Homeರಾಜಕೀಯಹಠಾತ್ ಸಿಎಂ ಗಾದಿಯ ಕನಸುಗಾರ

ಹಠಾತ್ ಸಿಎಂ ಗಾದಿಯ ಕನಸುಗಾರ

- Advertisement -
- Advertisement -

ಮತ್ತೊಬ್ಬ ಕಲರ್ ಫುಲ್ ರಾಜಕಾರಣಿ ಅನಂತಕುಮಾರ್ ಕಾಲನ ಮನೆ ಸೇರಿದ್ದಾರೆ. ಕೇಂದ್ರ ಸಚಿವರೂ ಆಗಿದ್ದ ರಾಜ್ಯದ ಪ್ರಮುಖ ಬಿಜೆಪಿ ನೇತಾರ ಅನಂತಕುಮಾರ್ ಅಸು ನೀಗಿದ ನಂತರ ಅವರನ್ನು ಕುರಿತು ’ವಾಚಾಮಗೋಚರ’ವಾಗಿ ಹೊಗಳಲಾಗುತ್ತಿದೆ. ಅವರ ವರ್ಣರಂಜಿತ ವ್ಯಕ್ತಿತ್ವವನ್ನು ’ಕಪ್ಪು-ಬಿಳುಪು’ ಬಣ್ಣಕ್ಕೆ ಸೀಮಿತಗೊಳಿಸಲಾಗುತ್ತದೆ. ಹಾಗೆ ನೋಡಿದರೆ ಯಾವ ವ್ಯಕ್ತಿತ್ವವನ್ನೂ ಕೇವಲ ಎರಡು ವರ್ಣ ಬಳಸಿ ಚಿತ್ರಿಸಲು ಆಗುವುದಿಲ್ಲ. ಚಿತ್ರಿಸಬಾರದು ಕೂಡ.
’ಕಪ್ಪು ಚುಕ್ಕೆ’ ಇಲ್ಲದ, ’ಸಜ್ಜನ’, ’ಅಪ್ಪಟ ಪ್ರಾಮಾಣಿಕ’, ’ಸೋಲಿಲ್ಲದ ಅಜಾತಶತ್ರು’ ಪದಗಳನ್ನು ಪುಂಖಾನುಪುಂಖವಾಗಿ ಬಳಸುವುದು ಕೂಡ ಸರಿಯಲ್ಲ. ಪ್ರತಿಯೊಬ್ಬ ವ್ಯಕ್ತಿಗೆ ಮತ್ತು ವ್ಯಕ್ತಿತ್ವಕ್ಕೆ ಘನತೆ ಇರುವ ಹಾಗೆ ಪದಗಳಿಗೂ ಇರುತ್ತದೆ. ಅವುಗಳು ಅರ್ಥಹೀನವೇ ಆಗುವಂತೆ ಬಳಸಬೇಕಿಲ್ಲ. ಹೊಗಳುವ ಅಥವಾ ತೆಗಳುವ ಭರದಲ್ಲಿ ಭಾವವನ್ನೇ ಕೊಲ್ಲುವ ಭಾಷೆಯನ್ನು ಬಳಸಬಹುದೇ?
ಅನಂತಕುಮಾರ್ ಅವರ ಅಕಾಲಿಕ ಮತ್ತು ಆಕಸ್ಮಿಕ ನಿಧನವು ಕರ್ನಾಟಕದ ರಾಜಕೀಯದಲ್ಲಿ ನಿರ್ವಾತವನ್ನುಂಟು ಮಾಡದಿದ್ದರೂ ಅವರ ’ಕೊರತೆ’ಯನ್ನು ಸರಳವಾಗಿ ತುಂಬಲು ಸಾಧ್ಯವಿಲ್ಲ. ಅದು ತೆರೆಯ ಮೇಲೆ ಮತ್ತು ತೆರೆಯ ಹಿಂದಿನ ರಾಜಕಾರಣದಲ್ಲಿ ಕೂಡ. ಹೀಗೆ ’ಕೊರತೆ’ ನಿರ್ಮಾಣವಾಗುವುದು ಕೂಡ ಸಣ್ಣ ಮಾತೇನಲ್ಲ.
