Homeಮುಖಪುಟಸರ್ಕಾರದ ದುರುದ್ದೇಶಪೂರಿತ ದಾಳಿ ಆರೋಪ: ಭಾರತದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಲಿದೆ ಅಮ್ನೆಸ್ಟಿ ಇಂಟರ್‌ನ್ಯಾಷನಲ್

ಸರ್ಕಾರದ ದುರುದ್ದೇಶಪೂರಿತ ದಾಳಿ ಆರೋಪ: ಭಾರತದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಲಿದೆ ಅಮ್ನೆಸ್ಟಿ ಇಂಟರ್‌ನ್ಯಾಷನಲ್

ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಸಂಸ್ಥೆಯು ಮಾನವ ಹಕ್ಕುಗಳನ್ನು ರಕ್ಷಿಸುವಲ್ಲಿ ಮಹತ್ವದ ಪಾತ್ರವಹಿಸುತ್ತಾ ಬಂದಿದೆ. ಈ ಕೆಲಸಗಳಿಗಾಗಿ 1977 ರಲ್ಲಿ "ನೋಬೆಲ್ ಶಾಂತಿ ಪುರಸ್ಕಾರ"ವನ್ನೂ ಪಡೆದುಕೊಂಡಿದೆ.

- Advertisement -
- Advertisement -

ಖ್ಯಾತ ಮಾನವ ಹಕ್ಕುಗಳ ಸಂಸ್ಥೆ ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಭಾರತದಲ್ಲಿನ ತನ್ನ ಕಾರ್ಯಾಚರಣೆ ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. ತನ್ನ ವರದಿಗಳನ್ನು ಸಹಿಸದ ಸರ್ಕಾರ ನಿರಂತರವಾಗಿ ದುರುದ್ದೇಶಪೂರಿತ ದಾಳಿ ನಡೆಸುತ್ತಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಅಮ್ನೆಸ್ಟಿ ತಿಳಿಸಿದೆ.

ಜಾಗತಿಕವಾಗಿ ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ ಕೆಲಸ ಮಾಡುತ್ತಿರುವ ಇಂಗ್ಲೆಂಡ್ ಮೂಲದ ಸರ್ಕಾರೇತರ ಸಂಸ್ಥೆಯು, ಭಾರತದಲ್ಲಿನ ತನ್ನ ಸಂಶೋಧನೆಗಳನ್ನು ನಿಲ್ಲಿಸಿ, ಉದ್ಯೋಗಿಗಳನ್ನು ಬೀಳ್ಕೊಡಲಿದೆ ಎಂದಿದೆ. ಭಾರತದಂತಹ ಅತಿ ದೊಡ್ಡ ದೇಶದಲ್ಲಿ ಅದು ತನ್ನ ಸೇವೆ ನಿಲ್ಲಿಸುತ್ತಿರುವುದು ಮಾನವ ಹಕ್ಕು ಕಾರ್ಯಕರ್ತರಿಗೆ ಬೇಸರ ತಂದಿದೆ.

ಇತ್ತೀಚೆಗೆ ನಡೆದ ದೆಹಲಿ ಗಲಭೆ ಮತ್ತು ಕಾಶ್ಮೀರದ ಸ್ವಾಯುತ್ತ ಸ್ಥಾನಮಾನ ರದ್ದುಗೊಳಿಸಿದ ನಂತರ ಅಮ್ನೆಸ್ಟಿ ಈ ವಿಷಯಗಳಲ್ಲಿ ಗಂಭೀರ ಮಾನವ ಹಕ್ಕು ಉಲ್ಲಂಘನೆಯಾಗಿದೆ ಎಂದು ತನ್ನ ವರದಿಗಳನ್ನ ಬಿಡುಗಡೆಗೊಳಿಸಿತ್ತು. ಇದರ ಪರಿಣಾಮವಾಗಿ ಸರ್ಕಾರ ತನ್ನ ಮೇಲೆ ಮುಗಿಬಿದ್ದಿದೆ ಎಂದು ಅಮ್ನೆಸ್ಟಿ ಆರೋಪಿಸಿದೆ.

ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ)ಯ ನಿಯಮಗಳನ್ನು ಉಲ್ಲಂಘಿಸಲಾಗುತ್ತಿದೆ. ಕಾನೂನುಬಾಹಿರವಾಗಿ ವಿದೇಶಿ ದೇಣಿಗೆಗಳನ್ನು ಪಡೆಯಲಾಗಿದೆ ಎಂಬ ಆರೋಪದಡಿಯಲ್ಲಿ ಕೆಲವು ವರ್ಷಗಳಿಂದ ಹಲವು ತನಿಖಾ ಸಂಸ್ಥೆಗಳು ಅಮ್ನೆಸ್ಟಿ ಇಂಟರ್‌ ನ್ಯಾಷನಲ್‌ ಅನ್ನು ತನಿಖೆಗೊಳಪಡಿಸಿವೆ.

ಆದರೆ, ಸಂಸ್ಥೆಯು ತನ್ನ ಪತ್ರಿಕಾ ಹೇಳಿಕೆಯಲ್ಲಿ, “ಇದು ಆಧಾರ ರಹಿತ ಮತ್ತು ದುರುದ್ದೇಶ ಪ್ರೇರಿತ ಆರೋಪ. ಭಾರತ ಸರ್ಕಾರವು ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಇಂಡಿಯಾದ ಬ್ಯಾಂಕ್ ಖಾತೆಗಳನ್ನು ತಡೆಹಿಡಿದಿದೆ. ಇದು ಸಂಸ್ಥೆಯ ಎಲ್ಲಾ ಕೆಲಸಗಳ ಮೇಲೆ ಪರಿಣಾಮ ಬೀರಿದೆ. ಭಾರತದಲ್ಲಿನ ಸಿಬ್ಬಂದಿಯನ್ನು ಕೆಲಸದಿಂದ ಕೈಬಿಟ್ಟು, ತನ್ನ ಎಲ್ಲಾ ಸಂಶೋಧನಾ ಕಾರ್ಯಗಳನ್ನು ನಿಲ್ಲಿಸುವಂತೆ ಒತ್ತಾಯಿಸಲಾಗಿದೆ. ಆದರೆ ನಾವು ಭಾರತೀಯ ಮತ್ತು ಅಂತರಾಷ್ಟ್ರೀಯ ಎಲ್ಲಾ ಕಾನೂನುಗಳನ್ನು ಪಾಲಿಸಿದ್ದೇವೆ” ಎಂದು ಹೇಳಿದೆ.

ಇದನ್ನೂ ಓದಿ: ಅಮ್ನೆಸ್ಟಿ ಇಂಟರ್‌ ನ್ಯಾಷನಲ್‌ ಬೆಂಗಳೂರು ಕಚೇರಿಯ ಮೇಲೆ ಸಿಬಿಐ ದಾಳಿ

“ಕಳೆದ 2 ವರ್ಷಗಳಿಂದ ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಇಂಡಿಯಾದ ಮೇಲೆ ನಿರಂತರವಾಗಿ ನಡೆಯುತ್ತಿರುವ ದಾಳಿ ಮತ್ತು ಇತ್ತೀಚೆಗೆ ಬ್ಯಾಂಕ್ ಖಾತೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿರುವುದು ಆಕಸ್ಮಿಕವೇನಲ್ಲ. ಇತ್ತೀಚೆಗೆ ನಡೆದ ದೆಹಲಿ ಗಲಭೆ ಮತ್ತು ಜಮ್ಮು ಕಾಶ್ಮೀರದಲ್ಲಿ ನಡೆದ ಗಂಭೀರ ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಮತ್ತು ಭಾರತ ಸರ್ಕಾರದ ಹೊಣೆಗಾರಿಕೆಯನ್ನು ಪ್ರಶ್ನಿಸಿ, ಸರ್ಕಾರದ ಆಡಳಿತದಲ್ಲಿ ಪಾರದರ್ಶಕತೆಯನ್ನು ಕೋರಿದ್ದಕ್ಕಾಗಿ, ಜಾರಿ ನಿರ್ದೇಶನಾಲಯ ಸೇರಿದಂತೆ ಇತರೆ ಸರ್ಕಾರಿ ಸಂಸ್ಥೆಗಳು ನಮಗೆ ಕಿರುಕುಳ ನೀಡುತ್ತಿವೆ” ಎಂದು ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ನ ಕಾರ್ಯನಿರ್ವಾಹಕ ನಿರ್ದೇಶಕ ಅವಿನಾಶ್ ಹೇಳಿದರು ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಇದನ್ನೂ ಓದಿ: ಭಾರತ ದೇಶದಲ್ಲಿ ಮಾನವ ಹಕ್ಕುಗಳಿಗೆ ಬೆಲೆಯೇ ಇಲ್ಲ…

