ಭೂ ಸುಧಾರಣಾ ಕಾನೂನಿನ ತಿದ್ದುಪಡಿ ಮತ್ತು ಅದರ ಪರಿಣಾಮಗಳು – ಡಾ.ಎ.ಆರ್ ವಾಸವಿ

ಈ ಕಾನೂನು ರೈತರ ಹಿತಾಸಕ್ತಿಗಳನ್ನು ರಕ್ಷಿಸುವ ಬದಲು ಬೇಗುದಿಯನ್ನು ಹೆಚ್ಚಿಸಿತೆಂಬುದಕ್ಕೆ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಸಾವಿರಾರು ದಾವೆಗಳೇ ಸಾಕ್ಷಿ. ಎಷ್ಟೋ ನಾಗರಿಕರು ಈ ಕೊನೆಗಾಣದ ಕಾನೂನಾತ್ಮಕ ಬಲೆಯಲ್ಲಿ ಇನ್ನೂ ಒದ್ದಾಡುತ್ತಿದ್ದಾರೆ.

- Advertisement -
- Advertisement -

ಇತ್ತೀಚೆಗಿನ ಕರ್ನಾಟಕ ಸರಕಾರದ ಭೂಸುಧಾರಣಾ ಕಾನೂನಿನ ತಿದ್ದುಪಡಿ ಮತ್ತು ಅದರ ಸುತ್ತ ನಡೆಯುತ್ತಿರುವ ಚರ್ಚೆ ಈ ಹಿಂದಿನ ಕಾನೂನು ಮತ್ತು ಈಗ ತರಲಿಚ್ಛಿಸುತ್ತಿರುವ ತಿದ್ದುಪಡಿಯ ಪರಿಣಾಮಗಳೇನು ಎಂಬುದನ್ನು ವಿಶ್ಲೇಷಿಸಲು ನಮ್ಮನ್ನು ಒತ್ತಾಯಿಸುತ್ತದೆ.

ಗ್ರಾಮಾಂತರ ಪ್ರದೇಶಗಳು ವಿಸ್ತೃತ ಸಂಕಷ್ಟಕ್ಕೆ ಸ್ಪಂದಿಸಲು ಗಮನಾರ್ಹ ಪ್ರಯತ್ನಗಳಾಗುತ್ತಿದ್ದ ಕಾಲದಲ್ಲಿ, ಅಂದರೆ 1961 ರಲ್ಲಿ ಕರ್ನಾಟಕ ಭೂಸುಧಾರಣಾ ಕಾನೂನು 1961 ನ್ನು ಜಾರಿಗೊಳಿಸಲಾಯಿತು. ತದನಂತರದ ತಿದ್ದುಪಡಿಗಳು, ಅದರಲ್ಲೂ 1974ರ ತಿದ್ದುಪಡಿಯು, ಸಣ್ಣ ಮತ್ತು ಅತಿಸಣ್ಣ ರೈತರನ್ನೂ, ಕೃಷಿ ಆರ್ಥಿಕತೆಯನ್ನೂ ರಕ್ಷಿಸಲು ಜಾರಿಗೆಬಂದಿತು. ತನ್ಮೂಲಕ ರೈತಾಪಿ ಭೂಮಿ ಕಬಳಿಸಿ ಅವರನ್ನು ದಿವಾಳಿಯೆಬ್ಬಿಸುವ ಭಕ್ಷಕ ಬಂಡವಾಳ- ಅದರಲ್ಲೂ ಕೈಗಾರಿಕಾ, ನಗರ ಜನ್ಯ ಬಂಡವಾಳದಿಂದ ರಕ್ಷಿಸಲು ಅನುವಾಯಿತು. ಇದು ಮಿಶ್ರ ಫಲಿತಾಂಶವನ್ನು ನೀಡಿದೆ. ಒಂದೆಡೆ ಭೂಹಿಡುವಳಿಯ ಸಂರಚನೆ ಬಹಳಷ್ಟೇನೂ ಬದಲಾಗದಿದ್ದರೂ ಸಣ್ಣ ಮತ್ತು ಅತಿಸಣ್ಣ ರೈತರ ಭೂ-ನಷ್ಟ ಮತ್ತು ಸ್ಥಳಾಂತರ ನಡೆಯಲಿಲ್ಲ. ಆದರೆ ಈ ಕಾನೂನು ಮತ್ತು ತದನಂತರದ ತಿದ್ದುಪಡಿಗಳ ನೇತ್ಯಾತ್ಮಕ ಪರಿಣಾಮಗಳು ಮತ್ತು ವಿಕೃತಿಗಳು ಕಣ್ಣ ಮುಂದಿವೆ.

