ಭಾನುವಾರ ಮುಂಜಾನೆ ಆಂಧ್ರಪ್ರದೇಶದ ಬಾಪಟ್ಲಾ ಜಿಲ್ಲೆಯ ರೇಪಲ್ಲೆ ರೈಲು ನಿಲ್ದಾಣದ ಬಳಿ 25 ವರ್ಷದ ಗರ್ಭಿಣಿ ಮಹಿಳೆ ಮೇಲೆ ಹಲ್ಲೆ ನಡೆಸಿ ಸಮೂಹಿಕವಾಗಿ ಅತ್ಯಾಚಾರವೆಸಗಲಾಗಿದೆ.
ಅಪರಾಧದ ತನಿಖೆಗಾಗಿ ರಚಿಸಲಾದ ಪೊಲೀಸ್ ತಂಡಗಳು ಶೀಘ್ರವೇ ಕಾರ್ಯಪ್ರವೃತ್ತವಾಗಿದ್ದು ಒಬ್ಬ ಅಪ್ರಾಪ್ತ ಸೇರಿದಂತೆ ಮೂವರನ್ನು ಬಂಧಿಸಿವೆ. ಇನ್ನಿಬ್ಬರು ಆರೋಪಿಗಳು ವಯಸ್ಕರಾಗಿದ್ದು, ಅವರನ್ನು ಪಲುಬೊಯಿನಾ ವಿಜಯಕೃಷ್ಣ (20), ಪಲುಚೂರಿ ನಿಖಿಲ್ (25) ಎಂದು ಗುರುತಿಸಲಾಗಿದೆ. ಈ ಹಿಂದೆಯೇ ಕಳ್ಳತನದ ಪ್ರಕರಣವೊಂದರಲ್ಲಿ ಅಪ್ರಾಪ್ತ ವಯಸ್ಕ ಆರೋಪಿಯಾಗಿದ್ದಾನೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಸಾವಿನಿಂದ ಪಾರಾಗಿರುವ ಮಹಿಳೆ, ಆಕೆಯ ಪತಿ ಮತ್ತು ಅವರ ಮೂವರು ಮಕ್ಕಳು ಎರಡು ದಿನಗಳ ಹಿಂದೆ ಗುಂಟೂರಿಗೆ ಕಲ್ಲಿನ ಕೆಲಸಕ್ಕಾಗಿ ಬಂದಿದ್ದರು. ಮಹಿಳೆಯು ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಾರೆ. ಅವರು ತೆನಾಲಿಗೆ ರೈಲು ಹತ್ತಿ, ರೇಪಲ್ಲಿಗೆ ಬಂದಿಳಿದಿದ್ದರು.
ಏಪ್ರಿಲ್ 30ರ ಮಧ್ಯರಾತ್ರಿ ರೇಪಲ್ಲಿಗೆ ತಲುಪಿದರು. ಪ್ಲಾಟ್ಫಾರ್ಮ್ನಲ್ಲಿಯೇ ಉಳಿಯಲು ನಿರ್ಧರಿಸಿದರು. “ಮೂರು ಜನ ಆರೋಪಿಗಳು ಟೈಮ್ ಕೇಳಲೆಂದು ಇವರನ್ನು ಎಬ್ಬಿಸಿದರು. ಸಂತ್ರಸ್ತೆಯ ಗಂಡ ತಮ್ಮ ಬಳಿ ವಾಚ್ ಇಲ್ಲ ಎಂದು ಹೇಳಿದಾಗ ಆರೋಪಿಗಳು ಹಲ್ಲೆ ನಡೆಸಿದ್ದಾರೆ” ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಡಪಾಯಿಗಳಿಂದ 750 ರೂ.ಗಳನ್ನು ಆರೋಪಿಗಳು ಕಸಿದುಕೊಂಡಿದ್ದು, ಅದನ್ನು ವಾಪಸ್ ಪಡೆಯಲು ಯತ್ನಿಸಿದಾಗ ಮಹಿಳೆಯನ್ನು ಸಮೀಪದ ಪೊದೆಗೆ ಎಳೆದೊಯ್ದಿದ್ದಾರೆ ಎನ್ನಲಾಗಿದೆ. ಪತಿ ಸ್ಥಳೀಯರ ಸಹಾಯದಿಂದ ರೇಪಲ್ಲೆ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.