ಪತ್ರಿಕಾ ಕಚೇರಿಗಳಿಗೆ ಪ್ರೆಸ್ ನೋಟ್ ಹಂಚುತ್ತಿದ್ದ ’ಹುಡುಗ’ನೊಬ್ಬ ರಾಜ್ಯ-ರಾಷ್ಟ್ರ ರಾಜಕಾರಣದಲ್ಲಿ ’ಕೊರತೆ’ ಉಂಟು ಮಾಡುವಷ್ಟರ ಮಟ್ಟಿಗೆ ಬೆಳೆದಿರುವುದು ಅಚ್ಚರಿ-ಬೆರಗಿಗೆ ಕಾರಣವಾಗುವಂತಹುದು. ವ್ಯಕ್ತಿಯಾಗಿ ತಮ್ಮ ವ್ಯಕ್ತಿಗತ ನಡವಳಿಕೆ ಮತ್ತು ಉತ್ತಮ ಮತ್ತು ಸೌಜನ್ಯಪರ ಮಾತು-ಕಾಳಜಿಗಳಿಂದ ಅನಂತಕುಮಾರ್ ಅವರು ಪತ್ರಕರ್ತರೂ ಸೇರಿದಂತೆ ಹಲವರಿಗೆ-ಒಡನಾಡಿಗಳಿಗೆ ಪ್ರಿಯರಾಗಿದ್ದರು ಎಂಬುದರಲ್ಲಿ ಎರಡು ಮಾತಿಲ್ಲ. ಅದೀಗ ಪದಗಳಲ್ಲಿ ವ್ಯಕ್ತವಾಗುತ್ತಿದೆ.
ರಾಜಕಾರಣ ಮತ್ತು ರಾಜಕೀಯ ನಡೆಗಳಿಗೆ ಸಂಬಂಧಿಸಿದಂತೆ ಅದೇ ಮಾತನ್ನು ಹೇಳಲು ಸಾಧ್ಯವಿಲ್ಲ. ಅವರಿಗೆ ’ಸಿಗಬೇಕಾದದ್ದು ಸಿಗಲಿಲ್ಲ’ ಎಂಬ ಮಾತನ್ನು ಎಲ್ಲರಿಗೂ ಅನ್ವಯಿಸಬಹುದು. ಆದೇ ರೀತಿ, ’ಸಿಕ್ಕಾಗ ಏನು ಮಾಡಿದರು’ ಎಂಬುದನ್ನು ಕೂಡ ಎಲ್ಲರಿಗೂ ಕೇಳಬೇಕು. ಅದು ಕೇವಲ ಅಧಿಕಾರ ಮತ್ತು ಅವಕಾಶಕ್ಕೆ ಸಂಬಂಧಿಸಿದ ಸಂಗತಿ ಮಾತ್ರ ಅಲ್ಲ.
’ಸರ್ವಾಧಿಕಾರಿ’ ಇಂದಿರಾಗಾಂಧಿ ಹೇರಿದ ಎಮರ್ಜೆನ್ಸಿಯಿಂದಾಗಿ ಕೆಲವರಿಗೆ ಹೋರಾಟ ಮಾಡುವ ಮತ್ತು ಜೇಲು ಸೇರುವ ಅವಕಾಶ ದೊರಕಿತು. ಹಾಗೆಯೇ ಎಮರ್ಜೆನ್ಸಿಯನ್ನ ’ಗ್ರೇಟ್’ ಎಂದು ಹೇಳುವ, ವ್ಯಾಖ್ಯಾನಿಸುವ ಬರಹಗಾರರು ಇದ್ದರು. ಈಗ ಕೂಡ ಅಗತ್ಯವಿದೆ ಎಂದು ವಾದಿಸುವವರ ಸಂಖ್ಯೆ ಕೂಡ ಕಡಿಮೆಯೇನಿಲ್ಲ. ಅದು ಬಂದಾಗಷ್ಟೇ ಗೊತ್ತಾಗುವುದರಿಂದ ಮತ್ತು ಬಂದಿದ್ದಾಗ ಅನುಭವಿಸಿದವರಿಗೆ ಮಾತ್ರ ಅದರ ಕಷ್ಟ ಗೊತ್ತು. ಉಳಿದವರು ಅದನ್ನು ಕೇವಲ ಅಂದಾಜಿಸಬಹುದು.ಬಹಳಷ್ಟು ಜನ ಅದನ್ನೂ ಮಾಡಲು ಸಿದ್ಧರಿರುವುದಿಲ್ಲ.