ಇದರಲ್ಲಿ ಪ್ರಮುಖವೆಂದರೆ ಕೃಷಿಕರಲ್ಲದವರಿಗೆ ಕೃಷಿ ಭೂಮಿ ಕೊಳ್ಳಲಾಗದ ಪರಿಸ್ಥಿತಿ. ಇದು ಅಧಿಕಾರಶಾಹಿಯ ಉರುಳನ್ನು ಸೃಷ್ಟಿ ಮಾಡಿದ್ದಲ್ಲದೇ, ಭೂ ವ್ಯವಹಾರದಲ್ಲಿ ಅನೇಕ ಭ್ರಷ್ಟ ಹಾದಿಗಳನ್ನು ತೆರೆಯಿತು. ಸರಕಾರ ಅಂದರೆ ವಾಸ್ತವದಲ್ಲಿ ವಿವಿಧ ರಾಜಕೀಯ ಸೂತ್ರಧಾರರು ಈ ತಡೆ ಇರುವಾಗಲೇ ಕಾನೂನನ್ನು ದಾಟಿಹೋಗುವ ಹೊಸ ನಿಯಮಗಳನ್ನು ಮತ್ತು ಪ್ರಕ್ರಿಯೆಗಳನ್ನು ಸೃಷ್ಟಿಸಿದರು.

ಭೂಸ್ವಾಧೀನ ಮತ್ತು ನಂತರ ಅದನ್ನು ಕೈಗಾರಿಕೆ, ಸಂಸ್ಥೆಗಳು ಮತ್ತು ವ್ಯಕ್ತಿಗಳಿಗೆ ಹಂಚುವ ಪ್ರಕ್ರಿಯೆ ಭಟ್ಟಂಗಿ ಬಂಡವಾಳಶಾಹಿಯನ್ನು ಸಶಕ್ತಗೊಳಿಸುವ ಮತ್ತು ಸರಕಾರ ಮತ್ತು ಚುನಾಯಿತ ನಾಯಕರನ್ನು ಭ್ರಷ್ಟಗೊಳಿಸುವ ಹೊಸ ಮೂಲಗಳಾದವು. ಇದರಿಂದಾಗಿ ಸರಕಾರಕ್ಕೆ ಆದಾಯ ನಷ್ಟವಾಗಿದ್ದಷ್ಟೇ ಅಲ್ಲ; ದಢೂತಿ ರಾಜಕೀಯ ಮಂದಿ, ಭಟ್ಟಂಗಿ ಬಂಡವಾಳಿಗರು, ರಿಯಲ್ ಎಸ್ಟೇಟ್ ಕುಳಗಳು, ಭೂ ಮಾಫಿಯಾ ಮತ್ತು ರಾತ್ರೋರಾತ್ರಿ ಓಡಿಹೋಗುವ ಖದೀಮ ಉದ್ಯಮಪತಿಗಳು ಇದರ ಲಾಭ ಪಡೆದರು.

ಇದಕ್ಕಿಂತ ಹೆಚ್ಚಾಗಿ, ರೈತ ಸಮುದಾಯ ಈ ಕಾಯಿದೆಯ ಕಳಪೆ ಅನುಷ್ಠಾನ, ಕಾನೂನಾತ್ಮಕ ವಿಕೃತಿಗಳು ಹಾಗೂ ಅಧಿಕಾರಶಾಹಿಯ ಭಾರದಿಂದ ಬಳಲಿದವು. ನೈಜ ರೈತರಿಗೆ ತಮ್ಮ ಹಿಡುವಳಿಯನ್ನು ಹೆಚ್ಚಿಸಲು ಆಗಲಿಲ್ಲ; ಸಣ್ಣ ಹಿಡುವಳಿದಾರರಿಗೆ ತಮ್ಮ ಜಮೀನನ್ನು ಹೊರಗಿನವರಿಗೆ ಮಾರಲು ಸಾಧ್ಯವಾಗಲಿಲ್ಲ; ಘಾಸಿಗೊಂಡ ಭೂ ಮಾರುಕಟ್ಟೆ ದಲ್ಲಾಳಿಗಳು ಮತ್ತು ಏಜೆಂಟರಿಗಷ್ಟೇ ಲಾಭ ಮಾಡಿಕೊಟ್ಟಿತು.