“ಸಂಸ್ಥೆಯು ಎಫ್‌ಡಿಐ (ವಿದೇಶಿ ನೇರ ಹೂಡಿಕೆ) ಮಾರ್ಗದ ಮೂಲಕ ಹಣವನ್ನು ಪಡೆದುಕೊಂಡಿದೆ. ಲಾಭರಹಿತ ಸಂಸ್ಥೆಯಾದ ಅಮ್ನೆಸ್ಟಿಗೆ ಈ ಅಧಿಕಾರವಿಲ್ಲ” ಎಂದು ಗೃಹ ಸಚಿವಾಲಯ ಹೇಳಿದೆ.

ಅಮ್ನೆಸ್ಟಿ ಇಂಡಿಯಾ, 2011-12ರಲ್ಲಿ ಅಮ್ನೆಸ್ಟಿ ಸಂಸ್ಥೆ ಇಂಗ್ಲೆಂಡ್‌ನಿಂದ ಸುಮಾರು 69 1.69 ಕೋಟಿ ಪಡೆಯಲು ಸರ್ಕಾರದ ಅನುಮತಿಯನ್ನು ಪಡೆಯಿತು. ಆದರೆ 2013 ರಿಂದ ಆ ಅನುಮತಿಯನ್ನು ನಿರಾಕರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಮ್ನೆಸ್ಟಿ ಇಂಡಿಯಾ ಬೆಂಗಳೂರು ಕೇಂದ್ರ

2018 ರಲ್ಲಿ, ಜಾರಿ ನಿರ್ದೇಶನಾಲಯವು ಅವರ ಖಾತೆಗಳನ್ನು ಸ್ಥಗಿತಗೊಳಿಸಿತ್ತು. ನಂತರ ಅಮ್ನೆಸ್ಟಿ ನ್ಯಾಯಾಲಯದ ಮೆಟ್ಟಿಲೇರಿ, ಪ್ರಕರಣವನ್ನು ಗೆದ್ದುಕೊಂಡಿತ್ತು. ಆದರೆ ಆಗಲೇ ಅವರ ಖಾತೆಗಳಿಗೆ ಸೀಲ್ ಹಾಕಲಾಗಿತ್ತು. ಕಳೆದ ವರ್ಷ ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಇಂಗ್ಲೆಂಡ್ ಸಚಿವಾಲಯದ ಅನುಮೋದನೆಯಿಲ್ಲದೆ ಅಮ್ನೆಸ್ಟಿ ಇಂಡಿಯಾ ಸಂಸ್ಥೆಗಳಿಗೆ 10 ಕೋಟಿಯನ್ನು ಎಫ್‌ಡಿಐ ಆಗಿ ವರ್ಗಾಯಿಸಿದೆ ಎಂಬ ದೂರಿನ ಆಧಾರದ ಮೇಲೆ ಮತ್ತೊಂದು ಸಿಬಿಐ ಪ್ರಕರಣ ದಾಖಲಿಸಿದೆ.

“ಗೃಹಸಚಿವಾಲಯದ ಅನುಮತಿಯಿಲ್ಲದೇ 26 ಕೋಟಿಯನ್ನು ಇಂಗ್ಲೆಂಡ್ ಮೂಲದ ಸಂಸ್ಥೆಗಳಿಂದ ಭಾರತದ ಶಾಖೆಗೆ ರವಾನಿಸಿಕೊಳ್ಳಲಾಗಿದೆ. ಇದನ್ನು FCRA ಉಲ್ಲಂಘಿಸಿ ಖರ್ಚು ಮಾಡಲಾಗಿದೆ” ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕಳೆದ ವರ್ಷವೂ ಅಮ್ನೆಸ್ಟಿ ಇಂಡಿಯಾದ ಮೇಲೆ ಸಿಬಿಐ ದಾಳಿ ನಡೆಸಿತ್ತು. ಆಗಲೂ, “ರಾಜಕೀಯ ಕಾರಣಗಳಿಗಾಗಿಯೇ ನಮ್ಮ ಮೇಲೆ ಈ ರೀತಿ ಪದೇ ಪದೇ ದಾಳಿ ನಡೆಯುತ್ತಿದೆ” ಎಂಬುದನ್ನು ಅಮ್ನೆಸ್ಟಿ ಇಂಟರ್‌ ನ್ಯಾಷನಲ್ ಸ್ಪಷ್ಟಪಡಿಸಿತ್ತು.