ಎಮರ್ಜೆನ್ಸಿ ಕಲ್ಪಿಸಿದ ಅವಕಾಶವು ಸಂಘ ಪರಿವಾರದವರಿಗೆ ಹೋರಾಟ ಮಾಡುವ ಮತ್ತು ಜೈಲುವಾಸ ಅನುಭವಿಸುವುದಕ್ಕೆ ಕಾರಣವಾಯಿತು. ಅನಂತಕುಮಾರ್ ಕೂಡ ಅದರ ಫಲಾನುಭವಿ. ನಾಲ್ಕಾರು ದಶಕಗಳ ಕಾಲ ಸಕ್ರಿಯ ರಾಜಕಾರಣದಲ್ಲಿ ಇರುವ ಕರ್ನಾಟಕದ ಉಳಿದ ರಾಜಕಾರಣಿಗಳಿಗೆ ಹೋಲಿಸಿದರೆ ಅನಂತಕುಮಾರ್ ಲಕ್ಕಿ. ಪ್ರಧಾನಿ ವಾಜಪೇಯಿ ಅವರ ಅಧಿಕಾರ ಅವಧಿಯ ಆರು ವರ್ಷಗಳ ಕಾಲ ಅತ್ಯಂತ ಪ್ರಭಾವಶಾಲಿ ಹುದ್ದೆಗಳಲ್ಲಿದ್ದರು. ಈಗ ಮೋದಿ ಕ್ಯಾಬಿನೆಟ್ ನಲ್ಲಿ ಕೂಡ.
ರಾಜ್ಯ ರಾಜಕಾರಣದಲ್ಲಿ ಅವರಿಗೆ ’ಅವಕಾಶ’ ಸಿಗಲಿಲ್ಲ ಎಂದು ಹಲಬುವವರಿಗೆ ಹಠಾತ್ ಆಗಿ ಮುಖ್ಯಮಂತ್ರಿ ಆದ ರಾಮಕೃಷ್ಣ ಹೆಗಡೆ ಗೋಚರಿಸುತ್ತಾರೆ. ಸ್ವತಃ ಅನಂತಕುಮಾರ್ ಅವರಿಗೂ ಅದೇ ತರಹದ ಆಸೆಗಳಿದ್ದವು. ಮುಖ್ಯಮಂತ್ರಿಯಾದ ನಂತರ ’ಸರ್ವರನ್ನೂ ಒಳಗೊಳ್ಳುವ’ ರಾಜಕಾರಣ ಮಾಡಬೇಕು. ’ಜನನಾಯಕ’ ಆಗಬೇಕು ಎಂಬ ಇರಾದೆ ಅವರದಾಗಿತ್ತು. ಹೆಗೆಡೆಯವರಿಗೆ ಆದ ಆಕಸ್ಮಿಕ ಮತ್ತೊಬ್ಬರಿಗೆ ಆಗಲಾರದು. ಅದು ಬೈ ಚಾನ್ಸ್ ಆದ ಬೆಳವಣಿಗೆ. ಇತಿಹಾಸ ಅಥವಾ ನಡೆದು ಹೋದ ಒಂದು ಘಟನೆಯನ್ನು ಇಟ್ಟುಕೊಂಡು ಅದೇ ರೀತಿ ನಡೆಯಲಿ ಎಂದು ಆಸೆ ಪಡುವುದು ತಪ್ಪೇನಲ್ಲ. ಆದರೆ, ಅದು ಮರುಕಳಿಸುವ ಸಾಧ್ಯತೆ ಕಡಿಮೆ.