ಸ್ವತಃ ಆರ್ಥಿಕ ಕಷ್ಟದಿಂದಾಗಿ ಬೇಸಾಯ ಮಾಡಲಾಗದ ಸಣ್ಣ ರೈತರು ಭೋಗ್ಯದ ಕೃಷಿಯ ಭಾಗವಾಗುವ ಉದಾಹರಣೆ ಗಮನಿಸಿ. ದೊಡ್ಡ ರೈತರು ಇಲ್ಲಾ ಉದ್ಯಮಶೀಲರ ಜೊತೆ ಈ ಭೋಗ್ಯ ಕರಾರಿಗೆ ಸಹಿಹಾಕಿದ ಮೇಲೆ ಆ ಮಂದಿ ಸೀಮಿತ ಅವಧಿಗೆ ಈ ಜಮೀನಲ್ಲಿ ಭೂಮಿಯ ಸಾರ ಹೀರುವ ಕೃಷಿ ಮಾಡುತ್ತಿದ್ದಾರೆ. ಈ ಉಲ್ಟಾ ಗೇಣಿ ಪದ್ಧತಿಯಲ್ಲಿ ಬಂಡವಾಳಶಾಹಿಗಳು, ಗೇಣಿದಾರರು, ಬಡ ರೈತ ಭೂಮಾಲೀಕ! ಈ ಮಾಲೀಕ ತನ್ನ ಜಮೀನಿನಲ್ಲೇ ಕೂಲಿಯಾಳಾಗಿ ದುಡಿಯುವ ಸನ್ನಿವೇಶ ಉಂಟಾಗಿದೆ. ಈ ಭೋಗ್ಯಕ್ಕೆ ಪಡೆದ ಜಮೀನಿನಲ್ಲಿ ಶುಂಠಿ, ಅರಿಶಿನ, ಬಾಳೆ ಮುಂತಾದ ಬೆಳೆ ಬೆಳೆದು ಪರಿಸರಕ್ಕಾಗಿರುವ ಹಾನಿ ಇನ್ನೊಂದು ಉದಾಹರಣೆ. ಇಂಥ ವಿಷಯಗಳನ್ನು ಪರಿಹರಿಸುವ ಬದಲು ಇಡೀ ಲಕ್ಷ್ಯ ದೊಡ್ಡ ಬಂಡವಾಳಶಾಹಿಗಳಿಗೆ ಮತ್ತು ಶಂಕಾಸ್ಪದ ಉದ್ಯಮಶೀಲರಿಗೆ ಭೂಮಾರುಕಟ್ಟೆಯನ್ನು ಸುಲಭಗೊಳಿಸುವ ಕಡೆಗಿದೆ.

ನಿಜಕ್ಕೂ ಕೃಷಿಭೂಮಿ ಕೊಳ್ಳಬೇಕೆಂದಿದ್ದವರು, ಅದರಲ್ಲೂ ನಗರ ಮತ್ತು ಕೃಷಿಯೇತರ ಹಿನ್ನೆಲೆಯವರು, ಈ ಅಧಿಕಾರಶಾಹಿ ಜಾಲ ಮತ್ತು ದಲ್ಲಾಳಿಗಳ ಮೂಲಕ ಭೂಮಿ ಪಡೆಯಬೇಕಾದ ಸಂದರ್ಭ ಒದಗಿಬಂತು. ಕೃಷಿ ಮಾಡಬೇಕೆಂದಿದ್ದ ಅಥವಾ ಭೂಮಿಯನ್ನು ಇನ್ಯಾವುದೋ ಪ್ರಯೋಜನಕಾರಿ ಉದ್ದಿಶ್ಯಕ್ಕೆ ಬಳಸಬೇಕೆಂದಿದ್ದ ಆಸೆಗೇ ಎಳ್ಳುನೀರು ಬಿಡಬೇಕಾಗಿ ಬಂದ ಪ್ರಕರಣಗಳೂ ಇವೆ.