ಪೊಲೀಸ್ ಸಿಬ್ಬಂದಿ ಆ ಪ್ರದೇಶದಲ್ಲಿ ಹುಡುಕಾಟ ನಡೆಸಿದಾಗ ಕೆಲವು ಪೊದೆಗಳಲ್ಲಿ ಸಂತ್ರಸ್ತೆ ಪತ್ತೆಯಾಗಿದ್ದಾರೆ. ಇಬ್ಬರು ವ್ಯಕ್ತಿಗಳು ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ. ಇದರ ಬೆನ್ನಲ್ಲೇ ರೇಪಲ್ಲೆ ಟೌನ್ ಸಿಐ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಂತ್ರಸ್ತೆ ಮತ್ತು ಆಕೆಯ ಗಂಡನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.
ಬಾಪಟ್ಲಾ ಎಸ್ಪಿ ವಕುಲ್ ಜಿಂದಾಲ್ ಮಹಿಳೆಯನ್ನು ಭೇಟಿಯಾಗಿದ್ದು, ಘಟನೆ ನಡೆದ ಸ್ಥಳವನ್ನು ಪರಿಶೀಲನೆ ನಡೆಸಿದರು. ನಂತರ ತನಿಖೆಗಾಗಿ ಮೂರು ತಂಡಗಳನ್ನು ರಚಿಸಿದರು. ಸಾಕ್ಷ್ಯ ಸಂಗ್ರಹಿಸಲು ಶ್ವಾನ ದಳ ಹಾಗೂ ಸುಳಿವು ತಂಡವನ್ನು ಬಳಸಲಾಯಿತು. ಇದಾದ ಬೆನ್ನಲ್ಲೇ ರೇಪಲ್ಲೆ ಡಿಎಸ್ಪಿ ನೇತೃತ್ವದ ವಿಶೇಷ ತಂಡ, ಪಟ್ಟಣ ಸಿಐ ತಂಡಗಳು ಆರೋಪಿಗಳನ್ನು ರೇಪಲ್ಲೆ ಟೌನ್ನ ನೇತಾಜಿ ನಗರದಲ್ಲಿ ಬಂಧಿಸಿ, ಅವರಿಂದ ಹಲವು ವಸ್ತುಗಳನ್ನು ವಶಕ್ಕೆ ಪಡೆದಿವೆ.
ಇದನ್ನೂ ಓದಿರಿ: ಪೆದ್ದನಹಳ್ಳಿಯಲ್ಲಿ ದಲಿತರ ಕೊಲೆ: ಮಾಹಿತಿ ಗೊತ್ತಿಲ್ಲ ಎಂದ ಸಚಿವ ಬಿ.ಸಿ.ನಾಗೇಶ್!
ಆಂಧ್ರಪ್ರದೇಶದಲ್ಲಿ ಮಹಿಳೆಯರ ಸುರಕ್ಷತೆ ಮತ್ತು ರಕ್ಷಣೆಗಾಗಿ ದಿಶಾ ಕಾಯ್ದೆ ಜಾರಿಗೊಳಿಸಲಾಗಿದೆ. ತ್ವರಿತ ತನಿಖೆ, ವಿಚಾರಣೆ ಮತ್ತು ಶಿಕ್ಷೆಯನ್ನು ನೀಡುವುದಕ್ಕಾಗಿ ಈ ಕಾಯ್ದೆ ಜಾರಿಯಾಗಿರುವ ಹೊತ್ತಿನಲ್ಲೇ ಈ ಆಘಾತಕಾರಿ ಘಟನೆ ನಡೆದಿದೆ.
ದಿಶಾ ಕಾಯಿದೆ 2019ರ ಪ್ರಕಾರ ತಕ್ಷಣವೇ ಆರೋಪಪಟ್ಟಿ ಸಲ್ಲಿಸುವಂತೆ ಎಸ್ಪಿ, ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆರೋಪಿಗಳ ಬಂಧನಕ್ಕೂ ಮುನ್ನ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ವಿ ರಜಿನಿ ಪ್ರತಿಕ್ರಿಯಿಸಿ, “ಅಪರಾಧಿಗಳಿಗೆ ಕಠಿಣ ಶಿಕ್ಷೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತದೆ” ಎಂದಿದ್ದಾರೆ.