ರಾಜ್ಯ ರಾಜಕಾರಣದಲ್ಲಿ ಪ್ರಮುಖ ಹುದ್ದೆ ಪಡೆಯಲು ಅಥವಾ ’ಮುಖ್ಯಮಂತ್ರಿ’ ಆಗಲು ಅವರು ತೆರೆಯ ಮರೆಯಲ್ಲಿ ’ಸಕ್ರಿಯ’ ಪ್ರಯತ್ನ ನಡೆಸಿದ್ದು ಗುಟ್ಟಿನ ಸಂಗತಿಯೇನಲ್ಲ. ಸಹಜವಾಗಿಯೇ ಬಯಸದಿದ್ದರೂ ’ಹುಟ್ಟು’ ಕೆಲವರಿಗೆ ವರ ಮತ್ತು ಶಾಪಗಳೆರಡನ್ನೂ ತಂದು ಕೊಡುತ್ತದೆ. ಅವರು ಹುಟ್ಟಿದ ’ಸಮುದಾಯ’ದ ಕಾರಣದಿಂದ ಹಲವು ಲಾಭ ದೊರೆತವು. ಹಾಗೆಯೇ ಅದೇ ’ಮಾಸ್ ಲೀಡರ್’ ಎಂದು ಪರಿಗಣಿಸದೇ ಇರುವಂತೆ ಅಡ್ಡಿಯೂ ಆಯಿತು. ಅವರು ಕೂಡ ಅಧಿಕಾರ ದೊರೆತ ನಂತರ ’ಜನನಾಯಕ’ ಆಗಬೇಕು ಅಂದುಕೊಂಡಿರುವಲ್ಲಿಯೇ ಲೋಪ ಇತ್ತು.
ಬಿಜೆಪಿ ಪಕ್ಷದೊಳಗಿನ ಬದಲಾವಣೆ-ಏರಿಳಿತಗಳು ಕೂಡ ಅನಂತಕುಮಾರ್ ಅವರ ರಾಜಕೀಯ ಬದುಕಿನ ಮೇಲೆ ನೇರ ಪರಿಣಾಮ ಬೀರಿದವು. ಅವರಿಗೆ ಹಲವು ಅವಕಾಶಗಳನ್ನು ನೀಡಿದ ಪಕ್ಷವು ಸಹಜವಾಗಿಯೇ ತನ್ನ ಲಾಭಕ್ಕಾಗಿ ಅನಂತಕುಮಾರ್ ಅವರನ್ನೂ ನಿಯಂತ್ರಿಸಿತು. ಹಾಗೆ ನಿಯಂತ್ರಣ ಮೀರಿ ಹೊರ ಬರುವ ಇರಾದೆ ಅವರಿಗೆ ಇರಲಿಲ್ಲ ಮತ್ತು ಅವರ ವ್ಯಕ್ತಿತ್ವಕ್ಕೆ ಅದು ಸಾಧ್ಯವೂ ಇರಲಿಲ್ಲ.