ಈ ಕಾನೂನು ರೈತರ ಹಿತಾಸಕ್ತಿಗಳನ್ನು ರಕ್ಷಿಸುವ ಬದಲು ಬೇಗುದಿಯನ್ನು ಹೆಚ್ಚಿಸಿತೆಂಬುದಕ್ಕೆ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಸಾವಿರಾರು ದಾವೆಗಳೇ ಸಾಕ್ಷಿ. ಎಷ್ಟೋ ನಾಗರಿಕರು ಈ ಕೊನೆಗಾಣದ ಕಾನೂನಾತ್ಮಕ ಬಲೆಯಲ್ಲಿ ಇನ್ನೂ ಒದ್ದಾಡುತ್ತಿದ್ದಾರೆ. ಆದ್ದರಿಂದ ಈ ಕಾನೂನನ್ನು ಮರುಪರಿಶೀಲಿಸಿ ಕೃಷಿಲೋಕದ ಅಂಚಿಗೆ ನೂಕಲ್ಪಟ್ಟಿರುವ ಮಂದಿಯ ಹಿತಾಸಕ್ತಿಯನ್ನು ರಕ್ಷಿಸುವುದು, ಗ್ರಾಮೀಣ ಆರ್ಥಿಕತೆಗೆ ಪ್ರೋತ್ಸಾಹ ಮತ್ತು ಆಹಾರ ಭದ್ರತೆಯ ಭರವಸೆಯನ್ನು ಖಚಿತಪಡಿಸುವುದರೊಂದಿಗೆ, ಗ್ರಾಮೀಣೇತರ ನಾಗರಿಕರಿಗೆ ಆರ್ಥಿಕವಾಗಿ ಸುಲಲಿತ ಮತ್ತು ಸಮರ್ಥನೀಯ ರೀತಿಯಲ್ಲಿ ಜಮೀನು ಹೊಂದುವ ವಿಧಿವಿಧಾನಗಳನ್ನು ರೂಪಿಸಬೇಕಾಗಿದೆ.

ಕೃಷಿ ಆರ್ಥಿಕತೆಯೇ ಕಳೆದ ಕೆಲವು ವರ್ಷಗಳಿಂದ ತೀವ್ರ ಹಿಂಜರಿಕೆಯಲ್ಲಿದೆ. ಹವಾಮಾನ ವೈಪರೀತ್ಯದ ಕಾರಣಕ್ಕೇ ದೀರ್ಘಕಾಲದ ಬರ, ಆಗಾಗ್ಗೆ ಪ್ರವಾಹಗಳು ನಮ್ಮ ರಾಜ್ಯದ ಒಳನಾಡಿನ ವಿಸ್ತಾರ ಭೂಪ್ರದೇಶಗಳನ್ನು ಹದಗೆಡಿಸಿವೆ. ಇದರೊಂದಿಗೇ ಕೋವಿಡ್-19 ಪಿಡುಗಿನ ಸಮಸ್ಯೆ; ಲಾಕ್‌ಡೌನ್‌ನಿಂದ ಉಂಟಾದ ಆರ್ಥಿಕ ಮತ್ತು ಸಾಮಾಜಿಕ ಪಲ್ಲಟಗಳು ತುರ್ತು ಗಮನದ ವಿಚಾರಗಳಾಗಬೇಕಿತ್ತು.

ಈ ಪಿಡುಗು ಮತ್ತು ಈ ಹಿಂದಿನ ಪಿಡುಗುಗಳು ಸೂಚಿಸುವುದೇನೆಂದರೆ, ಮಾನವ ಮತ್ತು ಪ್ರಾಕೃತಿಕ ಸಂಪನ್ಮೂಲಗಳ ಮಾಲಿನ್ಯ ಮತ್ತು ಬೃಹತ್ ಕೈಗಾರಿಕಾ ಮಾದರಿಯ ಆಹಾರ ಉತ್ಪಾದನೆಗಳೆರಡೂ ಇಂಥಾ ಪಿಡುಗು ಹುಟ್ಟಿ ಹರಡಲು ಕಾರಣವಾಗಿವೆ. ಸಂಶೋಧನೆಗಳು ಸತತವಾಗಿ ತೋರಿಸಿಕೊಟ್ಟಿರುವಂತೆ, ಸಣ್ಣ ಪ್ರಮಾಣದ, ವೈವಿಧ್ಯಮಯ ಉತ್ಪಾದಕ ವ್ಯವಸ್ಥೆಗಳನ್ನು ಹೊಂದಿರುವ ನಮ್ಮ ಸಣ್ಣ ರೈತರೇ ಜೀವ ವೈವಿಧ್ಯತೆ ಮತ್ತು ಆಹಾರ ಉತ್ಪಾದನೆಯ ರಕ್ಷಕರು.

