ಆಂಧ್ರಪ್ರದೇಶದ ಏಲೂರಿನಲ್ಲಿ ಕಳೆದ ಒಂದೆರಡು ದಿನಗಳಿಂದ ನಿಗೂಢ ಕಾಯಿಲೆಯೊಂದು ಹರಡಿದ್ದು, ಒಬ್ಬರನ್ನೂ ಈಗಾಗಲೇ ಬಲಿ ಪಡೆದಿದೆ. ಸುಮಾರು 315ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿದ್ದು, ಅಸ್ವಸ್ಥರನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ದಿ ಹಿಂದೂ ವರದಿ ಮಾಡಿದೆ.
ಶನಿವಾರ ಮಧ್ಯರಾತ್ರಿಯಲ್ಲಿ ಏಲೂರಿನಲ್ಲಿ ರೋಗಿಗಳ ಸಂಖ್ಯೆ 55 ಆಗಿದ್ದು, ಭಾನುವಾರ ಬೆಳಿಗ್ಗೆ ಅಷ್ಟರಲ್ಲಿ 170 ಕ್ಕೆ ಏರಿದೆ. ಇದು ಭಾನುವಾರ ಸಂಜೆ ಹೊತ್ತಿಗೆ 270 ಮತ್ತು ಇಂದು ಮುಂಜಾನೆ ವೇಳೆಗೆ 315 ಕ್ಕೆ ಏರಿದೆ. ಇವರೆಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೊಂದು ವರದಿಯ ಪ್ರಕಾರ ಖಾಸಗಿ ಆಸ್ಪತ್ರೆಗಳಲ್ಲಿ ಇನ್ನೂ 50 ಜನರು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ನಿಗೂಢ ಕಾಯಿಲೆಯಿಂದ ಬಳಲುತ್ತಿರುವವರಿಗೆ ತಲೆನೋವು, ತಲೆತಿರುಗುವಿಕೆ ಮತ್ತು ಅತಿಸಾರದಂತಹ ಲಕ್ಷಣಗಳು ಕಂಡುಬರುತ್ತಿವೆ ಎಂದು ವೈದ್ಯರು ತಿಳಿಸಿದ್ದಾರೆ. ಕೊತ್ತಪೇಟೆ, ಕೊಬ್ಬಾರಿ ಥೋಟಾ, ಅರುಂಧತಿಪೇಟ ಮತ್ತು ತೂರ್ಪು ವೀಧಿಗಳಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗಿವೆ.
ಈ ಕಾಯಿಲೆಯಿಂದ ಭಾನುವಾರ ಸಂಜೆ 45 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ವಿದ್ಯಾನಗರ ಪ್ರದೇಶದ ಶ್ರೀಧರ್ ಎಂದು ಗುರುತಿಸಲಾಗಿದೆ. ವಾಕರಿಕೆ ಮತ್ತು ಅತಿಸಾರದ ಲಕ್ಷಣ ಕಾಣಿಸಿಕೊಂಡಿದ್ದರಿಂದ ಅವರನ್ನು ವಿಜಯವಾಡದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಶ್ರೀಧರ್ ಕೊನೆಯುಸಿರೆಳೆದಿದ್ದು, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಇದನ್ನೂ ಓದಿ: ಪ್ರಯೋಗಾರ್ಥ ಕೊರೊನಾ ಲಸಿಕೆ ತೆಗೆದುಕೊಂಡಿದ್ದ ಹರಿಯಾಣ ಆರೋಗ್ಯ ಸಚಿವನಿಗೆ ಕೊರೊನಾ ಪಾಸಿಟಿವ್!
’ಮುಖ್ಯಮಂತ್ರಿ ವೈ.ಎಸ್.ಜಗನ್ಮೋಹನ್ ರೆಡ್ಡಿ ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ಆಸ್ಪತ್ರೆಗಳಿಂದ 170 ಜನರನ್ನು ಬಿಡುಗಡೆ ಮಾಡಲಾಗಿದೆ ಮತ್ತು ಮನೆ-ಮನೆಗೆ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವ ಅಲ್ಲಾ ಕಾಳಿ ಕೃಷ್ಣ ಶ್ರೀನಿವಾಸ್ ಹೇಳಿದ್ದಾರೆ.
ವಿಶೇಷ ವೈದ್ಯರ ತಂಡವು ಏಲೂರಿಗೆ ಧಾವಿಸಿ ಚಿಕಿತ್ಸಾ ಕಾರ್ಯದಲ್ಲಿ ನಿರತವಾಗಿದೆ. ಮುಖ್ಯಮಂತ್ರಿ ವೈ.ಎಸ್.ಜಗನ್ಮೋಹನ್ ರೆಡ್ಡಿ ಏಲೂರಿಗೆ ಭೇಟಿ ನೀಡಿದ್ದು, ರೋಗಿಗಳ ಯೋಗಕ್ಷೇಮ ವಿಚಾರಿಸಿದ್ದಾರೆ. ಈಗ ಜಿಲ್ಲಾ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಎಲೂರಿನಾದ್ಯಂತ ಶಿಕ್ಷಣ ಸಂಸ್ಥೆಗಳಲ್ಲಿ ಜಿಲ್ಲಾಡಳಿತ ರಜೆ ಘೋಷಿಸಿದೆ. ಎಲೂರು ಮಹಾನಗರ ಪಾಲಿಕೆ ಕಚೇರಿಯಲ್ಲಿ 24×7 ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದೆ. ಹಾಲಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ವಿಜಯವಾಡಕ್ಕೆ ಕಳುಹಿಸಲಾಗುತ್ತಿದೆ.
ರೋಗಿಗಳಲ್ಲಿ ಚೇತರಿಕೆ ಪ್ರಮಾಣ ಉತ್ತಮವಾಗಿದೆ ಮತ್ತು ಭಯಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಡಾ.ಸುನಂದ ಹೇಳಿದ್ದಾರೆ.
ಮಂಗಲ್ಗಿರಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ಹೈದರಾಬಾದ್ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿಯ ವೈದ್ಯರ ತಂಡ ನಿಗೂಡ ರೋಗದ ಮೂಲವನ್ನು ಕಂಡುಹಿಡಿಯಲು ಕಾರ್ಯನಿತರವಾಗಿವೆ.