ಇದನ್ನೂ ಓದಿ: ಟೀಕೆಗಳು ಪ್ರಜಾಪ್ರಭುತ್ವದ ಸಂಕೇತವಲ್ಲವೇ? ಭಾರತಕ್ಕೆ ಬ್ರಿಟೀಷ್ ಸಂಸದೆಯ ಪ್ರಶ್ನೆ

1961 ರಲ್ಲಿ ಇಂಗ್ಲೆಂಡ್‌ನಲ್ಲಿ ಸ್ಥಾಪನೆಯಾದ ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಸಂಸ್ಥೆಯು, ಮಾನವ ಹಕ್ಕುಗಳನ್ನು ರಕ್ಷಿಸುವಲ್ಲಿ ಮಹತ್ವದ ಪಾತ್ರವಹಿಸುತ್ತಾ ಬಂದಿದೆ. ಈ ಕೆಲಸಗಳಿಗಾಗಿ 1977 ರಲ್ಲಿ ಜಗತ್ತಿನ ಶ್ರೇಷ್ಠ ಮತ್ತು ಅತ್ಯುನ್ನತ ಪ್ರಶಸ್ತಿಯಾದ “ನೋಬೆಲ್ ಶಾಂತಿ ಪುರಸ್ಕಾರ”ವನ್ನೂ ಪಡೆದುಕೊಂಡಿದ್ದು, ಜಗತ್ತಿನಾದ್ಯಂತ ಸುಮಾರು 60ಕ್ಕೂ ಹೆಚ್ಚು ದೇಶಗಳಲ್ಲಿ ತನ್ನ ಕೇಂದ್ರಗಳನ್ನನ್ನು ತೆರೆದು ಮಾನವ ಹಕ್ಕುಗಳ ರಕ್ಷಣೆಗಾಗಿ ಹೋರಾಡುತ್ತಿದೆ.

ಭಾರತದ ಬಿಹಾರದಲ್ಲಿ 1966 ರಿಂದ ಕೆಲಸ ಮಾಡುತ್ತಿರುವ ಈ ಸಂಸ್ಥೆಯು, ಮಹಿಳೆಯರ ಹಕ್ಕುಗಳು, ದೌರ್ಜನ್ಯ, ಖೈದಿಗಳು, ಕಾನೂನಿನ ದುರುಪಯೋಗ, ಕಾರ್ಪೋರೇಟ್ ಹೊಣೆಗಾರಿಕೆ ಮತ್ತು ಇತರೆ ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ ಯಶಸ್ವಿಯಾಗಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದೆ.

ಇಂತಹ ಸಂಸ್ಥೆಯು ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ನಿಲ್ಲಿಸಿರುವುದು ಮತ್ತು ಇದಕ್ಕೆ ಕಾರಣ ಭಾರತ ಸರ್ಕಾರದ ಕಿರುಕುಳವೆ ಎಂದು ಆರೋಪಿಸಿದೆ. ಇದರಿಂದ ದೇಶದ ದಮನಿತರ ನಷ್ಟವಾಗಲಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.


ಇದನ್ನೂ ಓದಿ: ಕಾಶ್ಮೀರದಲ್ಲಿ ಮೂಲಭೂತ ಹಕ್ಕುಗಳ ಉಲ್ಲಂಘನೆ: ತಲೆಕೆಡಿಸಿಕೊಳ್ಳದ ಸುಪ್ರೀಂ ಕೋರ್ಟ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ಲೈಂಗಿಕ ದೌರ್ಜ್ಯನ್ಯದ ಆರೋಪದ ಬೆನ್ನಲ್ಲಿ ರಾಜಭವನಕ್ಕೆ ಪೊಲೀಸರಿಗೆ ಪ್ರವೇಶ ನಿಷೇಧಿಸಿದ ಗವರ್ನರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್ ವಿರುದ್ಧ ನಿನ್ನೆ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಇದರ ಬೆನ್ನಲ್ಲಿ ರಾಜ್ಯಪಾಲರು ತನಿಖೆಯ ನೆಪದಲ್ಲಿ ಪೊಲೀಸರು ರಾಜಭವನಕ್ಕೆ ಪ್ರವೇಶಿಸದಂತೆ ನಿಷೇಧಿಸಿದ್ದಾರೆ, ಇದಲ್ಲದೆ...