ಈ ಅಂಶಗಳನ್ನು ಪರಿಗಣಿಸಿದರೆ, ಶಾಸನಾತ್ಮಕ ಕ್ರಮಗಳು ಈ ವಿಷಯಗಳಿಗೆ ಸ್ಪಂದಿಸುವ ನೀತಿ ಮತ್ತು ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುವ ರೀತಿಯಲ್ಲಿರಬೇಕಲ್ಲದೇ, ಭೂಮಿಯನ್ನು ಕೈಗಾರಿಕೀಕರಣಗೊಂಡ ಬಂಡವಾಳಶಾಹಿ ಉತ್ಪಾದನೆಗೆ ಬೇಕಾದ ಮಾರಾಟದ ಸರಕೆಂಬಂತೆ ನೋಡಬಾರದು. ಎಲ್ಲರಿಗೂ ಭೂಮಿ ಹೊಂದುವ ಅವಕಾಶ ನೀಡುವ ಇತ್ತೀಚೆಗಿನ ಭೂಸುಧಾರಣಾ ಕಾಯಿದೆಯ ತಿದ್ದುಪಡಿಯು ಈ ಹಿನ್ನೆಲೆಯಲ್ಲಿ ದೂರದೃಷ್ಟಿ ಇಲ್ಲದ, ಹಾದಿ ತಪ್ಪಿಸುವ ತಿದ್ದುಪಡಿಯಾಗಿದೆ. ಊಹಾತ್ಮಕ ಲೆಕ್ಕಾಚಾರಗಳಿಗೆ ಭೂಮಾರುಕಟ್ಟೆ ಪಕ್ಕಾಗುವುದು ಮತ್ತು ಸಣ್ಣ ರೈತರ ದೀರ್ಘಕಾಲಿಕ ಹಿತಾಸಕ್ತಿಗಳನ್ನು ದೈತ್ಯ ಬಂಡವಾಳ ನುಂಗುವ ಕುರಿತಂತೆ ಈ ತಿದ್ದುಪಡಿ ನಿರ್ಲಕ್ಷ ತೋರಿದೆ.

ಸಿಕ್ಕಿದವರಿಗೆ ಸೀರುಂಡೆ ಎಂಬಂತ ನಡೆಯ ಮೂಲಕ ಗ್ರಾಮಾಂತರದ ಸಣ್ಣ ಹಿಡುವಳಿದಾರರನ್ನು ದಿವಾಳಿ ಎಬ್ಬಿಸುವ ನೀತಿಯ ಬದಲು, ಊಹಾತ್ಮಕ ಭೂಮಿ ಆರ್ಥಿಕತೆಯನ್ನು ನಿರುತ್ತೇಜಗೊಳಿಸಿ ಆರ್ಥಿಕ, ಪರಿಸರ ಸಂಬಂಧಿ ಮತ್ತು ಸಾಮಾಜಿಕ ಮಾನದಂಡಗಳನ್ನು ಗೌರವಿಸುವ ಸಾಚಾ ಇರಾದೆ ಇರುವವರಿಗೆ ಭೂಮಿ ಹೊಂದುವ ಅವಕಾಶ ನೀಡುವ ನೀತಿ ಮತ್ತು ಮಾನದಂಡಗಳನ್ನು ಸರಕಾರ ರೂಪಿಸಬೇಕಿದೆ.

ಪ್ರ್ರಾಸ್ತಾವಿತ ತಿದ್ದುಪಡಿಯಲ್ಲಿ ಈ ಅಂಶಗಳೇ ಮಾಯವಾಗಿವೆ. ಇದರ ಬದಲು ಹೊಸ ರೀತಿಯ ಉತ್ಪಾದಕತೆ, ಐಟಿ, ಬಿಟಿ ಕ್ಷೇತ್ರಗಳವರ ಅಗತ್ಯಕ್ಕೆ ತಕ್ಕಂತೆ ಸರಳೀಕೃತ ಮತ್ತು ಸಾರಾಸಗಟು ಬದಲಾವಣೆಗಳನ್ನು ಪ್ರಸ್ತಾಪಿಸಲಾಗಿದೆ. ಈಗಿರುವ ಆಳ ಕಂದರವನ್ನು ಎದುರಿಸುವ ನಗರ-ಗ್ರಾಮೀಣ; ಕೃಷಿ-ಕೈಗಾರಿಕಾ ಉತ್ಪಾದಕ ವ್ಯವಸ್ಥೆಗಳು ಅಸ್ತಿತ್ವಕ್ಕೆ ಬರಬೇಕು ಎಂಬುದನ್ನು ಈ ತಿದ್ದುಪಡಿ ಆದ್ಯತೆ ಮಾಡಿಕೊಳ್ಳಬೇಕಿತ್ತು.