ಕೇಂದ್ರ ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸುವಲ್ಲಿ ಅನಂತಕುಮಾರ್ ಯಶಸ್ವಿಯಾಗಿದ್ದರು. ಸಚಿವರಾಗಿ, ಬಿಜೆಪಿ ನಾಯಕರಾಗಿ ಅನಂತಕುಮಾರ್ ಅವರ ’ಸಾಧನೆ’ ನಗಣ್ಯವೇನಲ್ಲ. ಆದರೆ, ಪಕ್ಷದ ಗುಂಪುಗಾರಿಕೆ ಅವರು ಮತ್ತಷ್ಟು ಬೆಳೆಯದಂತೆ ಬಿಡಲಿಲ್ಲ ಎಂಬುದನ್ನೂ ಗಮನಿಸಬೇಕು. ಹಾಲಿ ಪ್ರಧಾನಿ ಅವರು ಅನಂತಕುಮಾರ ಅವರನ್ನು ’ವಿರೋಧಿ ಬಣ’ದವರು ಎಂದೇ ಪರಿಗಣಿಸುತ್ತಿದ್ದರು. ಸಂಪುಟದಿಂದ ಕೈ ಬಿಡಲಾಗದ ಆದರೆ ಪ್ರಮುಖ ಸ್ಥಾನ ನೀಡಲು ಮನಸ್ಸಿಲ್ಲದ ಸ್ಥಿತಿ ಅವರದಾಗಿತ್ತು. ಆಡಳಿತದ ಅನುಭವ ಇದ್ದ ಅನಂತಕುಮಾರ್ ಅವರನ್ನು ರಸಗೊಬ್ಬರ ಖಾತೆಯಿಂದ ಸಂಸದೀಯ ವ್ಯವಹಾರಗಳ ಖಾತೆಗೆ ಪ್ರಮೋಷನ್ ನೀಡುವಷ್ಟು ಮಾತ್ರ ಔದಾರ್ಯ ತೋರಿಸಿದರು.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಅನಂತಕುಮಾರ್ ಅವರನ್ನು ಸೋಲಿಸುವವರೇ ಇರಲಿಲ್ಲ. ಕಾಂಗ್ರೆಸ್ ಎದುರಾಳಿಯನ್ನು ಆರಿಸುವುದಕ್ಕಾಗಿ ಎಲ್ಲ ಬಗೆಯ ಪ್ರಯತ್ನ ನಡೆಸಿತ್ತು. ಚುನಾವಣಾ ರಾಜಕೀಯದಲ್ಲಿ ಸಂಸತ್ ಗೆ ಮಾತ್ರ ಸೀಮಿತರಾಗಿದ್ದ ಅನಂತಕುಮಾರ್ ಅವರು ರಾಜ್ಯ ರಾಜಕಾರಣದ ಚುಕ್ಕಾಣಿ ಹಿಡಿಯುವುದು ಕೂಡ ಕಷ್ಟ ಸಾಧ್ಯವಾದ ಸಂಗತಿಯಾಗಿತ್ತು.
ಅನಂತಕುಮಾರ್ ಅವರದು ಕಪ್ಪುಚುಕ್ಕೆ ಇಲ್ಲದ ವ್ಯಕ್ತಿತ್ವ ಎಂದು ಹೇಳುವುದು ಸಾಧ್ಯವೇ? ಇಲ್ಲ. ಟೆಲಿಕಾಮ್ ಹಗರಣ, ಹೌಸಿಂಗ್ ಹಗರಣ, ನೀರಾ ರಾಡಿಯಾ ಟೇಪ್ ಪ್ರಕರಣ, ಅಶೋಕಾ ಹೋಟೆಲ್ ಪ್ರಕರಣ ಹೀಗೆ ಪಟ್ಟಿ ಬೆಳೆಯುತ್ತದೆ. ಅವು ಯಾವುವೂ ಸಣ್ಣ-ಪುಟ್ಟವುಗಳೇನಲ್ಲ. ಅನಂತಕುಮಾರ್ ಸುದೈವಿ ಮತ್ತು ಚಾಣಾಕ್ಷ ಅವುಗಳ ’ಮಸಿ’ ತಮಗೆ ಹತ್ತದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.
ಅಳೆದು ತೂಗಿದ ಮೇಲೆ ಅನಂತಕುಮಾರ್ ಸಾವು ಕೆಲಕಾಲ ಅವರಿದ್ದ ಪಕ್ಷಕ್ಕೆ ’ಖಾಲಿತನ’ ಅನುಭವಿಸುವಂತೆ ಮಾಡುತ್ತದೆ ಎಂಬುದಷ್ಟೇ ಉಳಿಯುತ್ತದೆ.

– ಡಿ.ಪಿ.ಗೌತಮ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...