ಸಣ್ಣ ಮತ್ತು ಅತಿಸಣ್ಣ ರೈತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸಹಕಾರೀ ತತ್ವಾಧಾರಿತ ಮತ್ತು ರೈತ ಉತ್ಪಾದಕ ಸಂಸ್ಥೆಗಳಿಗೆ ಸಾಮರ್ಥ್ಯವಿದ್ದರೂ, ಹೊಸ ಭೂಮಿನೀತಿಗಳು ಬೃಹತ್ ಬಂಡವಾಳವನ್ನು ಪ್ರೋತ್ಸಾಹಿಸುವಂತಿವೆ. ಇದರೊಂದಿಗೇ, ಈ ತಿದ್ದುಪಡಿಯಲ್ಲಿ ಅರಣ್ಯ, ಶ್ರೀಮಂತ ಜೀವವೈವಿಧ್ಯತಾ ವಲಯಗಳನ್ನು ರಕ್ಷಿಸುವ ಪ್ರಸ್ತಾಪವೇ ಇಲ್ಲ. ಮಾರುಕಟ್ಟೆ ವಿಚಾರದಲ್ಲಿ ವಿವೇಕಯುತವಾಗಿಯೂ ಹವಾಮಾನ ತಾಳಿಕೆಯನ್ನು ಹೊಂದಿರುವಂತಹ ಕೃಷಿ, ಹವಾಮಾನ ವಲಯಾಧಾರಿತ ಕೃಷಿಯನ್ನು ಉತ್ತೇಜಿಸುವ, ಕಾರ್ಮಿಕರನ್ನು ಔಚಿತ್ಯಪೂರ್ಣವಾಗಿ ಗೌರವಿಸುವ ಹೊಸ ಉತ್ಪಾದಕ ವ್ಯವಸ್ಥೆಗೆ ಅನುಕೂಲ ಮಾಡಿಕೊಡುವಂಥಾ ಯಾವ ಪ್ರಸ್ತಾಪವೂ ಈ ತಿದ್ದುಪಡಿಯಲ್ಲಿ ಇಲ್ಲ.

ಇಂಥಾ ಪರ್ಯಾಯ ಮತ್ತು ಸಮಗ್ರ ನೀತಿ ಮತ್ತು ಕಾರ್ಯಕ್ರಮಗಳನ್ನು ಅನ್ವೇಷಿಸುತ್ತಿರುವ ಈ ಸಂದರ್ಭದಲ್ಲಿ ಸದ್ಯದ ರಾಜಕೀಯ ವ್ಯವಸ್ಥೆ ಜನರ ಹಿತಾಸಕ್ತಿಗಳನ್ನು ಪ್ರತಿನಿಧಿಸಲು ಸೋತಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ.

ಕೃಷಿ ಮತ್ತು ಭೂನೀತಿಗಳ ಮಿತಿಗಳನ್ನು ತಮ್ಮ ಹಿತಾಸಕ್ತಿಗಳಿಗೆ ತಕ್ಕಂತೆ ತಿರುಚಿ ರಾಜಕಾರಣಿಗಳು ತಮ್ಮ ರಾಜಕೀಯ ಮತ್ತು ಬಂಡವಾಳದ ಸಾಮ್ರಾಜ್ಯಗಳನ್ನು ಕಟ್ಟಿದ್ದಾರೆ. ಹೆಚ್ಚಿನ ರೈತ ಸಂಘಟನೆಗಳು ದೂರಗಾಮಿ ದೃಷ್ಟಿಯಿಲ್ಲದೇ, ಸಾಲಮನ್ನಾ, ಉಚಿತ ವಿದ್ಯುತ್, ಕೃಷಿ ಒಳಸುರಿಗಳಿಗೆ ಮತ್ತು ಸಬ್ಸಿಡಿಯಂಥಾ ಬೇಡಿಕೆಗಳಾಚೆ ಹೋಗಿಲ್ಲ. ಆದ್ದರಿಂದಲೇ, ನಾಗರಿಕರು, ರೈತರು, ನಾಗರಿಕ ಸಂಘಟನೆಗಳು, ಕ್ರಿಯಾಶೀಲ ವ್ಯಕ್ತಿಗಳು ಒಟ್ಟಾಗಿ ಬಹುಸಂಖ್ಯಾತ ಜನರ ದೀರ್ಘಕಾಲಿಕ ಹಿತಾಸಕ್ತಿಯ ನೀತಿ ಮತ್ತು ಕಾರ್ಯಕ್ರಮಗಳನ್ನು ರೂಪಿಸುವಂಥಾ ಒಂದು ಪರ್ಯಾಯ ದೃಷ್ಟಿಕೋನವನ್ನು ಪ್ರಸ್ತಾಪಿಸಬೇಕಿದೆ.

ನಮ್ಮ ನಡುವಿರುವ ದೈತ್ಯ ಆರ್ಥಿಕ ಸಂರಚನೆಗಳು, ಮಾದರಿಗಳು ಮತ್ತು ಚಿಂತನೆಗಳನ್ನು ಮರುಪರಿಶೀಲಿಸುವಂತೆ ಮಾಡಿರುವ ಈ ಕೋವಿಡ್-19ರ ಚಾರಿತ್ರಿಕ ಸಂದರ್ಭದಲ್ಲಿ ನಾವಿದ್ದೇವೆ. ಆದ್ದರಿಂದಲೇ ನಾವು ತೀವ್ರ ಆರ್ಥಿಕ ಅಸಮಾನತೆ, ಪರಿಸರ ಬಿಕ್ಕಟ್ಟು, ಆರೋಗ್ಯ ಅಪಾಯಗಳ ಆಳ ಸಮಸ್ಯೆಗಳನ್ನು ಎದುರಿಸುವ ಪರ್ಯಾಯಗಳನ್ನು ಹುಡುಕಬೇಕಿದೆ. ಭೂಮಿಯೆಂಬುದು ಕೇವಲ ಮಾರಾಟದ ಸರಕಲ್ಲ; ಅದರ ಉಪಯೋಗ ಮತ್ತು ನಮಗೆ ಅದರೊಂದಿಗಿರುವ ಸಂಬಂಧವು ಸಾಮಾಜಿಕ ನ್ಯಾಯ, ಪರಿಸರ ಸುಸ್ಥಿರತೆ ಮತ್ತು ಆರ್ಥಿಕ ಸ್ಥಿರತೆಯನ್ನು ಖಚಿತಪಡಿಸುವಂಥಾದ್ದು ಎಂಬುದನ್ನು ನಾವು ಗುರುತಿಸಿ ಗಟ್ಟಿಯಾಗಿ ಸಮರ್ಥಿಸಿಕೊಳ್ಳಬೇಕಿದೆ.


ಇದನ್ನೂ ಓದಿ: ಭೂಸುಧಾರಣೆ ಕಾಯ್ದೆ ತಿದ್ದುಪಡಿಗೆ ಮಹಿಳಾ ರೈತರ ಹಕ್ಕುಗಳ ವೇದಿಕೆಯ ಖಂಡನೆ 

ಕೋಆಪರೇಟೀಕರಣದತ್ತ ಹೊರಳಬೇಕಿದ್ದ ಕೃಷಿ ಕಾರ್ಪೋರೇಟೀಕರಣದತ್ತ: ಈ ವಿನಾಶದ ಪರಿಣಾಮಗಳೇನು?

ಲಾಕ್ ಡೌನ್ ನಂತರದ ಪ್ರಥಮ ಆದ್ಯತೆ – ಕೃಷಿ ಮತ್ತು ಗ್ರಾಮೀಣ ವಲಯಗಳ ಪುನಶ್ಚೇತನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR | ಸೆಕ್ಸ್ ವರ್ಕರ್ಸ್, ಅವರ ಮಕ್ಕಳ ಬಳಿ ದಾಖಲೆಗಳಿಲ್ಲ : ಮಹಾರಾಷ್ಟ್ರ ಸಿಇಒಗೆ ಪತ್ರ ಬರೆದ ರಾಷ್ಟ್ರೀಯ ಸಂಸ್ಥೆ

ದಾಖಲಾತಿ ಮತ್ತು ಪರಿಶೀಲನೆ ಅಗತ್ಯತೆಗಳ ಕಾರಣದಿಂದಾಗಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಿಂದ ಲೈಂಗಿಕ ಕಾರ್ಯಕರ್ತೆಯರು ಮತ್ತು ಅವರ ಮಕ್ಕಳನ್ನು ಹೊರಗಿಡದಂತೆ ನೋಡಿಕೊಳ್ಳಲು ವಿಶೇಷ ಕ್ರಮಗಳನ್ನು ಕೈಗೊಳ್ಳಬೇಕೆಂದು...

ದಲಿತ ವಿದ್ಯಾರ್ಥಿನಿ ಕೊಲೆ ಪ್ರಕರಣ: ಪ್ರತಿಭಟನಾಕಾರರ ಮೇಲೆ ಪೊಲೀಸ್ ಲಾಠಿಚಾರ್ಜ್; ಯೋಗಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ

ನವದೆಹಲಿ: ಜುಲೈ 8 ರಂದು ಮೀರತ್‌ನಲ್ಲಿ ನಡೆದ ದಲಿತ ವಿದ್ಯಾರ್ಥಿನಿಯ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ದಲಿತ ಕಾರ್ಯಕರ್ತರು ಮತ್ತು ಮೃತರ ಕುಟುಂಬ ಸದಸ್ಯರ ಮೇಲೆ ಉತ್ತರ ಪ್ರದೇಶ ಪೊಲೀಸರು ಭೀಕರ ಹಲ್ಲೆ,...

ಒಮಾನ್ ಕರಾವಳಿಯಲ್ಲಿ ಮತ್ತೊಂದು ಹಡಗಿನ ಮೇಲೆ ದಾಳಿ: ಭಾರತೀಯ ಪ್ರಜೆ ನಾಪತ್ತೆ, 10 ಜನರ ರಕ್ಷಣೆ: ವಿದೇಶಾಂಗ ಸಚಿವಾಲಯ ಮಾಹಿತಿ

ನವದೆಹಲಿ: ಜುಲೈ 12 ರಂದು ಒಮಾನ್ ಕರಾವಳಿಯ ಅಂತರರಾಷ್ಟ್ರೀಯ ಜಲಮಾರ್ಗದಲ್ಲಿ ಸಾಗುತ್ತಿದ್ದ ‘ಜಿಎಫ್‌ಎಸ್ ಗ್ಯಾಲಕ್ಸಿ’ (GFS Galaxy) ಎಂಬ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ. ಭೀಕರ...

SIR ಪ್ರಕ್ರಿಯೆಯಲ್ಲಿ ಎಐ ಬಳಕೆ, ಭಾರೀ ಪ್ರಮಾಣದಲ್ಲಿ ಮತದಾರರ ಹೆಸರು ಡಿಲೀಟ್ : ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆಯ ವಿಶೇಷ ವರದಿಗಾರರು

ಭಾರತೀಯ ಚುನಾವಣಾ ಆಯೋಗ (ಇಸಿಐ) ಕೈಗೊಂಡ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು (ಎಸ್‌ಐಆರ್) ವ್ಯಾಪಕ ಪ್ರಮಾಣದಲ್ಲಿ ಮತದಾರರ ಹೆಸರುಗಳ ಅಳಿಸುವಿಕೆಗೆ ಕಾರಣವಾಗಿದೆ ಮತ್ತು ಇದು ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಗಳ...

ಮಹಾರಾಷ್ಟ್ರ: ನಂದೂರ್ಬಾರ್‌ನ ಸರ್ಕಾರಿ ಹಾಸ್ಟೆಲ್‌ನಲ್ಲಿ ಕಲುಷಿತ ಆಹಾರ ಸೇವಿಸಿ 40 ವಿದ್ಯಾರ್ಥಿಗಳು ಅಸ್ವಸ್ಥ; ತೀವ್ರಗೊಂಡ ತನಿಖೆ 

ನಂದೂರ್ಬಾರ್ (ಮಹಾರಾಷ್ಟ್ರ): ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ಶಹಾಡಾ ತಾಲೂಕಿನಲ್ಲಿರುವ ಸರ್ಕಾರಿ ಸಮಾಜ ಕಲ್ಯಾಣ ಇಲಾಖೆಯ ವಸತಿನಿಲಯದಲ್ಲಿ ಶಂಕಿತ ವಿಷಪೂರಿತ ಆಹಾರ ಸೇವಿಸಿ ಸುಮಾರು 40 ವಿದ್ಯಾರ್ಥಿಗಳು ತೀವ್ರವಾಗಿ ಅಸ್ವಸ್ಥಗೊಂಡಿರುವ ಕಳವಳಕಾರಿ ಘಟನೆ ವರದಿಯಾಗಿದೆ.  ಹಾಸ್ಟೆಲ್‌ನಲ್ಲಿ...

ಇರಾನ್‌ನ 140 ಸ್ಥಳಗಳನ್ನು ಗುರಿಯಾಗಿಸಿ ಅಮೆರಿಕದಿಂದ ದಾಳಿ : ಬಹ್ರೇನ್, ಕತಾರ್, ಯುಎಇ ಮೇಲೆ ಇರಾನ್‌ನಿಂದ ಪ್ರತಿದಾಳಿ

ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ನಡೆಸಿದ ದಾಳಿಯಿಂದಾಗಿ ಸರಕು ಸಾಗಣೆ ಹಡಗೊಂದು ಹೊತ್ತಿ ಉರಿದು, ಅದರಲ್ಲಿದ್ದ ಸಿಬ್ಬಂದಿ ಹಡಗು ಬಿಟ್ಟು ಹೊರಡುವಂತಾಗಿತ್ತು. ಈ ಘಟನೆಯನ್ನು ಖಂಡಿಸಿ ಅಮೆರಿಕ ಭಾನುವಾರ (ಜು.12) ಮುಂಜಾನೆ ಇರಾನ್ ಮೇಲೆ...

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...